ನೆರಳ ಸೂತಕ
ಆನಂದ ಈ ಕುಂಚನೂರ
ಇದೀಗ ತಾನೇ ಮಣ್ಣು ಮಾಡಿದ ನನ್ನ ಗೋರಿಯಿಂದ
ಹಿಡಿಮಣ್ಣ ಹಿಡಿದು ಬಿಕ್ಕುತಿರುವಂತೆ
ಕಣ್ಣಿಗೊತ್ತಿ ಅಳುತಿರುವಂತೆ ಯಾರೋ…
ಈ ಕಂಪನ ಈ ಕತ್ತಲು, ತಡವರಿಸಿದೆ ಆತ್ಮ
ಬೆವರಿದೆ ಜೀವ
ಸಾಕಿನ್ನು ನನಗೆ ಒಂದೇ ಸಾವು
ಯಾರು?
ಯಾರಿರಬಹುದು?
ಒಡಲು ಬರಿದಾಯಿತೆಂದಳುವ ಹೆತ್ತವರೆ?
ಓದು ಅರ್ಧವಾಯಿತೆಂದು ಬಂದ ಮಾಸ್ತರರೆ?
ಪ್ರೀತಿ ಸಿಗದಾಯಿತೆಂದು ದುಃಖಿಸುವ ನಲ್ಲೆಯೇ?
ನೋವಿಗೆ ಹೆಗಲಾಗಲಿಲ್ಲವೆಂದ ಆತ್ಮೀಯ ಗೆಳೆಯನೆ?
ಬಾಕಿ ಚುಕ್ತಾ ಮಾಡಿಲ್ಲೆಂದು ಕೊರಗುವ ಸಾಲಗಾರನೆ?
ಹರಕೆ ತೀರಿಸಿದೆ ಉಳಿಸಿ ಬಂದ ಆ ಗುಡಿಯ ಪೂಜಾರಿಯೇ?
ಯಾರಾದರೇನು?
ಮಣ್ಣ ಸೇರಿ ಎಲ್ಲವೂ ಮನ್ನಾ!
ಮಣ್ಣ ಬೆರೆತ ನನ್ನ ಉಸಿರು
ಮತ್ತೆ ಹಬೆಯಾಡುತಿದೆ
ಅಲ್ಲೊಂದು ಪ್ರೇಮದೊರತೆ ಅಣಿಯಾಗುತಿದೆ
ಪುನರುಜ್ಜೀವನಕೆ
ಕೈ ಬಿಡಲೊಲ್ಲರು ಮಸಣದೀ ಜನತೆ
ತಾಮಸದ ತರಗೆಲೆ
ಹುಮ್ಮಸ್ಸಿನ ಅರೆಬೆಂದ ಘಾಟು ಧೂಮ
ದಾರಿಯೂ ಕಾಣದು ಅಮಾಸೆಯ ರಾತ್ರಿ
ಥತ್, ಇದು ಎಲ್ಲ ಸತ್ತವರ ಲೋಕ!
ಮಣ್ಣನಪ್ಪಿದ ನೆರಳಿಗೂ ಸೂತಕ
ಮಾಡಬೇಕೆ ಮಡಿಯ ಜಳಕ?
ಜನ್ಮ ಮುಗಿದರೂ ತೀರದು ಋಣ
ತೀರಿಸಿಲೆಂದರೆ ಸಿಗುವುದೇ ಚೇತನ ಮರ್ಮ
ಪ್ರಾಪ್ತಿಯಾಗುವುದೆ ಜೀವಕೆ ಜೀವ
ನನ್ನ ಹೆಣ ಹೊತ್ತ ಆತ್ಮಕೊಂದು
ನಮ್ರ ವಿನಂತಿ
ಮಣ್ಣನಪ್ಪಿದ ನೆರಳಿಗೂ ಸೂತಕ
ಮಾಡಬೇಕೆ ಮಡಿಯ ಜಳಕ?
ಜನ್ಮ ಮುಗಿದರೂ ತೀರದು ಋಣ
ತೀರಿಸಿಲೆಂದರೆ ಸಿಗುವುದೇ ಚೇತನ ಮರ್ಮ
ಪ್ರಾಪ್ತಿಯಾಗುವುದೆ ಜೀವಕೆ ಜೀವ
ನನ್ನ ಹೆಣ ಹೊತ್ತ ಆತ್ಮಕೊಂದು
ನಮ್ರ ವಿನಂತಿ..ultimate manakaaduva chitra kaavya…
ತುಂಬಾ ಚೆನ್ನಾಗಿದೆ
olle padhya..anand..
soo nice..