ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೆ ಬಾಲಕೃಷ್ಣ ಹೊಸ ಕೃತಿಗಳು ಬರಲಿವೆ..

ಮಳೆಬಿಲ್ಲ ನೆರಳು- ವಿಜ್ಞಾನ ಲೇಖನಗಳ ಸಂಕಲ

ಪುಟಗಳು:244, ಬೆಲೆ ರೂ.150-00

ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104

ಮೇಲುನೋಟಕ್ಕೆ ವಿಜ್ಞಾನದ ಲೇಖನಗಳು ಎಂಬಂಥೆ ತೋರಿದರೂ ಸೂಕ್ಷ್ಮ ಮತ್ತು ಸಮಗ್ರ, ವೈಯುಕ್ತಿಕ ಮತ್ತು ಸಾಮಾಜಿಕ ಸ್ಥಳೀಯ ಮತ್ತು ಜಾಗತಿಕ ಎಂಬ ಧ್ರುವೀಕರಣವಿಲ್ಲದ ಅಖಂಡ ಗ್ರಹಿಕೆ ಮತ್ತು ಸಂಕೀರ್ಣ ನೇಯ್ಗೆಯ ಮೂಲಕ ಕೇವಲ ಮಾಹಿತಿಯ ತಂತ್ರಜ್ಞಾನವಾಗುಳಿಯದೆ ಸಂಸ್ಕೃತಿ ಚಿಂತನೆಯ ನಿಜೋದಯವಾಗಿ ಸ್ಥಿತ್ಯಂತರಗೊಂಡಿರುವ ಇಲ್ಲಿನ ಬರೆಹಗಳನ್ನು `ನಿರಂಕುಶ ಸಾಹಿತ್ಯವೆಂದೇ ಕರೆಯಲಿಚ್ಛಿಸುತ್ತೇನೆ. ಮಾನವ ಕೇಂದ್ರಿತವಾದ ಎಲ್ಲ ಬಗೆಯ ರಚನೆಗಳನ್ನು ನಿರಾಕರಿಸುತ್ತಾ ಉಳ್ಳವರು ಹುಟ್ಟುಹಾಕಿದ ಸುಳ್ಳು ಸೃಷ್ಟಿಯ `ಸಚರಾಚರವೆಲ್ಲರಚನೆಗೆ ಬಾರದಂದಿನ ನೆಲೆಗೆ ನಮ್ಮನ್ನು ಕರೆದೊಯ್ಯುವ ಇಲ್ಲಿನ ಬರೆಹಗಳು ಅಪರಿಮಿತದ ಕತ್ತಲೆಯೊಳಗೆ ಈಜುತ್ತಿರುವ ವಿಪರೀತದ ಬೆಳಕಿನ ಹುಳುಗಳಾಗಿ ಕಾಣುತ್ತವೆ.”

ಪ್ರೊ.ವಿ.ಚಂದ್ರಶೇಖರ ನಂಗಲಿ

ಪ್ರತಿ ಪ್ರಬಂಧದಲ್ಲಿಯೂ ಓದುಗನನ್ನು ತನ್ನದೆ ಅವಲೋಕನೆಯತ್ತ ನೂಕಿ, ಆ ಪ್ರಬಂಧ ರಚನೆಯಲ್ಲಿಯೇ ತಾನೂ ಒಂದು ಪಾತ್ರವಾಗುವಂತೆ ಪ್ರೇರೇಪಿಸುತ್ತಾರೆ. ಇದು ಬಾಲು ಅವರ ಲೇಖನಗಳ ಅನನ್ಯತೆ. ಬಹುಶಃ ಈ ವಿಭಿನ್ನತೆಗೆ ಕಾರಣ – `ವಿಜ್ಞಾನದಲ್ಲಿ ರಹಸ್ಯ ಬಗೆದಷ್ಟೂ ನಿಗೂಢ ಹೆಚ್ಚುತ್ತಾ ಹೋಗುತ್ತದೆ. ಆ ನಿಗೂಢದ ಬೆಡಗೇ ಜೀವನ ಪ್ರೀತಿಯ ಮೂಲ ಸೆಲೆಎಂಬ ಅವರ ನಂಬಿಕೆ. ಈ ನಂಬಿಕೆಯಿಂದಲೇ ಬರೆಯುವ ಅವರು ತಮ್ಮೆಲ್ಲ ಲೇಖನಗಳಲ್ಲೂ, ವಿಜ್ಞಾನವನ್ನು ಓದುಗನ ಆಂತರ್ಯದ ಸಮೀಪಕ್ಕೆ ತಂದಿಡುವ ಕುಶಲತೆಯನ್ನು ಅಳವಡಿಸಿಕೊಂಡಿರುವುದು ವಿಶೇಷ.”

ಡಾ.ಕೆ.ಎನ್.ಗಣೇಶಯ್ಯ

ನೆನಪುಗಳಿಗೇಕೆ ಸಾವಿಲ್ಲ? – ಕಥಾ ಸಂಕಲನ; ಡಾ. ಜೆ.ಬಾಲಕೃಷ್ಣ

ಪುಟಗಳು:146; ಬೆಲೆ ರೂ.100-00

ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104

ಇದು ನನ್ನ ಮೊದಲ ಕಥಾ ಸಂಕಲನ. ನಾನು 1983ರಿಂದ ಬರೆದ ಹದಿನಾಲ್ಕು ಕತೆಗಳು ಇಲ್ಲಿವೆ. ಸಾವಿರಾರು ವರ್ಷಗಳ ಹಿಂದೆ ಆದಿಮಾನವ ಮಾಡಿದ ಕೆಲಸವನ್ನೇ ನಾನು ಮಾಡಿದ್ದೇನೆ. ಬಾಲ್ಯದಿಂದ ಇದುವರೆಗಿನ ನನ್ನ ಬದುಕಿನ ಅಲ್ಲೊಂದು ಇಲ್ಲೊಂದು ಎಳೆಯನ್ನು ತೆಗೆದು ಅದಕ್ಕೆ ನನ್ನ ಕಲ್ಪನೆಯ ಮತ್ತೊಂದಷ್ಟು ಎಳೆಗಳನ್ನು ಸೇರಿಸಿ `ಕತೆ ಕಟ್ಟುವಪ್ರಯತ್ನ ಮಾಡಿದ್ದೇನೆ.

ಕೇಂದ್ರ ಸಾಹಿತ್ಯ ಅಕಾದೆಮಿಯಿಂದ ನಾನು ಅನುವಾದಿಸಿರುವ ‘ಭಾರತದ ಮೊದಲ ಕಾದಂಬರಿಗಳು’ ಇತ್ತೀಚೆಗೆ ಪ್ರಕಟವಾಗಿದೆ. ಅದರ ಪರಿಚಯವನ್ನೂ ಇಲ್ಲಿ ನೀಡಿದ್ದೇನೆ.

ಭಾರತದ ಮೊದಲ ಕಾದಂಬರಿಗಳು: ಮೂಲ ಸಂಪಾದಕರು: ಮೀನಾಕ್ಷಿ ಮುಖರ್ಜಿ

ಕನ್ನಡ ಅನುವಾದ: ಜೆ.ಬಾಲಕೃಷ್ಣ

ಪುಟಗಳು: 21+282; ಬೆಲೆ:ರೂ.175-00

ಪ್ರಕಾಶಕರು: ಸಾಹಿತ್ಯ ಅಕಾದೆಮಿ; ನವದೆಹಲಿ

ಯಾವುದೇ ಸಾಹಿತ್ಯ ಪ್ರಕಾರದ ಪ್ರಾರಂಭ ಮಸುಕು ಮಸುಕಾಗಿರುವಂತೆ ಭಾರತೀಯ ಕಾದಂಬರಿಗಳ ಪ್ರಾರಂಭವೂ ಮಸಕು ಮಸುಕಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಇಂಗ್ಲಿಷ್ ಶಿಕ್ಷಣದ ನೇರ ಪರಿಣಾಮದಿಂದಾಗಿ ಭಾರತದ ಕಾದಂಬರಿ ಒಂದು ಎರವಲು ಪ್ರಕಾರವೆಂಬ ಅನಿಸಿಕೆ ಬಹಳ ಕಾಲ ಪ್ರಶ್ನಾತೀತವಾಗಿ ಉಳಿದಿತ್ತು. ಆದರೆ ಇಂತಹ ಸಿದ್ಧಾಂತಗಳನ್ನು ಮರುಪರೀಕ್ಷಿಸುವ ಮತ್ತು ಭಾರತದಂತಹ ಬಹುಸಂಸ್ಕೃತಿಯ ಹಾಗೂ

ಬಹು ಭಾಷಾ ಪರಂಪರೆ ಆಯಾ ಚಾರಿತ್ರಿಕ-ಸಾಮಾಜಿಕ ಘಟ್ಟಗಳಲ್ಲಿ ಸಾಹಿತ್ಯದ ಈ ಪ್ರಕಾರದ ಮೇಲೆ ಬೀರಿರುವ ಪರಿಣಾಮಗಳನ್ನು ಈ ಕೃತಿ ಪರಿಶೋಧಿಸುವ ಪ್ರಯತ್ನ ಮಾಡುತ್ತದೆ. ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ರಾಷ್ಟ್ರದ ಪರಿಕಲ್ಪನೆಯೊಂದಿಗೇ ಕಾದಂಬರಿ ಪ್ರಕಾರ ಉಗಮವಾಯಿತೆನ್ನುತ್ತಾರೆ ಕೆಲ ಸಾಹಿತ್ಯ ಚರಿತ್ರಕಾರರು. ಈ ಸಂಪುಟವು ಸಾಹಿತ್ಯ ವಿಮರ್ಶಕರು, ಚರಿತ್ರಕಾರರು ಮತ್ತು ರಾಜಕೀಯ ತಾತ್ವಿಕ ಸಿದ್ಧಾಂತಕಾರರು ರಚಿಸಿರುವ ಹದಿನಾಲ್ಕು ಪ್ರಬಂಧಗಳನ್ನು ಒಳಗೊಂಡಿದೆ ಹಾಗೂ ಅವು ವಿವಿಧ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿಗಳನ್ನು ಮತ್ತು ಅವು ರಚನೆಗೊಂಡ ಸಂದರ್ಭಗಳನ್ನು ಪರಾಮರ್ಶಿಸುತ್ತದೆ.

 

‍ಲೇಖಕರು G

24 April, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading