ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಚಲಂ ಎಂಬ ನಿಗಿನಿಗಿ ಕೆಂಡ

ಒಂದು ಸುದೀರ್ಘ ನಿಟ್ಟುಸಿರು!

ಸುಡುಬಿಸಿಲೋ ಬೆಳದಿಂಗಳೋ ಗೊತ್ತಾಗದ ಸ್ಥಿತಿ. ನಿನ್ನೆ ನಾಳೆಗಳು ಒಂದಾಗಿ ನಿಂತ ವರ್ತಮಾನವೆಂಬ ನಿಶ್ಚಲ ಬಿಂದು. ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೆ ನಮಗೆ ಬೇಕಾದದ್ದು ಅಂದುಕೊಂಡು ಬಿಡುತ್ತೇವಾ? ಪ್ರೀತಿಯಲ್ಲೂ ಅಷ್ಟೇನಾ? ನಾವು ಪ್ರೀತಿಸದವರು ಸಿಕ್ಕದೇ ಹೋದಾಗ, ಸಿಕ್ಕವರನ್ನೇ ಪ್ರೀತಿಸುವುದು ರಾಜಿಯಾ? ಅಸಹಾಯಕತೆಯಾ? ಅನಿವಾರ್ಯ ಕರ್ಮವಾ? ವಿಧಿಯಾ? ಅಥವಾ ಬದುಕಿನ ವಿಲಕ್ಷಣ ವರ್ತನೆಗಳಲ್ಲಿ ಅದೂ ಒಂದಾ?

ಉತ್ತರ; ಒಂದು ಸುದೀರ್ಘ ನಿಟ್ಟುಸಿರು.

ಕಡುವ್ಯಾಮೋಹಿಯ ಹಾಗೆ, ಸಂತನ ಹಾಗೆ, ಎಲ್ಲವನ್ನೂ ಮೀರಿಯೂ ಮೀರದವನ ಹಾಗೆ, ನಮ್ಮನ್ನು ಕಂಗೆಡಿಸುವವನ ಹಾಗೆ, ನಾವು ಸಾಧನೆ, ಸುಖ, ತೃಪ್ತಿ, ನೆಮ್ಮದಿ ಅಂದುಕೊಂಡದ್ದೆಲ್ಲ ಕೇವಲ ನಮಗೆ ನಾವೇ ಹೇಳಿಕೊಂಡ ಅಪ್ಯಾಯಮಾನ ಸುಳ್ಳು ಎಂದೆನ್ನಿಸಿ ಕಂಗಾಲಾಗುವ ಹಾಗೆ, ಅದು ಅರಿವಾಗಿಯೂ ಆ ಸುಳ್ಳನ್ನು ಧಿಕ್ಕರಿಸುವ ಧೈರ್ಯವಾಗದ ಹಾಗೆ…..

ಚಲಂ ನಿಜಕ್ಕೂ ಹಾಗಿದ್ದರಾ? ನಮಗೆ ಹಾಗೆ ಕಾಣಿಸುತ್ತಿದ್ದರಾ? ಅವರೊಳಗಿನ ತಲ್ಲಣಗಳೇನಿದ್ದವು? ಅವರು ಏಕಾಂತದಲ್ಲಿ ಮುಖಾಮುಖಿಯಾಗುತ್ತಿದ್ದ ಸತ್ಯದ ಸ್ವರೂಪವೇನು? ಅವರು ಹಾಗಿದ್ದರೆ, ನಾವೇಕೆ ಹೀಗಿದ್ದೇವೆ? ಅದೇ ಭೂಮಿ, ಅದೇ ಬಾನು, ಅದೇ ಗಾಳಿ, ಅದೇ ನೀರು; ಸೃಷ್ಟಿ ಮಾತ್ರ ಬೇರೆ. ಅದು ನಮ್ಮ ಮಿತಿಯಾ? ಅವರ ಗತಿ ಮತ್ತು ಸ್ಥಿತಿಯಾ? ನಾವು ಆ ಬದುಕನ್ನು ಹೇಗೆ ನೋಡಬೇಕು? ಆಮೇಲೆ ನಮ್ಮನ್ನು ಕಾಡುವ ಅತೃಪ್ತಿಯಿಂದ ಹೇಗೆ ಪಾರಾಗಬೇಕು.

ಮತ್ತೊಂದು ಸುದೀರ್ಘ ನಿಟ್ಟುಸಿರು!

-2-

ಒಂದು ಅತಿಗೆ ಹೋಗದ ಹೊರತು ಸತ್ಯದ ಹೊಸಿಲನ್ನು ಎಡವುವುದು ಸಾಧ್ಯವೇ ಇಲ್ಲವೇನೋ? ಸದಾ, ನಿನ್ನ ಇತಿಮಿತಿಯನ್ನು ಅರಿತು ಬದುಕು ಎನ್ನುತ್ತದೆ ನಮ್ಮ ಓದು, ನಾವು ಕಲಿತ ಪಾಠ, ನಮ್ಮ ಸುತ್ತಲಿನ ಸಮಾಜ, ನಮ್ಮ ಧರ್ಮ ಮತ್ತು ನಮ್ಮ ಅಧೈರ್ಯ. ವಿವೇಕದ ಮೂಲಕ ನಾವು ದಾಟಲು ಯತ್ನಿಸುತ್ತೇವೆ ಎನ್ನುವುದು ದೊಡ್ಡ ಭ್ರಮೆ. ಜ್ಞಾನದ ಮೂಲಕ ಮೀರುತ್ತೇವೆ ಎನ್ನುವುದು ಸುಳ್ಳು. ಐಷಾರಾಮದ ಮೂಲಕ ಗೆಲ್ಲುತ್ತೇವೆ ಅನ್ನುವುದು ಲಂಪಟತನ. ಅನುಭವದ ಸೇತುವೆಯ ಮೇಲೆ ನಡೆದು ಆಚೆ ತೀರ ಸೇರುತ್ತೇವೆ ಅನ್ನುವುದು ಮೂಢನಂಬಿಕೆ. ನಾವು ಸದಾ ಸೇತುವೆಯ ನಡುವಲ್ಲೇ ಇರುತ್ತೇವೆ. ಹೊರಟ ನೆಲಕ್ಕೆ ಬಂದು ತಲುಪಲಾರೆವು, ಹೋಗಬೇಕಾದ ಜಾಗಕ್ಕೆ ಹೋಗಿ ಸೇರಲಾರೆವು. ಕೆಳಗೆ ಆರ್ಭಟಿಸುತ್ತಾ ಹರಿಯುವ ನದಿಗೆ ಧುಮುಕಿ ಪಾರಾಗಲಾರೆವು.

ಇಲ್ಲಿದ್ದೇ ಬೇರೆಯಾಗುವ ಆಶೆ, ಪಾರಾಗಿ ಎತ್ತರಕ್ಕೇರುವ ಹಂಬಲದ ನಡುವೆ ತುಯ್ಯುತ್ತಿರುವ ಮನಸ್ಸು ಚಲಂ ಆತ್ಮಕತೆಯ ಮುಂದೆ ಅರೆಕ್ಷಣ ಬೆತ್ತಲಾಗಿ ನಿಲ್ಲುತ್ತದೆ. ಹಾಗೆ ಬೆತ್ತಲೆಗೊಳಿಸುವ ಶಕ್ತಿ ಅಹಂಕಾರವಿಲ್ಲದೆ ಹುಟ್ಟಿದ ಎಲ್ಲ ಕಲೆಗೂ ಇರುತ್ತದೇನೋ? ಆದರೆ ಅಹಂಕಾರದ ಲವಲೇಶವೂ ಇಲ್ಲದೆ, ಆತ್ಮಚರಿತ್ರೆ ಬರೆಯುವುದಾದರೂ ಹೇಗೆ? ನಾನೆಂಬ ಮಮಕಾರವನ್ನು ತೊರೆದು, ತನ್ನ ಬದುಕನ್ನು ನಡುದಾರಿಯಲ್ಲಿ ಸತ್ತುಬಿದ್ದ ಅಪರಿಚಿತ ಶವವನ್ನು ನೋಡುವಷ್ಟು ಪರಕೀಯಭಾವದಿಂದ ನೋಡುವುದು ಸಾಧ್ಯವಾ?

ಚಲಂಗೆ ಅದು ಹೇಗೆ ಸಾಧ್ಯವಾಯಿತು? ಚಲಂ ಅಷ್ಟೊಂದು ತಳ್ಳಂಕಗಳ ಜೊತೆ ಹೇಗೆ ಜೀವಿಸಿದ್ದರು. ಜಗತ್ತಿನ ಜೊತೆ ಅಷ್ಟೊಂದು ಭಿನ್ನಾಭಿಪ್ರಾಯ ಇಟ್ಟುಕೊಂಡು ಹೇಗೆ ಜೀವಿಸಿದರು? ತನ್ನೊಂದಿಗೇ ಸಂಘರ್ಷ ಇಟ್ಟುಕೊಂಡು ಹೇಗೆ ಅಷ್ಟೊಂದು ಕ್ರಿಯಾಶೀಲವಾಗಿದ್ದರು? ಎಲ್ಲರನ್ನೂ ಸುಲಭವಾಗಿ ಸಂತೈಸುವ ಸಂಗತಿಗಳು ಅವರಿಗೇಕೆ ಸಾಂತ್ವನ ಹೇಳಲಿಲ್ಲ.

-3-

ಚಲಂ’ ಬಗ್ಗೆ ಕನ್ನಡದ ಓದುಗರಲ್ಲಿ ಆಸಕ್ತಿ ಹುಟ್ಟಿಸಿದವರು ರವಿ ಬೆಳಗೆರೆ. ಚಲಂ ಜೀವನ ಚರಿತ್ರೆಯೆಂದೂ ಕರೆಯಬಹುದಾದ ಸುಡುಸುಡು ಕೆಂಡದಂಥ ಕೃತಿಯನ್ನು ಕನ್ನಡ ಓದುಗರ ಕೈಗಿಟ್ಟಿದ್ದಾರೆ. ಇದಕ್ಕೆ ಅನುವಾದ ಅಕಾಡೆಮಿಯ ಬಹುಮಾನ ಮೊನ್ನೆ ಬಂತು. ಹೀಗಾಗಿ ಈ ಕೃತಿಯನ್ನು ಮತ್ತೊಮ್ಮೆ ಓದುವ ಹುಮ್ಮಸ್ಸು ಬಂತು. ಹಿಂದೊಮ್ಮೆ ಈ ಕೃತಿಯನ್ನು ಓದಿ ಬರೆದದ್ದೂ ನೆನಪಾಯಿತು.

ಚಲಂ ಆತ್ಮಚರಿತ್ರೆಯನ್ನುಅನುವಾದಿಸುವ ಹೊತ್ತಿಗೆ, ಮೂಡಿದ ಪ್ರಶ್ನೆಗಳನ್ನೂ ನಾನು ಊಹಿಸಿಕೊಳ್ಳಬಲ್ಲೆ. ಬೆಳಗೆರೆ ಎಂದಿನ ಆಕರ್ಷಕ ಶೈಲಿಯನ್ನೂ ಬೇಕಂತಲೇ ಬದಿಗಿಟ್ಟು, ಎಷ್ಟು ವಸ್ತುನಿಷ್ಟವಾಗಿ ಹೇಳುವುದಕ್ಕೆ ಸಾಧ್ಯವೋ ಅಷ್ಟು ನಿರ್ಭಾವುಕತೆಯಿಂದ ಅವರು `ಚಲಂ’ ಆತ್ಮಕತೆಯನ್ನು ಹೇಳುತ್ತಿರುವುದೇಕೆ ಅನ್ನುವುದನ್ನು ಓದುಗರೂ ಗ್ರಹಿಸಬಲ್ಲರು.

ಯಾರನ್ನೇ ಆಗಲಿ, ಒಂದೇ ಓದಿಗೆ ಆವರಿಸಿಕೊಳ್ಳುವ ವ್ಯಕ್ತಿತ್ವ ಅದು. ಚಲಂ’ ಭಾವತೀವ್ರತೆ, ವ್ಯಾಮೋಹ, ಸೆಳೆತ, ಶೃಂಗಾರದತ್ತ ಧಾವಿಸುವ ಉತ್ಕಟತೆ ಎಲ್ಲವನ್ನೂ ಮೀರಿದ್ದು ಅನುಭಾವದ ತುಡಿತ. ಇಂಥ ಅನುಭಾವವನ್ನು ತಾತ್ವಿಕತೆಯನ್ನು ಚಲಂ’ ತನ್ನ ಬದುಕನ್ನು ಸಮರ್ಥಿಸಿಕೊಳ್ಳಲು ಊರುಗೋಲು ಮಾಡಿಕೊಳ್ಳುವುದಿಲ್ಲ ಅನ್ನುವುದೇ ಇಲ್ಲಿನ ವೈಶಿಷ್ಟ್ಯ. ಹಾಗಾಗದಂತೆ ಅನುವಾದವೂ ಕಟ್ಟೆಚ್ಚರ ವಹಿಸಿದೆ ಅನ್ನುವುದೇ ಸಮಾಧಾನ.

ಎಷ್ಟು ನಿಚ್ಚಳವಾಗಿ ಅನ್ನಿಸಿದ್ದನ್ನು ಹೇಳುತ್ತಾ ಹೋಗುತ್ತಾರೆ ಚಲಂ’. ಅಂಥ ನಿಷ್ಠುರ ಪ್ರಾಮಾಣಿಕತೆಯೇ ಅವರ ಬದುಕನ್ನು ಗೌರವದಿಂದ ನೋಡುವಂತೆ ಮಾಡುತ್ತದೆ ಅಲ್ಲವೇ? ನಲವತ್ತು ದಾಟಿದ, ನನ್ನದಲ್ಲದ ಮತ್ಯಾವ ವಿಚಾರಧಾರೆಯೂ ನನ್ನನ್ನು ಕಸಿದುಕೊಳ್ಳಲಾರದು ಎಂದು ನಂಬಿಕೊಂಡಿರುವ ನನ್ನಂಥವನನ್ನೇ ಒಂದು ಕ್ಷಣ ಹಿಂತಿರುಗಿ ನೋಡುವಂತೆ ಮಾಡುತ್ತದೆ `ಚಲಂ’ ಚರಿತೆ.

ಚಲಂ’ಗೆ ತನ್ನ ವ್ಯಕ್ತಿತ್ವದ ಕುರಿತು ಯಾವುದೇ ಪೂರ್ವಗ್ರಹಗಳಿರಲಿಲ್ಲ ಅನ್ನಿಸುತ್ತದೆ. ಹಾಗೇ, ಬದುಕಿನ ಕುರಿತೂ. ತನ್ನ ಸಿದ್ಧಾಂತಗಳನ್ನು ತಾನೇ ವಿರೋಧಿಸುವ, ತನ್ನ ನಿಲುವುಗಳನ್ನು ತಾನೇ ಒಪ್ಪದಿರುವ, ತನ್ನ ಅಸ್ತಿತ್ವವನ್ನು ನಿರಾಕರಿಸುತ್ತಲೇ ಕಾಪಾಡಿಕೊಳ್ಳುವ ಚಲಂ ಅಷ್ಟೊಂದು ಶತ್ರುಗಳನ್ನು ಸೃಷ್ಟಿಸಿಕೊಂಡದ್ದು ಅಚ್ಚರಿಯೇನಲ್ಲ. ಆದರೆ, ಅಷ್ಟೊಂದು ಅಭಿಮಾನಿಗಳನ್ನು, ಓದುಗರನ್ನು ಸಂಪಾದಿಸಿದ್ದು ಮಾತ್ರ ಪವಾಡವೇ. ಅದರ ಅರ್ಥ, ನಮ್ಮೆಲ್ಲರೊಳಗೂ ಇರುವ ಅತೃಪ್ತಿ, ನಿರಾಕರಣೆ, ಅದಮ್ಯವಾದ ಜೀವನೋತ್ಸಾಹ, ಹೊಸಿಲು ದಾಟುವ ಹಂಬಲ. ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ ಅನ್ನುವ ಮಾತಿನ ಅರ್ಥ ಸ್ಪುಟವಾಗುವುದು ಇಂಥ ಬದುಕಿಗೆ ಮುಖಾಮುಖಿ ಆದಾಗಲೇ.

ಚಲಂ ಬದುಕು ಅನುಕರಣೀಯವಲ್ಲ. ಚಲಂ ಜೀವನದ ವ್ಯಾಮೋಹ, ಶೃಂಗಾರ ಮತ್ತು ಪ್ರಣಯಕ್ಕೆ ಸಂಬಂಧಿಸಿದಂತೆ ಅದು ನಿಜ. ಆದರೆ, ಚಲಂ ವಿಚಾರಧಾರೆಯಲ್ಲಿ ನಾವು ಕಂಡುಕೊಳ್ಳಬಹುದಾದ ಅನೇಕ ಸ್ವೀಕಾರಾರ್ಹ ಅಂಶಗಳಿವೆ. ನಮ್ಮ ಜೀವನೋತ್ಸಾಹವನ್ನು ಹುರಿಗೊಳಿಸುವ ಒಂದು ಜೀವತಂತುವಿದೆ. ಕಷ್ಟಕಾರ್ಪಣ್ಯಗಳನ್ನು ನಿರುಮ್ಮಳವಾಗಿ ಎದುರಿಸುವುದಕ್ಕೆ ನೆರವಾಗುವ ಸಂದೇಶವಿದೆ.

ನಮ್ಮ ತೋರಿಕೆಯನ್ನು ಆಡಂಬರವನ್ನು ಎಷ್ಟು ಚೆನ್ನಾಗಿ ಗೇಲಿ ಮಾಡುತ್ತಾರೆ ಚಲಂ. `ಎಷ್ಟೇ ಬೇಡವೆಂದರೂ ಮರ್ಯಾದೆಯೆಂಬುದು ನಮ್ಮ ಮನೆಯೊಳಗೆ ತೆವಳಿಕೊಂಡು ಬಂದಿತ್ತು. ಚಿಕ್ಕಪುಟ್ಟ ಬೆಳ್ಳಿ ಬಂಗಾರದ ವಸ್ತುಗಳೂ ಮನೆಯಲ್ಲಿ ಕಾಣಿಸತೊಡಗಿದ್ದವು. ಈ ಭಿಕಾರಿಗಳನ್ನು ಮರ್ಯಾದಸ್ಥರನ್ನಾಗಿ ಮಾಡಲು ಅವುಗಳನ್ನೆಲ್ಲ ಕಂಡು ಹಿಡಿದರೇನೋ ಅನ್ನುತ್ತಿದ್ದೆ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿತ್ತು. ಆದರೆ, ಒಳಗಿನಿಂದ ಸಂತೋಷವೆಂಬುದು ಎಗರಿ ಹೋಗಿತ್ತು’.

ಬರೀ ಮರ್ಯಾದಸ್ಥರ ಪ್ರಚಂಚಕ್ಕೆ ಅವಿನಯವನ್ನು ಕಲಿಸುವ ಗುರುವಿನಂತೆಯೋ, ನೀರ ಮೇಲಿನ ಗುಳ್ಳೆಯಂತೆ ಕಾಣುವ ಸಂಸಾರಸುಖದ ಹುಸಿಸಂತೋಷವನ್ನೂ ಒಡೆಯವವರಂತೆಯೂ ಕಾಣಿಸುತ್ತಿದ್ದ ಚಲಂ’ ಆತ್ಮಕಥೆಯನ್ನು ಓದಿಸುವ ಮೂಲಕ ನಮ್ಮ ಮಿತಿಗಳನ್ನು ದಾಟುವಂತೆ ಮಾಡಿದ್ದಕ್ಕೆ ರವಿಗೆ ಥ್ಯಾಂಕ್ಸ್. ನಮ್ಮ ಘನತೆ, ಸಂಪತ್ತು, ಸಂಸಾರ, ಗೆಳೆತನ, ಬಳಗ- ಒದಗಿಸುವ ತೃಪ್ತಿಯೆಂಬ ಭಾವ ಹೇಗೆ ನಮ್ಮನ್ನು ಕುಬ್ಜರನ್ನೂ ನಿಷ್ಕ್ರಿಯರನ್ನೂ ಆಗಿಸುತ್ತಾ ಹೋಗುತ್ತದೆ. ಉಲ್ಲಂಘನೆಯ ಉತ್ಸಾಹವನ್ನು ಹೇಗೆ ಕುಂಠಿತಗೊಳಿಸುತ್ತದೆ. ನಮ್ಮ ರೆಕ್ಕೆಗಳನ್ನು ಈ ಅಲ್ಪತೃಪ್ತಿ ಹೇಗೆ ಅಡಗಿಸುತ್ತದೆ ಅನ್ನುವುದನ್ನು ಇಷ್ಟು ಸಮರ್ಥವಾಗಿ ಹೇಳುವುದು ಸಾಧ್ಯವೇ ಇಲ್ಲ.

ಎಲ್ಲ ಪೂರ್ವಯೋಜಿತ ಬದುಕಿಗೂ ಒಂದು ಮೇರೆಯಿರುತ್ತದೆ. ಆ ಮೇರೆಯೊಳಗೇ ನಾವು ಕೂಪಮಂಡೂಕಗಳಂತೆ ನೆಮ್ಮದಿಯಾಗಿರುತ್ತೇವೆ. ಅದೇ ದಿವ್ಯ ಸ್ಥಿತಿ ಎಂದು ಭಾವಿಸುತ್ತೇವೆ. ಚಲಂರಂಥ ವ್ಯಕ್ತಿತ್ವವೊಂದು ಎದುರಾದಾಗ ನಮ್ಮ ಕುಬ್ಜತೆಯ ಸಣ್ಣತನದ ನಾವು ಪರಮ ಪವಿತ್ರ, ಸುರಕ್ಷಿತ ಮತ್ತು ಸುಖದಾಯಕ ಅಂದುಕೊಂಡದ್ದರ ಅರ್ಥಹೀನತೆ ಹೊಳೆಯುತ್ತದೆ.

ಅಂಥ ಅಸಂಗತ ಬದುಕಿನ ಸತ್ಯಗಳನ್ನು ತನ್ನ ಅಸ್ತಿತ್ವದ ಮೂಲಕ ತಿಳಿಸಿಕೊಟ್ಟ ಚಲಂ’ ಬದುಕಿನ ಕತೆ ನಮ್ಮನ್ನು ಬಿಡುಗಡೆಗೊಳಿಸುತ್ತದೆ .

ಈ ಮುಕ್ತಿಯ ಭಾವ ನಮ್ಮನ್ನು ಮತ್ತೊಂದು ಸಾಹಸದತ್ತ ಒಯ್ಯುತ್ತದೆ ಎಂದು ನಾನು ನಂಬಿದ್ದೇನೆ.

 


 

 

‍ಲೇಖಕರು G

28 March, 2011

3 Comments

  1. sumathi bk

    chennaagide jogi sir…

  2. srinivas deshpande

    dear jogi,

    chalam ondu vikshipta vyakthiya athirekada charitre.ravi avara jayayamaanakke takkanthe chitrisiddare. vishesha odanno athava valanotavanno needuva krithi alla.-srinivas deshpande

  3. anoop.s

    hi,
    The book showcases the real persona of a human being. the book is marvellous. challam is challam…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading