ಹನುಮ ಜಯಂತಿ, ಈದ್ ಮಿಲಾದ್ ಹಾಗೂ ಕ್ರಿಸ್ಮಸ್ ಒಂದರ ಬೆನ್ನ ಹಿಂದೆ ಒಂದು ಬಂದವು.
ಯಾರೋ ಉದ್ಘರಿಸಿದರು ವಾಹ್! ಆಮರ್, ಅಕ್ಬರ್, ಅಂತೋಣಿ ಅಂತ..
ತಕ್ಷಣ ನಮಗೆ ನೆನಪಾದದ್ದು ಉದಯ ಕುಮಾರ್ ಹಬ್ಬು ಅವರು ಹಂಚಿಕೊಂಡಿದ್ದ ಈ ನೆನಪು. ಓದಿ
ಉದಯ ಕುಮಾರ್ ಹಬ್ಬು
ನಮ್ಮ ಕುಟುಂಬಕ್ಕೂ ಮತ್ತು ಮುಸ್ಲಿಮ್ ಸಮುದಾಯಕ್ಕೂ ಅತಿ ಹಿಂದಿನ ನಂಟು. ನಮ್ಮ ತಂದೆ ಊರ ಶಾನುಭೋಗರಾಗಿದ್ದರು. ಅವರ ದಫ್ತರನ್ನು ಕಟ್ಟು ಮಾಡಿ ಹೊರಲು ಒಬ್ಬ ಉಗ್ರಾಣಿ.
ನಮ್ಮ ತಂದೆಯ ಉಗ್ರಾಣಿ ಹುಸೇನ್ ಎಂಬ ಭಾವುಕ ವ್ಯಕ್ತಿ. ನಮ್ಮ ಮನೆಯಲ್ಲಿಯೆ ಉಂಡು, ನಮಗೆ ಅವರ ಹಬ್ಬಗಳಂದು ಸಿಹಿತಿಂಡಿ ತಂದು ನಮಗೆ ಹುಸೇನ್ ಮಾಮಾ ಆಗಿದ್ದರು. ಮತ್ತೆ ನನ್ನ ಬಾಲ್ಯದಲ್ಲಿ ಮೊಹರಮ್ ಹಬ್ಬದಂದು ಪೀರ್ ಕಟ್ಟುವ ಮೆರವಣಿಗೆ ಇರುತ್ತಿತ್ತು. ನಾನು ಆ ಪೀರ್ ಕಟ್ಟಿ ಕುಣಿಯುತ್ತಿದ್ದೆ.
ಮತ್ತೆ ಕಾಲೇಜಿನಲ್ಲಿ ನಮ್ಮೂರಿನ ಹಕೀಮ್ ನನ್ನ ಮಿತ್ರನಾದ. ಅವನ ತಂದೆ ಗಾಂವಟಿ ಔಷಧಿಗಳನ್ನು ತಯಾರಿಸುತ್ತಿದ್ದರು. ಅವರಿಗೆ ಮನೆತುಂಬ ಮಕ್ಕಳು. ನಮ್ಮ ಅಣ್ಣಂದಿರು ಹಕೀಮನ ವಿದ್ಯಭ್ಯಾಸದ ವೆಚ್ಚವನ್ನು ಭರಿಸಿದ್ದರು. ಮತ್ತೆ ಎಮ್ ಏ ಮಾಡುವಾಗ ಹಕೀಮ್ ನನ್ನ ಜೊತೆ ರೂಮಿನಲ್ಲಿ ಇದ್ದ. ಅವನ ಇಡೀ ಖರ್ಚನ್ನು ನಮ್ಮಣ್ಣ ಭರಿಸಿದರು.
ಅವನ ತಂಗಿಯ ಗಂಡ ಅಕ್ಬರ್ ನಮ್ಮ ಹಾಗೆ ನಮ್ಮ ಮನೆ ಮಾತಾಡುತ್ತ ನಮ್ಮ ಮನೆಯ ಸದಸ್ಯನೆ ಆಗಿಬಿಟ್ಟಿದ್ದಾನೆ. ಹಾಗಾಗಿ ನಮಗೂ ಮುಸ್ಲಿಮ್ ಕುಟುಂಬಕ್ಕೂ ಬಾದರಾಯಣದ ನಂಟು.
ನಾನು ಉದ್ಯೋಗ ಅರಸಿ ಒಂದೆಡೆ ಮನೆ ಮಾಡಿದ್ದೇನೆ ನನ್ನ ನೆರೆಕೆರೆ ಒಂದು ಮುಸ್ಲಿಮ್ ಕುಟುಂಬ. ನಮ್ಮ ಕಷ್ಟಕ್ಕೆ ಅವರು ಅವರ ಕಷ್ಟಕ್ಕೆ ನಾವು. ಮತ್ತೆ ನನ್ನ ಓಣಿ ಒಂದು ಮಿನಿಭಾರತ.
ನಾನು ಹಿಂದು, ನನ್ನ ಆಚೆಯವರು ಕ್ರಿಶ್ಚಿಯನ್ ಮತ್ತು ಈ ಕಡೆ ಮುಸ್ಲಿಮ್ ಕುಟುಂಬ. ನಾವು ನೆಮ್ಮದಿಯಿಂದ ಇದ್ದೇವೆ.
0 ಪ್ರತಿಕ್ರಿಯೆಗಳು