ಜೋಗಿ
ಮತ್ತೆ ಮತ್ತೆ ಕಾಡುವ ಸಂಗತಿಗಳು ಬರೆಯಲು ಕುಳಿತೊಡನೆ ಹೊಸಿಲು ದಾಟಲು ನಿರಾಕರಿಸುತ್ತವೆ. ಎಷ್ಟೋ ಸಲ ನಾನು ಬರೆಯಬೇಕಾದದ್ದು ಇದಲ್ಲವೇ ಅಲ್ಲ ಅನ್ನಿಸುತ್ತದೆ. ತುಂಬ ಸುಂದರಿ ಕೂಡ ಕೆಲವು ಕೋನಗಳಲ್ಲಿ ಕೆಟ್ಟದಾಗಿ ಕಾಣಿಸುವಂತೆ, ಅವಳನ್ನು ಇದ್ದ ಹಾಗೆ ತೋರಿಸಲು ಛಾಯಾಗ್ರಾಹಕ ಹೆಣಗುವಂತೆ ಲೇಖಕ ಕೂಡ ಹೆಣಗಾಡಬೇಕಾಗುತ್ತದೆ.
ಹಾಗೆ ಹೆಣಗಾಡುತ್ತಿದ್ದರೆ ಗೆಳೆಯ ಊರಿಗೆ ಬಂದು ಹೋಗು, ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೆದರಿಸಿದ. ಊರಿಗೆ ಹೋಗುವ ಮನಸ್ಸಿದೆ ಮತ್ತು ಇಲ್ಲ. ನೆನಪಲ್ಲಿ ಉಳಿದ ಊರು, ಮತ್ತೆ ಪ್ರವೇಶಿಸಿದಾಗ ನಿರಾಸೆ ಉಂಟು ಮಾಡಬಹುದು ಎಂಬ ಭಯ. ಒಂದು ಕಾಲಕ್ಕೆ ತುಂಬ ಆಪ್ತ ಎನ್ನಿಸಿದ್ದ ಮೈಸೂರಿನ ಗಲ್ಲಿಗಳಿಗೆ ಮೊನ್ನೆ ಮೊನ್ನೆ ನಟ ಗಣೇಶನನ್ನು ಹುಡುಕಿಕೊಂಡು ಹೋದಾಗ, ಆ ಬೀದಿಗಳು ಪರಿಮಳ ಕಳಕೊಂಡಿವೆ ಅನ್ನಿಸಿಬಿಟ್ಟಿತ್ತು.
ಲೇಖಕನ ಕಷ್ಟ ಅದು. ಅವನಿಗೆ ತನ್ನೂರು ಕೂಡ ಎಲ್ಲ ಊರಿನ ಹಾಗೆಯೇ ಒಂದೂರು ಅನ್ನಿಸಿದರೆ ಮುಗಿಯಿತು. ಅಲ್ಲಿ ಕತೆ ಹುಟ್ಟುವುದಿಲ್ಲ. ಹನೇಹಳ್ಳಿಯಲ್ಲಿ ಮಾತ್ರ ಅಬೋಲೀನಾ ಹೂವು ಅರಳಬೇಕು. ಕನ್ನಡ ಒಂದೇ ಪ್ರೀತಿಸಬಲ್ಲ ಭಾಷೆ ಆಗಿರಬೇಕು. ಆಲನಹಳ್ಳಿಯಲ್ಲಷ್ಟೇ ಗೆಂಡೆತಿಮ್ಮ ಇರಬೇಕು. ಹಾಗಿದ್ದರೆ ಮಾತ್ರ ಅದು ಅನನ್ಯ, ಕನಿಷ್ಠ ಲೇಖಕನ ಪಾಲಿಗೆ.
ಅಸಂಖ್ಯಾತ ಘಟನೆಗಳಲ್ಲಿ ಊರು ಅರಳುತ್ತಾ ಹೋಗುತ್ತದೆ. ಆದರೆ ಅವೆಲ್ಲ ನಿಜಕ್ಕೂ ಆಸಕ್ತಿಪೂರ್ಣವೇ ಕೇಳಿಕೊಂಡೆ. ಯಾಕೆಂದರೆ ಕ್ರಮೇಣ ಸುರಗಿ ಹೂವಿನ ಸುಗಂಧ ಕೂಡ ಮಾಸುತ್ತಾ ಹೋಗುತ್ತದಲ್ಲ.






baravanige estu kasta antha heluthiri. nivu baredaddannu odidare bareyuvudu sulaba annisibiduthade.adappa shakthi andare………
Only Jogi can put so many things in few words.