ತೇಜಸ್ವಿ ಕಥನ -೮
ಮೂಡಿಗೆರೆಯ ಪಕ್ಕದ ಬೆಳಗೋಡಿನ ಶಾಂತಕುಮಾರ್ ಎಂಬವರೊಬ್ಬರು, ‘ತಬರನ ಕಥೆ’ ಸಿನಿಮಾ ಆದಾಗ ಅದರಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದರು. ಅವರೀಗ ನಮ್ಮೂರಿಗೆ ಬಂದು ರೈತರಾಗಿ ನೆಲೆಸಿದ್ದಾರೆ. ಅವರು. ತಬರನ ಕಥೆ ಸಿನಿಮಾ ಆಗುವ ಸಮಯದಲ್ಲಿ ಅವರು ಬೆಳಗೋಡಿನಲ್ಲಿಯೇ ಇದ್ದರು. ಅವರಿಗೆ ಆಗಲೇ ತೇಜಸ್ವಿಯವರ ಪರಿಚಯವೂ ಇತ್ತು. ಒಂದೆರಡು ಬಾರಿ ತೇಜಸ್ವಿಯವರ ತೋಟಕ್ಕೆ ಕೆಲಸದಾಳುಗಳನ್ನು ಒದಗಿಸಿಕೊಟ್ಟಿದ್ದರಂತೆ, ಯಾವಾಗಲೋ ಒಮ್ಮೆ ತೇಜಸ್ವಿ ಇವರಲ್ಲಿ ಯಾರಾದರೂ ತೋಟ ನೋಡಿಕೊಳ್ಳಲು ರೈಟರ್ ಇದ್ದರೆ ಕಳುಹಿಸಿಕೊಡಿ ಎಂದಿದ್ದರಂತೆ. ತಬರನ ಕಥೆ ಸಿನಿಮಾ ಆಗುವ ಸುದ್ದಿ ತಿಳಿದ ಶಾಂತಕುಮಾರ್ ತೇಜಸ್ವಿಯವರಲ್ಲಿಗೆ ಹೋಗಿ,(ತಾನು ಅವರಿಗೆ ಸಹಾಯ ಮಾಡಿರುವುದರಿಂದ) ‘ಇದು ನಿಮ್ಮ ಕರ್ತವ್ಯ’ ಎನ್ನುವಂತೆ, ಅದರಲ್ಲಿ ನಂಗೂ ಒಂದು ಪಾತ್ರ ಕೊಡಕೆ ಹೇಳಿ ಎಂದು ಕೇಳಿದರಂತೆ. ಆಗ ತೇಜಸ್ವಿ ಅದೇ ಒಂದು ಲೋಕ ಮಾರಾಯ, ನಮ್ದೇ ಒಂದು ಲೋಕ, ಹೋಗಿ ನೀನೇ ಕೇಳು ಎಂದರಂತೆ.
ಅದನ್ನೇ ಒಂದು ಸವಾಲಿನಂತೆ ತಿಳಿದ ಇವರು ಹೇಗಾದರೂ ಸರಿ ತಾನು ಆ ಸಿನಿಮಾದಲ್ಲಿ ಪಾತ್ರ ಮಾಡಲೇಬೇಕು ಎಂದುಕೊಂಡು, ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಬಳಿಹೋಗಿ, ನಾನೂ ಇದೇ ಊರಿನವ್ನು ತಬರನಕಥೆ ಓದಿದ್ದೀನಿ ನಂಗೂ ಒಂದು ಪಾತ್ರ ಕೊಡಿ ಎಂದು ಕೇಳಿದರಂತೆ. ಆಗ ಕಾಸರವಳ್ಳಿಯವರು, ನಮಗೆ ಶೂಟಿಂಗಿಗೆ ಒಂದು ಸ್ಪ್ರೇ ಮೆಷಿನ್ ಬೇಕಾಗಿದೆ ಅದನ್ನ ತಂದು ಕೊಡಿ, ನಿಮಗೆ ಒಂದು ಪಾತ್ರ ಕೊಡುತ್ತೇನೆ ಎಂದರಂತೆ. ಅಂತೆಯೇ ಶಾಂತಕುಮಾರ್ ಒಂದು ‘ಗಟರ್’ ಸ್ಪ್ರೇ ಮೆಷಿನನ್ನು ತಂದು ಕೊಟ್ಟದ್ದಲ್ಲದೆ ಹುಲ್ಲು ಮನೆಯೊಂದರ ಮಾಡನ್ನು ಹಳೆಯದರಂತೆ ಕಾಣಲು (ನಿರ್ದೇಶಕರು ಹೇಳಿದಂತೆ) ಕಪ್ಪು ಬಣ್ಣವನ್ನು ಸ್ಪ್ರೇ ಮಾಡಿ ಕೊಟ್ಟರಂತೆ. ನಂತರ ಇವರಿಗೆ ಆ ಸಿನಿಮಾದಲ್ಲಿ ನಟ
ತಬರನ ಕಥೆ ನಾಟಕದ ಒಂದು ದೃಶ್ಯ. ಟಿ ಎಸ್ ನಾಗಾಭರಣ ಮತ್ತು ಕಲ್ಪನಾ ನಾಗನಾಥ್
ಸತ್ಯಸಂಧ ಅವರ ಜೊತೆಯಲ್ಲಿ ಮೂರು ಸಣ್ಣ ಸಣ್ಣ ಪಾತ್ರಗಳು ದೊರೆತವು!
ಆ ನಂತರವೂ ಇವರು ಒಂದೆರಡು ಬಾರಿ ನಿರ್ದೇಶಕ ಕಾಸರವಳ್ಳಿಯವರನ್ನು ಭೇಟಿ ಮಾಡಿ ಸಿನಿಮಾದಲ್ಲಿ ಪಾತ್ರ ನೀಡುವಂತೆ ಕೇಳಿದ್ದರಂತೆ. ಹೀಗೆ ಸಿನಿಮಾ ಹುಚ್ಚನ್ನು ಹತ್ತಿಸಿಕೊಂಡ ಶಾಂತಕುಮಾರ್ ಮದ್ರಾಸಿನವರೆಗೂ ಅಲೆದು ಇವರೇ ಒಬ್ಬ ‘ತಬರ’ನಂತಾಗಿ ಸಾಕಷ್ಟು ಹಣವನ್ನೂ ಕಳೆದುಕೊಂಡು ನಂತರ ನಮ್ಮೂರಿಗೆ ಬಂದು ನೆಲೆಸಿದ್ದಾರೆ. ಆದರೆ ತಬರ ಕಥೆಯ ಅನುಭವವನ್ನು ಈಗಲೂ ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ.
ಆದರೆ ತಬರನ ಕಥೆ ಇನ್ನೊಂದು ಸ್ತರದಲ್ಲಿ ನಮ್ಮ ಸುತ್ತಮುತ್ತ ಈಗಲೂ ಹೇಗೆ ಜೀವಂತವಾಗಿದೆಯೆಂದರೆ. ಮೂಲಕಥೆಯಲ್ಲಿ ತನ್ನ ಪೆನ್ಷನ್ ಹಣಕ್ಕಾಗಿ ಸರ್ಕಾರಿ ಕಛೇರಿಗಳನ್ನು ಸುತ್ತುತ್ತಾ ನಮ್ಮ ವ್ಯವಸ್ಥೆಯ ಕ್ರೌರ್ಯದಿಂದ ನಲುಗಿದರೆ, ಮೂಡಿಗೆರೆ-ಸಕಲೇಶಪುರ ತಾಲ್ಲೂಕುಗಳಲ್ಲಿ ಯಾವುದೇ ಕೆಲಸಕ್ಕಾಗಿ ಪ್ರತಿದಿನವೆಂಬಂತೆ ಸರ್ಕಾರಿ ಕಛೇರಿಗಳ ಮುಂದೆ ಸುತ್ತುತ್ತಿರುವವರಿಗೆ ‘ತಬರ’ ಎಂಬ ಅಡ್ಡ ಹೆಸರು ಅಂಟಿಕೊಳ್ಳುತ್ತದೆ. ನಮ್ಮ ತಾಲ್ಲೂಕಿನ ರಾಜಕಾರಣಿಯೊಬ್ಬರಿಗೂ ಈ ಅಡ್ಡ ಹೆಸರಿದೆ.
ಚಿಕ್ಕಮಗಳೂರು ಆರ್.ಟಿ.ಓ. ಕಚೇರಿಯಲ್ಲಿ ಸ್ವತಃ ತೇಜಸ್ವಿಯವರೇ ತಬರನಾಗಬೇಕಾದ ಸಂದರ್ಭವೊಂದು ಎದುರಾಗಿದ್ದನ್ನು ರಾಜೇಶ್ವರಿಯವರು ಉಲ್ಲೇಖಿಸಿದ್ದಾರೆ. ಆದರೆ ತೇಜಸ್ವಿಯವರ ನಿಮಗೆ ಕೆಲಸ ಮಾಡಿ ಎಂದು ಹೇಳಲು ನಿಮ್ಮ ಪ್ರಧಾನಿ ನರಸಿಂಗರಾಯ ಬರಬೇಕಾ? ಎಂಬ ಕಡಕ್ ಮಾತು ಅವರ ಕೆಲಸವನ್ನು ಪಟಾಪಟ್ ಆಗುವಂತೆ ಮಾಡಿಬಿಡುತ್ತದೆ! ಈಗ ತಬರನ ಕತೆ ಎಂಬುದು ಒಂದು ಜಾನಪದ ನಾಣ್ನುಡಿಯಂತಾಗಿದೆ.