ನಾಗರಾಜ ಹರಪನಹಳ್ಳಿ.
ಪುಟ್ಟ ಹಣತೆಯಲಿ
ಸಮುದ್ರ ಬತ್ತಿಹೋಗಿದೆ
ಪ್ರಣತೆಯಲಿ ಥಟ್ಟುರಿ ನಂದಿಹೋಗಿದೆ
ಕೊಡುಕುಳಿ ಎಲ್ಲವೂ ಈಗ
ಮುಗಿದ ಕತೆ
ಉಳಿದಿರುವುದೇನು??
ಪ್ರಣತೆಯಲಿ ಉರಿದ ಪ್ರೇಮ
ಹರಿದ ನದಿಯಂಥ ಬೆಳಕ ನೆನಪು
ಒಂದು ದೀರ್ಘ ವಿಷಾದದ ವಿದಾಯ
ಪ್ರಣತೆ ರೂಪಿಸಿದ ಕೈಗಳು ಒದ್ದೆಯಾಗಿವೆ ದುಃಖದಿಂದ
ಅನಂತ ದುಃಖದಿಂದ
ದೀಪಗಳೇ ಇಲ್ಲದ ದೀಪಾವಳಿ
ಹೇಗೆ ಹಚ್ಚಲಿ ಹಣತೆಯ ಪ್ರಣತೆಯೇ ಇಲ್ಲದೆ ??
ಒಂದು ಸುದೀರ್ಘ ನಿಟ್ಟುಸಿರು
ಖಾಲಿ ಪ್ರಣತೆಯ ತುಂಬಿಕೊಂಡಿದೆ
ನಿಟ್ಟುಸಿರ ತೈಲದಲಿ
ನೆನಪಿನ ದೀಪ ಬೆಳಗಿದೆ
ಪಣವಧುವಿನ ಮುಖ ತೇಲಿ
ಮೈಸುಟ್ಟು ಪ್ರಣಯ ಹರಿಸಿದ
ಉರಿದ ಬತ್ತಿಯು ಗಾಢ ಮೌನದಿ ನಿದ್ದೆ ಹೋಗಿದೆ
ಪ್ರಣತೆಯಲಿ ಎಚ್ಚರದ ಗೆರೆ
ಪ್ರಣಯಿ ಪಣೆ
ಪಣತೆ ಎದುರು ಪ್ರಣತಿಯಾಯ್ತು
ಸಾವಿರ ಪನ್ನಂಗದಲಿ ಕುಳಿತು
ಮೆರೆದಾಯ್ತು; ಕೊನೆಗೆ ಉಳಿದದ್ದು ಪದರೇಣು
ಪದರೇಣು….
ವಿದಾಯ ವಿಷಾದ ತುಂಬಿದೆ
ಮಾತನಾಡದ ಪ್ರಣತೆಯಲಿ
ದೀಪಗಳೇ ಇಲ್ಲದ ದೀಪಾವಳಿ
ಹೊರಗೆ ಬೆಳಕು, ಒಳಗೆ ಕತ್ತಲು
ಒಳಗೇ ಬರೀ ಬೆತ್ತಲು
ಪುಟ್ಟ ಹಣತೆಯಲ್ಲಿ ಸಮುದ್ರ
ಬತ್ತಿಹೋಗಿದೆ.
*******
ಪದರೇಣು= ಕಾಲಿನ ಧೂಳು
ಪಣವಧು= ಸೂಳೆ
ಪ್ರಣತಿ= ಬಾಗುವಿಕೆ
ಪಣೆ= ನೊಸಲು
ಮಾರ್ಮಿಕ ಕವನ. ಹೊರಗೆ ಬೆಳಕು, ಒಳಗೆ ಕತ್ತಲು…!! ಕತ್ತಲು ಒಳಗೇ ತುಂಬಿದ್ದರೂ ಹೊರಗೆ ಬೆಳಕ ಹುಡುಕುವ ನಮಗೆ ಒಳಗಿನ ಕತ್ತಲು ಅರಿವಾಗುವುದೇ..ಇಲ್ಲ..
ಪುಟ್ಟ ಹಣತೆಯಲ್ಲಿ…..ಚಂದದ ಸಾಲು..
ಚೆನ್ನಾಗಿದೆ