ನಾವು ಸೆಲೆಬ್ರಿಟಿಗಳಲ್ಲ, ಬದಲಾವಣೆಯ ಕನಸ ಕಾಡಿಗೆಯ ಕಣ್ಣ ರೆಪ್ಪೆಗಳಿಗೆ ಸವರಿಕೊಂಡವರು
ಪಲಾಯನ ಅಂದ್ರೆ ಓಟವಲ್ಲ, ಅದು ಅವಕಾಶಗಳ ಹುಡುಕಾಟ
……….
ಪತ್ರಿಕೋದ್ಯಮ ಮತ್ತು ಅಭಿವೃಕ್ತಿ ಸ್ವಾತಂತ್ರ್ಯ ಚರ್ಚೆಯ ವಸ್ತುವಾಗಿ ಚರ್ಚೆಗೆ ಒಳಪಡುತ್ತಲೇ ಇದೆ. ಎನ್ ಡಿ ಟಿವಿ ಕುರಿತಂತೆ ತಳೆದ ಧೋರಣೆ ಇನ್ನಷ್ಟು ತೀವ್ರತರದ ಚರ್ಚೆಯನ್ನು ಹುಟ್ಟುಹಾಕಿದೆ. ಸಂವಿಧಾನದ ಆಶಯದಡಿ ಕೆಲಸ ಮಾಡುವುದು ಕೂಡ ಇವತ್ತಿನ ದಿನಗಳಲ್ಲಿ ತಪ್ಪೆನ್ನುವ ಭಾವನೆಯಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಎನ್ ಡಿ ಟಿ ವಿ ಕುರಿತಂತೆ ತಳೆದ ನಿಲುವಿನ ಬಗ್ಗೆ ವಿರೋಧ ಮತ್ತು ಕೆಲವರ ಸಮರ್ಥನೆ ಮುಂದುವರಿದಿದೆ, ಎಡ ಮತ್ತು ಬಲದ ಜೊತೆ ಪತ್ರಕರ್ತರನ್ನು ಗುರುತಿಸುವ ಪ್ರವೃತ್ತಿ ಆರಂಭವಾಗಿರೋದು ಕೂಡ ಆರೋಗ್ಯಕರ ಬೆಳವಣಿಗೆಯಲ್ಲ. ಪತ್ರಕರ್ತ ಯಾವಾಗಲು ಸಮತೋಲನ ಕಾಯ್ದುಕೊಳ್ಳಬೇಕು. ಒಂದೆಡೆ ಅಂಟಿ ಕೂತರೆ ಸರಿಯಲ್ಲ ಅನ್ನೋದು ನನ್ನ ಭಾವನೆ. ಅವನು ಸಂವಿಧಾನದ ಆಶೋತ್ತರದ ನೆರಳ ನಡುವೆ ಕೆಲಸ ಮಾಡುವ ಸಂದರ್ಭದಲ್ಲಿ ಆತನಿಗೆ ಪ್ರಗತಿಪರ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಡೋದು ಸಾಮಾನ್ಯವಾಗಿದೆ.
ಸಾಮಾಜಿಕ ಪಿಡುಗು, ಜಾತಿ ಪದ್ಧತಿ ನಿರ್ಮೂಲನೆ ಬಗ್ಗೆ ಮಾತಾಡಿದರು ತಪ್ಪು ಎಂಬಂತಾಗಿದೆ ನಮ್ಮ ಸ್ಥಿತಿ. ಕ್ರಾಂತಿಯೆಂಬುದು ಹುಟ್ಟುವುದು ಬದಲಾವಣೆ ಗಾಳಿ ಬೀಸುವುದು ತಪ್ಪನ್ನು ಖಂಡಿಸಿದಾಗ ಅದರ ವಿರುದ್ಧ ಆಂದೋಳನವೊಂದು ರೂಪುಗೊಂಡಾಗ. ಉಡುಪಿ ಚಲೋ ಎಂಬ ಒಂದು ಕಾರ್ಯಕ್ರಮವು ಈ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗೆ ವೇದಿಕೆ ಕಲ್ಪಿಸಿದ್ದು ನಮ್ಮ ಮುಂದಿದೆ.
ಬಹುಷಹ ಮಾನವೀಯತೆ ನೆಲೆಗಟ್ಟಿನಲ್ಲಿ ಮುಕ್ತ ಮನಸ್ಸಿನಲ್ಲಿ ಎಲ್ಲವನ್ನು ನೋಡಿದಾಗ ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯ. ಹೊಸತನ್ನು ಒಪ್ಪಿಕೊಳ್ಳಲು ಸಾಧ್ಯ. ಸಂಕುಚಿತತೆಯ ಸಂಕೋಲೆಯೊಳಗೆ ಸಿಲುಕಿದ್ರೆ ಇದ್ಯಾವುದೂ ಸಾಧ್ಯವಾಗುವುದಿಲ್ಲ. ಬುದ್ಧನ ನೈಜ ಅನುಭವದ ಆಧಾರದ ಮೇಲೆ ಕಂಡುಕೊಂಡ ನಗ್ನಸತ್ಯಗಳನ್ನೇ ವ್ಯಂಗ್ಯಮಾಡುವ ಮನಸ್ಸುಗಳ ಮಧ್ಯೆ ಏನು ಹೇಳಿದ್ರು ಅರ್ಥವಾಗೋದಿಲ್ಲ.
ವೈಭವೀಕರಣ ನಮಗಿಷ್ಟವಾಗುತ್ತೆ. ಕಲ್ಪನೆ, ಆಡಂಬರ ಕಣ್ಣಿಗೆ ಹಿತವೆನಿಸುತ್ತೆ, ಅದಕ್ಕೆ ಸತ್ಯ, ನ್ಯಾಯದ ಬಗ್ಗೆ ಮಾತಾಡಿದ್ರೆ ಒಳ್ಳೇ ಗಾಂಧಿ ತರ ಆಡಬೇಡ ಎನ್ನುವ ಮನಸ್ಸುಗಳ ಮಧ್ಯೆ ನಾವು ಜೀವಿಸುತ್ತಿದ್ದೇವೆ,
ರಾಜಕೀಯ ವರದಿಗಾರಿಕೆ ಸಂದರ್ಭದಲ್ಲಿ ಹಲವು ಬಾರಿ ಸುದ್ದಿಗಳಿಗೆ ಬ್ರೇಕ್ ಹಾಕಲು ಕರೆಗಳು ಬಂದಿದ್ದಿದೆ. ಹಾಗೆ ಅದನ್ನು ನಯವಾಗಿ ತಳ್ಳಿಹಾಕಿದ ಸಂದರ್ಭಗಳು ಇದೆ. ಕೆಲ ಪ್ರಭಾವಿ ನಾಯಕರು ಸುದ್ದಿಯನ್ನು ಪ್ರಶ್ನಿಸಿದ್ದು ಇದೆ,ಇನ್ನು ಕೆಲವರು ಎಷ್ಟೇ ಕಟುವಾಗಿ ಅವರನ್ನು ವಿಮರ್ಶೆ ಮಾಡಿದರು ಯಾವ ಪ್ರಭಾವವನ್ನು ಬೀರದ್ದು ಇದೆ. ಇದು ನಿಜವಾದ ಮಾಧ್ಯಮ ಸ್ವಾತಂತ್ರ್ಯ.
ಇರ್ಲಿ ಈಗ ಎನ್ ಡಿ ಟಿವಿ ರವೀಶ್ ಕುಮಾರ್ ಕುರಿತಂತೆ ಒಂದೆರೆಡು ಮಾತು ಬರೆಯಲೇ ಬೇಕು. ಬಿಹಾರದಿಂದ ಬಂದ ಸಾಮಾನ್ಯ ವ್ಯಕ್ತಿ ಇವತ್ತು ಹಿರಿಯ ಪತ್ರಕರ್ತರಾಗಿ ತುಂಬಾ ಜನರಿಗೆ ಇಷ್ಟವಾಗುತ್ತಾರೆ. ಇನ್ನು ಕೆಲವರು ಯಾವುದೋ ವರ್ಗಕ್ಕೆ ಅವರನ್ನು ಸೀಮಿತಗೊಳಿಸುತ್ತಲು ಇದ್ದಾರೆ.
ಬರ್ಖಾದತ್, ರಾಜದೀಪ್ ಸರ್ ದೇಸಾಯಿ, ಅರ್ನಾಬ್ ಗೋಸ್ವಾಮಿ ಹೀಗೆ ಎನ್ ಡಿ ಟಿ ವಿ ಗರಡಿಯಲ್ಲಿ ಪಳಗಿದವರಿಗೆ ಒಂದು ಗಟ್ಟಿ ಬೆಂಬಲದ ಹಿನ್ನೆಲೆಯಿದೆ. ಆದ್ರೆ ರವೀಶ್ ಹಾಗಲ್ಲ. ಅವರೇ ಹೇಳುತ್ತಾರೆ ..
“ ರೈಲಿನಲ್ಲಿ ಎಸಿ ಚೇಂಬರ್ ನ್ನು ಕುತೂಹಲದಿಂದ ಆಸೆಗಣ್ಣಿಂದ ನೋಡಿದ ದಿನಗಳು ನೆನಪಿದೆ. ಹಾಗೆ ಎನ್ ಡಿ ಟಿ ವಿ ಕಚೇರಿಗೆ ಬಂದಾಗ ನಾಸಾ ಗೆ ಬಂದಂತಿತ್ತು. ದೊಡ್ಡ ದೊಡ್ಡ ಕ್ಯಾಮರಾಗಳು , ಕಂಪ್ಯೂಟರ್ ಗಳು ಹೀಗೆ ಏನೇನೋ. “
ಆಸೆಗಣ್ಣಿಂದ ಮಾಧ್ಯಮ ಪ್ರೀತಿಸಿ ಬಂದ ರವೀಶ್ ಈಗ ಡಿಬೆಟ್ ನಡೆಸಿಕೊಡುವ ರೀತಿ, ಗ್ರೌಂಡ್ ರಿಪೋರ್ಟಿಂಗ್ ಮತ್ತವರ ಬದ್ಧತೆ ಎಲ್ಲವು ನಂಗಂತು ತುಂಬಾನೆ ಇಷ್ಟ. ಪ್ರಬುದ್ಧತೆಯ ಜೊತೆಗೆ ಅನುಭವ ಕೂಡ ಪತ್ರಕರ್ತ ಅಥವಾ ಪತ್ರಕರ್ತಳಿಗೆ ಮುಖ್ಯ. ನಾವು ಸೆಲೆಬ್ರಿಟಿಗಳಲ್ಲ, ಸಾಮಾಜಿಕ ಕಾಳಜಿಯ ಜೊತೆಗೆ ಪುಟ್ಟದೊಂದು ಬದಲಾವಣೆಯ ಕನಸು ಸದಾ ಕಣ್ಣ ರೆಪ್ಪೆಗಳಲ್ಲಿ ಕೂತಿರಬೇಕು. ಮುಖದ ಜೊತೆ ಬದ್ಧತೆ ಬೆರೆತಿರಬೇಕು.
ಇನ್ನು ರವೀಶ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ.ರಾಜ್ ದೀಪ್ ಸರ್ ದೇಸಾಯಿ ರವೀಶ್ ಕೂದಲನ್ನು ನೋಡಿ ಬೈಯುತ್ತಿದ್ದನ್ನು ರವೀಶ್ ನೆನಪು ಮಾಡ್ಕೋತ್ತಾರೆ. ದೇವಾನಂದ್ ಆಗೋಕೆ ಬಂದಿದ್ದೀಯ ಅಥವಾ ರಿಪೋರ್ಟರ್ ಎಂದಿದ್ರಂತೆ ಸರ್ ದೇಸಾಯಿ.
ಹಾ ಮೊನ್ನೆ ನವದೆಹಲಿಯ ಪರಿಸರ ಮಾಲಿನ್ಯದ ಕುರಿತಂತೆ ಪುಟ್ಟದೊಂದು ಪ್ಯಾಕೇಜ್ ನೋಡಿದೆ. ಮಾಧ್ಯಮದ ಸ್ವಾತಂತ್ರ್ಯಕ್ಕೆ ಆಗುತ್ತಿರುವ ಧಕ್ಕೆ ಮತ್ತು ಪರಿಸರ ಮಾಲಿನ್ಯದ ಕುರಿತಂತೆ ರವೀಶ್ ಬರೆದ ಸಾಲುಗಳು ತುಂಬಾನೆ ಹೃದಯ ಮುಟ್ಟಿದವು ಮತ್ತು ಅರ್ಥಗರ್ಭಿತವಾಗಿದ್ದವು.
ರವೀಶ್ ಕುಮಾರ್ ಅಂತಹ ಪತ್ರಕರ್ತರು ಮತ್ತವರ ಸಾಧನೆ ಕಾಳಜಿ ನನ್ನಂತವರಿಗೆ ತುಂಬಾನೆ ಸ್ಪೂರ್ತಿಯಾಗಿದೆ. ಯಾಕಂದ್ರೆ ಮಧ್ಯಮವರ್ಗದ, ಹಳ್ಳಿಯಿಂದ ಬಂದ ನನ್ನಂತವರಲ್ಲು ಸಮಾಜಕ್ಕೆ ಏನಾದರು ಮಾಡಬೇಕೆಂಬ ಕನಸು ಕಣ್ಣ ರೆಪ್ಪೆಗಳಲ್ಲಿ ಇನ್ನು ಕೂತಿವೆ.
ಕೆಲವೊಮ್ಮೆ ಸಿಕ್ಕಿದ ಅವಕಾಶಗಳಲ್ಲಿ ಅದನ್ನು ಮಾಡಿದ್ದಿದೆ. ಆದ್ರೆ ಮಾಡೋದು ಬಹಳಾನೆ ಇದೆ. ಜಾತಿ ಧರ್ಮ, ಪ್ರದೇಶವನ್ನು ಮೀರಿ ನಿಂತು ನನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಅಚಲವಾಗಿ ನಂಬಿದವಳು ನಾನು. ಕೆಲವೊಮ್ಮೆ ಭ್ರಮನಿರಶನವಾದ್ರು ಭರವಸೆಯನ್ನು ಹೊತ್ತು ಮುಂದೆ ಸಾಗುತ್ತಿರುವವಳು.
ಪಲಾಯನ ಅಂದ್ರೆ ಓಡೋದಲ್ಲ ಅದು ಹೊಸ ಅವಕಾಶಗಳ ಹುಡುಕಾಟ ರವೀಶ್ ಮಾತು ಮತ್ತೆ ನೆನಪಾದವು ..ನಿಜ ಅಲ್ವಾ ?
ಮುಂದಿನ ವಾರ ಮನತಟ್ಟಿದ ಮತ್ತೊಂದು ಕವರೇಜ್ ಜೊತೆ ಹಾಜರಾಗುವೆ..
ಜ್ಯೋತಿ ….





ಲೇಖನದಲ್ಲಿ ಆಡಂಬರ ವೈಭವಗಳಿಲ್ಲ. ಹೃದಯದ ಮಾತು ಆಪ್ತವಾಗಿದೆ. ರವೀಶ್ ಕುಮಾರ್ ಬಗ್ಗೆ ಗೊತ್ತಿಲ್ಲದವರಿಗೆ ಕಿರಿದಾಗಿ ಬಹಳಷ್ಟು ತಿಳಿಸಿದ್ದೀರಿ.
ಅನುಪಮಾ ಪ್ರಸಾದ್
ನಿಜ. ಅದಕ್ಕಾಗಿಯೇ ನಾನು ಮದುವೆಯಾಗಿದ್ದು ನನ್ನ ಆಲೋಚನೆಗೆ ತಕ್ಕಂತೆಯೆ. https://www.youtube.com/watch?v=kTp1ff0W8sM
ellakkintha patrakartanadavanu eda balagala bagge yochisade partakartanagiye irabekembudu tumba istavaytu. nivenda hage savidhanakek baddhavagi bareda kudle avarannu pragatipararu endu helibidalaguttade. adre edabalagaleradannu handle madikondu, iddaddanu matra varadi madodu indina patrakartarigiruva bahudodda savalu.