ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಎಂಬ 'ಟಂಗ್ ಟ್ವಿಸ್ಟರ್ '

img_6527ಸಂದೀಪ ಕಾಮತ್ ಹಾಸ್ಯ ಬರಹಕ್ಕೆ ಹೊಸ ಎಂಟ್ರಿ. ಹಾಸ್ಯ ಬರಹ ಅಪಹಾಸ್ಯವಾಗುವ ದಾರಿಯಲ್ಲಿ ಇರುವಾಗ ಸಂದೀಪ್ ಅವರ ತಾಜಾ ಶೈಲಿ ಖುಷಿ ನೀಡುತ್ತದೆ.

ಅದ್ಯಾಕೆ ಹಾಸ್ಯ ಬರೆಯುವವರು ವ್ಯಂಗ್ಯಚಿತ್ರ ಬರೆಯುವವರೂ ಅಷ್ಟು ಗಂಭೀರವಾಗಿರುತ್ತಾರೋ ‘ದೇವರೇ’ ಬಲ್ಲ..ಕಡಲತೀರದ ಸಂದೀಪ್ ಕಾಮತ್ ಬರಹಗಳನ್ನು ಕದಿಯಲು ನಮಗೆ ಯಾವಾಗಲೂ ಖುಷಿ

ಕನ್ನಡ ಸಾಹಿತ್ಯ ಲೋಕಕ್ಕೊಂದು ಕಾದಂಬರಿಯ ಸೇರ್ಪಡೆಯಾಗಿದೆ .ಹಾಗೆಯೇ ಕನ್ನಡಕ್ಕೊಂದು ಹೊಸ ’ಟಂಗ್ ಟ್ವಿಸ್ಟರ್ ’ ಕೂಡಾ!

ಜೋಗಿಯವರ ಹೊಸ ಕಾದಂಬರಿ ’ಚಿಟ್ಟೆ ಹೆಜ್ಜೆ ಜಾಡು ’ ಇವತ್ತು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕಾದಂಬರಿಯ ಹೆಸರೇ ತುಂಬಾ ಆಕರ್ಷಕವಾಗಿದೆ ,ಹಾಗೇ ಅದೊಂದು ರೀತಿಯ ಟಂಗ್ ಟ್ವಿಸ್ಟರ್ ಕೂಡಾ! ನೀವು ಬಿಡದೆ ಕಾದಂಬರಿಯ ಹೆಸರನ್ನು ಹತ್ತು ಬಾರಿ ಹೇಳಿ ನೋಡಿ.ಒಂದೋ ಅದು ’ಚಿಟ್ಟೆ ಹೆಜ್ಜೆಯ ಹಾಡು ’ ಆಗುತ್ತೆ(ಈ ಸಾಧ್ಯತೆ ಹೆಚ್ಚು) ಅಥವಾ ’ಚಿಟ್ಟೆ ಜೆಜ್ಜೆ ಜಾಡು ’ ಆಗುತ್ತೆ(ಸಾಧ್ಯತೆ ಕಮ್ಮಿ ಆದರೂ ಅಲ್ಲಗಳೆಯುವ ಹಾಗಿಲ್ಲ!).ಇದ್ಯಾವುದೂ ಆಗದೇ ನೀವು ಹತ್ತು ಬಾರಿಯೂ ’ಚಿಟ್ಟೆ ಹೆಜ್ಜೆ ಜಾಡು ’ ಅಂತ ಸರಿಯಾಗಿ ಹೇಳಿದರೆ ನಿಮಗೆ ಕಾದಂಬರಿಯ ಒಂದು ಪ್ರತಿಯನ್ನು ಬಹುಮಾನವಾಗಿ ಕಳಿಸಿಕೊಡಲಾಗುತ್ತದೆ !(ರೂ.80ರ ಚೆಕ್ ಅನ್ನು ಅಂಕಿತ ಪ್ರಕಾಶನದ ಹೆಸರಲ್ಲಿ ಪ್ರಕಾಶ್ ಕಂಬತ್ತಳ್ಳಿಯವರಿಗೆ ಕಳಿಸಿದರಾಯಿತು ಅಷ್ಟೇ!)

21ಚಿತ್ರ: ಪ್ರಕಾಶ್ ಹೆಗಡೆ

ತೋಚಿದ್ದೆಲ್ಲಾ ಬ್ಲಾಗಿಗೆ ಬರೆಯುತ್ತಾನೆ ಕ್ಷೌರವನ್ನೂ,ಮೊದಲ ರಾತ್ರಿಯನ್ನೂ ಕೂಡಾ ಬಿಡಲ್ಲ ಅನ್ನೋ ಗಂಭೀರ ಆರೋಪ ನನ್ನ ಮೇಲಿದೆ !ಆದರೆ ಇಂಥ ಕಾರ್ಯಕ್ರಮದ ಬಗ್ಗೆ ನಾನು ಬರೆಯೋದು ಸುನಾಥ್ ಜಿಯಂಥ ಪ್ರೀತಿಯ ಓದುಗರಿಗೆ .ದೂರದ ಊರಲ್ಲಿದ್ದು ನನ್ನಂಥವರ ಬ್ಲಾಗ್ ಬರಹದ ಮೂಲಕ ಕಾರ್ಯಕ್ರಮದ ಬಗ್ಗೆ ಕಿಂಚಿತ್ ವಿವರ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಅಷ್ಟೇ.

ಇತ್ತೀಚೆಗೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಜನರಂತೂ ಕಿಕ್ಕಿರಿದು ತುಂಬಿರ್ತಾರೆ.ಕಾರ್ಯಕ್ರಮ ಮುಗಿದ ನಂತರ ಜನ ಮುಗಿಬಿದ್ದು ಪುಸ್ತಕ ತಗೊಳ್ಳೋದು ಅಷ್ಟೇ ನಿಜ !ಆದರೆ ಕಾರ್ಯಕ್ರಮ ಮುಗಿದ ನಂತರದ ದಿನಗಳಲ್ಲಿ ಪಾಪ ’ಪ್ರಕಾಶ’ಕರು ಪುಸ್ತಕಗಳನ್ನು ಮಾರಲು ಅದೆಷ್ಟು ಕಷ್ಟ ಪಡ್ತಾರೋ ಆ ದೇವರೇ ಬಲ್ಲ.ಆದರೆ ಇಂಥಾ ಸಮಾರಂಭ ನೋಡಿದ ಮೇಲೆ ,ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆಯಿಲ್ಲ ಅನ್ನೋ ಅಪವಾದ ಕಿಂಚಿತ್ ಕಮ್ಮಿ ಆಗ್ತಾ ಇದೆ ಅನ್ನೋ ಅನಿಸಿಕೆ ನನ್ನದು .

ನಾನೂ ಅಷ್ಟೆ ಓದ್ತೀನೋ ಬಿಡ್ತೀನೋ ಪುಸ್ತಕ ತಗೊಳ್ಳೋದು ಬಿಟ್ಟಿಲ್ಲ.

ಇವತ್ತಿನ ಕಾರ್ಯಕ್ರಮದಲ್ಲಿ ನನಗೆ ಖುಷಿ ಕೊಟ್ಟಿದ್ದು ಜೋಗಿ ಗೆಳೆಯ ಕುಂಟಿನಿಯವರ ಮಾತುಗಳು.ಯಾಕೋ ನನಗೆ ಹಾಸ್ಯ ಪ್ರಜ್ಞೆಯುಳ್ಳವರ ಮಾತುಗಳನ್ನು ಕೇಳೋದು ತುಂಬಾ ಖುಷಿ ಕೊಡುತ್ತೆ.ಮಂಗಳೂರಿನ ಟ್ರೇಡ್ ಮಾರ್ಕ್ ಆದ ಹಾಸ್ಯ ಪ್ರಜ್ಞೆಯನ್ನು ತಮ್ಮ ಮಾತಿನುದ್ದಕ್ಕೂ ಕುಂಟಿನಿಯವರು ತೋರಿಸಿದರು.ಈ ಮೂಲಕ ಅವರೇ ಹೇಳುವಂತೆ ಜೋಗಿಯ ಮಾನ ಹರಾಜಿಗೆ ಹಾಕಿದರು !

ಜೋಗಿಯ ಬಾಲ್ಯದ ಗೆಳೆಯ ಕುಂಟಿನಿ ಸಹಜವಾಗಿಯೇ ಕೆಲವು ’ಮಂಗಳೂರಿನ ಭಾಗದ ರಹಸ್ಯ ರಾತ್ರಿ’ಯ ಕಥೆಗಳನ್ನು ಬಹಿರಂಗಗೊಳಿಸಿದರು.ಜೋಗಿಯ ತುಂಟತನ ,ಅವರ ಅನ್ಯೋನ್ಯ ಸ್ನೇಹ,ಬಾಲ್ಯದ ನೆನಪುಗಳು ಸರಾಗವಾಗಿ ಹರಿದು ಬಂದವು ಕುಂಟಿನಿಯವರ ಮಾತಿನಲ್ಲಿ.

ಅವರು ಬಯಲುಗೊಳಿಸಿದ ರಹಸ್ಯಗಳಲ್ಲಿ ನನಗೆ ತುಂಬಾ ಖುಶಿ ಕೊಟ್ಟಿದ್ದು ಜೋಗಿಯವ ಪ್ರೇಮಾಂಕುರದ ರಹಸ್ಯ!ಕಾಲೇಜಿನ ಸಮಯದಲ್ಲಿ ಯಾವುದೋ ಒಂದು ಪಠ್ಯವಾಗಿದ್ದ ಇಂಗ್ಲೀಷ್ ಕಾದಂಬರಿ ಗೆಳತಿ ಜ್ಯೋತಿಯವರಿಗೆ ಅರ್ಥವಾಗಿಲ್ಲ ಅನ್ನೋ ಕಾರಣಕ್ಕೆ ಜೋಗಿಯವರು ಎರಡೇ ದಿನದಲ್ಲಿ ಅದನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇ ಗಿರೀಶ್ ರಾವ್ ಜೋಗಿ ಆಗೋದಕ್ಕೆ ಮೊದಲ ಕಾರಣ ಅನ್ನೋ ರಹಸ್ಯವನ್ನು ಕುಂಟಿನಿಯವರು ಬಯಲು ಮಾಡಿದರು.ಜೋಗಿಯವರ ಬರವಣಿಗೆಯ ದೈತ್ಯ ಶಕ್ತಿಯನ್ನು ನಾವು ಇದನ್ನು ಕೇಳಿಯೇ ಕಲ್ಪಿಸಬಹುದು.

ಆದರೆ ಪಾಪ ಕುಂಟಿನಿಯವರಿಗೆ ಬೆಂಗಳೂರಿನ ಯಾವನೋ ಆಸಾಮಿ ಸರಿಯಾಗಿ ದ್ರೋಹ ಬಗೆದಿರೋದಂತೂ ನಿಜ .ಅವರ ಮಾತುಗಳಲ್ಲಿ ಬೆಂಗಳೂರಿನ ಜನರ ಆಶಾಢಭೂತಿತನದ ಬಗ್ಗೆ ಅಸಮಧಾನ ಪದೇ ಪದೇ ಕಂಡು ಬರುತ್ತಿತ್ತು.ಆದರೆ ಜೋಗಿ ಹೇಳಿದ ಹಾಗೆ ’ಮಗಳನ್ನು ಗಂಡನ ಮನೆಗೆ ಕಳಿಸಿಕೊಟ್ಟಂಥ ಪರಿಸ್ಥಿಯನ್ನು ಬಹುಷ ಕುಂಟಿನಿಯವರು ಜೋಗಿಯವರನ್ನು ಬೆಂಗಳೂರಿಗೆ ಕಳಿಸಿಕೊಟ್ಟಾಗ ಅನುಭವಿಸಿರಬೇಕು .ಅದಕ್ಕೇ ಆ ರೀತಿಯ ಅಸಮಾಧಾನ ಕುಂಟಿನಿಯವರಿಗೆ.

ಮತ್ತೊಂದು ಮಜವಾದ ಘಟನೆ , ಪೇಜಾವರ ಮಠದವರು ಆಯೋಜಿಸಿದ ಪ್ರಬಂಧ ಸ್ಪರ್ಧೆಯದ್ದು ! ’ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ’ ಅನ್ನೋ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಗೆ ಜೋಗಿಯವರು ತಮ್ಮ ಪ್ರಬಂಧವನ್ನು ಕಳಿಸಿದ್ದರಂತೆ.ಒಂಭತ್ತನೇ ತರಗತಿಯಲ್ಲಿದ್ದ ಜೋಗಿ ಆಗ ನಲವತ್ತು ಪುಟಗಳ ಪ್ರಬಂಧ ಬರೆದಿದ್ದರಂತೆ !ಅದೂ ಪ್ರಬಂಧದ ನಡು ನಡುವೆ ಜರ್ಮನ್ ದೇಶದ ಮನಶಾಸ್ತ್ರಜ್ಞ ಈ ರೀತಿ ಬರೆದಿದ್ದಾರೆ ,ಚೈನಾದ ವಿಜ್ಞಾನಿ ಟಿಂಗ್-ಲಿ ಅನ್ನೋರು ಈ ಬಗ್ಗೆ ಈ ರೀತಿ ಬರೆದಿದ್ದಾರೆ ಅನ್ನೋ ಸುಳ್ಳು ಸುಳ್ಳೂ ವ್ಯಾಖ್ಯಾನಗಳಿಂದಲೇ ಪ್ರಬಂಧದ ತೂಕ ಹೆಚ್ಚಿ ಅದು ಪ್ರಥಮ ಬಹುಮಾನ ಪಡೆದಿದ್ದು ,ಜೋಗಿ ಹಾಗೂ ಕುಂಟಿನಿ ಆ ಬಹುಮಾನವನ್ನು ಪಡೆಯಲು ಉಡುಪಿಗೆ ಹೋಗಿದ್ದು ,ಬಹುಮಾನದ ಹಣದಲ್ಲಿ ಉಷಾ ಹೋಟೇಲಿನಲ್ಲಿ ಒಂದೊಂದು ಬಿಯರ್ ಹೊಡೆದಿದ್ದು ಹೀಗೆ ರಸವತ್ತಾದ ಅನುಭವಗಳನ್ನು ಹಂಚಿಕೊಂಡರು ಕುಂಟಿನಿ.

ಜಿ. ಎನ್ ಮೋಹನ್ ರವರು ರಿಯಾಲಿಟಿ ಶೋಗಳ ಮನಸ್ಥಿಯಲ್ಲಿ ಬದುಕುತ್ತಿರುವ ಜನರ ಬದುಕಿನಲ್ಲಿ ಸಾಹಿತ್ಯಿಕ ಔಚಿತ್ಯದ ಬಗ್ಗೆ ಮಾತಾಡಿದರು.ಯಾವಾಗಲೂ ಹಾಸ್ಯಮಯವಾಗಿ ಮಾತಾಡುವ ಮೋಹನ್ ರವರು ಈ ರಿಯಾಲಿಟಿ ಮನಸ್ಥಿತಿಯಿಂದ ನಿಜಕ್ಕೂ ತಲ್ಲಣಗೊಂಡಿದ್ದ ಹಾಗೆ ಕಾಣಿಸಿತು.

ನಾಗತಿಹಳ್ಳಿಯವರು ಅಲ್ಲೇ ಪುಸ್ತಕದ ಕಿರು ವಿಮರ್ಶೆಯನ್ನೂ ಮಾಡಿದ್ರು .ಪುಸ್ತಕದ ಬಗ್ಗೆ ಸೊಗಸಾಗಿ ಮಾತಾಡಿದ ನಾಗತಿಹಳ್ಳಿ ಅವರ ಹೊಸ ಚಿತ್ರಕ್ಕೆ ’ಒಲವೇ ಜೀವನ ಲೆಕ್ಕಾಚಾರ ’ ಅನ್ನೋ ಹೆಸರಿಟ್ಟ ಜೋಗಿಗೆ ಕೃತಜ್ಞತೆ ಸಲ್ಲಿಸಿದರು.ನಾಗತಿಹಳ್ಳಿಯವರ ವಿಮರ್ಶೆ ನಾನಿಲ್ಲಿ ಬರೆದರೆ ಅದು ಬೇರೊಂದು ಅರ್ಥ ನೀಡುವ ಅಪಾಯವಿರೋದ್ರಿಂದ ಬರೀತಾ ಇಲ್ಲ ಕ್ಷಮಿಸಿ.

ಹಂಸಲೇಖಾ ರವರೂ ಪುಸ್ತಕದ ಬಗ್ಗೆ ,ಜೋಗಿಯ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತನ್ನಾಡಿದರು.ಅವರು ತುರ್ತಾಗಿ ಬೇರೊಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಇದ್ದರಿಂದ ಚಿಕ್ಕದಾಗಿ ಚೊಕ್ಕದಾಗಿ ಮಾತಾಡಿ ಜೋಗಿಗೆ ಶುಭ ಕೋರಿ ಹೊರ‍ಟರು ಅವರು.

ಕೊನೆಯದಾಗಿ ಮಾತಾಡಿದ ಜೋಗಿ ಗೆಳೆಯ ಕುಂಟಿನಿಯ ಬಗ್ಗೆ ಮೆಚ್ಚುಗೆಯ ಮಾತಾಡಿದರು.ಗೆಳೆಯ ಆತಂಕ ಪಟ್ಟಷ್ಟು ಬೆಂಗಳೂರೇನೂ ತಮ್ಮನ್ನು ಬದಲಿಸಿಲ್ಲ.ತಾನು ಬೆಂಗಳೂರಿನಲ್ಲಿ ಅತ್ಯಂತ ನೆಮ್ಮದಿಯಿಂದಿದ್ದೇನೆ ಅನ್ನೋ ಮಾತನ್ನೂ ಹೇಳಿದರು ಜೋಗಿ.

ನಿರೀಕ್ಷಿಸಿ: ಜೋಗಿ ಎಂಬ ‘ಥೀಸಿಸ್’

‍ಲೇಖಕರು avadhi

25 May, 2009

2 Comments

  1. umesh desai

    ನಿಜ ಮಾತಿನಲ್ಲಿ ಕಳೆ ಕಟ್ಟಿದ್ದು ಕುಂಟಿನಿ ಅವರು ಕೆಲವು ರಹಸ್ಯ ಹೊರಗೆಡವಿದರು…ಜೋಗಿ ಏನನಬಹುದು ಗೊತ್ತಿಲ್ಲ.
    ನಾಗಚಂದ್ರಿಕಾ ಛಲೋ ಹಾಡಿದ್ರು..

  2. ರಂಜಿತ್

    ಜೋಗಿಯ “ಪ್ರೇಮ” ಭಾಗದ ರಹಸ್ಯಗಳು ಓದಿ ಖುಷಿಯಾಯ್ತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading