ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನನ್ನು ನನಗೆ ತೋರಿಸಿಕೊಟ್ಟವರು

ವೈದೇಹಿ

ಪ್ರಿಯ ಲಂಕೇಶ್, ಇದು ಮಾತ್ರ ಖಂಡಿತ. ನೀವು ಅಂದು ಹೇಳಿ ಕಾಲಂ ಬರೆಸದಿದ್ದಲ್ಲಿ, ನೀವು ಶ್ರೀ ಸುಬ್ಬಣ್ಣ ಒತ್ತಾಸೆ ನೀಡದಿದ್ದಲ್ಲಿ ಈಗ ಬರೆದಿರುವಷ್ಟನ್ನೂ ನಾನು ಬರೆಯುತ್ತಿರಲಿಲ್ಲ. ನೀವು ನನ್ನ ಬರವಣಿಗೆ ಕುರಿತೇ ಬರೆದಿರಿ. ಅದುವರೆಗೆ ಲೇಖಕರ ಕುರಿತೇ ಪುಟಗಟ್ಟಲೆ ಓದಿ ನಾವೆಲ್ಲ “ಚರ್ಚಿಸಲ್ಪಡತಕ್ಕವರಲ್ಲ” – ಎಂಬ ಭಾವನೆ ಸುಪ್ತಮನದಲ್ಲಿ ಅಡಗಿದ್ದಕ್ಕೋ ಏನೋ, ನನಗದು ಓದಿ ಶಾಕ್ ಆಗಿತ್ತು. ಫೋನಿನಲ್ಲಿಯೂ, ನನ್ನ ಬರಹ ಓದಿದ ತಕ್ಷಣ, ಪ್ರತಿಕ್ರಿಯಿಸುತ್ತಿದ್ದೀರಿ. ಎಲ್ಲ ನೆನಪಾಗುತ್ತಿದೆ.

ಇದೆಲ್ಲ ಕಷ್ಟವೇ. ಕರಿಯರು, ದಲಿತರು, ಮಹಿಳೆಯರು – ಬೇರೆಯವರನ್ನೇ ನೋಡುತ್ತ ಕೇಳುತ್ತ “ಅವರೆಲ್ಲ ಹೌದು-ನಾವು ಅಲ್ಲ” ಎಂಬ ಮಾಯೆಗೊಳಗಾಗಿ ಬೆಳೆವವರು. ತಮ್ಮನ್ನು ಮರೆತುಕೊಳ್ಳುವವರು. ನಮ್ಮಂಥವರಿಗೆ ಮೆಚ್ಚುಗೆಯನ್ನು ನಿರ್ವ್ಯಾಜವಾಗಿ ನೇರವಾಗಿ ತಿಳಿಸಲು ಮನಸ್ಸು ಬರುವುದು ಎಂಥಾ ಅಪರೂಪದ ಸಂಗತಿ. ಇದು ಒಂದಾದರೆ, ಹೇಳಿದರೆ ಹಿಗ್ಗಿಯಾರು ಅಂತ, ಅಹಂಕಾರ ಬಂದೀತು ಅಂತ, ಬರವಣಿಗೆ ಅಲ್ಲಿಯೇ ನಿಂತೀತು ಅಂತ, ಮತ್ತಷ್ಟು ಬರೆದಾರು ಎಂಬ vaidehi.jpgಅಸೂಯೆ, ದೋಷವೇ ಕಾಣುವುದು ಒಂದು, ಈಕೆ ಮಹಿಳೆ ಎಂದಾಗ ತಂತಾನೇ ಏಳುವ ಅವಜ್ಞೆಯೊಂದು, ಸಮಕಾಲೀನರ ಸಾಹಿತ್ಯವನ್ನು ಓದುವ ವ್ಯವಧಾನವೇ ಇಲ್ಲದಿರುವುದು ಒಂದು, ಮೆಚ್ಚಿದರೆ ಸ್ವಂತಕ್ಕೆ ಏನೂ ಉಪಯೋಗವಿಲ್ಲದೇ ಇರುವುದೊಂದು – ಹೀಗೆ ಕಾರಣಗಳು ಅನೇಕ. ಆದರೆ ಈ ಕಾರಣಗಳಾವುದೂ ನಿಮ್ಮನ್ನು ನನ್ನ ಮಟ್ಟಿಗೆ ಬಾಧಿಸಲೇ ಇಲ್ಲ.  ನನ್ನಲ್ಲಿರುವ ಲೇಖಕಿಯಲ್ಲಿ ಅಕೃತ್ರಿಮ ಅಚಲ ವಿಶ್ವಾಸ ಇಟ್ಟಿರಿ. ಒಂದಕ್ಷರವನ್ನೂ ತೆಗೆಯದೆ ಪೂರ್ಣಸಂಪೂರ್ಣ ಪ್ರಕಟಿಸಿದಿರಿ. ಇದು ನನ್ನ ಆತ್ಮವಿಶ್ವಾಸಕ್ಕೆ ಹೆಚ್ಚಿನ ಬಲ ಕೊಟ್ಟಿತೆಂದು ನೀವು ಬಲ್ಲಿರಿ.

ತನ್ನಲ್ಲಿ ತನಗೇ ಗುರುತು ಸಿಗದ ತನ್ನನ್ನು ತೋರಿಸಿಕೊಟ್ಟಲ್ಲಿ ಅದು ಯಾವುದೇ ಕಲಾವಿದನ ಪುಣ್ಯ ತಾನೆ? ನೀವು ಅನೇಕರಿಗೆ ಅದನ್ನು ಮಾಡಿದಿರಿ.

‍ಲೇಖಕರು avadhi

31 October, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading