ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ನಾನೂ ದೊಂಬಿದಾಸ”

ranew.jpgಪ್ರೊ. ರಾಮದಾಸ್ ಅವರು ಹೋರಾಟದ ಹೊತ್ತಿನಲ್ಲಿ ಅದಕ್ಕೆ ಅದಮ್ಯವೆಂಬಂಥ ಬೆಂಬಲವಾಗಿ ಇರಿಸಿಕೊಂಡಿದ್ದು ತಾವು ಮತ್ತೆ ಮತ್ತೆ ಹಾದುಬಂದಿದ್ದ ಕಷ್ಟಗಳ ಅಗ್ನಿಕುಂಡವನ್ನೇ ಎಂದರೆ ತಪ್ಪಾಗದು. ಅವರು ತಮ್ಮ ಗತ ದಿನಗಳನ್ನು ನೆನಪಿಸಿಕೊಳ್ಳುವ ಬಗೆಯಲ್ಲಿ ತಮಾಷೆಯ ಲೇಪವಿರುತ್ತಿತ್ತು. ಕಷ್ಟವನ್ನು ದಕ್ಕಿಸಿಕೊಂಡ ಗಟ್ಟಿ ದನಿಯಿರುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅದೆಲ್ಲವನ್ನೂ ಹೊಸ ಹೋರಾಟಕ್ಕೆ ಮೆಟ್ಟಿಲಾಗಿಸಿಕೊಳ್ಳುವ ತೀವ್ರತೆಯಿರುತ್ತಿತ್ತು. ಅಂಥ ಎರಡು ಪುಟ್ಟ ಬರಹಗಳನ್ನು ಇಲ್ಲಿ ಹೆಕ್ಕಿ ಕೊಡುತ್ತಿದ್ದೇವೆ.

*

ಕೆ ರಾಮದಾಸ್

ಚೆಗೆ ಮೈಸೂರಿನಲ್ಲಿ ದೊಂಬಿದಾಸರ ಸಮಾವೇಶ ನಡೆಯಿತು. ಆಕಸ್ಮಿಕವಾಗಿ ಸ್ನೇಹಿತರೊಬ್ಬರು ಅದರ ಆಹ್ವಾನ ಪತ್ರಿಕೆಯೊಂದನ್ನು ನನಗೆ ಕೊಟ್ಟರು. ಅದರ ಮೇಲೆ ಕಣ್ಣಾಡಿಸುತ್ತಿರುವಾಗ ಸಮಾವೇಶದಲ್ಲಿ ಉಪಸ್ಥಿತರಿರುವವರ ಪಟ್ಟಿಯಲ್ಲಿ ನನ್ನ ಹೆಸರನ್ನು ಅಗ್ರಪಂಕ್ತಿಯಲ್ಲಿ ಹಾಕಲಾಗಿತ್ತು. ನನ್ನ ಅನುಮತಿಯನ್ನು ಪಡೆಯದೆ ನನ್ನ ಹೆಸರು ಸೇರ್ಪಡೆಯಾಗಿರುವುದು ನೋಡಿ ಅಸಮಾಧಾನ ಉಂಟಾಯಿತು.

ಸಮಾವೇಶ ನಡೆಯುವುದಕ್ಕೆ ಎರಡು ದಿನ ಮೊದಲು ಅದರ ವ್ಯವಸ್ಥಾಪಕ ಮಿತ್ರರು ಅಧಿಕೃತವಾಗಿ ನನ್ನನ್ನು ಆಹ್ವಾನಿಸಲು ಬಂದಿದ್ದರು. ನಾನು, ಅನುಮತಿ ಇಲ್ಲದೆ ನನ್ನ ಹೆಸರನ್ನು ಹಾಕಿರುವುದಕ್ಕೆ ತೀವ್ರವಾಗಿ ಆಕ್ಷೇಪಿಸಿದೆ. ನನ್ನ ಆಕ್ಷೇಪವನ್ನು ಅವರು ಅಷ್ಟು ಗಂಭೀರವಾಗಿ ಪರಿಗಣಿಸದೆ, “ಪರ್ವಾಗಿಲ್ಲ ಬಿಡಿ ಸಾರ್, ಶೋಷಿತರ ಸಮಾವೇಶಕ್ಕೆ ನಿಮ್ಮ ಬೆಂಬಲ ಇದ್ದೇ ಇರುತ್ತದೆಂದು ವಿಶ್ವಾಸದಿಂದ ಹಾಕಿದ್ದೇವೆ. ದಯಮಾಡಿ ಬನ್ನಿ” ಎಂದು ಹೇಳಿ ಹೊರಟು ಹೋದರು.

ನಾನು ಯೋಚಿಸತೊಡಗಿದೆ: ನಾನು ಹೋದಲ್ಲೆಲ್ಲ ನನ್ನ ಸ್ವಭಾವಜನ್ಯವಾದ ವಿವಾದ, ತಕರಾರು, ಪ್ರತಿಭಟನೆಗಳಿಂದ ದೊಂಬಿಯ ಪ್ರಸಂಗಗಳು ನಡೆಯುವುದರಿಂದ, ದೊಂಬಿ ದಾಸರ ಸಮಾವೇಶದ ವ್ಯವಸ್ಥಾಪಕರು ನನ್ನನ್ನೂ ಒಬ್ಬ ವಾರಸುದಾರನನ್ನಾಗಿ ಭಾವಿಸಿರುವುದಕ್ಕೆ, ಆಕ್ಷೇಪಿಸುವ ಬದಲು ಹೆಮ್ಮೆಪಟ್ಟುಕೊಳ್ಳುವುದೇ ಉಚಿತವೆಂದು ಭಾವಿಸಿ ಸುಮ್ಮನಾಗಿಬಿಟ್ಟೆ.

* * *

ಮಳೆಗಾಲ ಮತ್ತು ಛತ್ರಿ ಪ್ರಸಂಗ

ಲೆನಾಡಿನಲ್ಲಿ ಶಾಲೆಗಳು ಮತ್ತು ಮಳೆಗಾಲ ಜೊತೆಯಾಗಿ ಪ್ರಾರಂಭವಾಗುತ್ತವೆ. ನಾನು ಚಡ್ಡಿ ಹಾಕಿಕೊಂಡು ಸ್ಲೇಟು-ಬಳಪ, ಮಗ್ಗಿ ಪುಸ್ತಕ ಎಲ್ಲ ಸಿದ್ಧಮಾಡಿಕೊಂಡು ಶಾಲೆಗೆ ಹೋಗಲು ತಯಾರಿ ನಡೆಯಿತು. ಛತ್ರಿ ಮಾತ್ರ ಇರಲಿಲ್ಲ. ನಮ್ಮ ಮನೆಯಲ್ಲಿದ್ದ ಹಳೆಯ ಛತ್ರಿಯೊಂದು ಬಳಸಲಾಗದಷ್ಟು ಶಿಥಿಲವಾಗಿತ್ತು. ಕಬ್ಬಿಣದ ಕಡ್ಡಿಯ ಕೊಡೆಗಳು ನಮ್ಮ ಆರ್ಥಿಕ ಸ್ಥಿತಿಗೆ ಎಟುಕದಷ್ಟು ದುಬಾರಿಯಾಗಿದ್ದವು. ಯಾವ ನಿರ್ದಿಷ್ಟ ವರಮಾನವೂ ಇಲ್ಲದ ನನ್ನ ತಾಯಿಯವರಿಗೆ ಜೀವನ ಯಾಚನೆಯೇ ಕಷ್ಟದಾಯಕವಾಗಿತ್ತು. ಸೋದರಮಾವನ ನೆರವು ಇತ್ತು. ಸೂಲಗಿತ್ತಿಯಾಗಿ ಕೇರಿಯ ನೆರೆಹೊರೆಯಲ್ಲಿನ ಬಾಣಂತಿತನದ ಕೆಲಸ ಇಂತಹ ಅರೆಕಾಲಿಕ ಕೆಲಸಗಳಿಂದ ಅಲ್ಪಸ್ವಲ್ಪ ಆದಾಯ ಬರುತ್ತಿತ್ತು. ವಾಸಕ್ಕೊಂದು ಪುರಾತನ ಕಾಲದ ಸಣ್ಣ ಮನೆ ಇತ್ತು.

ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾನು ಶಾಲೆಗೆ ಹೊರಟಿದ್ದೆ. ಪ್ರೀತಿಯ ಮಗ ಶಾಲೆಗೆ ಸೇರಿದ್ದರಿಂದ ಪುಲಕಿತರಾಗಿದ್ದ ತಾಯಿಯವರು ಪುಡಿಕಾಸು ಜೋಡಿಸಿ, ಕರಾವಳಿಯ ಕಡೆಯಿಂದ ಮಾರಾಟಕ್ಕೆ ಬರುತ್ತಿದ್ದ ತಾಳೆಗರಿಯ ದೇಶೀಯ ಮಾಡೆಲ್ ಛತ್ರಿಯೊಂದನ್ನು ನಮ್ಮ ಊರಿನ ಸಂತೆಯಲ್ಲಿ ಕೊಡಿಸಿದರು. ಅದು ದೊಡ್ಡ ಗಾತ್ರದ ಅಣಬೆ ಆಕೃತಿಯ ಛತ್ರಿ. ಅದನ್ನು ಕಂಪನಿ ಛತ್ರಿಗಳಂತೆ ಮಡಿಚಲು ಆಗುತ್ತಿರಲಿಲ್ಲ. ಆದರೂ ನನ್ನ ಸ್ವಂತ ಛತ್ರಿಯನ್ನು ನೋಡಿ ನನಗೆ ಖುಷಿಯಾಯಿತು. ಅದರ ತೂಕ ಸ್ವಲ್ಪ ಹೆಚ್ಚಾಗಿತ್ತು.

ನನ್ನ ತಾಳೆಗರಿಯ ಹೊಸ ಛತ್ರಿಯಯನ್ನು ಗದೆಯಂತೆ ಹೆಗಲ ಮೇಲೆ ಇಟ್ಟುಕೊಂಡು ಅದನ್ನು ಗಿರಿಗಟ್ಟೆಯಂತೆ ತಿರುಗಿಸುತ್ತಾ ಶಾಲೆಗೆ ಹೋಗತೊಡಗಿದೆ. ನಮ್ಮ ಶಾಲೆಗೆ ಕೆಲವರು ಹುಡುಗರು ಮಾತ್ರ ಇಂತಹ ಛತ್ರಿಗಳನ್ನು ತರುತ್ತಿದ್ದರು. ಬಹುಪಾಲು ಹುಡುಗರು ಸೂರ್ಯ ಮಾರ್ಕಿನ ಕಂಪನಿ ಕೊಡೆಗಳನ್ನು ತರುತ್ತಿದ್ದರು. ರೈನ್ ಕೋಟ್ ಗಳನ್ನು ಹಾಕಿಕೊಂಡು ಯಾರೂ ಬರುತ್ತಿರಲಿಲ್ಲ. ಸುತ್ತಮುತ್ತಲ ಹಳ್ಳಿಯ ಹುಡುಗರು ದೇಶೀಯ ರೈನ್ ಕೋಟ್ ಕಂಬಳಿಯ ಕೊಪ್ಪೆಯನ್ನು ಬುರ್ಖಾದಂತೆ ಹಾಕಿಕೊಂಡು ಬರುತ್ತಿದ್ದರು. ಅದು ಮಲೆನಾಡಿನ ಬಿರುಮಳೆ-ಚಳಿಯನ್ನು ತಡೆಯಲು ಸರಿಯಾದ ಸಾಧನವಾಗಿತ್ತು. ಪೇಟೆಯವರು ಮಾತ್ರ ಕಂಬಳಿಕೊಪ್ಪೆಯನ್ನು ಬಳಸುವುದನ್ನು ತಮ್ಮ ಸ್ಥಾನ-ಮಾನಕ್ಕೆ ಕುಂದೆಂದು ಭಾವಿಸಿದ್ದರು. ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವವರು ಕಂಬಳಿಕೊಪ್ಪೆಯ ಮೇಲೆ ತಾಳೆಗರಿಯ ಗೊರಬುಗಳನ್ನು ಬಳಸುತ್ತಿದ್ದರು.

‍ಲೇಖಕರು avadhi

24 July, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading