ಪ್ರೀತಿಯ ಕರೆಗೆ ಅಷ್ಟು ಶಕ್ತಿ ಇದೆಯೇನೋ ನಮಗೆ ಗೊತ್ತಿಲ್ಲ. ಎಸ್ ವಿ ಪರಮೇಶ್ವರ ಭಟ್ಟರ ಕವನ ದೀಪ ಹಚ್ಚಾ! ದ ಆಯ್ದ ಭಾಗ ನೀಡುತ್ತಿದ್ದಂತೆಯೇ ಅವಧಿಗೆ ಪತ್ರಗಳ ಸುರಿಮಳೆಯೇ ಸುರಿದಿದೆ . ಒಬ್ಬೊಬ್ಬರಿಗೂ ಒಂದೊಂದು ರೀತಿಯ ಭಾವನೆಗಳನ್ನು ಈ ಕವಿತೆ ಬಡಿದೆಬ್ಬಿಸಿದೆ.
ಇಡೀ ಕವನವನ್ನು ಅವಧಿಯಲ್ಲಿ ಕಾಣಿಸಿ ಎಂದು ಎಲ್ಲರೂ ಕೇಳಿದ್ದಾರೆ. ಒಂದು ಕವಿತೆ ಜಗದ ಬೆಳಕಾಗಬಹುದು ಎಂದವರು ಯಾರು? ಇಲ್ಲಿದೆ ಅಂತಹ ಬೆಳಕು ಮೂಡಿಸಿದ ಕವಿತೆ. ಯಥಾ ಪ್ರಕಾರ ಶಿವಮೊಗ್ಗ ಕನ್ನಡ ಸಂಘಕ್ಕೆ, ಜೆ ಕೆ ರಮೇಶ್ ಅವರಿಗೆ ವಂದನೆಗಳು.
ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ
ದೀಪ ಹಚ್ಚಾ
ಬಾಳ ಮುಂಬೆಳಗುರಿದು ಹಗರಣದ ಬೈಗಿಳಿದು
ಕಪ್ಪೇರಿ ಬಂದಿತು
ದೀಪ ಹಚ್ಚಾ
ಕರಿಗೆಜ್ಜೆ ಕುಣಿಸುತ್ತಾ ಕಣ್ಣೀರ ಮಿಡಿಯುತ್ತಾ
ಇರುಳಾಕೆ ಬಂದಳು
ದೀಪ ಹಚ್ಚಾ
ಕಾಲರಾಯನ ಗಾಲಿ ಕತ್ಲಲ್ಲೇ ತಿರುಗಲಿ
ನನ್ನೆದೆಗೆ ನಿನ್ನೊಲವ
ದೀಪ ಹಚ್ಚಾ
ದೇಹದ ಗೂಡಲಿ ನಿನ್ನೊಲವು ಮೂಡಲಿ
ಜಗವೆಲ್ಲ ನೋಡಲಿ
ದೀಪ ಹಚ್ಚಾ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ
ದೀಪ ಹಚ್ಚಾ
ಬೆಲ್ಲದಂತೆಲ್ಲ ಬಗೆ ಕರಗುತಲಿಹುದೊಳಗೆ
ನಿನ್ನನೆ ಬೇಡುವೆ
ದೀಪ ಹಚ್ಹ್ಚಾ
ದೀಪಿಲ್ಲ ಧೂಪಿಲ್ಲ ಝಳಝಳವಿನಿಸಿಲ್ಲ
ಕಳಕಳವಾಯ್ತೆಲ್ಲ
ದೀಪ ಹಚ್ಚಾ
ಹಳೆಬಾಳು ಸತ್ತಿತ್ತು ಕೊನೆಬಾಳು ಸುಟ್ಟಿತ್ತು
ಹೊಸಬಾಳು ಹುಟ್ಟಿತ್ತು
ದೀಪ ಹಚ್ಹ್ಚಾ
ಸಾವಿನ ಒಳಸಂಚು ಮಾಯದ ಕಣ್ಮಿಂಚು
ನಿನ್ನೆದುರು ನಂದಿತು
ದೀಪ ಹಚ್ಚಾ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ
ದೀಪ ಹಚ್ಚಾ
ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ
ಸುಜ್ಞಾನಪ್ರದೀಪ
ದೀಪ ಹಚ್ಚಾ
ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ
ತೇಜೋರೂಪನೆ
ದೀಪ ಹಚ್ಚಾ
ವಿಶ್ವಮೋಹಿತಚರಣ ವಿವಿಧವಿಶ್ವಾಭರಣ
ಆನಂದದ ಕಿರಣ
ದೀಪ ಹಚ್ಚಾ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಏಳಲಿ
ದೀಪ ಹಚ್ಚಾ
ಭವದಂಧಕಾರದಿ ಎನ್ನ ಸಂಸಾರದಿ
ನಿಂದೀಪ ಬೆಳಗಲಿ
ದೀಪ ಹಚ್ಚಾ
ನನ್ನಂತರಂಗದಿ ನಂದದೆ ನಿಂದೀಪ
ನಂದಾದೀಪವಾಗಿರಲಿ
ದೀಪ ಹಚ್ಚಾ
ಎಲ್ಲದಕ್ಕೂ ಒಂದು ಅವಧಿಯಿದೆ ಎನ್ನುವುದನ್ನು ಸುಳ್ಳಾಗಿಸುವಂತೆ “ಅವಧಿ’ ಚೆನ್ನಾಗಿ ಬರುತ್ತಿದೆ ! ನೀವು ಅಪ್ಲೋಡ್ ಮಾಡುವ ಫೋಟೊ ಸೈಜ್ ಕೊಂಚ ಕಡಿಮೆ ಮಾಡಿಕೊಂಡರೆ ಓದಲು ಇನ್ನಷ್ಟು ಸರಾಗವಾದೀತು ಅಂದುಕೊಂಡಿದ್ದೇನೆ.
ee kavana haaDiddu kELidde.bahaLa ishTa paTTidde. But eega, OduvAga innU adbhuta anisuttide.
dhanyavaada.
– Chetana
ನನಗೆ ಕೂಡ ಈ ಪದ್ಯವನ್ನು ಕೇಳಿಸಿಕೊಳ್ಳುವುದು ತುಂಬಾ ಇಷ್ಟ. ಹಾಡು, ಸಂಗೀತಕ್ಕೆ ಒಂದಿಷ್ಟು ಹೊತ್ತು ಕಿವಿ ತೆರೆದಿಡಬೇಕು ಎಂದುಕೊಂಡಾಗೆಲ್ಲ ಅದಕ್ಕೆ ಈ ಹಾಡೇ ನಾಂದಿ. “ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ ಸೋತ ಉಲಿ ಏಳಲಿ ದೀಪ ಹಚ್ಚ” ಎಂಬ ಸಾಲಂತೂ ನೀಡುವ ಅನುಭವ ದಿವ್ಯವಾದುದು. ಅಡಿಗರ “ಪ್ರಾರ್ಥನೆ” ಕವಿತೆಯಲ್ಲಿ “ಯಾರ ಲೀಲೆಗೋ ಯಾರೊ ಏನೊ ಗುರಿಯಿರದೆ ಬಿಟ್ಟ ಬಾಣ…” ಎಂಬುದು ಕೂಡ ನನ್ನನ್ನು ತೀವ್ರವಾಗಿ ಕಾಡುವ ಸಾಲು. ಮನುಷ್ಯನನ್ನು, ಮನಸ್ಸನ್ನು ಪವಿತ್ರಗೊಳಿಸಬಲ್ಲ ಅದ್ಭುತ ಶಕ್ತಿ ಈ “ದೀಪ ಹಚ್ಚ” ಕವಿತೆಯದ್ದು ಎಂಬುದರಲ್ಲಂತೂ ಎರಡು ಮಾತಿಲ್ಲ.
-ವೆಂಕಟ್ರಮಣ ಗೌಡ