ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬೊಗಸೆಯಲ್ಲಿನ ನೀರು ಬತ್ತದಿರಲಿ ಪ್ರಭುವೇ..


 
 
 
 
ಎನ್ ರವಿಕುಮಾರ್ / ಶಿವಮೊಗ್ಗ
 
 
 
ರೋಮ್ ಪ್ರಭುತ್ವ  ಏಸು ಕ್ರಿಸ್ತನನ್ನು ಅಪರಾಧಿ ಎಂದು ಘೋಷಿಸಿ  ಶಿಲುಬೆಗೇರಿಸಲು ನಿರ್ಧರಿಸಿತು.
ಅಸಂಖ್ಯಾತ ಏಸು ಅನುಯಾಯಿಗಳು ಕಣ್ಣೀರಿಟ್ಟು  ನೋವುಣ್ಣುತ್ತಿದ್ದರು.
ವಧಾ ಸ್ಥಾನದಲ್ಲಿ ಏಸುವನ್ನು ಶಿಲುಬೆಗೇರಿಸುವ ಆ ಕ್ಷಣ. ಅವರ ಕೈ ,ಕಾಲುಗಳಿಗೆ ಮೊಳೆ ಹೊಡೆಯುವ ಕೆಲಸ ನಡೆದಿತ್ತು. ರಕ್ತ ಚಿಮ್ಮುತ್ತಿದ್ದರೂ ಮಂದಸ್ಮಿತರಾಗಿ, ದಿವ್ಯ ಮುಖಮುದ್ರೆ ಹೊತ್ತ ಏಸು ತನ್ನ ಸಾವು ಜಗತ್ತಿನ ಶಾಂತಿಗೆ ಮುಡುಪು ಎಂದು ಧ್ಯಾನಿಸುತ್ತಿದ್ದರು. ತನ್ನನ್ನು ಶಿಕ್ಷಿಸುತ್ತಿರುವವರನ್ನು ಕ್ಷಮಿಸುವಂತೆ  ಪ್ರಾರ್ಥಿಸುತ್ತಿದ್ದರು.
ಈ ಸಂದರ್ಭದಲ್ಲಿ ಏಸುವಿನ ಅನುಯಾಯಿಯೊಬ್ಬ ಏಸುವಿನ ಕೈಗೆ ಮೊಳೆ ಹೊಡೆಯುತ್ತಿದ್ದ ಸೈನಿಕನ ಕಿವಿಯನ್ನು ಕತ್ತರಿಸಿಬಿಟ್ಟ. ಅಲ್ಲಿಯವರೆಗೂ ನಗು ನಗುತ್ತಲೆ ತನ್ನ ಕಣ್ಣುಗಳಲ್ಲಿ ಪರಮ ಪ್ರೀತಿಯನ್ನೇ ಸ್ಫುರಿಸುತ್ತಿದ್ದ ಏಸು ಗಳಗಳನೆ ಅತ್ತುಬಿಟ್ಟರು. ಕಿವಿ ಹರಿದುಕೊಂಡು ರಕ್ತದಲ್ಲಿ ಮುಳುಗಿದ್ದ ಸೈನಿಕನನ್ನು ಸಂತೈಸತೊಡಗಿದರು. ಅವನ ನೋವಿಗಾಗಿ ಮಮ್ಮಲ ಮರುಗಿದರು. ನೋವುಂಡು ಬೆಂದರು. ಏಸು ತನ್ನ ಶಿಷ್ಯ ಮಾಡಿದ ತಪ್ಪಿಗಾಗಿ ಆ ಸೈನಿಕನ ಕ್ಷಮೆ ಕೋರುತ್ತಾರೆ.
ತನ್ನ ನೆತ್ತಿ, ಕೈ, ಕಾಲುಗಳಿಗೆ ಮೊಳೆ ಹೊಡೆಯುವ ಸೈನಿಕ ಯಾವ ತಪ್ಪನ್ನು ಮಾಡಿಲ್ಲ. ಆತ ಆದೇಶ ಪಾಲಕ ಮಾತ್ರ. ಆತನನ್ನು ಹಿಂಸಿಸಿದ್ದು ನ್ಯಾಯವಲ್ಲ. ಆತ ತನಗೆ ವಹಿಸಿದ್ದ ಕರ್ತವ್ಯವನ್ನು ಮಾತ್ರ ಮಾಡಿದ್ದಾನೆ. ನನ್ನ ಮೇಲೆ ಅವನಿಗೆ ಯಾವ ದ್ವೇಷವೂ ಇಲ್ಲ. ಇಂತಹ ನಿರಪರಾಧಿಯ ಕವಿ ಕತ್ತರಿಸಿದ್ದು ಪರಮ ಪಾಪ. ಇದು ನನ್ನನ್ನು ಘಾಸಿಗೊಳಿಸಿದೆ ಎಂದು ತನ್ನ ಅನುಯಾಯಿಗಳಿಗೆ ಹೇಳುತ್ತಾರೆ. ಯಾವುದೇ ಕಾರಣಕ್ಕೂ ದ್ವೇಷ ಸಾಧಿಸದಂತೆ ತನ್ನ ಅಸಂಖ್ಯಾತ ಅನುಯಾಯಿಗಳನ್ನು ಪ್ರತಿಜ್ಞೆಗೀಡುಮಾಡುತ್ತಾರೆ.
ತನ್ನ ಸಾವಿನಲ್ಲೂ ಪ್ರೀತಿ, ಅಹಿಂಸೆ, ಕರುಣೆ, ನ್ಯಾಯ ನಿಷ್ಠೆಯನ್ನು ಪ್ರತಿಪಾದಿಸುವುದು ಇಂತಹ ಮಹಾನ್ ಸಂತರಿಂದ ಮಾತ್ರ ಸಾಧ್ಯ. ಹಿಂಸೆ.ದ್ವೇಷಗಳು ಜಗತ್ತನ್ನು ಎಂದಿಗೂ ಗೆದ್ದಿಲ್ಲ. ಪ್ರೀತಿ, ಕರುಣೆ, ಕ್ಷಮೆಗಳೇ ಜೀವ ಕುಲದ ಶಾಶ್ವತ ನೆಮ್ಮದಿಯ ಜೀವ ದ್ರವ್ಯಗಳು. ಇಂತಹ ಮಹಾನ್ ಮಂತ್ರವನ್ನು ಜಗತ್ತಿಗೆ ಭೋಧಿಸಿದ ಮಹಾನ್ ಸಂತ ಏಸು ಕ್ರಿಸ್ತನ ಜನ್ಮದಿನವಿಂದು. ಈ ಮಹಾನ್ ಶಾಂತಿಧೂತನಿಗೊಂದು  ನಮನ.

‍ಲೇಖಕರು avadhi

25 December, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading