ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ : ಅಮೀರ್ ಖಾನ್ ಅ೦ತವರು ಪ್ರಚಾರ ಪ್ರಿಯರಾದರೆ…

– ಹರ್ಷಕುಮಾರ್ ಕುಗ್ವೆ   ಹಿರಿಯರಾದ ಗಂಗಾಧರ ಮೊದಲಿಯಾರ್ ಅವರು ಸತ್ಯಮೇವ ಜಯತೆ ಕುರಿತು ಹೀಗೆ ಬರೆದಿರುವುದು ಬೇಸರ ತಂದಿದೆ. ಮುಖ್ಯವಾಗಿ ಕನ್ನಡದ ಲಕ್ಷ್ಮಿ, ಮಾಳವಿಕ ಮತ್ತು ಶಿವರಾಜ್ ಕುಮಾರ್ ನಡೆಸಿದ ಕಾರ್ಯಕ್ರಮಗಳು ಸಮಾಜದ ವ್ಯಕ್ತಿಗಳ ಸಮಸ್ಯೆಗಳಲ್ಲಿ ಕೇವಲ ವ್ಯಕ್ತಿಗತ ನೆಲೆಯಲ್ಲಿ ನೋಡಿದ ಪರಿಣಾಮವಾಗಿ ಆ ಕಾರ್ಯಕ್ರಮಗಳು ಒಂದಷ್ಟು ಟಿ ಆರ್ ಪಿ ಹೆಚ್ಚಿಸಿದವೇ ವಿನಃ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಿದ್ದು ಕಡಿಮೆ. ಆದರೆ ಅಮೀರ್ ಖಾನ್ ಅವರ ಸತ್ಯಮೇವ ಜಯತೆ ವ್ಯಕ್ತಿಗಳನ್ನಿಟ್ಟುಕೊಂಡೇ ಆ ಸಮಸ್ಯೆಯ ಸಾಮಾಜಿಕ ಆಯಾಮಗಳನ್ನು ತಿಳಿಸಿಕೊಡಲು ಯತ್ನಿಸುತ್ತಿದೆ. ನಮಗೆಲ್ಲ ಗೊತ್ತಿರುವ ವಿಷಯಗಳನ್ನೇ ಮನಮುಟ್ಟುವಂತೆ ಹೇಳುತ್ತಿರುವುದು ಇಲ್ಲಿನ ವಿಶೇಷ. ಮಾತ್ರವಲ್ಲ ಈ ಕಾರ್ಯಕ್ರಮ ಸರ್ಕಾರದ ನೀತಿ ನಿರೂಪಣೆಯ ಮೇಲೂ ಪರಿಣಾಮ ಬೀರಿತ್ತಿದೆ ಎಂಬುದನ್ನು ಗಮನಿಸಬೇಕಿ. ಸತ್ಯ ಮೇವ ಜನತೆಯ ಎರಡನೆ ಕಾರ್ಯಕ್ರಮ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾಗಿತ್ತು. ಅಂದು ಈ ಬಗ್ಗೆ ನಮ್ಮ ದೇಶದಲ್ಲಿ ಒಂದೇ ಒಂದು ಕಾನೂನು ಇಲ್ಲದದ್ದರ ಬಗ್ಗೆ ವಿಶೇಷವಾಗಿ ಗಮನ ಸೆಳೆದಿದ್ದರಲ್ಲದೆ ಹಿಂದೂ ಪತ್ರಿಕೆಯ ಅವರ ಅಂಕಣದಲ್ಲಿ ಕೂಡಾ ಬರೆದರು. ಈಗ ನೋಡಿ ಮೊನ್ನೆ ಸಂಸತ್ತು ಈ ಕುರಿತು ಮಸೂದೆಯೊಂದನ್ನು  ಪಾಸು ಮಾಡಿದೆ. ಮೊದಲಿಯಾರರಿಗೆ ಒಂದು ಮಾತು ಹೇಳಬೇಕಿದೆ. ನಮ್ಮ ದೇಶದಲ್ಲಿ ಅಮೀರ್ ಖಾನ್ ಅಂತವರು ಪ್ರಚಾರ ಪ್ರಿಯರಾದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೊಂದಿಲ್ಲ. ಯಾಕೆಂದರೆ ಅದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ.  ]]>

‍ಲೇಖಕರು G

27 May, 2012

6 Comments

  1. ಟಿ.ಕೆ. ದಯಾನಂದ

    ಇದೀಗ ತಾನೆ ಅಮೀರ್ ಖಾನ್ ರೂಪಿಸಿದ “ಸತ್ಯಮೇವ ಜಯತೆ” ನೋಡಿದೆ. ಇಂಡಿಯಾದ ಮೆಡಿಕಲ್ ಸರ್ವೀಸ್ ನ ದಿಗಿಲುಹುಟ್ಟಿಸುವ ಸಂಗತಿಗಳ ಕುರಿತು ಈವಾರದ ಕಂತು ಪ್ರಸಾರವಾಯಿತು. ಖಾಸಗಿ ಆಸ್ಪತ್ರೆಗಳ ಪೈಶಾಚಿಕ ಧನದಾಹಿ ಪ್ರವೃತ್ತಿ, ಕಾಸುಕೀಳುವುದಕ್ಕೇ ಎಂಬಿಬಿಎಸ್ ಓದಿದವರಂತೆ ವರ್ತಿಸುವ ವೈದ್ಯ ಸಮೂಹ, ಇವರ ಬಲಿಪಶುಗಳಾದವರ ಅನುಭವಗಾಥೆಗಳು, ಇಂಡಿಯನ್ ಮೆಡಿಕಲ್ ಕೌನ್ಸಿಲ್ ನ ಭ್ರಷ್ಟತೆ ಎಲ್ಲವನ್ನೂ ಬಿಚ್ಚಿಟ್ಟ ಅಮೀರ್ ಬೆಂಗಳೂರಿನ ಬಡರೈತ ಶಿವಲಿಂಗಯ್ಯನನ್ನೂ ಈ ಕಂತಿನಲ್ಲಿ ಜೊತೆಗಿರಿಸಿಕೊಂಡಿದ್ದರು. ಬೆಳಗ್ಗೆ ವಿಜಯಕರ್ನಾಟಕದಲ್ಲಿ ಅಮೀರ್ ಖಾನ್ ಪ್ರಚಾರಪ್ರಿಯ ಮತ್ತು ಧನಪಿಪಾಸಿನಂತೆ ಚಿತ್ರಿಸಿ ಪ್ರಜ್ಞಾವಂತರಂತಿದ್ದ ಬಿ.ಸುರೇಶರು ಬರೆದ ಲೇಖನ ನೆನಪಾಗಿ ಬಿ. ಸುರೇಶರೇಕೆ ಕಳಕಳಿಯೊಂದನ್ನು ಗುಮಾನಿಯೊಳಗಿಡುತ್ತಿದ್ದಾರೆ ಅನ್ನಿಸಿತು….

  2. ಆನಂದ್

    ವಿಜಯ ಕರ್ನಾಟಕದಲ್ಲಿ ಇಂದು ಬಿ ಸುರೇಶ್ ಅವರು ಬರೆದಿರುವ ಒಂದು ಬರಹ ಪ್ರಕಟವಾಗಿದೆ. ಇದನ್ನು ನೋಡಿದರೆ ಇಡೀ ಬರಹದ ಕಾಳಜಿಯ ಬಗ್ಗೆ ಅನುಮಾನ ಉಂಟಾಗುವಂತಿದೆ. ಶ್ರೀ ಸುರೇಶ್ ಅವರ ಬರಹದ ಮೊನಚಿನ ಗುರಿ ಸತ್ಯಮೇವ ಜಯತೇ ಸರಣಿ ಮತ್ತು ಅದರಂತಹ ಇನ್ನೂ ಅನೇಕ ಜನಪ್ರಿಯನಟರು ನಡೆಸಿಕೊಡುತ್ತಿರುವ “ಪರಭಾಷಾ” ಕಾರ್ಯಕ್ರಮಗಳು. ಇಡೀ ಬರಹವು ಕೇವಲ ಮನರಂಜನೆಗೆ ಸೀಮಿತವಾಗಿಲ್ಲದೆ “ಅರ್ಥಶಾಸ್ತ್ರ”ದ ಬಗ್ಗೆ ಮಾತಾಡುತ್ತಿದೆ. ಸಿನಿಮಾ, ಟಿವಿ, ನಾಟಕಗಳು… ಇವೆಲ್ಲಾ ಕಲೆಯ ಆರಾಧನೆ ಮಾತ್ರವೇ ಆಗಿದ್ದು ಲಾಭದ ಸೋಂಕಿಲ್ಲದೆ ಇರಬೇಕಾದ್ದು ಎನ್ನುವ ಅಭಿಪ್ರಾಯಕ್ಕೆ ಒತ್ತುಕೊಡುವಂತಿದೆ.
    ಮನರಂಜನೆ ಮತ್ತು ವ್ಯವಹಾರ!
    ವಾಸ್ತವವೇನೆಂದರೆ ಯಾವುದೇ ತೆರನಾದ ಮನರಂಜನೆಯೆನ್ನುವುದೂ ಕೂಡಾ ಇಂದು ಒಂದು ವಾಣಿಜ್ಯ ವಹಿವಾಟೇ ಆಗಿದೆ, ಹಿಂದೆ ರಾಜರ ಕಾಲದಲ್ಲಿ ನೃತ್ಯ ನಾಟಕ ಮಾಡುತ್ತಿದ್ದಾಗ ಅತ್ಯಂತ ಶಾಸ್ತ್ರೀಯವೂ ಸಾಂಪ್ರದಾಯಿಕವಾದದ್ದೂ ಆಗಿದ್ದ ಆ ಕಲೆಗಳ ಪ್ರದರ್ಶನವನ್ನು ರಾಜರು ಆಸ್ಥಾನದಲ್ಲಿ, ಜನರಿಗಾಗಿ, ಅತಿಥಿಗಳಿಗಾಗಿ ಏರ್ಪಡಿಸುತ್ತಿದ್ದ ಕಾಲದಲ್ಲಿ ಜನರು ಹಣ ತೆತ್ತು ಅವನ್ನು ನೋಡುತ್ತಿರಲಿಲ್ಲವಾದರೂ ರಾಜರ ಮೆಚ್ಚುಗೆಯ, ಉಡುಗೊರೆಗಳನ್ನು ನೀಡುವ ವ್ಯವಸ್ಥೆ ಇತ್ತು. ಜನಪದ ಹಾಡುಗಳು, ಯಕ್ಷಗಾನ ಮೊದಲಾದ ಕಲೆಗಳು ಜನರಲ್ಲಿನ ಕಲಾಭಿವ್ಯಕ್ತಿಯನ್ನು ತೋರಿಸುವ ಉದ್ದೇಶದಿಂದಲೇ ಇದ್ದಿರಬಹುದಾದರೂ ಕಳೆದ ಶತಮಾನದಿಂದೀಚೆಗೆ ಉದ್ಯಮವೆಂದು ಆರಂಭವಾಗಿದ್ದನ್ನು ತಳ್ಳಿಹಾಕಲಾಗದು. ಇನ್ನು ಕೆಲವು ಹವ್ಯಾಸಿ ನಾಟಕಗಳು ಮತ್ತು ಬೀದಿನಾಟಕಗಂತಹವುಗಳನ್ನು ನಾವು ಕಲೆಗಾಗಿ ನಡೆಸುತ್ತಿರುವುದು ಎಂದು ಒಪ್ಪಬಹುದೇನೋ. (ಅವಕ್ಕೂ ಸಾಧಿಸಬೇಕಾದ ಒಂದು ಉದ್ದೇಶವಿರುವುದು ಇಂದು ಸಾಮಾನ್ಯ). ಯಾವಾಗ ಜನರನ್ನು ಹಣ ಕೊಟ್ಟು ನಾಟಕ ನೋಡಿ, ಸಿನಿಮಾ ನೋಡಿ ಎನ್ನುವುದು ಶುರುವಾಯಿತೋ ಅಲ್ಲಿಗೆ ಚಿತ್ರೋದ್ಯಮ ಪಕ್ಕಾ ವಹಿವಾಟೇ ಆಯಿತು. ಅಂದರೆ ಮೂಲತಃ ಇದೂ ಒಂದು ಸೋಪಿನಂಗಡಿಯಂತಹ ಬಿಸಿನೆಸ್ಸೇ, ಆದರೆ ಇಲ್ಲಿನ ಸರಕು ಮಾತ್ರಾ ಕಲೆಯೆನ್ನುವುದು ಆಗಿದೆ ಎಂದರೆ ಕೆಲವರಿಗೆ ನೋವಾಗಬಹುದು. ಆದರೆ ಇದೇ ವಾಸ್ತವ. ಯಾವ ಸಿನಿಮಾ ನಿರ್ಮಾಪಕನೂ ಹಾಕಿದ ಬಂಡವಾಳದ ಮೇಲೆ ಎಷ್ಟು ಬರುತ್ತೆನ್ನುವ ಲೆಕ್ಕ ಇಡದೆ ಸಿನಿಮಾ ಮಾಡಲ್ಲ. ಯಾವ ನಟರೂ ಕಲೆಗಾಗಿ ಪುಗಸಟ್ಟೆ ಅಭಿನಯಿಸಲ್ಲ. ಡಾ. ಬಾಲಮುರಳಿಕೃಷ್ಣರೂ ಕೂಡಾ ಹಣ ಪಡೆಯದೇ ಸಂಗೀತ ಕಛೇರಿ ಕೊಡಲು ಬರುವುದಿಲ್ಲ! ಇಷ್ಟಕ್ಕೂ ಸಿನಿಮಾ ನೋಡುಗನನ್ನು ಗ್ರಾಹಕ ಅಲ್ಲಾ ಎನ್ನೋ ಜನರು ತಮ್ಮ ಸಿನಿಮಾನ ಪುಗಸಟ್ಟೆ ತೋರಿಸಲಿ, ಚಿತ್ರಮಂದಿರದ ಹೊರಗೆ ಕಾಣಿಕೆ ಡಬ್ಬ ಇಟ್ಟು ಮೆಚ್ಚುಗೆಯಾದವರು ಹುಂಡೀಗೆ ದುಡ್ಡು ಹಾಕಲಿ ಎನ್ನಲಿ ನೋಡೋಣ. ಇವರಿಗೂ “ನಾನು ನನ್ನ ಕನಸು” ಎನ್ನುವ ಸಿನಿಮಾ ದುಡ್ಡು ಮಾಡದಿದ್ದರೆ ನೋವೇ ಆಗೋದು… ಇದನ್ನು ಒಪ್ಪಿಕೊಳ್ಳೋಕೆ ಸುರೇಶ್ ಅಣ್ಣಯ್ಯನವರಿಗೆ ತೆರೆದ ಮನಸ್ಸು ಇರಬೇಕಷ್ಟೇ!
    ಕಲಾವಿದ ಮತ್ತು ಪಾತ್ರ!
    ಯಾವುದೇ ಚಿತ್ರವಿರಲಿ, ಧಾರಾವಾಹಿಯಾಗಿರಲಿ ಅದರಲ್ಲಿ ಪಾತ್ರವಹಿಸುವವರು ಪಾತ್ರದಂತೆಯೇ ಇರಬೇಕೆನ್ನುವ ಮನಸ್ಥಿತಿ ಎಷ್ಟು ಸರಿ? ಅವರೂ ಸಾಮಾನ್ಯ ಮನುಷ್ಯರೇ, ಎಲ್ಲಾ ಮನುಷ್ಯರಿಗೆ ಇರುವ/ ಇರಬಹುದಾದ ಸಹಜವಾದ ದೌರ್ಬಲ್ಯಗಳಿಂದ ಅವರೇನೂ ಹೊರತಲ್ಲ. ಹೀಗಿದ್ದಾಗ ಅಮೀರ್ ಖಾನನ ಮನೆಯಲ್ಲಿ ಹೀಗಾಯ್ತು ಹಾಗಾಗಿ ಅವನಿಗೆ ಸತ್ಯಮೇವ ಜನ್ಯೆತೇ ಮಾಡೋ ಹಕ್ಕಿಲ್ಲ ಎನ್ನುವಂಥಾ ಅನಿಸಿಕೆ ಇಟ್ಟುಕೊಳ್ಳೋದು ಸರಿಯೇ? ಇಲ್ಲಿ ಅಮೀರ್‌ಖಾನ್ ನಡೆಸುತ್ತಿರುವ ಕಾರ್ಯಕ್ರಮ ನಡೆಸಲು ಅಮೀರ್‌ಖಾನ್‌ಗೆ ಎಷ್ಟು ಅರ್ಹತೆ ಇದೆ? ಅವನ ವೈಯುಕ್ತಿಕ ನೈತಿಕತೆ ಎಷ್ಟಿದೆ? ಎನ್ನುವುದನ್ನೆಲ್ಲಾ ಅಳೆಯಬೇಕೆ? ಹೀಗೆ ಅಳೆದರೂ ಪರ್ವಾಗಿಲ್ಲಾ. ಸತ್ಯಮೇವ ಜಯತೇಯನ್ನು ಹಣಿಯುವ ಭರದಲ್ಲಿ ನಮ್ಮಕ್ಕ ಮಾಳವಿಕಾ ಮಾಡಿರೋದು ಇಲ್ವಾ? ಶಿವಣ್ಣಾ ಮಾಡಿರೋದು ಇಲ್ವಾ? ಕನ್ನಡದಲ್ಲೇ ಇದನ್ನೆಲ್ಲಾ ಮಾಡಿಲ್ವಾ? ಎನ್ನೋ ಮಾತು ಸರಿಯೇ? ಇವನ್ನೆಲ್ಲಾ ಜನರ ಮುಂದೆ ಇಟ್ಟಾಗಿದೆಯಲ್ವಾ? ಜನ ಇವುಗಳನ್ನು ಒಪ್ಪಿದ್ದೋ ದೂರತಳ್ಳಿದ್ದೋ ಕೂಡಾ ಆಗಿದೆಯಲ್ವಾ? ಇನ್ನೂ ಹತ್ತು ಇಂಥಾ ಕಾರ್ಯಕ್ರಮಾ ತೆಗೀರಿ. ಯಾರು ಬೇಡಾ ಅಂದ್ರು? ಕನ್ನಡದಲ್ಲಿ ಇವರು ಮಾಡಿದ್ದ ಕಾರಣಕ್ಕೆ ಸತ್ಯಮೇವಜಯತೇ ನೋಡಬಾರದಾ? ಅಮೀರ್‌ಖಾ‍ನ್‌ನ ಮೆಚ್ಚಬಾರದಾ? ಕಲಾವಿದ ಪಾತ್ರವಾಗಿರುವಾಗಲೇ ಬೇರೆ, ನಿಜ ಜೀವನದಲ್ಲೇ ಬೇರೆ ಎನ್ನುವ ಸರಳ ಸತ್ಯ ಅರಿಯದಿದ್ದರೆ ಹೇಗೇ?
    ಪರಭಾಷೆಯದು ಮಾತ್ರಾ ಸೋಗಿನದ್ದೇ?
    ನಿಜವಾಗ್ಲೂ ಸುರೇಶರ ಮಾತುಗಳ ನಿಜಾಯಿತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಜನಪ್ರಿಯತೆ ಹೊಂದಿರುವವರಿಗೆ ಸಾಮಾಜಿಕ ಕಳಕಳಿ ಇರುವುದಿಲ್ಲ ಎನ್ನುವ ದನಿ ಒಂದೆಡೆ ಇದ್ದರೆ ಮತ್ತೊಂದೆಡೆ ಶಿವರಾಜ್ ಕುಮಾರ್ ಮತ್ತು ಮಾಳವಿಕ ಅವರ ಕಾರ್ಯಕ್ರಮಗಳನ್ನು ಸಾಮಾಜಿಕ ಕಳಕಳಿಯ ಒಳ್ಳೆಯ ಕಾರ್ಯಕ್ರಮ ಎನ್ನುವಂತೆ ಬಿಂಬಿಸಲಾಗಿದೆ. ನಾನೇನು ನಮ್ಮವರ ಕಾರ್ಯಕ್ರಮಕ್ಕೆ ಸಾಮಾಜಿಕ ಕಳಕಳಿ ಇರಲಿಲ್ಲ ಎನ್ನುತ್ತಿಲ್ಲ. ನಮ್ಮವರಲ್ಲದವರಿಗೆ ಅಂತಹ ಕಳಕಳಿ ಇಲ್ಲಾ ಎನ್ನುವ ಆರೋಪ ಯಾಕೆ ಎನ್ನಿಸುತ್ತಿದೆ..ಅಷ್ಟೇ. ಒಂದೆಡೆ ಸುರೇಶರು ಹೀಗೆ ಬರೆದಿದ್ದಾರೆ “’ಕೌನ್ ಬನೇಗಾ ಕರೊಡ್‌ಪತಿ’ಯಲ್ಲಿ ಕಣ್ಣೀರು ಹಾಕುವ ದೃಶ್ಯಗಳು ಸೇರಿಕೊಳ್ಳುವುದು ಇಂಥ ಸಂದರ್ಭಗಳಲ್ಲಿ. ‘ಅರೆ! ಕ್ವಿಜ್‌ನಲ್ಲಿ ಕಣ್ಣೀರೇಕೆ?’ ಎಂದರೆ ‘ಕೇವಲ ಪ್ರಶ್ನೋತ್ತರದ ಏಕತಾನತೆಯನ್ನು ತಪ್ಪಿಸಲು ದೃಶ್ಯಗಳನ್ನು ನಾಟಕೀಯಗೊಳಿಸಲಾಯಿತು’ ಎಂಬ ರೆಡಿಮೇಡ್ ಉತ್ತರವಿರುತ್ತದೆ. ‘ಬದುಕು ಜಟಕಾ ಬಂಡಿ’, ‘ಇದು ಕತೆಯಲ್ಲ ಜೀವನ’ದಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ನೋಡುಗರೇ ಗಾಬರಿಯಾಗುವಂತೆ ಜಗಳ ಆಡಿಕೊಳ್ಳಲು ಆರಂಭಿಸಿದ್ದೂ ರೇಟಿಂಗ್ ಪಡೆವ ಕಸರತ್ತೇ!” ಎಂದು. ಇವರು ಬಳಸಿರುವ ಭಾಷೆಯನ್ನು ಗಮನಿಸಿ ನೋಡಿ. ಪರಭಾಷಿಕರದ್ದಾದರೆ “ನಾಟಕೀಯಗೊಳಿಸಲಾಯಿತು” ಎನ್ನುತ್ತಾರೆ, ಆದರೆ ಇಲ್ಲಿ ಚಪ್‍ಚಪ್ಪಲಿಯಲ್ಲಿ ಹೊಡೆದಾಡಿಸಲಾಯಿತು ಅನ್ನಲ್ಲಾ…ಅವರೇ ಹೊಡೆದಾಡಿಕೊಂಡರು ಎನ್ನುವ ಅರ್ಥ ಬರುವಂತೆ “ಜಗಳ ಆಡಿಕೊಳ್ಳಲು ಆರಂಭಿಸಿದ್ದು” ಎಂದು ಬರೀತಾರೆ!!
    “ಅಮೀರ್‌ಖಾನ್ ಎಂಬಾತ ತಾನು ಪಡೆಯುವ ಹಣಕ್ಕಾಗಿ ‘ಕೋಕಾಕೋಲ ಕೊಳ್ಳಿ’, ‘ಆ ಗಡಿಯಾರ ಕೊಳ್ಳಿ’, ‘ಈ ಬಟ್ಟೆ ಹಾಕಿಕೊಳ್ಳಿ’ ಎಂದು ಹೇಳುತ್ತಲೇ ಸಮಾಜಮುಖಿ ಮಾತುಗಳನ್ನು ಸಹ ಹೇಳುತ್ತಾ ಸಾಮಾನ್ಯ ಜನರಲ್ಲಿ ಗೊಂದಲಗಳನ್ನು ಮಾತ್ರ ಸೃಷ್ಟಿಸುತ್ತಾನೆ. ಈ ಸೋಗಲಾಡಿತನಗಳನ್ನು ನಮ್ಮ ನಾಡಿನ ಜನಸಾಮಾನ್ಯರು ಎಚ್ಚರಿಕೆಯಿಂದ ಸ್ವೀಕರಿಸಬೇಕಷ್ಟೆ.” ಹೀಗೆನ್ನುವ ಸುರೇಶರು ಯಾರ ಕಾರ್ಯಕ್ರಮಗಳನ್ನು ಪ್ರಾಮಾಣಿಕ ಪ್ರಯತ್ನ ಎನ್ನುತ್ತಿದ್ದಾರೋ ಅವರುಗಳು ನಿಜ ಜೀವನದಲ್ಲಿ ಹೇಗಿದ್ದಾರೆ? ಸಮಾಜಕ್ಕೆ ಎಂತಹ ಸಂದೇಶಗಳನ್ನು ತಮ್ಮ ಪಾತ್ರಗಳ ಮೂಲಕ ನೀಡಿದ್ದಾರೆ? ಎಂತೆಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ? ಯಾವ ರೀತಿಯಲ್ಲಿ ಕಂಡವರ ಮನೆಯ ನೋವನ್ನು/ ಜಗಳವನ್ನು ನೇರ ಕಾರ್ಯಕ್ರಮದಂತೆ ಮಾಡಿ ಮಾನ ಹರಾಜು ಹಾಕಿದ್ದಾರೆ ಮತ್ತು ಆ ಮೂಲಕ ಯಾವ ಅನಾರೋಗ್ಯಕರ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದೆಲ್ಲಾ ಮಾತನ್ನಾಡಬೇಕಿತ್ತು.
    ಇಡೀ ಲೇಖನದ ಸಾರ ಅನಿಷ್ಟಕ್ಕೆಲ್ಲಾ ಶನೀಶ್ವರನನ್ನು ಹೊಣೆ ಮಾಡುವ ಪ್ರಯತ್ನದಂತೆ ಕಂಡರೆ ಅಚ್ಚರಿಯಿಲ್ಲ! ಆದರೂ ಆಳದಲ್ಲಿ ಅನ್ನಿಸಿದ್ದು ಇವರಿಗೆ ಸತ್ಯಮೇವ ಜಯತೇ ಕಾರ್ಯಕ್ರಮದ ಜನಪ್ರಿಯತೆಯನ್ನು ಹಣಿಯುವುದು ಬೇಕಾಗಿದೆಯೇನೋ ಎನ್ನಿಸುತ್ತದೆ,. ಇಲ್ಲದಿದ್ದರೆ ಬರಹದ ಸಂದರ್ಭ ಮತ್ತು ಸಾರಗಳು ಬೇರೆಯೇ ಆಗಿರುತ್ತಿದ್ದವು.

  3. jagadishkoppa

    very good analysis

  4. Indrakumar HB

    ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಅಮೀರ್ ಖಾನ್ ವ್ಯಕ್ತಿತ್ವ ದಿನೇ ದಿನೇ ಹೊಳೆಯುತ್ತಿದೆ. ಪೂರ್ವಗ್ರಹ ಪೀಡಿತರಾಗಿ ಮಾತನಾಡುವುದು ಸಮಾಜವಾಣಿಗಳಾದ ನಿರ್ದೇಶಕರಿಗೆ, ಹಿರಿಯ ನಟರಿಗೆ ಶೋಭೆ ತರುವುದಿಲ್ಲ. ಜನ, ಅಭಿಮಾನಿಗಳು ಜಾಗೃತರಾಗಿದ್ದಾರೆ.
    ಎಲ್ಲರಿಗೂ ಒಳ್ಳೆಯದಾಗಲಿ.
    ಇಂದ್ರಕುಮಾರ್ ಎಚ್.ಬಿ.

  5. Deepti

    Satya yavvtu Kahine…..
    SunnyS (hubli)

  6. bhuvaneshwari

    ಕಾಳಜಿ, ಕಳಕಳಿ ಮತ್ತು ಅಂಥದ್ದೊಂದು ದೊಡ್ಡ ಪ್ರಯತ್ನಕ್ಕೆ ಭೇಷ್ ಎನ್ನಬೇಕು. ನಮ್ಮ ತಾಂತ್ರಿಕತೆ, ಸಂಘಟನಾಶಕ್ತಿ, ದೂರಾಲೋಚನೆ ಸೇರಿದಂತೆ ಯಾವುದೇ ಇತಿಮಿತಿಗಳಿದ್ದರೂ ಮುಕ್ತವಾಗಿ ಒಪ್ಪಿಕೊಂಡು `ನಮಗಾಗದ್ದನ್ನು ಬೇರೆಯವರಾದರೂ ಮಾಡಿದ್ದಾರಲ್ಲ’ ಎಂದು ಸಮಾಧಾನ ಪಡಬೇಕು, ತನ್ಮೂಲಕ ತಮ್ಮ ಕೈಲಾದ ಕಾಣ್ಕೆ ಕೊಡಬೇಕು. ಅದು ಬಿಟ್ಟು….ಕೈಲಾಗದವನು ಮೈ…ಎಂಬಂಥಾಗಬಾರದು.
    ಸಾಮಾಜಿಕ ಕಳಕಳಿಯ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದು `ಸತ್ಯ ಮೇವ ಜಯತೆ’. ಈ ಸತ್ಯವನ್ನು ತತ್ಕಾಲಕ್ಕಾದರೂ ಯಾಕೆ ಒಪ್ಪಿಕೊಳ್ಳಬಾರದು ನಮ್ಮ ಸೋ ಕಾಲ್ಡ್ `ಪ್ರಚಾರ’ದಲ್ಲಿರುವ ಬುದ್ಧಿಜೀವಿಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading