ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ.ರಾಜ್, ಧುತ್ತರಗಿ ಮತ್ತು ಸಂಪತ್ತಿಗೆ ಸವಾಲ್

ಡಾ.ಪ್ರಕಾಶ ಗ.ಖಾಡೆ

ಡಾ.ರಾಜಕುಮಾರ ಅವರಿಗೆ ಹೆಸರು,ಕೀರ್ತಿ ಮತ್ತು ಹೊಸ ಇಮೇಜ್ ತಂದ ಚಲನಚಿತ್ರ ‘ಸಂಪತ್ತಿಗೆ ಸವಾಲು’. ಈ ‘ಸಂಪತ್ತಿಗೆ ಸವಾಲು’ ನಾಟಕ ಬರೆದವರು ಕನ್ನಡದ ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿಯವರು. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಪಿ.ಬಿ.ಧುತ್ತರಗಿಯವರ ಊರು. ಐವತೆರಡಕ್ಕಿಂತಲೂ ಹೆಚ್ಚು ನಾಟಕಗಳನ್ನು ರಚಿಸಿ ಹೆಸರಾದವರು. ಸಂಪತ್ತಿಗೆ ಸವಾಲು ನಾಟಕವು ದುತ್ತರಗಿಯವರ ಹೆಸರು ನಾಡಿನ ಉದ್ದಗಲಕ್ಕೂ ಪಸರಿಸುವಂತೆ ಮಾಡಿ ಅವರಿಗೆ ಮಾನ ಸನ್ಮಾನ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿದೆ.

ಹಣವುಳ್ಳ ಶ್ರೀಮಂತರು ಬಡವರನ್ನು ಹೇಗೆ ಶೋಷಿಸುತ್ತಾರೆ ಎನ್ನುವ ವಾಸ್ತವಿಕ ಬದುಕಿನ ಚಿತ್ರಣವೇ ಈ ನಾಟಕದ ಮುಖ್ಯ ಕಥಾ ವಸ್ತು. ಗ್ರಾಮೀಣ ಪ್ರದೇಶದಲ್ಲಿ ಧನಿಕರ ಧನಮದ, ಅಧಿಕಾರದ, ಅಹಂಕಾರ, ಜಾತಿಯಪ್ರತಿಷ್ಠೆ, ದೌರ್ಜನ್ಯ, ಕ್ರೂರತನ,ಕಾಮುಕತನ,ಅನ್ಯಾಯ,ಅಧರ್ಮ,ಅನೀತಿ,ಹಿಂಸೆ,ಶೋಷಣೆ ಮೊದಲಾದವುಗಳನ್ನು ಈ ನಾಟಕದಲ್ಲಿ ಚಿತ್ರಿಸುವುದರೊಂದಿಗೆ ಇಂಥ ಸಿರಿವಂತರ ಸೊಕ್ಕು ಅಡಗಿಸುವಲ್ಲಿ ನಾಟಕದ ನಾಯಕ ತೋರುವ ದಿಟ್ಟತನ ಪ್ರೇಕ್ಷರನ್ನು ಹುಚ್ಚೆಬ್ಬಿಸುವಂತೆ ಮಾಡುತ್ತದೆ.ಸಂಪತ್ತಿಗೆ ಸವಾಲು ನಾಟಕವು ಮೊದಲು ಜಮಖಂಡಿ ತಾಲೂಕು ರಬಕವಿಯಲ್ಲಿ 1964-65 ರಲ್ಲಿ ಪ್ರಯೋಗ ವಾಯಿತು.ಅಲ್ಲಿ 60 ಪ್ರಯೋಗ ಕಂಡಿತು.

ಗೋಕಾಕದ ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ ಕಂಪನಿಯು ಹನ್ನೇರಡು ವರ್ಷಗಳ ಕಾಲ ಅತ್ಯಂತ ವೈಭವದಿಂದ ಈ ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸಿತು.ಪ್ರತಿ ಊರಲ್ಲೂ ಈ ನಾಟಕ ರಜತೋತ್ಸವ,ಸುವರ್ಣ ಮಹೋತ್ಸವ,ಶತದಿನೋತ್ಸವವನ್ನೂ ಮೀರಿ ಪ್ರದರ್ಶಿತವಾಗುತ್ತಿತ್ತು. ನಾಟಕದ ನಾಯಕ ಕೃಷ್ಣಚಂದ್ರ ಬಳ್ಳಾರಿ ಮತ್ತು ನಾಯಕಿ ಅಂಬುಜಮ್ಮ ಹೊಸಮನಿ ಅವರ ಅಮೋಘ ಅಭಿನಯ ಅಂದಿನ ರಂಗಪ್ರೇಮಿಗಳ ಮನದಲ್ಲಿ ಅಚ್ಚಳಿಯದಂತೆ ಸ್ಥಿರವಾಗಿ ನೆಲೆಗೊಂಡಿತ್ತು. ಈ ನಾಟಕದ ಅಪಾರ ಜನಮನ್ನಣೆ ಅಂದಿನ ಕನ್ನಡ ಚಲನಚಿತ್ರರಂಗದ ಮೇರು ನಟ ರಾಜಕುಮಾರ ಅವರ ಗಮನ ಸೆಳೆಯಿತು.

1973 ರಲ್ಲಿ ಶಾರದಾ ಸಂಗೀತ ನಾಟಕ ಮಂಡಳಿಯು ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಆಡಲಾಗುತ್ತಿತ್ತು. ಅದರ ಜನಪ್ರಿಯತೆಯನ್ನು ಕೇಳಿದ್ದ ಡಾ.ರಾಜಕುಮಾರ ಅವರು ಕನಕಪುರಕ್ಕೆ ಬಂದು ನಾಟಕವನ್ನು ಕಣ್ತುಂಬ ನೋಡಿ ಮೆಚ್ಚಿ ಅದನ್ನು ಸಿನೇಮಾ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಈ ವಿಷಯವನ್ನು ಕಂಪನಿಯ ಮಾಲೀಕ ಬಸವರಾಜಪ್ಪನವರಿಗೆ ಮತ್ತು ನಾಟಕ ರಚನಾಕಾರ ಪಿ.ಬಿ.ಧುತ್ತರಗಿಯವರಿಗೆ ತಿಳಿಸಿ ಅವರನ್ನು ಒಪ್ಪಿಸುತ್ತಾರೆ. 1974 ರಲ್ಲಿ ಚಲನಚಿತ್ರವಾಗಿ ಅದು ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಇತಿಹಾಸ ದಾಖಲಿಸುತ್ತದೆ. ಮುಂದೆ ತೆಲುಗು,ತಮಿಳು,ಹಾಗೂ ಹಿಂದಿ ಭಾಷೆಗಳಲ್ಲಿಯೂ ಚಿತ್ರೀಕರಣಗೊಂಡು ರಜತ ಪರದೆಯ ಮೇಲೆ ಮೆರೆಯುತ್ತದೆ.

ಡಾ.ರಾಜಕುಮಾರ ಅವರು 12.ಎಪ್ರೀಲ್ 2006 ರಲ್ಲಿ ತೀರಿಕೊಂಡಾಗ ನಾವು ಗೆಳೆಯರು ಬಾಗಲಕೋಟೆಯಲ್ಲಿ ಡಾ.ರಾಜ್ ನೆನಪಿಗೆ ಕಾವ್ಯ ನಮನ ಕಾರ್ಯಕ್ರಮವನ್ನು 16 ಎಪ್ರಿಲ್ 2006 ರಲ್ಲಿ ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮಕ್ಕೆ ರಾಜ್ ಒಡನಾಡಿಯಾಗಿದ್ದ ಪಿ.ಬಿ.ಧುತ್ತರಗಿ ಅವರನ್ನು ಕರೆಸಿಕೊಳ್ಳಲು ಯೋಚಿಸಿ ರಂಗಮಿತ್ರ ಎಸ್ಕೆ ಕೊನೆಸಾಗರ ಅವರಲ್ಲಿ ಕೋರಿದೆವು. ಆಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಧುತ್ತರಗಿಯವರು ರಾಜ ನೆನಪಿನ ಕಾರ್ಯಕ್ರಮವೆಂದಾಗ ಬಾಗಲಕೋಟೆಗೆ ಬರಲು ಒಪ್ಪಿಕೊಂಡರು. ಕೊನೆಸಾಗರ ಮತ್ತು ಗೆಳೆಯ ಬಸವರಾಜ ಗವಿಮಠರು ನಮ್ಮ ಕಾರ್ಯಕ್ರಮಕ್ಕೆ ಅತ್ಯಂತ ಜಾಗರೂಕತೆಯಿಂದ ಕರೆದುಕೊಂಡು ಬಂದರು. ಬಾಗಲಕೋಟ ಬಸವೇಶ್ವರ ಡಿ.ಇಡಿ.ಕಾಲೇಜು ಸಭಾಂಗಣದಲ್ಲಿ ಎ,ಎಸ್,ಪಾವಟೆ ಅವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ಜರುಗಿತು. ಆ ಹೊತ್ತಿಗೆ ಧುತ್ತರಗಿಯವರು ಡಾ.ರಾಜ್ ಮತ್ತು ಸಂಪತ್ತಿಗೆ ಸವಾಲು ಸಿನಿಮಾದ ನೆನಪುಗಳನ್ನು ಹಂಚಿಕೊಂಡರು.

ವರನಟ ರಾಜಕುಮಾರ ಅವರು ಸಂಪತ್ತಿಗೆ ಸವಾಲು ಸಿನೇಮಾದಲ್ಲಿ ನಟಿಸುವ ಕಲಾವಿದರಿಗೆ ಗೋಕಾಕ ಕಂಪನಿಯ ನಾಟಕವನ್ನು ನೋಡಿಕೊಂಡು ಬಂದೆ ನಟಿಸಬೇಕೆಂದು ಆಯಾ ಪಾತ್ರಧಾರಿಗಳಿಗೆ ನಿರ್ಬಂಧವಿಧಿಸಿದ್ದರಂತೆ, ಶಾರದಾ ಮಂಡಳಿಯ ಕಲಾವಿದರ ಅಭಿನಯವೆ ಅಷ್ಟೊಂದು ಅತ್ಯದ್ಭುತವಾಗಿತ್ತು.ಅವರು ಚಿತ್ರಕಲಾವಿರು ತಮ್ಮನ್ನು ಅನುಕರಿಸುವಷ್ಟರ ಮಟ್ಟಿಗೆ ನಟನೆಯಲ್ಲಿ ನೈಪುಣ್ಯತೆ ಹೊಂದಿದ್ದರು . ಅದಕ್ಕಾಗಿಯೇ ಡಾ.ರಾಜಕುಮಾರ ಅವರು ಚಿತ್ರನಟರಿಗೆ ಈ ಮಾತನ್ನು ಹೇಳಿದ್ದು.

‘ಡಾ.ರಾಜಕುಮಾರ ಅವರಿಗೆ ರಂಗಭೂಮಿಯ ಮೇಲೆ ಅಪಾರ ಅಭಿಮಾನ,ರಂಗಭೂಮಿಯ ಕಲಾವಿದರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು. ಸಂಪತ್ತಿಗೆ ಸವಾಲು ಎಮ್ಮೆ ಹಾಡು ರಾಜಕುಮಾರ ಅವರ ವೃತ್ತಿ ಬದುಕಿನಲ್ಲಿ ಹೊಸ ತಿರುವು ಕೊಟ್ಟಿತು. ರಾಜ್ ಮರೆಯಲಾಗದ ಕಲಾವಿರಾಗಿದ್ದರು. ಎಂದರು.ಮುಂದೆ ಕೆಲವೇ ತಿಂಗಳುಗಳಲ್ಲಿ 2007 ನವೆಂಬರ್ 1 ರಂದು ಪಿ.ಬಿ.ಧುತ್ತರಗಿಯವರೂ ತೀರಿಕೊಂಡರು. ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ ಡಾ.ರಾಜಕುಮಾರ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ನಮ್ಮ ಕಾರ್ಯಕ್ರಮಕ್ಕೆ ಬಂದು ಧುತ್ತರಗಿಯವರು ಗ್ರೇಟ್ ಎನ್ನಿಸಿಕೊಂಡರು. ಇದೇ ಅಲ್ಲವೇ ‘ಕಲಾವಿದರ ಕುಲಂ ತಾನೊಂದೆ ಒಲಂ’.

‍ಲೇಖಕರು avadhi

24 April, 2013

3 Comments

  1. Raju Yadava

    ಡಾ.ರಾಜ್ ಜನ್ಮ ದಿನಕ್ಕೆ ಮರೆಯಲಾಗದ ಕಾಣಿಕೆ.

  2. Gopaal Wajapeyi

    ಕನ್ನಡದ ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿಯವರು ಅತ್ಯಂತ ಸರಳ ಸ್ವಭಾವದ ಸ್ನೇಹಶೀಲ ವ್ಯಕ್ತಿ. 1987-90ರ ಅವಧಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಅವರೊಂದಿಗೆ ನಾನೂ ಒಬ್ಬ ಕಿರಿವಯದ ಸದಸ್ಯ. ಅವರ ನಾಟಕಗಳನ್ನು ವೃತ್ತಿರಂಗಭೂಮಿಯ ಮೇಲೆ ನೋಡಿ ಪ್ರಭಾವಿತನಾಗಿದ್ದ ನಾನು ಆ ಮೂರು ವರ್ಷಗಳಲ್ಲಿ ಅವರಿಗಿದ್ದ ಸಾಮಾಜಿಕ ಕಳಕಳಿಯ ಅರಿವು ಮಾಡಿಕೊಂಡೆ.
    ಅಕಾಡೆಮಿಯ ಮೀಟಿಂಗುಗಳಲ್ಲಿ ಅವರಿದ್ದರೆ ತಿಳಿಹಾಸ್ಯಕ್ಕೇನೂ ಕೊರತೆಯಿರುತ್ತಿರಲಿಲ್ಲ. ಒಂದು ಕಡೆ ಅವರು, ಮತ್ತೊಂದು ಕಡೆ ಯೋಗಣ್ಣ, ಇನ್ನೊಂದು ಕಡೆ ಪರ್ವತವಾಣಿ. ಮಜವಾಗಿರುತ್ತಿತ್ತು ಆ ಹಿರಿಯರೆಲ್ಲರ ಸಾಂಗತ್ಯ.
    ನಾವು ಅಕಾಡೆಮಿಯಿಂದ ಬಾಗಲಕೋಟೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ನಾಟಕೋತ್ಸವವನ್ನು ಏರ್ಪಡಿಸಿದಾಗ ಧುತ್ತರಿಗಿಯವರು ಆ ಎಲ್ಲ ದಿನಗಳೂ ನಮ್ಮೊಂದಿಗಿದ್ದರು. ಹುಬ್ಬಳ್ಳಿಯಲ್ಲಿ ರಂಗತಂತ್ರಗಳ ತರಬೇತಿ ಶಿಬಿರ ‘ನೇಪಥ್ಯ ಶಿಲ್ಪ’ವನ್ನು ಹಮ್ಮಿಕೊಂಡಾಗ ಬಂದು ನೋಡಿ ಸಲಹೆ ಸೂಚನೆಗಳನ್ನು ಕೊಟ್ಟಿದ್ದರು. ಬೆಂಗಳೂರಿಗೆ ಕಾರ್ಯನಿಮಿತ್ತ ಬಂದರೆ ಅವರು ಉಳಿಯುತ್ತಿದ್ದದ್ದು ಚಿಕ್ಕಪೇಟೆ ರಸ್ತೆಯ ಒಂದು ವಸತಿಗೃಹದಲ್ಲಿ. ಅಲ್ಲಿದ್ದುಕೊಂಡೇ ರಾಜ್ ಅವರ ಮನೆಗೆ ಹೋಗಿ ಕಥೆ ಹೇಳಿ ಬಂದ ಒಂದೆರಡು ಸಂದರ್ಭಗಳಲ್ಲಿ ನಾನು ಅವರೊಂದಿಗೆ ಊಟ ಮಾಡಿದ್ದಿದೆ.
    ನಾನು ‘ನಾಗಮಂಡಲ’ ನಾಟಕ ಪ್ರಯೋಗಕ್ಕೆ ಬರೆದ ಹಾಡುಗಳ ಬಗ್ಗೆ ಅವರು ತುಂಬ ಸಂತಸ ವ್ಯಕ್ತಪಡಿಸಿದ್ದರು. ಮುಂದೆ ಅವು ಕ್ಯಾಸೆಟ್ ರೂಪದಲ್ಲಿ ಬಂದಾಗ ನಮ್ಮ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಒಂದು ಕ್ಯಾಸೆಟ್ಟನ್ನು ಅವರಿಗೆ ಕೊಟ್ಟರಂತೆ. ಅದರಲ್ಲಿಯ ಒಂದರೆಡು ಹಾಡುಗಳನ್ನು ಅವರ ಪತ್ನಿ ಶ್ರೀಮತಿ ಸರೋಜಮ್ಮ ಧುತ್ತರಗಿ ಮತ್ತು ಅವರ ಪುತ್ರಿ ತಮ್ಮ ನಾಟಕಗಳಲ್ಲಿ ಬಳಸಿಕೊಳ್ಳುತ್ತಿದ್ದರಂತೆ. ಆ ಕುರಿತು ಸಿ. ಅಶ್ವಥ್ ಅವರ ಅರವತ್ತರ ಸನ್ಮಾನ ಗ್ರಂಥ ‘ತಂಬೂರಿ’ಯಲ್ಲಿ ಸರೋಜಮ್ಮ ನೆನಪಿಸಿಕೊಂಡಿದ್ದಾರೆ.
    ಈಗ ಆರೇಳು ವರ್ಷಗಳ ಹಿಂದೆ ಪಿ.ಬಿ.ಧುತ್ತರಗಿಯವರ ಸ್ವಾಸ್ಥ್ಯ ಬಹಳಷ್ಟು ಕೆಟ್ಟಿತು. ಅವರು ಆಸ್ಪತ್ರೆಯೊಂದರಲ್ಲಿ ನಿರಂತರ ಚಿಕಿತ್ಸೆಗೆ ಒಳಗಾಗಬೇಕಾಯಿತು. 2007 ನವೆಂಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದ ನೇರ ಪ್ರಸಾರವನ್ನು ನಾನು ದೂರದ ಹೈದರಾಬಾದಿನಲ್ಲಿ ಕೂತುಕೊಂಡೇ ನೋಡುತ್ತಿದ್ದೆ. ವೇದಿಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ ಅವರ ಜತೆ ಸರೋಜಮ್ಮ ಧುತ್ತರಗಿಯವರು ಕುಳಿತು ಸಂಭ್ರಮಿಸುತ್ತಿರುವ ಚಿತ್ರವನ್ನು ನಾನು ನೊಡುತ್ತಿದ ಹಾಗೆಯೇ ಕೆಳಗೆ ‘ಸ್ಕ್ರಾಲ್’ನಲ್ಲಿ ”ಕನ್ನಡದ ಖ್ಯಾತ ವೃತ್ತಿರಂಗಭೂಮಿ ನಾಟಕಕಾರ ಪಿ.ಬಿ. ಧುತ್ತರಗಿ ಇನ್ನಿಲ್ಲ” ಎಂಬ ವಾರ್ತೆ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು.

  3. Dr.Prakash G.Khade.

    ಹಿರಿಯರಾದ ಶ್ರೀ ಗೋಪಾಲ ವಾಜಪೇಯಿ ಅವರು ಧುತ್ತರಗಿಯವರ ಒಡನಾಟದ ಸಂದರ್ಭಗಳನ್ನು ತುಂಬಾ ಹೃದಯಪೂರ್ವಕವಾಗಿ ಹಂಚಿಕೊಂಡಿರುದಕ್ಕಾಗಿ ಧನ್ಯವಾದಗಳು.ದಿ.ಧುತ್ತರಗಿಯವರು ಕನ್ನಡ ವೃತ್ತಿ ರಂಗಭೂಮಿಯನ್ನು ಅತ್ಯಂತ ಶ್ರೀಮಂತಗೊಳಿಸಿದವರು,ಆದರೆ ಅವರ ನೆನಪಿಗಾಗಿ ನಾವು ಮಾಡಿದ್ದು ಕಡಿಮೆ.ಆ ದಿಸೆಯಲ್ಲಿ ಕೆಲಸಗಳಾಗಬೇಕಾಗಿವೆ.-ಡಾ.ಖಾಡೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading