
ಸಿದ್ದಲಿಂಗಯ್ಯ
ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ
ಆಕಾಶದ ಅಗಲಕ್ಕೂ, ನಿಂತ ಅಲವೇ
ಕೋಟಿ ಕೋಟಿ ಕಪ್ಪು ಜನರ, ಮೊಟ್ಟ ಮೊದಲ ಮಾತೇ
ನೀರಿನಾಚೆ ಮೋಡದಾಚೆ, ಮೊಳಗಿದಂಥ ಘೋಷವೇ
ಬಾಳಿನಲ್ಲಿ ಕಂಡುಕೊಂಡೆ, ಹೋರಾಟದ ದಾರಿಯ
ಕರೆದು ಕರೆದು ತೋರಿಸಿದೆ, ಮಹಾಮನೆಯ ಬಿರುಕನು
ಜಾತಿಯನ್ನು ಹೂತು ಬಿಡಲು, ಲಕ್ಷ ಲಕ್ಷ ಜನರನು
ಕಟ್ಟಿ ಕ್ರಿಯಾರಂಗಕ್ಕಿಳಿದ, ಸ್ವಾಭಿಮಾನ ಸಮುದ್ರ

ಮಹಾರಾಷ್ಟ್ರದ ಮಣ್ಣಿನಲಿ, ಮೂಡಿಬಂದ ಗಡುಗು ಸಿಡಿಲೇ
ಮಳೆಯನೇಕೆ ತಾರಲಿಲ್ಲ, ಮಿಂಚು ಮಾಯೆ ಅಷ್ಟೆಯೇ
ಅಭಿಮಾನದ ನೇಗಿಲಿಂದ, ಬಂಜರು ನೆಲ ಉತ್ತವನೇ
ಪಾತಿ ಮಾಡಿ ನಾಟಿ ಹಾಕಿ, ಬೆಳೆಯ ಕಾಣದೋದವನೆ
ಕಪ್ಪುಕ್ಕಿನ ಕೋಳಗಳನು, ಕಡಿದು ಎಸೆದ ವಜ್ರವೇ
ಬಂಗಾರದ ಕೋಳಹೊಕ್ಕ, ಮಹಾಬೌದ್ಧ ಭಿಕ್ಷುವೇ
ಮಲಗಿದವರ ಕೂಡಿಸಿದೆ, ನಿಲಿಸುವವರು ಯಾರೋ
ಛಲದ ಜೊತೆಗೆ ಬಲದ ಪಾಠ, ಕಲಿಸುವವರು ಯಾರೋ





0 Comments