‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.
ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಖವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.
ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.
ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ
ಈಗ ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ-
ಕು.ಸ.ಮಧುಸೂದನ ರಂಗೇನಹಳ್ಳಿ
ಎಸ್. ರಾಧಾಕೃಷ್ಣನ್ ಬಗ್ಗೆ ಬರೆಯುತ್ತ ವಡ್ಡಗೆರೆಯವರು ಅವರ ಖಾಸಗಿ ಬದುಕಿನ ಕುರಿತಂತೆ ಹಲವು ವಿಷಯಗಳನ್ನುಪ್ರಸ್ತಾಪಿಸಿ, ಅವರ ಹೆಸರಿನಲ್ಲಿ ಶಿಕ್ಷಕ ದಿನಾಚರಣೆ ಅಚರಿಸುವುದರ ಬಗ್ಗೆ ಆಕ್ಷೇಪಗಳನ್ನು ಎತ್ತಿದ್ದಾರೆ.
ಪ್ರತಿ ಮನುಷ್ಯನಿಗೂ ಎರಡು ರೀತಿಯ ಬದುಕಿರುತ್ತದೆ, ಒಂದು ತೀರಾ ಖಾಸಗಿಯಾದದ್ದು-ಮತ್ತೊಂದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂಥಾದ್ದು. ಆ ವ್ಯಕ್ತಿಯ ಸಾಧನೆಗಳನ್ನು ಗುರುತಿಸುವಾಗ ನಾವು ಆತನ ಜನಪರ ಕೆಲಸಗಳನ್ನು ನೋಡುತ್ತೇವೆಯೇ ಹೊರತು, ಆತನ ಖಾಸಗಿ ಬದುಕನ್ನಲ್ಲ.
ರಾಧಾಕೃಷ್ಣನ್ ಮೂವರು ಹೆಂಡತಿಯರನ್ನು ಹೊಂದಿದ್ದರೆಂಬುದೇನು ರಹಸ್ಯವಲ್ಲ. ಅವರು ಮೂರು ಜನರನ್ನು ಮದುವೆಯಾಗಿದ್ದರೆ ಹೊರತು ಯಾರ ಜೊತೆಗೂ ಅನೈತಿಕ ಸಂಬಂಧ ಹೊಂದಿರಲಿಲ್ಲ ಮತ್ತು ನಂಬಿಸಿ ಯಾರಿಗೂ ವಂಚನೆ ಮಾಡಿರಲಿಲ್ಲ. ಅವರ ಮಗ ಮೂರು ಮದುವೆಗಳ ಬಗ್ಗೆ ಬರೆದಿದ್ದಾರೆಯೇ ಹೊರತು ತನ್ನ ತಂದೆ ಲಂಪಟನೆಂದೇನು ಬರೆದಿಲ್ಲ.

ಇವತ್ತಿನ ಕಾನೂನಿನ ಪ್ರಕಾರ ಮೂರು ಮದುವೆ ತಪ್ಪು, ನಿಜ. ಹಾಗಂತ ಅಂದಿನ ಜಮಾನದಲ್ಲಿ ಅಂತಹ ಬಹುಪತ್ನಿತ್ವ ತೀರಾ ಸಹಜವಾಗಿತ್ತೆಂಬುದನ್ನು ನಾವು ಮರೆಯಬಾರದು. ಇಲ್ಲಿ ಯಾವುದು ನೈತಿಕ ಯಾವುದು ಅನೈತಿಕ ಎಂಬ ಪ್ರಶ್ನೆ ಎದುರಾಗುತ್ತದೆ. ಮೂರು ಮದುವೆಯಾಗುವುದು ಅನೈತಿಕ ಎನ್ನುವುದಾದರೆ ಅಪಾರ ಸಂಖ್ಯೆ ಪ್ರೇಯಸಿಯರನ್ನು ಹೊಂದಿದ್ದ ನಮ್ಮ ಅನೇಕ ಬರಹಗಾರ ಕಲಾವಿದರನ್ನೂ ಲಂಪಟರೆಂದು ಕರೆದು ಅವರ ಕೃತಿಗಳನ್ನು ನಿರಾಕರಿಸಬೇಕಾಗುತ್ತದೆ.
ಹಾಗೆ ನೋಡಿದರೆ ಜಗತ್ತಿನ ಪ್ರತಿ ದೊಡ್ಡ ಮನುಷ್ಯನ ಜೀವನದಲ್ಲಿಯೂ ಖಾಸಗಿಯಾದ ಕೆಲವು ದೌರ್ಬಲ್ಯಗಳಿರುತ್ತವೆ. ಬೋದಿಲೇರನನ್ನು ಕೊಂಡಾಡುವ ಇದೇ ಜಗತ್ತು, ಆತನ ಪಾಪಗಳನ್ನು ಒಪ್ಪಿಕೊಂಡಿಲ್ಲವೆ? ಒಬ್ಬ ಸಾಧಕನ ಬದುಕಿನ ಸಾಧನೆಗಳು ನಮಗೆ ಮುಖ್ಯವಾಗಬೇಕೇ ಹೊರತು ಆತನ ಖಾಸಗಿ ಬದುಕಲ್ಲ.
ಇನ್ನು ಅವರ ಜನ್ಮ ದಿನಾಂಕದ ಬಗ್ಗೆ ಇವತ್ತಿಗೂ ಗೊಂದಲಗಳಿವೆ. ಸೆಪ್ಟೆಂಬರ್ ಐದರಂದೆ ಅವರ ಜನ್ಮದಿನವೆಂದು ನಾವಂದುಕೊಂಡರೆ ತಪ್ಪೇನಿದೆ. ಕೇವಲ ಮೂವತ್ತು ವರ್ಷಗಳ ಹಿಂದೆ ನಮ್ಮ ಜನ್ಮದಿನಾಂಕ ಗೊತ್ತಿರದ ನಮ್ಮ ಅಪ್ಪ-ಅಮ್ಮ, ಶಾಲೆಗೆ ಸೇರಿಸಲು ಹೋದಾಗ ಅಂದಿನ ಶಿಕ್ಷಕರುಗಳು ಅನ್ಯದಾರಿಯಿರದೆ ಜೂನ್ ಒಂದು ನಮ್ಮ ಜನ್ಮದಿನಾಂಕವೆಂದು ದಾಖಲಿಸಿದ್ದಿದೆ. ಇಂತಹ ಲಕ್ಷಾಂತರ ಉದಾಹರಣೆಗಳು ನಮ್ಮ ಕಣ್ಣೆದುರೆ ಇದೆ.
ಇನ್ನು ಅವರ ತಾಯಿಯನ್ನು ದೂರವಿಟ್ಟದ್ದರ ಬಗ್ಗೆ, ಅದು ರಾಧಾಕೃಷ್ಣನ್ ಮತ್ತು ಅವರ ತಾಯಿಯ ನಡುವೆ ಸುಮಧುರ ಬಾಂಧವ್ಯ ಇಲ್ಲದೆ ಇದ್ದುದನ್ನು ತೋರಿಸುತ್ತದೆ. ಹಾಗೆ ಅವರ ತಾಯಿಯನ್ನು ದೂರ ಇಟ್ಟಿದ್ದಕ್ಕೆ ಅವರದೇ ಆದ ಕಾರಣಗಳಿರಬಹುದು.
ಸಾಧಕನೊಬ್ಬನ ಸಾಧನೆಗಳನ್ನು ನಾವು ಮೆಚ್ಚಿ ಅನುಸರಿಸಬೇಕೇ ಹೊರತು ಆತನ ವೈಯುಕ್ತಿಕ ದೌರ್ಬಲ್ಯಗಳನ್ನು ವೈಭವೀಕರಿಸುತ್ತ ಆತನ ಸಾಧನೆಗಳನ್ನು ನಿರಾಕರಿಸುವುದು ಸರಿಯಲ್ಲ. ಅದೂ ಅರವತ್ತು ವರ್ಷಗಳ ನಂತರದಲ್ಲಿ.
ಬಹುಶ: ರಾಧಾಕೃಷ್ಣನ್ ಅವರ ಜಾತಿಯೇ ಇಂಥಹದೊಂದು ವಿವಾದವನ್ನು ಹುಟ್ಟು ಹಾಕಲು ಪ್ರೇರೇಪಣೆಯಾಗಿರಬಹುದೆಂಬ ಅನುಮಾನ ನನಗಿದೆ.






ಸರಿಯಾಗಿ ಹೇಳಿದ್ದಿರಿ ಮಧುಸೂದನ ಅವರೆ..