ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಲಿಂಗರತಿ, ಸೆಕ್ಷನ್ ೩೭೭, LGBT ಇತ್ಯಾದಿ..

ಸಲಿಂಗರತಿಯನ್ನು ಅಪರಾಧೀಕರಿಸಿ ಐಪಿಸಿ ಸೆ.377ರ ಮೇಲೆ ನೀಡಿರುವ ತೀರ್ಪನ್ನು ಪುನರ್‌ವಿಮರ್ಶಿಸುವಂತೆ ಎಲ್ಲೆಡೆಯಿಂದಲೂ ಕೂಗು ಕೇಳಿಬರುತ್ತಿದೆ.  ಹಾಗೆಯೇ ಸಲಿಂಗರತಿ ಅನೈಸರ್ಗಿಕ, ಹಾಗಾಗಿ ಅದು ಶಿಕ್ಷಾರ್ಹ ಅಪರಾಧ ಎನ್ನುವ ವಾದವೂ ಇದೆ. ಅದೇನೆ ಇರಲಿ ಈ ಬಗ್ಗೆ ಒಂದು ಗಂಭಿರವಾದ ಚರ್ಚೆ ಆಗಬೇಕಾಗಿರುವುದಂತೂ ನಿಜ.

ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ, ಆದರೆ ಇದು ಲೇವಡಿ ಮಾಡುವ, ಯಾರನ್ನೋ ನಿಂದಿಸುವ ವೇದಿಕೆ ಅಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ. ನಿಮ್ಮ ವಾದ ಎಲ್ಲೂ ವೈಯಕ್ತಿಕ ನಿಂದನೆ ಆಗದಿರಲಿ..

ಮೂಕಜ್ಜನ ಸೋಲು – ಭಾಗ ೧

ಅನಿಲ ತಾಳಿಕೋಟಿ

ಆತನೊಬ್ಬ ಉತ್ಸಾಹಿ ಮಾನವ. ತನ್ನ ವಿಸಿಟಿಂಗ ಕಾರ್ಡನಲ್ಲಿ ಹೆಸರಿನಷ್ಟೆ ದೊಡ್ಡದಾಗಿ ಪರ್ವತಾರೋಹಿ ಎಂದು ಹೆಮ್ಮೆಯಿಂದ ನಮೂದಿಸಿಕೊಂಡಾತ. ಕನಿಷ್ಟ ಐದು ವರುಷದಿಂದ ತಾನು ಏರಬೇಕಾದ ಪ್ರಪಂಚದ ಅತ್ಯುನ್ನತ ಶಿಖರದ ಅನುಭವವನ್ನು ಹರಳುಗಟ್ಟುವಂತೆ, ಕಿರಿ ಹಿರಿಯರೆಲ್ಲರೂ ಓದಿ ನಿಬ್ಬೆರಗಾಗುವಂತೆ ಬರೆಯುತ್ತಲಿದ್ದಾನೆ. ಆತ ತಿರುಗು ಹಾಕದ ಆಕರಗಳೊಂದು ಉಳಿದಿಲ್ಲ, ಮೂಸದ ಜ್ಞಾನಶಾಖೆಗಳಿಲ್ಲ. ಆತ ಭೇಟಿ ಕೊಡದ ಜಾಲಪ್ರಪಂಚದ ಒಂದೇ ಒಂದು ಮಿನ್ನೆಲೆ ಉಳಿದಿಲ್ಲ ಎನ್ನಬಹುದು. ಆತ ಮಾತನಾಡಿಸದ,ಸಂದರ್ಶಿಸದ ಪರ್ವತಾರೋಹಿಗಳು ಇಲ್ಲವೆ ಇಲ್ಲ ಎಂದರೂ ಆದೀತು. ಸಧ್ಯಕ್ಕೆ ಉಸಿರಾಡಿಸುವವರಾಗಿದ್ದರೆ ಅವರ ಜೀವನದ ಎಲ್ಲ ಕೊಂಡಿಗಳನ್ನು ಅವನು ಸಮಗ್ರವಾಗಿ ಪರಿಶೀಲಿಸಿ-ಪ್ರತಿಯೊಂದನ್ನೂ ತಾಳ್ಮೆಯಿಂದ, ಆಸಕ್ತಿಯಿಂದ ತೀರ ನಾಜೂಕಾಗಿ ಪರಿಷ್ಕರಿಸಿ ಪೇರಿಸಿದ್ದಾನೆ.  ಹಿಂದಣ ಲೇಖಕರ ತೊತ್ತನ್ನು ತುತ್ತು ತುತ್ತು ಮಾಡಿ ನುಂಗಿ ಮುಕ್ಕಿದ್ದಾನೆ. ಮುಂದಣ ಬರಹಗಾರರ ಮನದಾಳ ಬಗಿದು ಶೋಧಿಸಿ, ಜರಡಿ ಹಿಡಿದು ಹೊಳೆ ಹೊಳೆವ ಹೊನ್ನ ಭಿನ್ನವಾಗಿಸಿ ಉಜ್ಜಿ ಚೊಕ್ಕಟ ಮಾಡಿ ಮಾಡಿ ದಣಿದಿದ್ದಾನೆ. ಆತ ಕೇಳದ, ನೋಡದ, ಓದದ ಗ್ರಂಥಗಳ್ಯಾವವೂ ಉಳಿದಿಲ್ಲ.


ಈ ಚಿಕ್ಕ ಪ್ರಪಂಚದಲ್ಲಿ ಮಿಲಿಯಗಟ್ಟಲೆ ಹಿಂದಣ ಜೀವ ಜಂತುಗಳನ್ನು ಆಳವಾಗಿ ಅಭ್ಯಸಿಸಿದ್ದಾನೆ. ಹತ್ತು ಸಾವಿರದಿಂದೀಚೆ ಮಾನವ ನಿರ್ಮಿಸಿದ ಎಲ್ಲ ಬಗೆಯ ಸಾಹಿತ್ಯ ಅವನಿಗೆ ಕರತಲಾಮಲಕ -ಅದೂ ತಾಳೆಯ ಗರಿಯದ್ದಾಗಿದ್ದಿರಬಹುದು, ಕಲ್ಲಿನಲ್ಲಿ ಕೆತ್ತಿದ್ದಾಗಿರಬಹುದು, ತಾಮ್ರದಲ್ಲಿ ಕೊರೆದಿದ್ದಾಗಿರಬಹುದು, ಹಾಳೆಯಲ್ಲಿ ಮೂಡಿಸಿದ್ದಾಗಿರಬಹುದು, ಯಾವದೋ ಸರ್ವರಿನಲ್ಲಿ ಹಾಯಾಗಿ ಮಲಗಿದ್ದ ನುಡಿ ತಂತುಗಳಾಗಿರಬಹುದು, ಯಾರದೋ ಮನದಾಳದಲ್ಲಿ, ಮಿದುಳಿನಲ್ಲಿ ಅಮೂರ್ತವಾಗಿ ಕುಳಿತಿರುವ ತತ್ತಿ ಒಡೆದು ಹೊರಬರದ, ತಂಗಾಳಿಗಿನ್ನೂ ಪುಳಕಗೊಳ್ಳದ ಜೀವಿಯ ಭಾವವಾಗಿರಬಹುದು -ಅವನ್ನೆಲ್ಲಾ ಆತ ಖುದ್ದು ಖಾಸಗಿಯಾಗಿ ಅನುಭವಿಸಿ ತನ್ನ ಅಪಾರ ಜಾಣ್ಮೆಯ ಮೂಸೆಯಲ್ಲಿ ನಿಗಿ ನಿಗಿ ಕೆಂಡದಲ್ಲಿ ಕಾಯಿಸಿ ನೋಡಿದ್ದಾನೆ. ಮೈ-ಮನಸುಗಳ ಸಂಕೀರ್ಣ ಆವರಣವನ್ನು ಅನಾವರಣ ಮಾಡಿದ್ದಾನೆ. ಆತ ಶೋಧಿಸದ ಸತ್ಯವೆಂತಹದು? ಕೂಲಂಕಷವಾದ  ಪ್ರಯೋಗವಾದ್ದರಿಂದ ಸುಳ್ಳಾಗಿರುವದು ಅಶಕ್ಯ. ತಾಲಮೂಡ, ಬೈಬಲ್ ಹಿಡಿದು ವೇದ,ಉಪನಿಷತ್ ಒಡಲ ಬಗೆದು , ಪ್ರತಿಯೊಂದು ಧರ್ಮಗ್ರಂಥಗಳ ಒಳಹೊಕ್ಕು, ವೈಜ್ನಾನಿಕ ನಿಯತಕಾಲಿಕೆಗಳನ್ನು ತೂಕ ಮಾಡಿ ನೋಡಿ, ಮನೋವಿಜ್ಞಾನ, ಮನಃಶಾಸ್ತ್ರದ  ಒಳಗಿನರಿಮೆ ಅರಿದು. ಪ್ರಖರ ವೈದ್ಯಕೀಯ ನೋಟಗಳಾಚೆ ಹೊಳಪು ಕಂಗಳಿಂದ ವಿವೇಚಿಸಿ -ಅನೂಚಾನವಾಗಿ ಬಂದ-ನ್ಯಾಯ, ಸಂಪ್ರದಾಯ, ಪದ್ದತಿ, ಸಂಸೃತಿಯ ಅಂತರ್ಗತಗಳನ್ನರಿತಿದ್ದಾನೆ. ನಿರಂಕುಶ ಮೂಢನಂಬಿಕೆ ಅಲ್ಲಗೆಳೆದು ಸತ್ಯವನ್ನು ಸುಳ್ಳಿನ ಕಬಂಧ ಬಾಹುವಿನಿಂದ ಸೆಳೆದು ಬೇರ್ಪಡಿಸಿದ್ದಾನೆ.

ಇತ್ಯಾತ್ಮಕ ನೇತ್ಯಾತ್ಮಕ ವಿಷಯಗಳನ್ನು ಅರಿತು ಚಿತ್ತ, ಧ್ಯೇಯದ ಸಿದ್ಧಿ ಗಳಿಸಿದ್ದಾನೆ. ಮನುಷ್ಯನ ಮೂಲ ದ್ರವ್ಯದ ಧಾತು ಯಾವುದೆಂದು ಅರಿತಿದ್ದಾನೆ.   ಭಿನ್ನ ಅಭಿವ್ಯಕ್ತಿ ಸ್ವರೂಪಗಳ ಅನಿವಾರ್ಯತೆ ಮನಗೊಂಡಿದ್ದಾನೆ. ಮಾನವನ ಎಲ್ಲ ಗುದುಮುರಿ ತರಿದು ಎಸಿದಿದ್ದಾನೆ.  ತತ್ವಶಾಸ್ತ್ರದ ಮೂಲಕ ಬದುಕಿನ ಹಸಿಹಸಿ ಸತ್ಯಗಳನ್ನು, ಅಪರಿಹಾರ್ಯವಾದ ತಥ್ಯಗಳನ್ನು ಅನ್ವೇಷಿಸಿದ್ದಾನೆ. ಆತ್ಮವ್ಯವಸಾಯ ಮಾಡಿ ಕಳೆ ತೆಗೆದು ಹಾಕಿ ಬೆಳೆ ಬೆಳೆದಿದ್ದಾನೆ. ಭ್ರಾಂತಿಯ ಬೇರ ಒಡೆದು ದೇವನನ್ನೊಲಿಸುವ ಅಸಂಖ್ಯ ದಾರಿಗಳನ್ನು ಕಂಡುಕೊಂಡಿದ್ದಾನೆ. ಇಲ್ಲಿಯವೆರೆಗಿನ ಮಾನವ ಪ್ರಗತಿಯಯನ್ನು, ಎಲ್ಲಾ ವಿಕಸನಗಳನ್ನು ಕಡಿದಾದ ಶಿಖರವೆನ್ನುವದಾದರೆ ಆತ ಅದೆಲ್ಲವನ್ನು ಅನಿರ್ವಚನೀಯ ಮೋಡಿಯಿಂದ ಮೆಟ್ಟಿ ನಿಂತು, ಹಳೆಯ ಪಾದಧೂಳಿಗಳೆಲ್ಲವನ್ನು ಮರುಸ್ಪರ್ಶಿಸಿ, ಮರುಸೃಜಿಸಿ – ಕನಿಷ್ಟ ವೇಳೆಯಲ್ಲಿ ಗರಿಷ್ಟವೇಗದಲ್ಲಿ ಬೆಟ್ಟದ ತುಟ್ಟತುದಿ ತಲುಪಿ ಇದೀಗ ಒಂದು ನಿಡಿದಾದ ನಿಸೂರಿನ ಭಾವದಿಂದ ತಲೆ ಎತ್ತಿ ನೋಡಿದ್ದಾನೆ -ಎಲ್ಲಾ ದೊರೆತಾದ ಮೇಲೆ ಬರುವ ನಿತಾಂತವಾದ ಕ್ಷೆಭೆಯಿಂದ.  ಆಗ ಕಾಣಿಸಿದೆ  ಶಿಖರದ ನೆತ್ತಿಯ ಮೇಲೆ ಸುಡು ಸುಡುವ ಸೂರ್ಯ. ಕೊಟ್ಟ ಕೊನೆಯ, ಉಕ್ಕಡದ ಆ ತುತ್ತ ತುದಿಯ ಮೊಣಚು ಕಲ್ಲಿನ ನೆತ್ತಿಯ ಮೇಲೆ ತನ್ನ ಎಡಗಾಲು ಊರಿ ಕೆಳಗೆ ಬಾಗಿ ನೋಡಿದ್ದಾನೆ – ಆ ನೇಸರನಡಿಯಲ್ಲಿ ಕಣ್ಣಿಗೆ ರಾಚುವಂತೆ ಅಗಲಗಲ ಜಗದಗಲ ಲಿಪಿಯಲ್ಲಿ, ಸ್ಪಸ್ಟವಾಗಿ, ನಿಷ್ಕಳಂಕವಾದ, ಯಾವದೇ ಸಂದೇಹಕ್ಕನಿತೂ ಆಸ್ಪದವಿಲ್ಲದಂತೆ ಒಡಮೂಡಿದ ಅಕ್ಷರಗಳಿವು – ‘ಕೃತ್ರಿಮ’.

ನಾವು ಕೊನೆಮೊದಲಿಲ್ಲದಂತೆ ಕಾಣುವ ವರ್ತುಲ ಬೆಟ್ಟದ ಕೊಟ್ಟ ಕೊನೆಯನ್ನು ಅರಿಸುತ್ತ ಕೃತಕ ಕಲ್ಲಿನ ಮೇಲೆ ಕಾಲು ಚಾಚಿ ಆಯಾಸದಿಂದ ಕುಳಿತ್ತಿದ್ದೇವೇನೋ ಅನಿಸುತ್ತದೆ ನನಗೆ. ಪಾವಕ ಕಾಣುವದಕ್ಕಾಗಿ ಶಿಲೆಯ ಹುಡುಕಾಟ, ಕವಿತೆ ಬರೆಯುವದಕ್ಕಾಗಿ ಅನುಭವದ ತಿರುಗಾಟ, ಫೆಸಬುಕ್ಕನ ಗೋಡೆಯ ಮೇಲೆ ಸದ್ಯದ ಪ್ರಾಮುಖ್ಯ ಸಮಾಚಾರ ಅವ್ಯತನಗೊಳಿಸಲು ನೆನೆಪುಗಳ ಪುನರ್ಪರಿಶೀಲನೆ. ಇದೀಗ ತೋರಿಸಬೇಕೆಂದೆ ನಿರ್ಮಿಸುತ್ತಿರುವ ಬ್ರೆಕಿಂಗ ವಾರ್ತೆಯ ತುಂಡುಗಳು. ಸರೀಕರನ್ನು ದಂಗು ಬಡಿಸಲೆಂದೇ ಪ್ರಕಟಿಸುವ ಆವಿಷ್ಕಾರಗಳು, ತಮ್ಮ ಹೊಳಹುಗಳನ್ನು ಬೆಳಗಿಸಲೆಂದೆ ಮಾಡುತ್ತಿರುವ ವೈಜ್ನಾನಿಕ ಸಂಶೋಧನೆ,ಅನ್ವೇಷಣ,  ಗವೇಷಣಗಳು. ಎಲ್ಲರೂ ರೂಪದರ್ಶಿಗಳೆ, ಕಲಾವಿದರೆ, ಸದಾ ಅನುಕರಣೀಯರೆ. ಅಮೂರ್ತವದದ್ದನ್ನು, ಹೇಳಲಾಗದ್ದನ್ನು, ಹೇಳಬಾರದನ್ನು ತಿಳಿ ಹೇಳುವ ಕೈಪಿಡಿಗಳ ರಾಶಿ ರಾಶಿ ಗುಚ್ಚಗಳು. ಎಲ್ಲರಿಗೂ, ಎಲ್ಲವನ್ನೂ ಹಿಡಿದಿಡುವ ಆದಮ್ಯ ಬಯಕೆ. ಅದನ್ನು ಎಲ್ಲರೆದುರಿಗೆ ಬಿಚ್ಚಿಡಬೇಕೆಂಬ ಚಟ, ತನಗೆ ಕಾಣದ್ದು, ತಾ ನೋಡದ್ದು ಅಸತ್ಯವೆಂಬ ಅಖಂಡ ನಂಬುಗೆ ಇದರ ಬುನಾದಿ. ಸಾಮೂಹಿಕ ತಳಮನಸ್ಸಿನಲ್ಲಡಗಿರುವ ಭೀತಿಗೆ ಭಿತ್ತಿಯನ್ನು ಎತ್ತಿ ಕೊಟ್ಟಂತೆ, ಗರಬಡಿದು ತಿನ್ನುವ ಆಳದ ಪಾಪಪ್ರಜ್ಞೆ – ಸ್ವಕೇಂದ್ರಿತ ಅಹಂಕಾರ – ಅದೇ  ಸೃಜನಶೀಲತೆ ಎಂಬ ಅಹಂ. ಇದರ ಆಯಾಮಗಳು ಅನೇಕ, ಪರಿಣಾಮಗಳು ಘನಘೋರ  – ಯಾವದನ್ನೋ ಉಳಿಸಿಕೊಳ್ಳಲು ಹೋಗಿ ಮುಖ್ಯವಾದದ್ದನ್ನೆ ಮರೆತುಬಿಡುವ ಪ್ರವೃತ್ತಿ.

ಆಳ ಅರಿಯುವದಕ್ಕಾಗಿಯೇ ಎಸೆಯುತ್ತಿರುವ ಕಲ್ಲೆಂದ ಮೇಲೆ ತಪ್ಪೆಂದು ಹೇಳುವವ ಮೂರ್ಖ ಶಿಖಾಮಣಿ. ಮೂರು ಲೋಕ ಕಂಡವನ ಭುಜಬಲದ ಪರಾಕ್ರಮ ನೀನಗೇನು ತಿಳಿದಿದೆಯೋ ಎಂಬ ಠೇಂಕಾರ. ಅಬ್ಬರಿಸಿ ಬೊಬ್ಬಿಡುತ್ತಿರುವ ಮಾಧ್ಯಮ, ಮಧ್ಯಮ ಪಾಂಡವನ ಅಪರಾವತಾರವೆ. ಮದುವೆ ಎನ್ನುವದು ಗಂಡು ಹೆಣ್ಣಿನ ನಡುವಿನದೊಂದು ಸಾಂಸ್ಕೃತಿಕ ಆಯಾಮವೆಂದಾದರೆ ಈ LGBT (ಎಲ್ಜಿಬಿಟಿ) ಎಂಬುವದು ತೋರ್ಪಡಿಕೆಯ ಇನ್ನೊಂದು ಮಗ್ಗುಲೇನೋ? ಇವರಿಗಿರುವ ಸಧ್ಯದ ಒಂದೆ ಒಂದು ಎಲ್ಜಿಬಿಲಿಟಿ ಎಂದರೆ ಸಂತಾನೋತ್ಪತ್ತಿ ಮಾಡಲಾಗದ್ದೋ ಏನೋ? ಜನಸಂಖ್ಯೆ ನಿಯಂತ್ರಿಸಲು ಪ್ರಕೃತಿ ಹೇರುತ್ತಿರುವ ನಿರ್ಬಂಧವೇನೋ ಇದು. ಪ್ರಾಯಶ ಅದೇ ಸಧ್ಯದ ಸುದೈವವೋ?

 

‍ಲೇಖಕರು avadhi

15 January, 2014

2 Comments

  1. Vidyashankar Harapanahalli

    “ಜನಸಂಖ್ಯೆ ನಿಯಂತ್ರಿಸಲು ಪ್ರಕೃತಿ ಹೇರುತ್ತಿರುವ ನಿರ್ಬಂಧವೇನೋ ಇದು… ” may be… whatever it is… Live and let live

  2. Sunaath

    ಪ್ರಕೃತಿಗೆ ಸಹಜವಾದದ್ದನ್ನು ಮಾನವ ವಿಕೃತಿಗೆ ಯಾಕೆ ತಿರುಗಿಸುತ್ತಾನೊ, ಅರ್ಥವಾಗದು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading