ಜಿ ಎನ್ ಮೋಹನ್
ಮೊನ್ನೆ ಯಾವುದೋ ಪುಸ್ತಕಕ್ಕಾಗಿ ತಡಕಾಡುತ್ತಿದ್ದಾಗ ನನಗಾಗಿಯೇ ಕಾದಿದ್ದಂತೆ ಆ ಕವಿತೆ ಎದುರಾಯಿತು. ಬಹಳ ಹಿಂದೆ ರಂಜಾನ್ ದರ್ಗಾ ಬರೆದ ಕವಿತೆ ಅದು. ‘ಹಿಂದೂ ಮುಸ್ಲಿಂ ಸಿಖ್ಖರ ಮಧ್ಯೆ ಮನುಷ್ಯರನ್ನು ಹುಡುಕಿಕೊಳ್ಳುತ್ತೇನೆ/ ಜಾತಿಗಳ ಕುರುಹು ಕಳಕೊಂಡು ಅರಿವಿನಲ್ಲಿ ಒಂದಾಗಿ ಎಂದು ತೋಡಿಕೊಳ್ಳುತ್ತೇನೆ/ ಶಾಂತಿಯೇ ಎಲ್ಲೆಡೆ ಎಡಬಿಡದೆ ಗಸ್ತು ತಿರುಗು ಎಂದು ಕೇಳಿಕೊಳ್ಳುತ್ತೇನೆ/ ದ್ವೇಷದ ದಳ್ಳುರಿಯಲ್ಲೂ ಪ್ರೀತಿಯೊಡನೆ ಮಾತ್ರ ರಾಜಿ ಮಾಡಿಕೊಳ್ಳುತ್ತೇನೆ’. ಆ ಕ್ಷಣ ನನಗೆ ನೆನಪಾದದ್ದು ಅಸ್ಘರ್ ಆಲಿ ಎಂಜಿನಿಯರ್. ರಂಜಾನ್ ದರ್ಗಾ ಈ ಕವಿತೆಯನ್ನು ಅಸ್ಘರ್ ಅವರನ್ನು ನೋಡಿಯೇ ಬರೆದರೋ ಅಥವಾ ಅಸ್ಘರ್ ಈ ಕವಿತೆಗೆ ತಕ್ಕಂತೆ ಬದುಕಿದರೋ ಗೊತ್ತಿಲ್ಲ. ಆದರೆ ಕವಿತೆ ಓದುತ್ತಾ ಓದುತ್ತಾ ಅಸ್ಘರ್ ಮತ್ತೆ ಮತ್ತೆ ಕಣ್ಣ ಮುಂದೆ ಬಂದರು.
‘ನೀನು ಸೈತಾನ’ ಎಂದು ಧರ್ಮಗುರುಗಳು ಅಬ್ಬರಿಸಿ ಹೇಳಿದರು. ‘ಸೈತಾನ’ ಮುಗುಳ್ನಕ್ಕ. ಎಲ್ಲಾ ಧರ್ಮಗಳ ಒಳಗೆ ಅಡಗಿ ಕುಳಿತಿರುವ ಸೈತಾನಿತನವನ್ನು ದುರ್ಬೀನು ಹಾಕಿ ಹುಡುಕುತ್ತಾ, ಹೊರಗೆ ತೆಗೆಯುತ್ತಾ ಜನರಿಗೆ ಧರ್ಮದ ಶುದ್ಧತೆಗೆ ಹೇಗಿರಬೇಕು ಎಂದು ಹುಡುಕುತ್ತಾ ಹೊರಟ ‘ಸೈತಾನ’ ಅಸ್ಘರ್ ಅಲಿ ಎಂಜಿನಿಯರ್.
ಕಲ್ಬುರ್ಗಿಯ ಆ ರಣಬಿಸಿಲಿನ ಒಂದು ಮಧ್ಯಾಹ್ನ ನಾನು ಅಸ್ಘರ್ ಅಲಿ ಎಂಜಿನಿಯರ್ ಅವರ ಎದುರು ನಿಂತಿದ್ದೆ. ಕೆಲವೇ ವಾರಗಳ ಹಿಂದೆ ಧರ್ಮದ ವಕ್ತಾರರು ಇವರ ಮೇಲೆ ಎರಗಿದ್ದರು. 60 ದಾಟಿದ ಅವರನ್ನು ಎಲ್ಲರ ಸಮ್ಮುಖದಲ್ಲಿ ಕೆಡವಿ ಹಣ್ಣು ಮಾಡಲಾಗಿತ್ತು. ಈ ಜೀವ ನೊಂದಿದೆಯೇನೋ ಎಂದು ಅವರ ಕಣ್ಣುಗಳಲ್ಲಿ ಇಣುಕಿದೆ. ಅವರ ಕಣ್ಣುಗಳು ಕೆಂಡದುಂಡೆಗಳಂತಿದ್ದವು. ಅವರ ಮುಖದ ರೋಷ ಬತ್ತಿ ಹೋಗುವ ಯಾವುದೇ ಸುಳಿವನ್ನು ಬಿಟ್ಟುಕೊಡಲಿಲ್ಲ. ಥೇಟ್ ಕಲ್ಬುರ್ಗಿಯ ರಣಬಿಸಿಲಿನ ಹಾಗೆ ಅವರೂ ಸಹಾ ನಿಗಿ ನಿಗಿ ಉರಿಯುತ್ತಿದ್ದರು. ನನ್ನ ಹುಡುಕಾಟ ಅವರಿಗೆ ಅರ್ಥವಾಯಿತೋ ಏನೋ ತಣ್ಣಗಿನ ದನಿಯಲ್ಲಿ ‘ ಮೊನ್ನೆ ಆದದ್ದು ಐದನೆಯದು, ಇನ್ನೂ ಎಷ್ಟೋ ಬಾಕಿಯಿದೆ…’ ಎಂದರು.
ಅಸ್ಘರ್ ಆಲಿ ಎಂಜಿನಿಯರ್ ಗೆ ತಾವು ಆರಿಸಿಕೊಂಡ ಹಾದಿ ಎಂತಹದ್ದು ಎಂಬುದು ಸ್ಪಷ್ಟವಾಗಿ ಗೊತ್ತಿತ್ತು. ಎಂಜಿನಿಯರಿಂಗ್ ಓದುತಿದ್ದ ಹುಡುಗ ಗುಲಾಬಿಯ ಬೀದಿಯಲ್ಲಿಯೇ ನಡೆದು ಹೋಗಬಹುದಿತ್ತು. ಆದರೆ ಏನು ಮಾಡುವುದು ಆತ ಹುಟ್ಟಿನಿಂದಲೇ ವಿಭಜನೆಯ ಕಥೆಯನ್ನು ಕೇಳಿದ್ದ. ಮನೆ ಮಾರು ಕಳೆದುಕೊಂಡವರ ಆಕ್ರಂದನ, ಬೀದಿ ಬೀದಿಗಳಲ್ಲಿ ತಲವಾರುಗಳಿಗೆ ಸಿಕ್ಕ, ಬೆಂಕಿಯ ಜ್ವಾಲೆಯ ಮಧ್ಯೆ ಕರಕಲಾಗಿ ಹೋದವರ ಚಿತ್ರಗಳನ್ನು ಕಣ್ಣಲ್ಲಿ ತುಂಬಿಸಿಕೊಂಡಿದ್ದ. ಅದು ಗುಲಾಬಿಯ ಹಾದಿಯೂ ಒಂದಿದೆ ಎಂಬುದನ್ನು ಮರೆಸಿ ಹಾಕಿತು. ಹೀಗಿರುವಾಗಲೇ ಜಬಲ್ ಪುರದಲ್ಲಿ ಘೋರ ಕೋಮುಗಲಭೆ ಭುಗಿಲೆದ್ದಿತು. ವಿಭಜನೆಯ ನಂತರದ ಅತ್ಯಂತ ಘೋರ ಗಲಭೆ ಎನಿಸಿಕೊಂಡ ಈ ಹತ್ಯಾಕಾಂಡ ಅಸ್ಘರ್ ಅಲಿ ಎಂಜಿನಿಯರ್ ಅವರ ದಾರಿಯನ್ನು ನಿರ್ಧರಿಸಿಬಿಟ್ಟಿತು. ಧರ್ಮಗುರುಗಳ ಕುಟುಂಬದಿಂದ ಬಂದ ಅಸ್ಗರ್ ಧರ್ಮದ ಸೈತಾನಿತನವನ್ನು ಪ್ರಶ್ನೆ ಮಾಡುವ ಪಣತೊಟ್ಟು ಬಿಟ್ಟರು.
‘ಧರ್ಮಗುರುವಿನ ಮುಂದೆ ಅಂಗಾತಬಿದ್ದು ಅವನ ಕಾಲಿಗೆ ಮುತ್ತಿಡಲಾರೆ’ ಎಂದು ಘೋಷಿಸಿದಾಗಲೇ ಅಸ್ಘರ್ ಒಳಗಿದ್ದ ಒಂದು ಪ್ರತಿಭಟನೆಯ ಕಿಡಿ ಹೊರ ಚಿಮ್ಮಿತ್ತು. ಧರ್ಮಗುರುವಾಗಿದ್ದ ತಂದೆ ಬೊಹ್ರಾ ಸಂಪ್ರದಾಯದ ಪ್ರಕಾರ ಧರ್ಮಗುರುಗಳ ಪಾದ ಚುಂಬಿಸುವ ಆಚರಣೆಗಾಗಿ ಮಗನನ್ನು ಕರೆದುಕೊಂಡು ಹೋದಾಗ ಆತ ಬಿಲ್ ಕುಲ್ ಒಪ್ಪಿರಲಿಲ್ಲ. ಅಸ್ಘರ್ ಅಂದಿನಿಂದ ತಿರುಗಿ ನೋಡಲಿಲ್ಲ. ಅವರು ಸೆಡ್ಡು ಹೊಡೆದದ್ದು ಧರ್ಮದ ವಿರುದ್ಧ ಅಲ್ಲ, ಧರ್ಮದ ಸೈತಾನಿತನದ ವಿರುದ್ಧ. ಧರ್ಮ ಮಹಿಳೆಯರ ಪರ, ಮನುಷ್ಯರ ಘನತೆಯ ಪರವಾಗಿದೆ. ಆದರೆ ಅದನ್ನು ತಮಗೆ ಬೇಕಾದಂತೆ ಬಳಸುತ್ತಿರುವವರ ವಿರುದ್ಧ ಅಸ್ಘರ್ ಗೆ ಸಿಟ್ಟಿತ್ತು. ಅಸ್ಘರ್ ಅವರು ತಮ್ಮ ಮೊದಲ ಯುದ್ಧ ಆರಂಭಿಸಿದ್ದು ತಮ್ಮದೇ ಬೊಹ್ರಾ ಪಂಗಡದ ಧರ್ಮಾಧಿಕಾರಿಗಳ ವಿರುದ್ಧ. ಮುಸ್ಲಿಮರಲ್ಲಿ ಗುಜರಾತ್ ಮೂಲದ ವಣಿಕ ಕುಟುಂಬವನ್ನು ಬೊಹ್ರಾ ಎಂದು ಗುರುತಿಸುತ್ತಾರೆ. ಬೊಹ್ರಾ ಕುಟುಂಬಗಳ ಮೇಲೆ ಧರ್ಮಗುರುಗಳು ಹೇರಿದ ಏಳು ತೆರಿಗೆ ಪದ್ಧತಿಯನ್ನು ಅಸ್ಘರ್ ಪ್ರಶ್ನಿಸಿದರು. ಧರ್ಮ ಯುದ್ಧ ಆರಂಭವಾಗಿಯೇಬಿಟ್ಟಿತು. ಧರ್ಮಾಧಿಕಾರಿಗಳಿಗೆ ಅಸ್ಘರ್ ನುಂಗದ ತುತ್ತಾಗಲೂ ಇನ್ನೂ ಕಾರಣವಿತ್ತು. ಏಕೆಂದರೆ ಅಸ್ಘರ್ ಕುರಾನ್ ಅನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದರು. ಅದರ ವೈಜ್ಞಾನಿಕ ವಿಶ್ಲೇಷಣೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ಆ ಕಾರಣಕ್ಕಾಗಿಯೇ ಧರ್ಮಗ್ರಂಥ ಬಳಸಿ ಮಣಿಸಲಾಗದೆ ಹೋದಾಗ ದೈಹಿಕ ಹಿಂಸೆಯಿಂದ ಮಣಿಸುವ ಕೆಲಸ ಆರಂಭವಾಯಿತು.
ಹಲ್ಲೆ ನಡೆದಷ್ಟೂ, ಕೊಲೆಯ ಯತ್ನ ನಡೆದಷ್ಟೂ ಅಸ್ಘರ್ ಗಟ್ಟಿಯಾಗುತ್ತಲೇ ಹೋದರು. ಅವರ ನೋಟ ಇನ್ನಷ್ಟು ಕಾವು ಪಡೆದುಕೊಂಡಿತು. ನನ್ನೊಂದಿಗೆ ಒಂದು ಧೀರ್ಘ ಮಾತಿಗೆ ಕುಳಿತಿದ್ದ ಅವರು- ‘ಮೋಹನ್, ನಾವು ಕೋಮುಗಲಭೆಯನ್ನು ಮಾತ್ರ ಕೋಮುವಾದ ಎಂದುಕೊಳ್ಳುತ್ತೇವೆ. ಅದು ತಪ್ಪು. ಕೋಮುವಾದಿ ಶಕ್ತಿಗಳು ಗಲಭೆ ಇಲ್ಲದ ಸಮಯದಲ್ಲೂ ಅತ್ಯಂತ ಕ್ರಿಯಾಶೀಲವಾಗಿರುತ್ತದೆ. ಗಲಭೆ ಹುಟ್ಟುಹಾಕಿದರೆ ಲಾಭ ಇದೆ ಎಂದು ಗೊತ್ತಾದಾಗ ಮಾತ್ರ ಕೋಮುಗಲಭೆ ಜರುಗುತ್ತದೆ’ ಎಂದರು.
‘ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನೇಕೆ ಕೊರೆದಿದ್ದಾರೆ/ ಅಸತ್ಯದ ಕತ್ತಲೇಕೆ ಮನೆ ಮಾಡಿದೆ ಸತ್ಯದ ಸತ್ಯದ ಬೆಳಕಿನಲ್ಲಿ/ ಸೂರ್ಯನೆ ಹೇಳು ಹೆಪ್ಪುಗಟ್ಟಿದ ಮನಸ್ಸುಗಳನ್ನು ಕರಗಿಸುವುದೆಂತು/ ಮೋಡಗಳೇ ತಿಳಿಸಿ ಮಳೆಯಲ್ಲಿ ಸೇರಿಲ್ಲವೆ ಬಡವರ ಕಣ್ಣೀರು/ ಭವಿಷ್ಯವೇ ತಾಳು ಎಲ್ಲೆಡೆ ಆವರಿಸಿದೆ ನೋವು/ ಪ್ರಳಯಕ್ಕೆ ಮೊದಲು ಎಚ್ಚರಾಗುತ್ತಾರೆ ಅವರು” ಎನ್ನುವಂತೆ ಅಸ್ಘರ್ ಆಲಿ ಎಂಜಿನಿಯರ್ ಪ್ರಳಯಕ್ಕೆ ಮೊದಲು ಜನರನ್ನು ಎಚ್ಚರಿಸಲು ಹೊರಟವರು. ಅವರಿಗೆ ಗೊತ್ತಿತ್ತು ಜನರನ್ನು ಕೊಲ್ಲುತ್ತಿರುವ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೊರೆಯಲಾಗಿದೆ ಎಂದು. ಹಾಗಾಗಿಯೇ ಅಸ್ಘರ್ ದೇಶದ ಯಾವ ಮೂಲೆಯಲ್ಲಿ ಕೋಮು ಗಲಭೆಗಳು ಜರುಗಿದರೂ ಅಲ್ಲಿ ಭೇಟಿ ನೀಡುತ್ತಿದ್ದರು. ಇವರಿಲ್ಲದೇ ಹೋದಾಗ ಇವರ ತಂಡ ಖಂಡಿತಾ ಅಲ್ಲಿರುತ್ತಿತ್ತು. ಕೋಮು ಗಲಭೆಯ ಅಂಕಿ ಅಂಶ ಸಂಗ್ರಹಿಸುವುದಕ್ಕೆ ಕೈಹಾಕದೇ ಆ ಗಲಭೆಗೆ ಕಾರಣವಾದ ಬೇರುಗಳನ್ನು ಹುಡುಕುತಿದ್ದರು. ಹಾಗಾಗಿಯೇ ಅವರಿಗೆ ಗೊತ್ತಾಗಿ ಹೋಗಿತ್ತು. ಯಾವ ಗಲಭೆಗೂ ಧರ್ಮ ಕಾರಣವಲ್ಲ. ತಮ್ಮ ಹಿತಾಸಕ್ತಿಗೆ ಧರ್ಮ ಬಳಸಿದ್ದು ಕಾರಣ ಎಂದು.
ಮೊದಲು ಬೊಹ್ರಾ ಪಂಗಡದ ವಿರುದ್ಧ ದನಿ ಎತ್ತಿದ ಇವರು ನಂತರ ಎಲ್ಲಾ ಧರ್ಮಗಳಲ್ಲಿರುವ ಕರಾಳ ಅಂಶಗಳನ್ನೂ ಎತ್ತಿ ತೋರಿಸುತ್ತಾ ಹೋದರು. ಧರ್ಮದ ಪರಿಶುದ್ಧತೆಯನ್ನೂ ಗುರುತಿಸುತ್ತಾ ಹೋದರು. ಯಾವುದೇ ಧರ್ಮ ಹೆದರುವುದು ಪ್ರಶ್ನೆಗಳಿಗೆ ತಾನೇ? ಹಾಗಾಗಿಯೇ ಅಸ್ಘರ್ ಆಲಿ ಎಂಜಿನಿಯರ್ ಬೆದರಿಕೆ, ಹಲ್ಲೆ ಎಂದುರಿಸಬೇಕಾಯಿತು.
‘ನನ್ನ ತಾಯಿಯನ್ನೇ ನನ್ನಿಂದ ಬೇರ್ಪಡಿಸಿದರು’ ಎನ್ನುವಾಗ ಅದುವರೆಗೂ ಅಲುಗದ ಬಂಡೆಯಂತಿದ್ದ ಅಂತಹ ಅಸ್ಘರ್ ಅವರ ಕಣ್ಣುಗಳಲ್ಲೂ ನೀರು ಇಣುಕುತ್ತಿತ್ತು. ಇವನೊಂದಿಗೆ ಇರಬಾರದು ಎಂದು ಧರ್ಮಗುರು ಆಜ್ಞೆ ಹೊರಡಿಸಿದಾಗ ನನ್ನ ತಾಯಿ ಈ ಇಳಿವಯಸ್ಸಿನಲ್ಲಿ ನನಗೆ ಇನ್ನಾರು ದಿಕ್ಕು ಎಂದು ಪ್ರಶ್ನಿಸಿದರು. ಹಾಗಿದ್ದರೆ ಒಂದೇ ಮನೆಯಲ್ಲಿ ಪರದೆ ಹಾಕಿ ಬೇರೆ ಅಡುಗೆ ಮಾಡಿಕೊಳ್ಳಿ ಎಂದು ಹುಕುಂ ಜಾರಿಯಾಯಿತು. ಮನೆಯಲ್ಲಿ ಎರಡು ಒಲೆ ಉರಿಯಲಾರಂಭಿಸಿತು. ಅವರ ಬಳಿ ಈ ಕಣ್ಣೀರ ಕಥೆಗಳಿಗೇನೂ ಬರವಿರಲಿಲ್ಲ. ತನ್ನ ಇಬ್ಬರು ಮಕ್ಕಳೂ ಯಾರನ್ನೂ ನೋಡದ ಪರಿಸ್ಥಿತಿ ಎದುರಾದದ್ದು, ಕದ್ದುಮುಚ್ಚಿ ಹೋದಾಗ ಮಂಚದ ಕೆಳಗೆ ಗಂಟೆಗಟ್ಟಲೆ ಅಡಗಿ ಕೂರಬೇಕಾಗಿ ಬಂದದ್ದು ಎಲ್ಲವನ್ನೂ ವಿವರಿಸುತ್ತಾ ಹೋದರು. ಅವರ ಅಣ್ಣನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಧರ್ಮ ಅಡ್ಡಿಯಾದದ್ದು ಹೇಳುವಾಗ ಅವರ ಕಣ್ಣೀರು ಅವರ ಅಪ್ಪಣೆ ಕೇಳದೆ ಹರಿಯಲು ಆರಂಭಿಸಿತು. ‘ನಾನು ಸ್ಮಶಾನಕ್ಕೆ ಹೋದಾಗ ಅಣ್ಣನ ಶವವನ್ನೇ ವಸೆದುಬಿಡುವ ಬೆದರಿಕೆ ಒಡ್ಡಿದರು. ನಾನು ಅಳುತ್ತಾ ದೂರ ಉಳಿದೆ. ಇದನ್ನು ನೋಡಿ ತಡೆಯಲಾಗದೆ ನನ್ನ ಮಾವ, ಚಿಕ್ಕಪ್ಪ ಓಡಿ ಬಂದು ನನಗೆ ಸಮಾಧಾನ ಮಾಡಿದರು. ಆದರೆ ಇದಕ್ಕೆ ಅವರೂ ನಂತರ ಬೆಲೆ ತೆರಬೇಕಾಗಿ ಬಂತು’ ಎಂದರು. ಅಸ್ಘರ್ ಅವರ ಈ ನೋವು, ಬದಲಾವಣೆಗಾಗಿ ತುಡಿದ ಅವರ ಛಲವನ್ನು ಜಗತ್ತು ತೆರೆದ ಕಣ್ಣಿನಿಂದಲೇ ನೋಡಿತು. ಧರ್ಮಗಳ ನಡುವೆ ಇದ್ದ ಕಂದರವನ್ನು ಕಡಿಮೆ ಮಾಡಿದ್ದಕ್ಕಾಗಿ, ಮಾನವೀಯತೆಗೆ ದುಡಿದದ್ದಾಕ್ಕಾಗಿ ಪರ್ಯಾಯ ನೊಬೆಲ್ ಎಂದೇ ಗುರುತಿಸಲ್ಪಡುವ ರೈಟ್ ಲೈವ್ಲಿಹುಡ್ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂತು. ಇವರು ಹುಟ್ಟು ಹಾಕಿದ ಅನೇಕಾನೇಕ ಸಂಸ್ಥೆಗಳು ಇವರ ಆಲೋಚನೆಯ ಘನತೆಯನ್ನು ಎತ್ತಿಹಿಡಿದವು.
‘ಎಲ್ಲರಿಗೂ ಸಮಾನ ಪ್ರೀತಿ’ ಎನ್ನುವ ಸೂಫಿ ತತ್ವ ಅಸ್ಘರ್ ಆಲಿ ಎಂಜಿನಿಯರ್ ಅವರ ಉಸಿರಾಗಿತ್ತು. ಅಸ್ಘರ್ ಗೆ ಒಂದಾಸೆಯಿತ್ತು. ನಾನು ಇಲ್ಲವಾದಾಗ ನನ್ನ ದೇಹವನ್ನು ಕೈಫಿ ಅಜ್ಮಿ, ಅಲಿ ಸರ್ದಾರ್ ಜಾಫ್ರಿ, ಕೆ ಎ ಅಬ್ಬಾಸ್, ಮಜ್ರೂಹ್ ಸುಲ್ತಾನ್ ಪುರಿ ಅವರ ಸಮಾಧಿಗಳ ಬಳಿಯೇ ಮಣ್ಣು ಮಾಡಿ ಎಂದಿದ್ದರು. ಕೋಮುವಾದದ ವಿರುದ್ಧ ಒಂದು ತಡೆಗೋಡೆಯಂತಿದ್ದ ಅಸ್ಘರ್ ಅಲಿ ಎಂಜಿನಿಯರ್ ಇಲ್ಲವಾಗಿ ಹೋದರು. ಸಮಾಜದ ಸಂರಚನೆ ಹೇಗಿರಬೇಕು ಎನ್ನುವುದನ್ನು ಯೋಜಿಸಿಕೊಟ್ಟ ಈ ಎಂಜಿನಿಯರ್ ಒಂದು ಮಿಣಿ ಮಿಣಿ ದೀಪ. ಮತ್ತೆ ರಂಜಾನ್ ದರ್ಗಾ ಕವಿತೆ ನೆನಪಾಗುತ್ತಿದೆ- ‘ಧರ್ಮಗಳ ಹೆಸರಲ್ಲಿ ಧ್ವಂಸ ಮಾಡುವ ರಾಕ್ಷಸರನ್ನು ವಿಚಾರಿಸಿಕೊಳ್ಳುತ್ತೇನೆ’ ಎನ್ನುವಂತೆ ಅಸ್ಘರ್ ಆ ಕೆಲಸವನ್ನು ಒಂದಿಷ್ಟು ಪೂರೈಸಿಯೇ ಹೋದರು.
ಅಸ್ಘರ್ ಆಲಿ ಒಬ್ಬ ನಿಜವಾದ ಮೌಲ್ವಿ ಎನ್ನುವುದನ್ನು ಸಾಬೀತು ಮಾಡಿದರು. ಮುಂಬೈನ ಸುನ್ನಿ ಖಬರಿಸ್ತಾನ್ ನಲ್ಲಿ ಅವರ ಶವವನ್ನು ದಫಾನಾಯಿಸಲಾಯಿತು..ಇದರ ಬಗ್ಗೆ ನಾನು ಕನ್ನಡ ವಿಕಿಪೀಡಿಯದಲ್ಲಿ ಬರೆದಿದ್ದೇನೆ.
mini mini deepa head light adare chennirutte.olleya lekhana
ಅಲಿ ಅವರ ವಿಚಾರಗಳು ಸಾವಕಾಲಿಕ. ವರಂತಹ ಸಮಾಜ ಚಿಕಿತ್ಸಕರ ಗತ್ಯ ಭಾರತಕ್ಕೇ ಹೆಚ್ಚೇ ಇದೆ ಎನ್ನಬೇಕು.
ಬೇಕಿರುವುದು ಇಂತಹ ಸಂತರೇ.