ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಮೋಹನ್ ಕಾಲಂ : ಅವರು ಮಾನವೀಯತೆಯ ಬೆಳಕಿಗಾಗಿ ಹುಡುಕುತ್ತಾ ಹೋದರು

ಜಿ ಎನ್ ಮೋಹನ್

ಮೊನ್ನೆ ಎಲ್ಲರೂ ಒಂದೇ ಕಡೆ ಸಿಕ್ಕಿಬಿಟ್ಟರು. ಅದೂ ಲಾಲ್ ಬಾಗ್ ನಲ್ಲಿ. ಗಾಂಧಿ. ಅಂಬೇಡ್ಕರ್, ಬಸವ, ಬುದ್ಧ, ಕೈವಾರ ತಾತಯ್ಯ, ಕನಕ, ಪುರಂದರ, ಮಾದಾರಿ ಮಾದಯ್ಯ, ಏಕಲವ್ಯ, ಗುಣಾಡ್ಯ… ಹೀಗೆ. ಅವರ ಕೈ ಕುಲುಕಿದ್ದೂ ಆಯ್ತು. ನಾನೊಬ್ಬನೇ ಅಲ್ಲ, ಸಾವಿರಾರು ಜನ ಈ ಎಲ್ಲರೊಡನೆ ಮುಖಾಮುಖಿಯಾದರು. ಪ್ರೀತಿಯಿಂದ ಕೈ ಹಿಡಿದರು.

ವಾರ್ತಾಇಲಾಖೆಯ ನಿರ್ದೇಶಕ, ಗೆಳೆಯ ಎನ್ ಆರ್ ವಿಶುಕುಮಾರ್ ನನಗೆ ಫೋನ್ ಮಾಡಿದ್ದು ಸುಮಾರು ವರ್ಷಗಳ ಹಿಂದೆ. ದನಿಯಲ್ಲಿ ಉತ್ಸಾಹದ ಚಿಲುಮೆಯೇ ಇತ್ತು. ’ವಿಷಯ ಏನು’ ಎಂದೆ. ’ಮನುಷ್ಯತ್ವದ ಹುಡುಕಾಟದಲ್ಲಿದ್ದೇನೆ…’ ಎಂದ. ವಿಶುಕುಮಾರ್ ಬರೆದ ಸಾಕಷ್ಟು ಕವಿತೆಗಳನ್ನು ಓದಿದ್ದ ನಾನು, ಕವಿಮನಸ್ಸಿಗೆ ಸ್ಪೂರ್ತಿ ಬಂದಿದೆ ಎಂದುಕೊಂಡು ಸುಮ್ಮನಾಗಿದ್ದೆ. ಆದರೆ ಆತ ಖಂಡಿತಾ ಮನುಷ್ಯತ್ವದ ಹುಡುಕಾಟದಲ್ಲಿದ್ದ ಹಾಗು ಆ ನಿಟ್ಟಿನಲ್ಲಿ ಸಾಕಷ್ಟು ದೂರ ಪಯಣ ನಡೆಸಿದ್ದ ಎನ್ನುವುದು ಗೊತ್ತಾದದ್ದು ಲಾಲ್ ಭಾಗ್ ನಲ್ಲಿ ಆ ಇಳಿಸಂಜೆಯಲ್ಲಿ ಕೆಂಪೇಗೌಡ ಗೋಪುರದ ಬಳಿ ಆ ಬಂಡೆಯ ಮೇಲೆ ಕುಳಿತಾಗಲೇ. ’ಮನುಷ್ಯ ಜಾತಿ ತಾನೊಂದೆ ವಲಂ’ ಧ್ವನಿ ಬೆಳಕು ಕಾರ್ಯಕ್ರಮ ಕಣ್ಣೆದಿರು ಬಿಚ್ಚಿಕೊಳ್ಳುತ್ತಾ ಹೋದಂತೆ ನಾನು ಮೂಕನಾದೆ. ’ನೀ ಯಾರೋ ಎಂತೋ ಅಂತೂ ಪೋಣಿಸಿತು ಕಾಣದಾ ತಂತು…’ ಎಂದು ಕವಿ ಕಂಬಾರರು ಬರೆದಿದ್ದರಲ್ಲ ಥೇಟ್ ಹಾಗೆಯೇ ವಿಶುಕುಮಾರ್ ಮನುಷ್ಯತ್ವದ ಹುಡುಕಾಟದಲ್ಲಿ ಹೆಜ್ಜೆ ಹಾಕಿದ ಎಲ್ಲರ ಕಥೆಗಳನ್ನೂ ಪೂಣಿಸುತ್ತಾ ಹೋಗಿದ್ದ. ’ಮನುಜ ಮತ, ವಿಶ್ವ ಪಥ’ಕ್ಕೆ ದಿಕ್ಸೂಚಿಯಾಗಿ ನಿಂತಿದ್ದು ವಾರ್ತಾ ಇಲಾಖೆಯ ’ಮನುಷ್ಯ ಜಾತಿ ತಾನೊಂದೆ ವಲಂ’ ರೂಪಕ.
’ಈ ರೂಪಕ ’ಮಲೆಗಳಲ್ಲಿ ಮದುಮಗಳು’ ನಾಟಕಕ್ಕೆ ಬೀಜ ಬಿತ್ತಿತು’ ಎಂದ ಸಿ ಬಸವಲಿಂಗಯ್ಯನ ಕಣ್ಣುಗಳಲ್ಲಿ ಒಂದು ಸಂಭ್ರಮವಿತ್ತು. ವಾರ್ತಾ ಇಲಾಖೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಇರುವ ಅನುದಾನವನ್ನು ಅರ್ಥಪೂರ್ಣವಾಗಿ ವಿನಿಯೋಗಿಸಬೇಕು ಎಂದು ಯೋಚಿಸಿದಾಗ ಹೊರಹೊಮ್ಮಿದ್ದು ಈ ರೂಪಕದ ರೂಪುರೇಷೆ. ’ನೇಗಿಲು ಮನೆಯ ಆಸರೆ ಖಂಡಿತಾ ಬೇಕು, ಆದರೆ ಅದಕ್ಕಿಂತ ದೊಡ್ಡದು ಆತ್ಮಸ್ಥೈರ್ಯ. ಹಾಗಾಗಿ ಶತಮಾನಗಳಿಂದ ತುಳಿತಕ್ಕೆ ಒಳಗಾದವರಿಗೆ ಆತ್ಮಸ್ಥೈರ್ಯ ನೀಡುವ ಏನನ್ನಾದರೂ ಕೊಡಬೇಕು ಅನಿಸಿದಾಗ ಈ ಯೋಜನೆಗೆ ಬಂದು ನಿಂತೆ’ ಎಂದು ವಿಶುಕುಮಾರ್ ಬಣ್ಣಿಸುತ್ತಾ ಹೋದ.

ಸು ರಂ ಎಕ್ಕುಂಡಿಯವರ ಜೊತೆ ಮಂಗಳೂರಿನ ಕಡಲ ತೀರದಲಿ ಮಾತನಾಡುತ್ತಾ ಕುಳಿತಿದ್ದೆ. ಅಲೆಗಳ ಆ ಅಬ್ಬರದ ನಡುವೆ ಮೆಲುದನಿಯ ಎಕ್ಕುಂಡಿ ಅದೂ ಇದು ಮಾತನಾಡುತ್ತಾ ’ಕೆಂಡದ ಮೇಲೆ ನಡೆದವರಿಗಷ್ಟೇ ಕೆಂಡದ ಬಿಸಿಯ ಅನುಭವ ಇರಲು ಸಾಧ್ಯ ಅಲ್ಲವಾ…’ ಎಂದರು. ಏಕೋ ಏನೋ ಗೊತ್ತಿಲ್ಲ, ಒಮ್ಮೆ ಬೆಚ್ಚಿಬಿದ್ದೆ, ಅಲೆಗಳು ಆರ್ಭಟಿಸಿ ದಡಕ್ಕೆ ಅಪ್ಪಳಿಸುತ್ತಿದೆ ಎನಿಸಿದ್ದು ನಿಜವೋ ಸುಳ್ಳೋ ಗೊತ್ತಾಗಲಿಲ್ಲ.
’ಮನುಷ್ಯ ಜಾತಿ ತಾನೊಂದೆ ವಲಂ’ ನೋಡುತ್ತಾ ಕುಳಿತಾಗ ಯಾಕೋ ಎಕ್ಕುಂಡಿ ಮತ್ತೆ ಮತ್ತೆ ನೆನಪಾದರು. ಸುಮಾರು ೧೫೦ ಜನರನ್ನು ಒಳಗೊಂಡು, ಎರಡು ಗಂಟೆಗಳಿಗೂ ಹೆಚ್ಚು ಕಾಲ ಹರಡಿಹೋಗಿದ್ದ ರಂಗ ರೂಪಕದಲ್ಲಿದ್ದಿದ್ದು ನೋವುಂಡು ಬಂದವರೇ. ಅವರು ಯಾರನ್ನೂ ಬೊಟ್ಟುಮಾಡಿ ದೂರು ಹಾಕುತ್ತಿರಲಿಲ್ಲ, ಬದಲಿಗೆ ಎರಡು ಸಾವಿರ ವರ್ಷಗಳಲ್ಲಿ ಕೆಂಡದ ಮೇಲೆ ನಡೆದವರ ಕಥೆಗಳನ್ನು ಹೇಳುತ್ತಿದ್ದರು.

ಆತನೊಬ್ಬನಿದ್ದ, ಗುಣಾಡ್ಯ. ಸಾಹಿತ್ಯ ರಚಿಸಿದ ಎನ್ನುವ ಕಾರಣಕ್ಕೆ ’ಶಬ್ಧಗಳು ಮಲಿನವಾಗಿ ಹೋದವು’ ಎಂದು ಊರು ಬೊಬ್ಬಿಟ್ಟಿತು. ರಾಜನ ಆಸ್ಥಾನದಲ್ಲಿ ಠರಾವು ಕೂಡ ಆಗಿಹೋಯಿತು, ’ಹೀನ ಕುಲದವನ ಕೈಯಲ್ಲಿ ಅಕ್ಷರವೇ…? ಕಾಡಿಗೆ ತಳ್ಳಿ’ ಎಂದು. ಹುಲಿಸಿಂಹಗಳು ನೆತ್ತರನ್ನು ಬೇಡುತ್ತವೆಯೇ ಹೊರತು ಕಥೆಗಳನ್ನಲ್ಲ ಎನ್ನುವುದು ಎಲ್ಲರ ಭಾವನೆಯಾಗಿತ್ತು. ಆದರೆ ಗುಣಾಢ್ಯ ಕಾಡಿನಲ್ಲೂ ಕಥೆ ಹೇಳುತ್ತಾ ಹೋದ. ಹಕ್ಕಿಗಳು ಹಾರುವುದನ್ನು ನಿಲ್ಲಿಸಿದವು, ಹುಲಿಸಿಂಹ ಬೇಟೆಯಾಡುವುದನ್ನು ಮರೆತವು. ಕಾಡಿನ ಎಲೆಗಳ ಅಲುಗಾಟ ನಿಂತಿತು. ಗುಣಾಢ್ಯನ ಕಥೆ ಹೇಳುವ ದನಿ ಮಾತ್ರ ಕೇಳುತ್ತಿತ್ತು.
’ವೋಲ್ಗಾ-ಗಂಗಾ’ ನಾಟಕ ಬರೆದುಕೊಡು ಅಂತ ಬಸವಲಿಂಗಯ್ಯ ನನ್ನ ಬೆನ್ನು ಹತ್ತಿದ್ದ. ಅಷ್ಟು ವಿಸ್ತಾರವಾದ ಹರಹಿನ ಚರಿತ್ರೆಯನ್ನು ನಾನು ಕತ್ತಲೆ ಬೆಳಕಿಗೆ ಹೊಂದಿಸಲು ಸಾಧ್ಯವೆ ಎಂದು ಸುಮ್ಮನಾಗಿಬಿಟ್ಟಿದ್ದೆ. ಈಗ ಬಸೂ ಅದೇ ವಿಷಯ ಎತ್ತಿದ್ದ. ’ನಾನು ರಾಹುಲ ಸಾಂಕೃತ್ಯಾಯನರನ್ನು ಓದಿ ಬೆಳೆದವನು. ವೋಲ್ಗಾ ಗಂಗಾ ಬಿಚ್ಚಿಡುವ ಕಥಾನಕಗಳಿವೆಯಲ್ಲಾ, ಅದನ್ನೇ ನಾನು ನನ್ನ ಕೃತಿಗಳ ಆಶಯವಾಗಿರಿಸಿದ್ದೇನೆ. ಭೂಮಿ ಹುಟ್ಟಿತು, ನಂತರ ವರ್ಗ, ಜಾತಿಗಳು… ನಂತರ ಆದದ್ದೇನು ಎನ್ನುವ ನಿಟ್ಟುಸಿರು ಈ ರೂಪಕದ ಒಡಲಲ್ಲಿದೆ’ ಎಂದ.
ಲಾಲ್ ಭಾಗ್ ನ ಬಂಡೆಯೇ ಪ್ರೇಕ್ಷಕರ ಗ್ಯಾಲರಿಯಾಗಿ ಬದಲಾಗಿ ಹೋಗಿತ್ತು. ಶಶಿಧರ ಆಡಪ ಬೃಹತ್ ರಂಗವನ್ನು ನಿರ್ಮಿಸಿಕೊಟ್ಟಿದ್ದರು. ರಂಗದ ಆಳ, ಎತ್ತರ ಎಲ್ಲವನ್ನೂ ಬಸೂ ಚೆನ್ನಾಗಿ ಬಳಸಿಕೊಂಡಿದ್ದ. ವೇದಿಕೆಯ ಮೇಲೆ ಇದ್ದಕ್ಕಿದ್ದಂತೆ ರೈಲು ಬಂತು, ಒಂದು ಕ್ಷಣ ನಿಂತಿರಬಹುದು ಆಷ್ಟೆ. ದಿಢೀರನೆ ಒಬ್ಬ ಯುವಕನನ್ನು ಎತ್ತಿ ಹೊರಗೆಸೆದರು. ಹಿಂದೆಯೇ ಆತನ ಪೆಟ್ಟಿಗೆಯೂ ಬಂದು ಬಿತ್ತು. ಅತ ಎದ್ದು ನಿಂತ, ಕೇವಲ ಆತ ಎದ್ದು ನಿಲ್ಲಲಿಲ್ಲ, ಮುಂದೆ ಹಲವಾರು ದಶಕಗಳ ಕಾಲ ದೇಶಕ್ಕೆ ದೇಶವೇ ಎದ್ದು ನಿಲ್ಲುವಂತೆ ಮಾಡಿದ. ಆತ ಗಾಂಧಿ. ’ಅಯ್ಯೋ ಗಾಂಧಿಗೆ ಹೀಗಾಯಿತೇ….’ ಎಂದು ನಿಟ್ಟುಸಿರಿಡುವ ವೇಳೆಗೇ ರಂಗದ ಮೇಲೆ ಒಂದು ಬಂಡಿ ಓಡತೊಡಗಿತು. ಓದು ಕಲಿತ ಹುಡುಗ ಊರಿಗೆ ಮರಳುತ್ತಿದ್ದ, ಬಂಡಿ ಧಡಕ್ಕನೆ ನಿಂತಿತು, ’ನೀನು ಯಾವ ಜಾತಿ’ ಎಂದು ಕೇಳಿದರು. ಕೇಳಿದರು ಅಷ್ಟೆ. ಮರು ನಿಮಿಷ ಬಂಡಿಯಿಂದ ಆ ಯುವಕನನ್ನು ಹೊರಗೆ ತಳ್ಳಿದ್ದರು. ಆತನೂ ಎದ್ದು ನಿಂತ. ಅತನ ಹಿಂದೆ ಇಡೀ ದೇಶ ಎದ್ದು ನಿಂತಿತು. ಆತ ಭಾರತಕ್ಕೊಂದು ದಿಕ್ಕು ರೂಪಿಸಿಕೊಟ್ಟ. ಆತ ಅಂಬೇಡ್ಕರ್. ಒಂದೆಡೆ ಜನಾಂಗೀಯ ಹಲ್ಲೆ, ಇನ್ನೊಂದೆಡೆ ಜಾತಿ ಹಲ್ಲೆ. ಈ ಎರಡು ಅವಮಾನಗಳೂ ಒಂದು ಬೆಳಕಿಗೆ ದಾರಿ ಮಾಡಿಕೊಟ್ಟವು. ’ನೀ ಹೋದ ಮರುದಿನ ಮೊದಲಂಗ ನಮ್ಮ ಬದುಕು ಆಗ್ಯಾದೋ ಬಾಬಾ ಸಾಹೇಬ, ನಿನ್ನಂತೆ ಇರುವವರು, ಕಳಕಳಿಯ ಪಡುವವರು ಇನ್ನು ತನ ಬರಲಿಲ್ಲ ಒಬ್ಬಾ…’ ಎನ್ನುವ ಕವಿತೆ ನೆನಪಾಯಿತು.
ಅಂಬೇಡ್ಕರ್ ನೆಲಕ್ಕುರುಳಿದ್ದೇ ತಡ ಬಂಡೆಯ ಮೂಲೆಯಲ್ಲಿ ಚಳಿಯನ್ನು ಹೊಡೆದೋಡಿಸಲು ಬಿಸಿ ಬಿಸಿ ಕಡಲೆ ಪುರಿ ತಿನ್ನುತ್ತಾ ಇದ್ದ ಯುವಕರ ದಂಡೊಂದು ಎದ್ದು ನಿಂತು ಬಿಟ್ಟಿತು. ಅವರ ಕೂಗಿನಲ್ಲಿದ್ದ ಸಿಟ್ಟು ’ಮೊದಲಂಗ ನಮ್ಮ ಬದುಕು ಆಗಬಾರದು’ ಎನ್ನುವುದರ ಎಚ್ಚರವನ್ನು ಬೆಸುಗೆ ಹಾಕಿಬಿಟ್ಟಿತ್ತು. ಅವರೊಬ್ಬರಿದ್ದರು, ಕುದ್ಮುರ್ ರಂಗರಾವ್.. ಪ್ರಾಣಿಗಳಿಗಿಂತಲೂ ಹೀನ ಬದುಕು ಬದುಕುತ್ತಿದ್ದವರ ಗುಡಿಸಲುಗಳನ್ನು ಹೊಕ್ಕರು. ಬೆದರಿದ ಜೀವಗಳಂತಿದ್ದವರನ್ನು ಶಾಲೆಯ ಅಂಗಳಕ್ಕೆ ಕರೆತಂದರು. ಅಕ್ಷರದ ದೀಪ ಕೈಗಿಟ್ಟರು. ’ಓದು ಕಲಿತು ಒಳ್ಳೆ ಹುದ್ದೆ ಪಡೆದು ಅವರು ಕಾರಿನಲ್ಲಿ ಹೋಗುವಾಗ ಆ ಚಕ್ರದ ಧೂಳು ನನ್ನ ತಲೆಯ ಮೇಲೆ ಎರಚಿದರೆ ನನ್ನ ಬದುಕು ಸಾರ್ಥಕ ಎಂದವರು…’ ಆ ಘಟನೆ ಬಿಚ್ಚಿಕೊಳ್ಳುತ್ತಾ ಇದ್ದ ಹಾಗೆ ಅದೇ ಯುವಕರು ಮಮ್ಮಲ ಮರಗಿದರು.
ಕೃಷ್ಣನನ್ನು ನೋಡಲೇಬೇಕು ಎಂದು ಹರಿದಾರಿ ದೂರ ಹಾಡುತ್ತಾ ನಡೆದು ಬಂದ ಕನಕನನ್ನು ಆಚೆಗೆ ತಳ್ಳಿದರು. ’ಹೋಗೋ ದನ ಕಾಯುವವನೆ’ ಎಂದು ಹಂಗಿಸಿದರು. ಆಗ ಕನಕ, ’ಒಳಗಡೆ ಇದ್ದಾನಲ್ಲ ಸ್ವಾಮಿ, ಅವನ ಕಸುಬೂ ಅದೇ’ ಅಂದ. ಬರೀ ಕನಕನಲ್ಲ, ಕರ್ಣ, ಏಕಲವ್ಯ, ಷರೀಫಜ್ಜ, ಬುದ್ಧ, ಚಂಡಾಲ, ಮಾತಂಗ, ಕೈವಾರ ತಾತಯ್ಯ, ಪುರಂದರ ದಾಸರು ಹೀಗೆ ಚರಿತ್ರೆಯ ಮೆರವಣಿಗೆಯೇ ಸಾಗುತ್ತಾ ಬಂತು. ಶೂದ್ರತಪಸ್ವಿ, ಬೆರಳ್ಗೆ ಕೊರಳ್, ರಾಮಾಯಣ ದರ್ಶನಂ ಬರೆದ ಕುವೆಂಪು ಸಹ ಬಂದರು. ಅಷ್ಟೇ ಅಲ್ಲ, I want to be in home ಅಂದ ಕುಸುಮಬಾಲೆಯ ಕುಸುಮಳೂ ವೇದಿಕೆ ಹತ್ತಿದಳು. ಗುಣಾಢ್ಯನಿಂದ ಹಿಡಿದು ದೇವನೂರರವರೆಗೆ ’ಮನುಷ್ಯ ಜಾತಿ ತಾನೊಂದೆ ವಲಂ’ ಬಿಚ್ಚಿಕೊಳ್ಳುತ್ತಾ ಹೋಯಿತು. ’ಕುಸುಮ ಬಾಲೆ ರಂಗದ ಮೇಲೆ ಸಿಕ್ಕಿದ್ದಳು’ ಎಂದೆ. ತಕ್ಷಣ ಬಸೂ ’ಚಾಂಡಾಲ ನಡೆಸಿದ ಧರಣಿ ಇದೆಯಲ್ಲಾ ಅದು ಮೊದಲನೆಯ ಪ್ರತಿರೋಧ, ಅಲ್ಲಿಂದ ಕುಸುಮಬಾಲೆಯವರೆಗೆ ಆ ಪ್ರತಿರೋಧ ಮುಂದುವರಿಯುತ್ತಲೇ ಬಂದಿದೆ, ಹಾಗಾಗಿ ಕುಸುಮಳೂ ವೇದಿಕೆ ಹತ್ತಿದಳು’ ಎಂದ.

ಪಿ ಸಾಯಿನಾಥ್ ಗುಲ್ಬರ್ಗಾಕ್ಕೆ ಬಂದಿದ್ದರು. ದೇಶದ ಮೂಲೆ ಮೂಲೆಗಳಿಂದ ದಲಿತರ ನೋವಿನ ಕಥೆಗಳನ್ನು ಹೆಕ್ಕುತ್ತಾ ಅಲ್ಲಿಗೂ ಬಂದಿದ್ದರು. ನಾನು ಅವರೊಡನೆ ಗುಲ್ಬರ್ಗಾ, ಬೀದರ್ ಹೀಗೆ ಸುತ್ತುತ್ತಾ ಹೋದೆ. ಕಬಡ್ಡಿ ಪಂದ್ಯದಲ್ಲಿ ದಲಿತರ ಗುಂಪೊಂದು ಗೆದ್ದುಬಿಟ್ಟಿತು ಎನ್ನುವ ಕಾರಣಕ್ಕೆ ಅವರ ಕೊಲೆಗೆ ಮುಂದಾದ, ತನ್ನ ಮುಂದೆ ಶುಭ್ರವಾದ ಬಿಳಿಬಟ್ಟೆ ಧರಿಸಿದ ಎಂಬ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾದ ಎಷ್ಟೋ ಕಂಡುಂಡ ಕಥೆಗಳನ್ನು ಹೇಳುತ್ತಾ ಹೋದರು. ನಾನು ಬೆಚ್ಚಿ ಬಿದ್ದಿದ್ದೆ.
ಹೀಗೆಲ್ಲಾ ಆಗುತ್ತಿರುವಾಗಲೇ ರಂಗದ ಮೇಲೆ ರಾಮ ಬಂದ. ಆಗಿನ್ನೂ ಹಲ್ಲು ಮೂಡುತ್ತಿದ್ದ ಮಗು, ’ಅಪ್ಪಾ ಬೇಟೆಗಾರ ಬಂದ’ ಎಂದ. ಅಪ್ಪ, ’ಅಲ್ಲ ಮಗು, ಅದು ರಾಮ, ಮಹಾರಾಜ’ ಎಂದು ತಿದ್ದಿದರು. ಸ್ವಲ್ಪ ಹೊತ್ತಾಯಿತು, ರಂಗದ ಮೇಲೆ ಬಿಲ್ಲುಬಾಣ ಹಿಡಿದ ಏಕಲವ್ಯ ಬಂದ. ಅದೇ ಮಗು, ’ಅಪ್ಪಾ, ನೋಡು ಮಹಾರಾಜ ಬಂದ’ ಎಂದಿತು. ಅಪ್ಪ ಈಗ ಪಾಠ ಹೇಳಲು ಹೋಗಲಿಲ್ಲ.

‍ಲೇಖಕರು G

10 February, 2014

10 Comments

  1. h a patil

    – ಮಾನವೀಯತೆಯ ಬೆಳಕಿನ ಹುಡುಕಾಟದ ಕುರಿತು ವಿಶೇಷ ಒಳನೋಟಗಳಿರುವ ಲೇಖನ. ಲೇಖನ ಮತ್ತು ಅದಕ್ಕೆ ಪೂರತಕವಾದ ಚಿತ್ರಗಳು ಗಮನ ಸೆಳೆದವು.

  2. pratibha kage

    ಮಾನವೀಯತೆಯ ಹುಡುಕಾಟದ ಈ ಲೇಖನ ತುಂಬಾ ಚೆನ್ನಾಗಿದೆ.

    • pratibha kage

      ಮಾನವೀಯತೆಯ ಹುಡುಕಾಟದ ಕುರಿತ ಲೇಖನ ತುಂಬಾ ಚೆನ್ನಾಗಿದೆ ಸರ್

  3. mandalgiriprasanna

    Mohan avara baraha bahala dinada namtara odalu sikkide

  4. ರಮೇಶ್‌ ಹಿರೇಜಂಬೂರು

    ’ಅಪ್ಪಾ ಬೇಟೆಗಾರ ಬಂದ’ ಎಂದ. ಅಪ್ಪ, ’ಅಲ್ಲ ಮಗು, ಅದು ರಾಮ, ಮಹಾರಾಜ’ ಎಂದು ತಿದ್ದಿದರು. ಸ್ವಲ್ಪ ಹೊತ್ತಾಯಿತು, ರಂಗದ ಮೇಲೆ ಬಿಲ್ಲುಬಾಣ ಹಿಡಿದ ಏಕಲವ್ಯ ಬಂದ. ಅದೇ ಮಗು, ’ಅಪ್ಪಾ, ನೋಡು ಮಹಾರಾಜ ಬಂದ’ ಎಂದಿತು. ಅಪ್ಪ ಈಗ ಪಾಠ ಹೇಳಲು ಹೋಗಲಿಲ್ಲ.- ಈ ಸಾಲುಗಳು ನನ್ನನ್ನು ತುಂಬಾ ಚಿಂತನೆಗೀಡು ಮಾಡಿದವು. ಸರ್‌ ಇಡೀ ರೂಪಕವನ್ನು ತುಂಬಾ ಆಚ್ಚುಕಟ್ಟಾಗಿ ಹಾಗೂ ಮನಮುಟ್ಟುವ ಹಾಗೆ ವಿವರಿಸಿದ್ದೀರಿ. ಈ ಲೇಖನದಲ್ಲಿ ನೀವು ಬರೆದ ಧಾಟಿ ಹಾಗೂ ಅದನ್ನು ಅಂತ್ಯಗೊಳಿಸಿದ ರೀತಿ ಹೆಚ್ಚು ಇಷ್ಟವಾಯಿತು. `ಮನುಷ್ಯಜಾತಿ ತಾನೋಂದೇ ವಲಂ` ರೂಪಕವನ್ನು ನನಗೆ ನೋಡಲು ಆಗಲೇ ಇಲ್ಲ. ಅದನ್ನು ನೀವು ಈ ಲೇಖನದಿಂದ ಕಟ್ಟಿಕೊಟ್ಟಿರಿ ತುಂಬಾ ಥ್ಯಾಕ್ಸ್…
    -ರಮೇಶ್ ಹಿರೇಜಂಬೂರು

  5. sudha chidanand gowd

    ಪ್ರದರ್ಶನ ನೋಡೋಕಾಗ್ಲಿಲ್ಲ.
    ಈ ಲೇಖನ ಓದಿ ನೋಡಿದಂತೆಯೇ ಆಯ್ತು.
    ಧನ್ಯವಾದ ಮೋಹನ್ ಸರ್.

  6. nagraj.harapanahalli

    ಕತ್ತಲು ಕವಿದ ಮನಸುಗಳಿಗೆ ಮಾನವೀಯತೆಯ ಬೆಳಕು ತಲುಪಿಸುವ ಮತ್ತೊಂದು ಪ್ರಯತ್ನ.

  7. ganga

    naale belagaviyalli e baduku teredukolluvudu oodutta oode illa nodutta hodeno

  8. ಜಿ.ಎನ್ ನಾಗರಾಜ್

    ನಾನು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದಂತೆ- ಸರ್ಕಾರೀ ಇಲಾಖೆಯೊಂದು ಇಂತಹ ಸೃಜನಶೀಲತೆ ತೋರಿಸುವುದು ಸಾಧ್ಯವೇ ಎಂದು ಆಶ್ಚರ್ಯ ಪಡುವಂತಹ ಕೆಲಸ. ಕಾಕನ ಕೋಟೆ, ಸತ್ತವರ ನೆರಳು ಮುಂತಾದ ನಾಟಕಗಳಂತೆ ಹಿಂದೆ ಅನೇಕ ಕಂಪನಿ ನಾಟಕಗಳಂತೆ ಈ ನೂರಾರು ಪ್ರದರ್ಶನ ಕಾಣಬೇಕಾದಂತಹ ರಂಗ ಕೃತಿ ಇದು. ಬೆಂಗಳೂರಿನ ಒಂದು ರಂಗದ ಮೇಲೆ ಜನ ನೋಡುವಷ್ಟು ದಿನ ಿದರ ಪ್ರದರ್ಶನವನ್ನು ಏಕೆ ಏರ್ಪಡಿಸಬಾರದು ?

  9. shobha

    anivarya karanadinda karyakrama veekshisalu agalillavalla andu kolluthidde .nimma lekhanadalli chitragalu moodibandavu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading