‘ತುಘಲಕ್’ನೊಂದಿಗೆ ಮಾತಿಗಿಳಿದಾಗ..

ಪ್ರೊ. ಚಂದ್ರಶೇಖರ ಹೆಗಡೆ

ಪುರಾಣವನ್ನಾಧರಿಸಿದ ‘ಯಯಾತಿ’ ಚರಿತ್ರೆಯನ್ನಾಧರಿಸಿದ ‘ತುಘಲಕ್’ ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಅಪ್ರತಿಮ ಸಾಧಕರು.

ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ‘ತುಘಲಕ್’ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ. ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ‘ತುಘಲಕ್’ ಅತ್ಯಂತ ವಿಶಿಷ್ಟವಾದುದು. ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿದೆ.

ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ.  ದೆಹಲಿಯಿಂದ ದೌಲತಾಬಾದ್ ಗೆ, ದೌಲತಾಬಾದ್ ನಿಂದ ದೆಹಲಿಗೆ, ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕವೆಂದರೆ ಅದು ಗಿರೀಶ ಕಾರ್ನಾಡರ ತುಘಲಕ್.

ರಾಜಕೀಯದ ಚದುರಂಗದಾಟವನ್ನು ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ.

ಗಿರೀಶ ಕಾರ್ನಾಡರು “ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಎಂಬ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು.ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು” ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.

ನಿಜ, ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ, ತನ್ನ ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾಃನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಜಡಿಮಳೆಯಾಗಿರಬಹದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು.

ಇತಿಹಾಸ ಹಾಗೂ ಪುರಾಣಗಳನ್ನು ತುಸು ಹೆಚ್ಚಾಗಿಯೇ ಪ್ರೀತಿಸುವ ಗಿರೀಶ ಕಾರ್ನಾಡರನ್ನು ವಿಲಕ್ಷಣ ವ್ಯಕ್ತಿತ್ವದ ತುಘಲಕ್ ಸೆಳೆದದ್ದರಲ್ಲಿ ಅಚ್ಚರಿಯೇನಿಲ್ಲ.

ತುಘಲಕ್ ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ, ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿ ನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ.

ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  ‘ಹುಚ್ಚುದೊರೆ’ ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ.

ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ “ಯಯಾತಿ”ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು. ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು.

ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ, ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.

ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು, ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ರಾಜತಂತ್ರ ಪ್ರಸ್ತುತ ಸಾಮಾಜಿಕ ಹಾಗೂ ರಾಜಕೀಯ ತಲ್ಲಣಗಳಿಗೆ ಪ್ರತೀಕದಂತಿದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನೇ ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತ ತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಚ್ಛಿನ್ನವಾಗಿ ಮೂಡಿಬಂದಿದೆ.

ತಾನು ಪ್ರಾರ್ಥನೆಯಲ್ಲಿರುವಾಗ ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು ಬೇಟೆಯಾಡಿ ಹತ್ತಿಕ್ಕುತ್ತಾನೆ. ಕರುಳುಬಳ್ಳಿಯೊಂದಿಗೆ ತಳುಕು ಹಾಕಿಕೊಂಡಿರುವ ಮಾನವ ಸಂಬಂಧಗಳನ್ನೇ ಬಲಿಕೊಡುವ ತುಘಲಕ್, ಒಂದು ಹಂತದಲ್ಲಿ ತಾನು ಆರಾಧಿಸುವ ಸಾಮ್ರಾಜ್ಯದ ನಂಟಿನಿಂದ,  ಏಕಾಂತದ ಪರದತ್ತ ಪಯಣಿಸಲು ಬೇಕಾದ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ವಿರಾಗಿಯಂತೆ ಗ್ರಾಹ್ಯನಾದರೂ ಅಪರಾಧಪ್ರಜ್ಞೆ ಹಾಗೂ ಪಾಪಪ್ರಜ್ಞೆಗಳಿಂದಾಗಿ  ಆ ಸದವಕಾಶವನ್ನು ಕಳೆದುಕೊಂಡ ನತದೃಷ್ಟನಾಗುತ್ತಾನೆ.

ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ, ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ.

ತುಘಲಕ್ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಡೆಮೂಡಿ  ನವ್ಯತೆಯಿಂದ ಕಂಗೊಳಿಸಿದ ಕೃತಿರತ್ನಗಳಲ್ಲಿ ವಿಶೇಷವಾದುದು. ಈ ನಾಟಕದಲ್ಲಿ ತುಘಲಕ್ ಅತ್ಯಂತ ಕ್ರಿಯಾಶೀಲ ಹಾಗೂ ಚಲನಶೀಲವಾಗಿರುವ ಪ್ರಧಾನ ಪಾತ್ರ. ತನ್ನ ಮಾನಸಿಕ ಹಾಗೂ ಭಾವನಾತ್ಮಕ ತೊಳಲಾಟದೊಡನೆಯೂ ಒಬ್ಬ ಅತ್ಯುತ್ತಮ ಸಾಮ್ರಾಜ್ಯಶಾಹಿ ಎಂದು ಕರೆಸಿಕೊಳ್ಳಬಹುದಾದ ಪಾತ್ರವದು. ರಾಜಕಾರಣದಲ್ಲಿ ಎದುರಾಗುವ ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ತನ್ನ ಆಳ್ವಿಕೆಯ ಘನೋದ್ಧೇಶಗಳನ್ನು ಈಡೇರಿಸಿಕೊಳ್ಳುವ ತುಘಲಕ್ ಈ ಉದ್ದೇಶಗಳ ಸಫಲತೆಯಿಂದಾಗಿಯೇ ಅಂತಿಮವಾಗಿ ಒಂಟಿತನದ ಜಟಿಲವಾದ ಕಠಿಣ ಸಂದಿಗ್ಧತೆಗೆ ಒಳಗಾಗುವುದು ವಿಪರ್ಯಾಸವೇ ಸರಿ.

ಚಕ್ರವರ್ತಿಯಾಗಿ ರಾಜ್ಯವನ್ನಾಳಬಲ್ಲ ಸರಳ ಚಾರಿತ್ರಿಕ ಪಾತ್ರವೊಂದು ರಾಜಕೀಯ, ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನೆದುರಿಸುವ  ಭರದಲ್ಲಿ ಚಲನೆಯಲ್ಲಿರುವಂತೆಯೇ ಹೇಗೆಲ್ಲಾ ತನ್ನನ್ನು ಸಂಕೀರ್ಣತೆಗೊಡ್ಡಿಕೊಳ್ಳುತ್ತದೆ ಎಂಬುದಕ್ಕೆ ತುಘಲಕ್ ಸಾಕ್ಷಿಯಾಗುತ್ತಾನೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಪ್ಲವಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಲ್ಲಟಗಳು, ಅಭಿವೃದ್ಧಿಯ ಹೆಸರಿನಲ್ಲಿ ನಡೆದ ನೈತಿಕ ಪತನಗಳು, ಸಂಕ್ರಮಣ ಕಾಲದ ಸಾಹಿತ್ಯದ ಸ್ಥಿತ್ಯಂತರಗಳು ಕಾರ್ನಾಡರು ಈ ನಾಟಕ ರಚಿಸುವಂತೆ ಭೂಮಿಕೆಯನ್ನೊದಗಿಸಿರಬೇಕು.

ವಸಾಹತೋತ್ತರ ಕಾಲಘಟ್ಟದ ಚಿಂತನೆಯ ದಟ್ಟ ಪ್ರಭಾವವನ್ನು ‘ತುಘಲಕ್’ ಅಲ್ಲದೇ ಕಾರ್ನಾಡರ ಇತರೆ ನಾಟಕಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು. ಇವರ “ನಾಗಮಂಡಲ”ದ  ಮೇಲೆ ನಮ್ಮ ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ಗಾಢವಾದ ಛಾಯೆಯಿರುವುದನ್ನು ಗುರುತಿಸಬಹುದಾಗಿದೆ.

ಜಾನಪದ ಸಂಸ್ಕೃತಿಯನ್ನೇ ಜೀವಾಳವಾಗಿಟ್ಡುಕೊಂಡ ‘ನಾಗಮಂಡಲ’ ಅವರ ಅನನ್ಯ ರಚನೆಗಳಲ್ಲಿ ವಿಭಿನ್ನ. ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಇವರ  ನಾಗಮಂಡಲ ಚಂದ್ರಶೇಖರ ಕಂಬಾರರವರ ನಾಟಕ ಹಾಗೂ  ಕಾದಂಬರಿಗಳನ್ನು ನೆನಪಿಸುವಂತೆ ಮಾಡುತ್ತದೆ. ತಾವು ಬದುಕಿದ ನೆಲಮೂಲ ಸಂಸ್ಕೃತಿಯ ಪ್ರಭಾವಳಿಯಲ್ಲಿ ವಿಶಿಷ್ಟ ರೂಹು ಪಡೆದ ಇವರ ಭಾಷೆಯಂತೂ ಧಾರವಾಡ ಹಾಗೂ ಬೆಳಗಾವಿ ಕನ್ನಡಗಳ ಸಮ್ಮಿಳಿತದಿಂದ ಸವಿಜೇನಿನ ಸಿಹಿಯನ್ನು ಪಡೆದುಕೊಂಡಿದೆ.

ಸಾಂಸ್ಕೃತಿಕ ನಗರಿಯಾದ ಧಾರವಾಡ ಹಾಗೂ ಮಲೆನಾಡ ಸೆರಗಿನ ಬೆಳಗಾವಿಯ ಮಣ್ಣಿನ ಸೊಗಡಿನ ಸುಗಂಧವನ್ನು ಬೀರುವ ಇವರ ಭಾಷಾಪ್ರೌಢಿಮೆ ಬೆರಗುಗೊಳಿಸುವಂತಹುದು. ಸಿನೇಮಾ, ನಟನೆ, ನಿರ್ದೇಶನ ಕ್ಷೇತ್ರಗಳು ಕೈಬೀಸಿ ಕರೆದಾಗ  ಕಲಾವಿದನ ಪರಕಾಯ ಪ್ರವೇಶವನ್ನು ಮಾಡಿ ಕಲಾಲೋಕದಲ್ಲಿಯೂ ಸೈ ಎನಿಸಿಕೊಂಡ ಧೀಮಂತ ವ್ಯಕ್ತಿತ್ವ ಕಾರ್ನಾಡರದು.

“ಗಾನಯೋಗಿ ಪಂಚಾಕ್ಷರಿ ಗವಾಯಿಗಳು’ ಸಿನೆಮಾದಲ್ಲಿನ ಅವರ ಗುರು ಪಾತ್ರವಂತೂ  ಜನಮನಸೂರೆಗೊಂಡ ಬಗೆಯೇ ವರ್ಣಿಸಲಸದಳ.  ಯು. ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿ ಆಧಾರಿತ ಚಲನಚಿತ್ರದಲ್ಲಿನ  ಪ್ರಾಣೇಶಾಚಾರ್ಯರ ಪಾತ್ರವು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಗೌರವವನ್ನು  ತಂದುಕೊಟ್ಟ ಹೆಗ್ಗಳಿಕೆ ಹೊಂದಿದೆ.

ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು. ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿಯುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಯ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ “ಮಾವಿನ ತಳಿರು” ಇಹದ ಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.

‍ಲೇಖಕರು avadhi

June 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: