
ಪುರುಷೋತ್ತಮ ಬಿಳಿಮಲೆ
ಪ್ರೊ. ಜಿ .ಎನ್. ದೇವಿಯವರ ಪ್ರತಿಭೆಗೆ ಹಲವು ಮುಖಗಳಿವೆ. ಅವರು ಸಂಸ್ಕೃತಿ ವಿಮರ್ಶಕ, ದಾರ್ಶನಿಕ, ಸಂಪಾದಕ, ಶಿಕ್ಷಣ ತಜ್ಞ, ಸಂಘಟಕ ಮತ್ತು ಹೋರಾಟಗಾರ. ಲಂಡನ್ನಿ ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಓದಿ, ಬರೋಡಾದ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ದುಡಿದು, ಆನಂತರ ಆದಿವಾಸಿ ಬುಡಕಟ್ಟು ಜನರ ಭಾಷೆ-ಬದುಕು ಸಂರಕ್ಷಣೆಗಾಗಿ ದುಡಿದವರು.
Critical Thought (1987), Of Many Heroes (1997), In Another Tongue (2000), Indian Literary Criticism: Theory & Interpretation (2002), Painted Words: An Anthology of Tribal Literature (editor, 2002). A Nomad Called Thief (2006) edited, 1997) ಇವರ ಮುಖ್ಯ ಕೃತಿಗಳು.
After Amnesia (1992), ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದಿತ್ತ ಪ್ರಸಿದ್ಧ ಕೃತಿ. ಇವರ ಕೆಲವು ಆಯ್ದ ಲೇಖನಗಳನ್ನು ಡಾ. ಎಂ ಜಿ ಹೆಗಡೆಯವರು ಇದೀಗ ಅತ್ಯುತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ (ಕ್ರಿಯಾ ಪ್ರಕಾಶನ, ಬೆಂಗಳೂರು; ೯೦೩೬೦೮೨೦೦೫). ಪುಸ್ತಕದಲ್ಲಿ ಒಟ್ಟು ಆರು ಮುಖ್ಯ ಲೇಖನಗಳಿದ್ದು, ಭಾಷೆಗೆ ಸಂಬಂಧಿಸಿದ ಲೇಖನವು ಮತ್ತೆ ೮ ಒಳ ವಿಭಾಗಗಳನ್ನು ಹೊಂದಿದೆ. ಡಾ. ರಾಜೇಂದ್ರ ಚೆನ್ನಿಯವರ ಹಿನ್ನುಡಿಯೂ, ಹೆಗಡೆಯವರ ಬರೆದ ಪ್ರಾಸ್ತಾವಿಕ ಮಾತುಗಳೂ ಇಲ್ಲಿನ ಲೇಖನಗಳ ಮಹತ್ವವನ್ನು ಮನಗಾಣಿಸಿಕೊಡುತ್ತವೆ.

ಇವತ್ತು ಪರಿಸ್ಥಿತಿ ತುಂಬ ಬದಲಾಗಿದೆ. ವಸಾಹತು ಕಾಲಘಟ್ಟದಲ್ಲಿ ‘ಕ್ರಿಮಿನಲ್ʼಗಳೆಂದು ಕರೆಯಿಸಿಕೊಂಡಿದ್ದ ಬುಡಕಟ್ಟಿನ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದರೆ ‘ನಕ್ಸಲ್ʼ ಬಿರುದು ಪ್ರಾಪ್ತವಾಗುತ್ತದೆ. ಬುಡಕಟ್ಟುಗಳ ಬಗ್ಗೆ ಮಾತಾಡಿದರೆ ಅವರು ‘ಅರ್ಬನ್ ನಕ್ಸಲ್ʼಗಳಾಗುತ್ತಾರೆ, ಪೋಲೀಸರು ಅಂಥವರ ಮೇಲೆ ಕಣ್ಣಿಡುತ್ತಾರೆ. ಈ ‘ಆದಿವಾಸೀ ಕ್ರಿಮಿನಲ್ʼಗಳನ್ನು ಹಿಂದೂಗಳಾಗಿ ಪರಿವರ್ತಿಸಲು ಆರ್ ಎಸ್ ಎಸ್ ನ ಅಂಗ ಸಂಸ್ಥೆಯಾದ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ (ABVKA)ಯು ಕೆಲಸ ಮಾಡಿದರೆ ಅದು ‘ದೇಶ ಸೇವೆ’ ಎಂದು ಪರಿಗಣಿತವಾಗುತ್ತದೆ. ಈ ನಡುವೆ ಸಾವಿರಾರು ಆದಿವಾಸಿಗಳು ಕಾಡು ಕಳೆದುಕೊಂಡು ಬೆಳೆಯುತ್ತಿರುವ ನಗರಗಳಲ್ಲಿ ಕಟ್ಟಡ ಕಾರ್ಮಿಕರಾಗಿಯೋ, ಇನ್ನೇನೋ ಆಗಿಯೋ ಕಳೆದು ಹೋಗುತ್ತಿದ್ದಾರೆ.
ಈ ಒಟ್ಟಾರೆ ವ್ಯೂಹಗಳ ಹಿಂದಿನ ಷಡ್ಯಂತರಗಳನ್ನು ಪ್ರಸ್ತುತ ಪುಸ್ತಕ ನಮ್ಮ ಮುಂದಿಡುತ್ತದೆ. ಭಾಷೆ ಮತ್ತು ಸಂಸ್ಕೃತಿಯ ವಿಷಯಗಳಲ್ಲಿ ಆಸಕ್ತರಾದವರು ಓದ ಬೇಕಾದ ಕೃತಿಯಿದು. ಹೆಗಡೆಯವರಿಗೆ ಕೃತಜ್ಞತೆಗಳು.






0 Comments