ಜಯರಾಮಾಚಾರಿ
ಕಿರು ಚಿತ್ರ ನಿರ್ದೇಶಕ, ಬೆಂಗಳೂರು ಮೆಟ್ರೋ ವಿಭಾಗದಲ್ಲಿ ಉದ್ಯೋಗ

“ನಮ್ಮವ್ವಂಗೆ ಮೂರು ಮಕ್ಕ್ಳು ದೊಡ್ದೋನು ನಾನೇ, ಒಂದ್ ದಿನ ಸಡನ್ನಾಗಿ ಸತ್ತುಹೋದಳು ಕಾರಣ ಗೊತ್ತಾಗ್ಲೇ ಇಲ್ಲ. ನಂಗೇನು ಮಾಡಬೇಕು ಅನ್ಸ್ಲೇ ಇಲ್ಲ ಸ್ವಲ್ಪ ದಿನ ಆದ್ಮೇಲೆ ನಮ್ ಅಪ್ಪ ಒಂದ್ ಹುಡುಗೀನ ನೋಡಿದ್ದೀನಿ ಮದ್ವೇ ಆಗು ಅಂದಾ ನಾನು ಆಗಕ್ಕೆ ಮನಸಿಲ್ಲ ಅಂದೆ,”ಮಗಾ ಬಟ್ಟೆ ತೊಳೆಯಕ್ಕೆ,ಪಾತ್ರೆ ತೊಳೆಯಕ್ಕೆ,ದೀಪ ಹಚ್ಚಕ್ಕೆ ಒಂದ್ ಹೆಣ್ ಬೇಕು “ಅಂದ.

”ಹುಡುಗಿ ನೋಡ್ದೆ ಚೆನ್ನಾಗಿದ್ಲು, ಮದ್ವೆ ಆದೆ. ನೀವ್ ಹೆಂಗ್ ಕುರಿ ಸಾಕ್ತಿರೋ ಹಂಗೆ ನಾವ್ ಆಡು ಸಾಕ್ತೀವಿ ನಮ್ ಮನೇಲೂ ಸಾಕ್ತಿದ್ವಿ, ಅದಕ್ಕೆ ಎಲೆಯೆಲ್ಲ ನಾನೆ ಹಾಕ್ತಿದ್ದೆ. ಎಲ್ಲ ಸೌಲಭ್ಯ ನಾನೇ ಮಾಡ್ತಿದ್ದೆ. ಅವತ್ತು ನಮ್ ಕಬ್ಬಿನ್ ಗದ್ದೆ ಹತ್ರ ಇದ್ದ ಮರಕ್ಕೆ ಹತ್ತಿ ಕೊಂಬೆ ಕಡಿಬೇಕು ಅವಾಗ ಅಲ್ಲಿ ಕಬ್ಬಿನ ಗದ್ದೇಲಿ ನೋಡಿದೆ. ಅಲ್ಲಿ ನಮ್ಮಪ್ಪ, ನನ್ ಹೆಂಡ್ತಿ ಇದ್ರು. ಏನ್ ನೋಡ್ ಬಾರ್ದು ಅದೇ ನೋಡಿದೆ”.
”ಸಿಟ್ತಲ್ಲಿ ಕೊಂಬೆನಾ ಕಡಿದೆ. ಅದ್ ದಪ್ ಅಂತ ಕೆಳಕ್ ಬಿತ್ತು. ನಮ್ ಅಪ್ಪ ನನ್ ನೋಡಿ ಒಂಟೋದ. ಅವಳು ಅಲ್ಲೇ ಇದ್ಲು ಮೇಲೆ ನನ್ ನೋಡುದ್ಲು. ನಾನು ಕೆಳಗಿಳಿದು ಅವಳ್ ಜೊತೆ ಮನೆಗೆ ಹೋದೆ. ಅವಳು ಅಡಿಗೆ ಮಾಡುದ್ಳು. ಬಡುಸ್ ಬೇಕಾದ್ತೆ ಕತ್ತು ಎತ್ಲಿಲ್ಲ ಊಟ ಮಾಡಿ ಮಲ್ಕಂಡ್ವಿ. ಒಂದೊತ್ತ್ಲಲ್ಲಿ ಶಬ್ದ ಆಯ್ತು ಎದ್ ನೋಡುದ್ರೆ ಬಾಗಿಲು ತೆಗೆದಿತ್ತು. ಓಡಿ ನೋಡುದ್ರೆ ಅವಳು, ಮಿಕ್ಕಿದ ಇಬ್ರು ಮಕ್ಳು ಸಮೇತ ಬಾವಿಗೆ ಬಿದ್ಡೀದ್ಳು, ನಾನು ಬಿದ್ದು ಒಬ್ಬನ ಬದುಕುಸಿದೆ. ಅವಳು ಇನ್ನೊಬ್ಬ ಸತ್ತುಹೋಗಿದ್ರು. ಇವೆಲ್ಲ ಎಷ್ಟೋ ವರ್ಷದ್ ಹಿಂದೆ ಆಗಿದ್ದಾ ಇಲ್ಲ ರಾತ್ರಿ ಕನಸಲ್ಲಿ ಕಂಡಿದ್ದ ತಿಳಿತಿಲ್ಲ”
“ತಿಥಿ”ಯಲ್ಲಿ ಬರುವ ಗಡ್ದಪ್ಪನ ಡೈಲಾಗು ತುಂಬ ನಗು ಬರಿಸುತ್ತದೆ ಬರಿಸುವ ಮುಂಚೆ ಆಳ್ವಾಗಿ ಕಾಡುತ್ತದೆ.ತಿಥಿಯ ಬಗ್ಗೆ ಏನು ಹೇಳೋದು ಗೊತ್ತಿಲ್ಲ. ನೀ ಮೂವಿಯೊಳಗೋ, ಮೂವಿ ನಿನ್ನೊಳಗೋ ಅನ್ನುವಂತಿತ್ತು. ಇಡೀ ಚಿತ್ರವನ್ನು 123ನಿಮಿಷ ಸೀಟು ಸಿಗದೆ ನಿಂತಿಕೊಂಡು ನೋಡಿದೆ.
ತಿಥಿ ಬರೀ ಸಿನಿಮಾವಲ್ಲ! ಮತ್ತೇನು? ಗೊತ್ತಿಲ್ಲ.
ಇನ್ನು ಹತ್ತು ಸಾರಿ ತೋರಿಸಿದರು ಅಷ್ಟೇ ಕುತೂಹಲದಲ್ಲಿ ನೋಡಬಲ್ಲೆ ಹಾಗಿದೆ.
384 ಜನ ತುಂಬಬಹುದಾದ ಸ್ಕ್ರೀನಿಗೆ ಬರೋಬ್ಬರಿ ಆರು ನೂರು ಜನ ಮೇಲೆ ಕ್ಯೂ ನಿಂತಿದ್ದರು. ಅದು ಸಿನಿಮಾ ಶುರುವಾಗುವ ಒಂದು ಗಂಟೆ ಮುಂಚೆ. ಆ ಕ್ಯೂ ನಲ್ಲಿ ಬಿ ಸುರೇಶ್, ಅರುಣ್ ಸಾಗರ್, ಮಹೇಶ್ ರಾವ್, ವಿಜಯ್ ಪ್ರಸಾದ್ ಇನ್ನೂ ಎಷ್ಟೋ ಜನ ಇದ್ದರು. ಹೌಸ್ ಫುಲ್ ಆದ್ಮೇಲೆ ನಟ ಧನಂಜಯ್ ಗೂ ಸಹ ಒಳ ಬಿಡಲಿಲ್ಲ. ಈ ಪರಿಯ ಬೆರಗು, ಕ್ರೌಡು, ನಗಿ, ಕೇಕೆ, ಖುಷಿ ಹಾಗೂ ಈ ತರದ ಸಿನಿಮಾ ನಾನೆಂದೂ ನೋಡಿರಲಿಲ್ಲ!! ಏಪ್ರಿಲಿನಲ್ಲಿ ಬಿಡುಗಡೆ ಅಂತೆ! ಖಂಡಿತಾ ಮಿಸ್ ಮಾಡ್ಕೋಬೇಡಿ!!
ರಾಮ್ ರೆಡ್ಡಿ,ಈರೇಗೌಡ ಹಾಗೂ ತಿಥಿ ಸಿನಿಮಾದ ಎಲ್ಲರಿಗೂ ಅಭಿನಂದನೆಗಳು
ಅಡ್ ಬಿದ್ವಿ ಸ್ವಾಮಿ!!

ಗುರುಪ್ರಸಾದ್ ಡಿ ನಾರಾಯಣ್
ಆಕೃತಿ ಪುಸ್ತಕ ಮಳಿಗೆಯ ರೂವಾರಿ, ಪ್ರಕಾಶಕ, ಕನ್ನಡಪ್ರಭ ವೆಬ್ ಆವೃತ್ತಿಯಲ್ಲಿ ಬರಹಗಾರ
ಇಲ್ಲಿರುವುದು ಗುರುಪ್ರಸಾದ್ ನಿರ್ದೇಶಕ ರಾಮ್ ರೆಡ್ಡಿ ಅವರ ಜೊತೆ ನಡೆಸಿದ ವಿಸ್ತಾರ ಸಂದರ್ಶನದ ಒಂದು ಎಸಳು

ಇದು ನಡೆದಿದ್ದಕ್ಕೆ ಕೇಂದ್ರ ಕಾರಣ ನನ್ನ ಮತ್ತು ಕಥೆ-ಸ್ಕ್ರಿಪ್ಟ್ ಬರೆದ ನನ್ನ ಗೆಳೆಯ ಈರೇಗೌಡರ ಗೆಳೆತನ. ಈ ಯೋಜನೆ ಸೃಷ್ಟಿಸುವಾಗ ನಮ್ಮ ಯೋಚನಾ ಲಹರಿಯಲ್ಲಿ ಅದ್ಭುತ ಹೊಂದಾಣಿಕೆಯಿತ್ತು. ನಮ್ಮ ಮನಸ್ಸುಗಳನ್ನು ಹೊಂದಾಣಿಕೆ ಮಾಡಿಕೊಂಡು, ಒಮ್ಮತವಾದ ಮನಸ್ಸಿನಿಂದ ಈ ಯೋಜನೆಯನ್ನು ಮುಂದುವರೆಸಲು ಸಾಧ್ಯವಾಗಿತ್ತು. ನಾನು ನಗರ ಪ್ರದೇಶಗಳಿಂದ ಬಂದ ಹೊರಗಿನವ, ಅವರು ಅಲ್ಲಿನ ಪ್ರದೇಶಕ್ಕೆ ಒಳಗಿನವರು. ಅವರಿಗೂ ಕೂಡ ನಗರ ಪ್ರದೇಶದ ಅನುಭವವಿದೆ ನಾನೂ ಅಲ್ಲಿದ್ದು ಹಳ್ಳಿಯ ಜೀವನವನ್ನು ಅನುಭವಿಸಿದ್ದೇನೆ. ಇವೆರಡು ಒಟ್ಟಿಗೆ ಬಂದು ಆ ಒಮ್ಮತ ಮನಸ್ಸು ಈ ಕಥೆಯ ಸೃಷ್ಟಿಗೆ ಕಾರಣವಾಯಿತು.

ಅಲ್ಲದೆ ಈ ಯೋಜನೆ ನೆರವೇರುವುದಕ್ಕೆ ಮತ್ತೊಂದು ಕಾರಣ ನಮಗಿದ್ದ ಪ್ಯಾಶನ್. ಅದೇನೆಂದರೆ ಈ ಕಥೆಯನ್ನು ವೃತ್ತಿಪರರಲ್ಲದವರ ಜೊತೆಗೂಡಿ ಹೇಳಬೇಕೆಂಬ ಉತ್ಕಟತೆ. ನಾಲ್ಕೈದು ವರ್ಷಗಳ ಹಿಂದೆ ಈ ಕೆಲಸ ಪ್ರರಾಂಭಿಸಿದಾಗ ಹೆಚ್ಚಿನ ಸಿದ್ಧತೆಯನ್ನೇನೂ ಮಾಡಿಕೊಂಡಿರಲಿಲ್ಲ. ನಮ್ಮ ದೇಶದಲ್ಲಿ ಹಲವಾರು ಸಿನೆಮಾ ಕಥೆಗಳಿವೆ ಆದರೆ ಅವುಗಳನ್ನು ವೈಭವೀಕರಿಸಿದ ವಾಣಿಜ್ಯಾತ್ಮಕ ದೃಷ್ಟಿಯಲ್ಲೇ ಹೇಳುವ ಅವಶ್ಯಕತೆ ಇಲ್ಲ.
ಅಲ್ಲದೆ ನಮ್ಮ ದೇಶ ಬಹುತೇಕ ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು ಅಲ್ಲಿನ ಕಥೆಗಳು ಸಿನೆಮಾಗಳಲ್ಲಿ ಹೆಚ್ಚು ಪ್ರತಿಫಲನವಾಗಿಲ್ಲ. ಆದುದರಿಂದ ಆ ಹಿನ್ನಲೆಯಲ್ಲಿ ಏನಾದರೂ ಅಥೆಂಟಿಕ್ ಆಗಿ ಸೃಷ್ಟಿಸಬೇಕು ಎಂಬ ತುಡಿತವೂ ಇದನ್ನು ಸಾಧ್ಯವಾಯಿತು.
ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿದ್ದ ರಾಮ್ ರೆಡ್ಡಿ ಒಂದು ವರ್ಷದ ನಂತರ ಅದರ ಬಗ್ಗೆ ಆಸಕ್ತಿ ಕಳೆದುಕೊಂಡರಂತೆ. ಹಾಗಾಗಿ ಅರ್ಥಶಾಸ್ತ್ರ ಅಭಿವೃದ್ಧಿ ಇತ್ಯಾದಿ ಉಪನ್ಯಾಸಗಳ ವೇಳೆಯಲ್ಲಿ ಹಿಂದಿನ ಬೆಂಚುಗಳಲ್ಲಿ ಕೂತು ಕವನ ಮತ್ತು ಕಾದಂಬರಿಗಳನ್ನು ಬರೆಯುತ್ತಿದ್ದರಂತೆ. ಹಾಗೆ ಬರೆದು ಒಂದು ಕಾದಂಬರಿ “ಇಟ್ಸ್ ರೈನಿಂಗ್ ಇನ್ ಮಾಯಾ” ಕೂಡ ಸ್ವ-ಪ್ರಕಟನೆ ಮಾಡಿದ್ದು ಉಂಟು. ಹೀಗೆ ತಮ್ಮ ಸಿನೆಮಾ ಬರವಣಿಗೆಗೆ ಮಟ್ಟಿಲಾದದ್ದು ಈ ಹಿಂದಿನ ಬರವಣಿಗೆಗಳು.

ಫೋಟೋ ಮೂಲ : ವಾರ್ತಾ ಇಲಾಖೆ
ರಾಮ್ ರೆಡ್ಡಿ ಮತ್ತು ಈರೇಗೌಡ ಫೋಟೋ ಕೃಪೆ: ಎಕನಾಮಿಕ್ ಟೈಮ್ಸ್





Planning to watch to this movie when its releases in theatre .
ನಾವು ಅಷ್ಟೆ. ಬಿಡುಗಡೆ ಆದರೆ ಸಿನಿಮಾ ನೋಡ್ತೀವಿ. Good luck ರಾಮರೆಡ್ಡಿ.
ನಂಗೇನು ಮಾಡಬೇಕು ಅನ್ಸ್ಲೇ ಇಲ್ಲ ಸ್ವಲ್ಪ ದಿನ ಆದ್ಮೇಲೆ ನಮ್ ಅಪ್ಪ ಒಂದ್ ಹುಡುಗೀನ ನೋಡಿದ್ದೀನಿ ಮದ್ವೇ ಆಗು ಅಂದಾ ನಾನು ಆಗಕ್ಕೆ ಮನಸಿಲ್ಲ ಅಂದೆ,”ಮಗಾ ಬಟ್ಟೆ ತೊಳೆಯಕ್ಕೆ,ಪಾತ್ರೆ ತೊಳೆಯಕ್ಕೆ,ದೀಪ ಹಚ್ಚಕ್ಕೆ ಒಂದ್ ಹೆಣ್ ಬೇಕು “ಅಂದ. Where did you get this information?