ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾ೦ ಗೆ ಜೋಗಿ ಬರೆದ ಪತ್ರ

ಇದ್ದಕ್ಕಿದ್ದ೦ತೆ ಟಿ ಎನ್ ಸೀತಾರಾ೦ ನಿರಾಶೆಯ, ನಿರಾಸಕ್ತಿಯ ಮಾತುಗಳನಾಡುತ್ತಿದ್ದಾರೆ.

ಅದು ಇಲ್ಲಿದೆ

ಅದಕ್ಕೆ ಜೋಗಿ ಪ್ರತಿಕ್ರಯಿಸಿದ್ದು ಹೀಗೆ. ನಿಮ್ಮ ಅನಿಸಿಕೆ, ಪ್ರತಿಕ್ರಿಯೆಗಳಿಗೆ ಸ್ವಾಗತ :

– ಜೋಗಿ

  ಪ್ರಿಯ ಸೀತಾರಾಮ್, ಅಮೆಜಾನ್ ದಾಟಬಹುದು. ಅನುದಿನದ ಅಂತರಗಂಗೆ ದಾಟುವುದು ಕಷ್ಟ. ಹಾಗಂತ ನನ್ನ ಟೇಬಲ್ಲಿನ ಮೇಲೆ ಬರೆದಿಟ್ಟುಕೊಂಡಿದ್ದೇನೆ.ಸೀರಿಯಲ್ಲಿನ ಹಾಗೆ ಬರವಣಿಗೆ ಕೂಡ. ಒಮ್ಮೊಮ್ಮೆ ಬೇಸರ ಮತ್ತು ಜಿಗುಪ್ಸೆ ತರಿಸುತ್ತದೆ. ಆದರೆ ಆ ಬೇಸರ ಮತ್ತು ಜಿಗುಪ್ಲೆ, ಬರಹದ ಕುರಿತಾದದ್ದಲ್ಲ, ನಮ್ಮ ಕುರಿತಾದದ್ದೂ ಅಲ್ಲ, ನಮ್ಮ ಕಾಲದ ಕುರಿತಾದದ್ದು ಎಂದು ಎಷ್ಟೋ ಸಲ ಅನ್ನಿಸುತ್ತದೆ. ನಾನು ತುಂಬ ಹಿಂದೆ ಅಕೌಂಟೆಂಟ್ ಆಗಿದ್ದೆ. ಅಲ್ಲಿ ಕೂಡು ಕಳೆಯುವ ತೆರಿಗೆ ಉಳಿಸುವ ಲಾಭಗಳಿಸುವ ಲೆಕ್ಕಾಚಾರ ಮಾಡುತ್ತಿದ್ದೆ. ಕ್ರಮೇಣ ಅದು ತುಂಬ ಯಾಂತ್ರಿಕ ಅನ್ನಿಸತೊಡಗಿತು. ಅದನ್ನು ಮೀರುವುದಕ್ಕೆಂದು ಹಾಯ್ ಬೆಂಗಳೂರು ಸೇರಿದೆ. ಇವತ್ತು ಕುಳಿತು ನೋಡಿದರೆ ನಮ್ಮ ಹಾಗೆ ಅನೇಕರು ತಮ್ಮ ತಮ್ಮ ವೃತ್ತಿಗಳಲ್ಲಿ ಬೇಯುತ್ತಿದ್ದಾರೆ ಅನ್ನಿಸುತ್ತಿದೆ. ಪ್ರವೃತ್ತಿಯಾದದ್ದು ವೃತ್ತಿಯಾದಾಗ ಯಾತನೆ. ವೃತ್ತಿ ಪ್ರವೃತ್ತಿ ಆಗದೇ ಇದ್ದಾಗಲೂ ಯಾತನೆ. ವೈಯೆನ್ಕೆ ಹೇಳುತ್ತಿದ್ದರು- ಮನುಷ್ಯ ಸತತವಾಗಿ ಮಾಡಬಲ್ಲ ಏಕೈಕ ಕೆಲಸ ದುಡಿಮೆ. ಎಷ್ಟೋ ವರ್ಷಗಳಿಂದ ದುಡಿಯುತ್ತಾ ಬಂದಿದ್ದೇವೆ. ಮತ್ತೂ ದುಡಿಯಬಲ್ಲೆವು. ಅದರಿಂದ ಬರುವ ಹಣ, ಖ್ಯಾತಿ ಮತ್ತು ಗೌರವ ಬರಬರುತ್ತಾ ಗೌಣವಾಗುತ್ತಾ ಹೋಗುತ್ತದೆ. ನಮ್ಮನ್ನು ಎಚ್ಚರವಿರುವ ಹದಿನೆಂಟು ಗಂಟೆ ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಅನ್ನುವುದೇ ಅದರ ಹೆಚ್ಚುಗಾರಿಕೆ. ಬೇರೇನೋ ಮಾಡಬೇಕು ಅನ್ನುವ ತುಡಿತವೂ ಒಮ್ಮೊಮ್ಮೆ ಜೊತೆಯಾಗುತ್ತದೆ. ಅಂಥದ್ದೊಂದು ತುಡಿತ ಎದುರಾದಾಗಲೆಲ್ಲ ನಾನು ಅದನ್ನು ಒಂದೇ ಏಟಿಗೆ ನಿರಾಕರಿಸುತ್ತಾ ಬಂದಿದ್ದೇನೆ. ಬೇರೇನೋ ಕೂಡ ಕೊನೆಗೆ ನಮ್ಮ ವರ್ತಮಾನದಂತೆಯೇ ಬೋರು ಹೊಡೆಸುತ್ತದೆ ಎಂದು ನಾನು ಬಲ್ಲೆ. ಬದುಕಿಗೆ ಹೇಗೆ ಪರ್ಯಾಯ ಇಲ್ಲವೋ, ಸೃಷ್ಟಿಶೀಲತೆಯೂ ಪರ್ಯಾಯ ಇಲ್ಲ. ಲೈಫ್ ಈಸ್ ಎಲ್ಸ್ ವೇರ್ ಅನ್ನೋದು ಕೇವಲ ಒಂದು ಸುಂದರವಾದ ಭಾವನೆ. ಹಾಗೆ ನೋಡಿದರೆ ಯಾಂತ್ರಿಕತೆಯೇ ನಮ್ಮ ಶಕ್ತಿ ಮತ್ತು ಸಂವರ್ಧನೆ. ಬದುಕು ಯಾಂತ್ರಿಕವಾಗದೇ ಹೋಗಿದ್ದರೆ ನಾವು ಇನ್ನಷ್ಟು ಯಾತನೆ ಪಡುತ್ತಿದ್ದೆವು ಎಂಬುದು ನನ್ನ ನಂಬಿಕೆ. ಹಾಗೆ ನೋಡಿದರೆ ಯಾವುದು ಯಾಂತ್ರಿಕ ಅಲ್ಲ. ಮರ, ಗಿಡ, ಪ್ರಕೃತಿ, ಅರಳುವಿಕೆ ಎಲ್ಲವೂ ಯಾಂತ್ರಿಕ. ಅದು ಮಾಂತ್ರಿಕತೆ ಪಡಕೊಳ್ಳುವುದು ನಮ್ಮ ಪುಳಕದಲ್ಲಿ. ವಯಸ್ಸು ಮತ್ತು ಕಾಲ ಎಲ್ಲವನ್ನೂ ಕ್ಷಣಿಕವಾಗಿಸುತ್ತಾ ಹೋಗುತ್ತದೆ. ನಮ್ಮ ಸುಖವನ್ನೋ ಖುಷಿಯನ್ನೋ ನಾವು ಮತ್ಯಾವುದರಲ್ಲೋ ಹುಡುಕುತ್ತಾ ಹೊರಡುತ್ತೇವೆ. ನನಗಿಂತ ಐದು ವರ್ಷ ದೊಡ್ಡವನಾದ ಗೆಳೆಯನೊಬ್ಬ, ದುಡಿದಿದ್ದನ್ನೆಲ್ಲ ಖರ್ಚು ಮಾಡದೇ ಮಕ್ಕಳಿಗೆಂದು ಕೂಡಿಡುವುದನ್ನು ನೋಡಿ ನನಗೆ ಮರುಕವಾಯ್ತು. ಇಡೀ ಜೀವನವನ್ನು ನಾವು ಯಾರಿಗೋಸ್ಕರ ಸವೆಸುತ್ತಿದ್ದೇವೆ. ಇಡೀ ಜೀವನದ ಧ್ಯೇಯ ಏನು. ದೇವರೇ ಇದೆಲ್ಲದರ ಅರ್ಥವೇನು ಎಂದು ಗಿರೀಶರ ನಾಟಕದ ಪಾತ್ರವೊಂದು ಕೇಳಬೇಕು ಅನ್ನಿಸಿತು. ಅವನ ಮಕ್ಕಳು ಆ ದುಡಿಮೆ, ಯಾತನೆ, ಪ್ರೀತಿ ಯಾವುದರ ಅರಿವೂ ಇಲ್ಲದೇ ದುಂದುವೆಚ್ಚ ಮಾಡುತ್ತಾ ಅವನನ್ನು ಕಡೆಗಣಿಸುತ್ತಾ ಬಂದರು. ಐವತ್ತೋ ಅರವತ್ತೋ ಸಮೀಪಿಸುತ್ತಿರುವ, ದಾಟಿರುವ ನಾವು ನಮ್ಮ ತೀವ್ರತೆಯಲ್ಲಿ ಬದುಕುತ್ತಾ ಹೋಗೋಣ. ಜಿಗುಪ್ಸೆ ಎಂಬ ಪದ ನಮ್ಮ ತಲೆಮಾರಿನ ಯಾರನ್ನೂ ಸ್ಪರ್ಶಿಸಬಾರದು ಎಂಬುದು ನನ್ನ ಆಸೆ. ನಿಮ್ಮ ಕರ್ತೃತ್ವಶಕ್ತಿ, ದಿಟ್ಟತನ, ಬದುಕನ್ನು ಪಳಗಿಸಬಲ್ಲ ಛಲ ಎಲ್ಲವನ್ನೂ ನಾವು ನೋಡಿದ್ದೇವೆ. ನೀವು ನೊಂದರೆ ನಾವು ಕುಗ್ಗುತ್ತೇವೆ. ಈ ಸೀರಿಯಲ್ಲು ಎಂಬುದು ನಿಮ್ಮನ್ನು ಕುಗ್ಗಿಸಬಾರದು. ಅದು ಅದರ ಪಾಡಿಗೆ ನಡೆಯುತ್ತಿರಲಿ. ನಿಮ್ಮಿಂದ ಹುಮ್ಮಸ್ಸು ಪಡಕೊಳ್ಳುವವರು ಬೇಕಾದಷ್ಟು ಮಂದಿ ಇದ್ದಾರೆ. `ಮುಗಿಯದ ಯುದ್ಧದ ಬದಲಾಗದ ಸೈನಿಕನ ವೇಷ ಸಾಕಾಗಿದೆ..ಕತ್ತಿ ಹಿಡಿದು ಬೇಡದ ಹೋರಾಟ ಮಾಡುತ್ತಲೇ ಇರಬೇಕು’ ಎಂಬ ನಿಮ್ಮ ಮಾತಲ್ಲೇ ಬದುಕುವುದಕ್ಕೆ ಬೇಕಾದ ಸ್ಪೂರ್ತಿ ಇದೆ. ನೀವು ಇಪ್ಪತ್ತು ಇಪ್ಪತ್ತೈದನೆ ವಯಸ್ಸಿಗೆ ಎಷ್ಟು ದುಡಿಯುತ್ತಿದ್ದಿರೋ ಅದಕ್ಕಿಂತ ಹೆಚ್ಚು ಕಾಲ ಈಗ ದುಡಿಯುತ್ತಿದ್ದೀರಿ. ಹೆಚ್ಚು ಕ್ರಿಯಾಶೀಲರಾಗಿದ್ದೀರಿ. ಹೆಚ್ಚು ಹುಮ್ಮಸ್ಸಿನಿಂದ ಇದ್ದೀರಿ. ಚಿಂತೆಯ ನೆರಳು ಬೀಳದಂತೆ ಬದುಕೋಣ. ಸಾವನ್ನು ಗೆಲ್ಲಬಲ್ಲ ಅಸ್ತ್ರ ಸಂತತಿಯಲ್ಲ, ಸೃಜನಶೀಲತೆ ಅನ್ನುವುದು ನೀವೇ ಹೇಳಿಕೊಟ್ಟ ಪಾಠ. ಈ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿ ಆಗೋಣ. ಬೊಳುವಾರು ಪುಸ್ತಕ ಬಿಡುಗಡೆಯಿದೆ. ರಂಗಶಂಕರದಲ್ಲಿ ಕಂಬಾರರ ಯುಗಾದಿಯಿದೆ. ಸೂರಿ ಸಿಗುತ್ತಾರೆ. ಮಂಡ್ಯ ರಮೇಶ್ ನಾಟಕ ನೋಡಬೇಕಿದೆ. ಅಲ್ಲಿ ನಿಮಗೋಸ್ಕರ ಕಾಯುತ್ತಿರುತ್ತೇನೆ. ಪ್ರೀತಿಯಿಂದ ಜೋಗಿ    ]]>

‍ಲೇಖಕರು G

16 March, 2012

9 Comments

  1. sunil

    entaha aaptate…beautifull

  2. bharathi

    Oh ! ellaraddoo ide kathe ! nanage matra andukondidde ……

  3. Dr.Kashyap

    ಟಿ.ಎನ್.ಎಸ್ ನಮ್ಮ ಸಾಂಸ್ಕೃತಿಕ ಲೋಕದ ಸೃಜನಶೀಲ ವ್ಯಕ್ತಿಗಳಲ್ಲಿ ಒಬ್ಬರು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಕ್ರಿಯಾಶೀಲರೂ ಕೂಡ. ಖಿನ್ನತೆ ಆವರಿಸಿರುವ ಈ ದಿನಗಳಲ್ಲಿ, ಖಿನ್ನತೆಯೇ ನೆಪವಾಗಿ ಇನ್ನೇನಾದರು ಹೊಸದೊಂದು ಮೂಡಬಹುದು !!. ಏನಂತೀರಿ ?

  4. ಚಾಂದ್

    ಬರಬರುತ್ತ ಸಚಿನ್ ತೆಂಡೂಲ್ಕರ್ ಗೆ ಶತಕ ಗಳಿಸುವುದೂ ಎಷ್ಟು ಬೋರ್ ಹೊಡೆಸುವ ಕೆಲಸವಾಗುತ್ತಿದೆ ನೋಡಿ… ಹಾಗಂತ ಆಡದೆ ಇದ್ದರೆ ಆದೀತೆ? ಬದುಕಿನ ಗಿರಣಿಯಲ್ಲಿ ಸಿಕ್ಕ ಅನಿವಾರ್ಯ ಸರಕುಗಳು ನಾವೆಲ್ಲಾ… ಜೋಗಿ ಸಾಹೇಬರದ್ದು ಎಂದಿನಂತೆ ಆಪ್ತ ಬರಹ…

  5. Gubbachchi Sathish

    wah! adbuta pratikriye. ಪ್ರವೃತ್ತಿಯಾದದ್ದು ವೃತ್ತಿಯಾದಾಗ ಯಾತನೆ. ವೃತ್ತಿ ಪ್ರವೃತ್ತಿ ಆಗದೇ ಇದ್ದಾಗಲೂ ಯಾತನೆ. mattu YNK salugalu ista aytu.

  6. rudresh

    A letter ಮನಸ್ಸಿನ ಮೊಲೆಯಲ್ಲಿ ಬದುಕಿನ ಮಂಜಲುಗಳನ್ನು ಹೇಳುತ್ತಾ ಸಾಗಿ ನಾವು ಕೆಲವೊಂದು ಸಲ ಎಷ್ಟು ಹತಾಶರಾಗಿಬಿಡುತ್ತೇವೆ ಎನ್ನುವುದು…? ನಾವು ಎಂದು ಯಾವುದಕ್ಕೂ ಬೇಸರಿಸದ ನಾವು ಯಾಂತ್ರಿಕತೆಯ ಬದುಕಿಗೆ ಬೇಸರ ಬಂದಿದ್ದು, ನಮ್ಮ ಅರಿವಿಗೆ ಬಂದುಬಿಡುತ್ತದೆ… ಬದುಕೇ ಬೇಡವೆನ್ನಿಸಿಬಿಡುತ್ತದೆ…. ಬದುಕು ಹಾಗೆ ಅಲ್ವಾ ಸರ್….. ನಿರಾಶೆಗೆ ಮೈಯೊಡ್ಡಿದ್ದರೇ ಅದು ನಮ್ಮನ್ನು ಆವರಿಸಿಕೊಂಡುಬಿಡುತ್ತದೆ….!!!

  7. B.Rajesh

    ನನ್ನ ಅಭಿಪ್ರಾಯದಲ್ಲಿ ನಾವು ಮಾಡುವ ಕೆಲಸ ನಮಗೆ ಯಾಂತ್ರಿಕ ಅನ್ನಿಸಿದ ತಕ್ಷಣ ನಿಲ್ಲಿಸಿಬಿಡಬೇಕು. ಟಿ.ಎನ್.ಸೀತಾರಾಮ್ ಅವರು ಸೀರಿಯಲ್ ನಿಲ್ಲಿಸಬೇಕು ಎಂದು ಅನ್ನಿಸಿದರೆ ಅವರಿಗೆ ಅದು ನಿರಂತರ ಯಾತನೆ ಎನಿಸಿರಬೇಕು. I Think he needs a break… A long break to rejuvenate & reinvent himself in a different form. I am sure he fed up with this work. Market forces are always try to exploit the creative work of an artist and here T.N.Seetharam is also one of the Victim.

  8. Venkatraman Bhat

    hatsoff Jogi..!!

  9. manjunatha

    T.N.Seetharam avaru Serial madiddu saaku. Matte ondastu Lekhana, ‘Aspota’dantaha Kathe bareyali. Yuvakarige margadarshana madali. Kriyasheelaru onde kade nilluvudilla. vruthi badalisuttale iruttare. Hagagi Seetharam ravara nirdhara tappenilla.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading