ಜಿ ಎಚ್ ನಾಯಕ್ ಹೇಳುತ್ತಾರೆ: ರಾಧಾಕೃಷ್ಣನ್ ಅವರ ವ್ಯಕ್ತಿತ್ವಕ್ಕೆ ಶಿಕ್ಷಕರಿಗೆ ಪರಮ ಆದರ್ಶವಾಗುವ ಮಟ್ಟದ ಘನತೆ ಇಲ್ಲ

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.

ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.

ಅದು ಇಲ್ಲಿದೆ 

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ

ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ 

ಸಂವರ್ಥ ಸಾಹಿಲ್ ಕಟ್ಟಿಕೊಟ್ಟ ನೋಟ ಇಲ್ಲಿದೆ   

ಇದೀಗ ಕಂಠೀರವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ- ಅದು ಇಲ್ಲಿದೆ 

 

ಪಂಡಿತಾರಾಧ್ಯರು ೨೦೦೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರಾಗಿದ್ದಾಗ ಆ ವರ್ಷ ಸಂಘವು ನಡೆಸಿದ ಆಧ್ಯಾಪಕರ ದಿನಾಚರಣೆಯ ಕಾರ್ಯಕ್ರಮಕ್ಕೆ ಸಂಘದ ಹಿಂದಿನ ಅಧ್ಯಕ್ಷರೂ, ಕನ್ನಡದ ಪ್ರಸಿದ್ಧ ವಿಮರ್ಶಕರೂ, ಪಂಡಿತಾರಾಧ್ಯರ ಗುರುಗಳೂ ಆದ ಪ್ರೊ.ಜಿ.ಎಚ್. ನಾಯಕರು ಮುಖ್ಯ ಅತಿಥಿಯಾಗಿ ಬಂದಿದ್ದರು.

ಅವರು ಮಾಡಿದ ಭಾಷಣದ ಪೂರ್ಣಪಾಠ ‘ಅವಧಿ’ಯ ಓದುಗರಿಗಾಗಿ ಇಲ್ಲಿ ಪ್ರಕಟಿಸಿದ್ದೇವೆ.

ಸೆಪ್ಟೆಂಬರ್ ೫ ರಾಧಾಕೃಷ್ಣನ್ ಅವರ ಜನ್ಮದಿನವಲ್ಲದ್ದರಿಂದ ಯುನೆಸ್ಕೋ ನಡೆಸುವ ವಿಶ್ವ ಅಧ್ಯಾಪಕರ ದಿನವಾದ ಅಕ್ಟೋಬರ್ ೫ ರಂದು ಸಂಘವು ಅಧ್ಯಾಪಕರ ದಿನವನ್ನು ಆಚರಿಸುತ್ತಿತ್ತು.

ಪಂಡಿತಾರಾಧ್ಯರ ಬ್ಲಾಗ್ ಲೇಖನದ ಕೊಂಡಿ ಇಲ್ಲಿದೆ 

 

 

ಅಧ್ಯಾಪಕರ ದಿನಾಚರಣೆ : ಪರಿಕಲ್ಪನೆ, ಸ್ವರೂಪ 

ಪ್ರೊ ಜಿ ಎಚ್ ನಾಯಕ

‘ಅಧ್ಯಾಪಕರ ದಿನಾಚರಣೆ : ಪರಿಕಲ್ಪನೆ, ಸ್ವರೂಪ’ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದಲ್ಲಿ ೫-೯-೨೦೦೮ರಂದು ನಾನು ವಿಶೇಷ ಉಪನ್ಯಾಸ ನೀಡಿದ್ದೆ.

ನನ್ನ ಭಾಷಣದ ಪತ್ರಿಕಾವರದಿ ಓದಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿಯವರು ‘ಪ್ರೊ ನಾಯಕರ ತರ್ಕವನ್ನು ಒಪ್ಪಬಹುದಾದರೂ ಡಾ ರಾಧಾಕೃಷ್ಣನ್ ಉಪಾಧ್ಯಾಯ ವೃತ್ತಿಗೊಂದು ಮಹತ್ತ್ವವನ್ನು ಕೊಟ್ಟಿರುವುದನ್ನು ಮರೆಯಬಾರದು. ಅದು ಶಿಕ್ಷಕರ ದಿನಾಚರಣೆ. ಅಷ್ಟೇ. ಡಾ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಲ್ಲ ಎಂದು ತಿಳಿದರೆ ನಮ್ಮ ಸಮಸ್ಯೆ ಬಗೆಹರಿಯಬಹುದೆನಿಸುತ್ತದೆ’ ಎಂದಿದ್ದಾರೆ (ಪ್ರಜಾವಾಣಿ ೧೮-೯-೨೦೦೮).

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರು ‘ರಾಧಾಕೃಷ್ಣನ್ ರಾಷ್ಟ್ರಪತಿಯಾಗುವುದರ ಮೂಲಕ ಅಧ್ಯಾಪಕ ವರ್ಗಕ್ಕೇ ಗೌರವ ತಂದುಕೊಟ್ಟರು. ಅವರ ಹೆಸರಿನಲ್ಲಿ ಶಿಕ್ಷಕರ ದಿನವನ್ನು ಆಚರಿಸುವುದು ಅರ್ಥಪೂರ್ಣವಾಗಿದೆ’ ಎಂದು ಹೇಳಿ ನನ್ನ ಹೇಳಿಕೆ ಸಮಂಜಸವಲ್ಲ ಎಂದು ಆಕ್ಷೇಪಿಸಿದ್ದಾರೆ (ಕನ್ನಡಪ್ರಭ ೧೪-೯-೨೦೦೮).

ನನ್ನ ಹೇಳಿಕೆ ಮತ್ತು ಅಭಿಪ್ರಾಯಗಳ ಬಗ್ಗೆ ಸಂಕ್ಷಿಪ್ತವಾಗಿಯಾದರೂ ವಿವರ ನೀಡುವುದು ಅಗತ್ಯವೆಂದು ಭಾವಿಸಿದ್ದೇನೆ:

೧. ಅಧ್ಯಾಪಕರ ದಿನಾಚರಣೆ ಮಾಡುವುದು ಅಧ್ಯಾಪಕರಿಗೆ, ಅಧ್ಯಾಪಕ ವೃತ್ತಿಗೆ ಗೌರವ, ಕೃತಜ್ಞತೆ ಸೂಚಿಸುವುದಕ್ಕೆ. ಆದರೆ ಈಗಿರುವಂತೆ ಅದು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಅಧ್ಯಾಪಕ ವರ್ಗವು ಅವರ ಜನ್ಮದಿನದಂದು ಗೌರವ, ಕೃತಜ್ಞತೆ ಸಲ್ಲಿಸುವ ಆರಾಧನಾ ದಿನವೆಂಬಂಥ ಸ್ವರೂಪ ಪಡೆದುಕೊಂಡಿದೆ. ಈ ಸ್ವರೂಪದಲ್ಲಿ ಅದು ಮುಂದುವರಿಯುವುದು ತರವಲ್ಲ. ರಾಧಾಕೃಷ್ಣನ್ ಅವರ ವ್ಯಕ್ತಿತ್ವಕ್ಕೆ, ಅವರ ವೃತ್ತಿನಿಷ್ಠೆಗೆ ಅಧ್ಯಾಪಕರಿಗೆ ಪರಮ ಆದರ್ಶವಾಗುವ ಮಟ್ಟದ ಘನತೆಯೂ ಇಲ್ಲ; ಅಧ್ಯಾಪಕ ವರ್ಗಕ್ಕೆ ಅಧ್ಯಾಪಕ ವೃತ್ತಿಗೆ ಯಾರದೇ ವ್ಯಕ್ತಿಪೂಜೆ ಗೌರವದ ಸಂಗತಿಯೂ ಅಲ್ಲ. ಅಕ್ಟೋಬರ್ ೫ ಅಧ್ಯಾಪಕರ ದಿನ ಎಂದು ಯುನೆಸ್ಕೊ ಘೋಷಿಸಿದೆ. ಆ ದಿನವನ್ನೇ ಅಧ್ಯಾಪಕರ ದಿನವೆಂದು ಆಚರಿಸುವ ಬಗ್ಗೆ ಅಧ್ಯಾಪಕರ `ನ್ಯಾಷನಲ್ ಫೆಡರೇಷನ್’ ಯೋಚಿಸಬಾರದೇಕೆ?

೨. ಅಧ್ಯಾಪಕರ ದಿನವನ್ನು ಸೆಪ್ಟೆಂಬರ್ ೫ರಂದು ಆಚರಿಸುತ್ತಿರುವುದರಿಂದ ನನಗೆ ಸಂತೋಷವಾಗುವುದಕ್ಕೆ ವೈಯಕ್ತಿಕವಾದ ಅಷ್ಟೇನೂ ಮಹತ್ವದ್ದಲ್ಲದ ಒಂದು ಕಾರಣವೇನೊ ಇದೆ! ನಾನು ಅಧ್ಯಾಪಕ ವೃತ್ತಿಗೆ ಸೇರಿದ ದಿನ ಸೆಪ್ಟೆಂಬರ್ ೫, ೧೯೬೦. ಆ ದಿನ ನಾನು ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ನನ್ನ ಅಧ್ಯಾಪಕ ವೃತ್ತಿ ಆರಂಭಿಸಿದೆ.

೩. ಸೆಪ್ಟೆಂಬರ್ ೫ ರಾಧಾಕೃಷ್ಣನ್ ಅವರ ಜನ್ಮದಿನ ಎಂಬುದೇ ವಿವಾದಾಸ್ಪದ. ಅದು ೫-೯-೧೮೮೮ ಅಲ್ಲ, ೨೦-೯-೧೮೮೭ ಎಂದು ಅವರ ಮಗ, ಇತಿಹಾಸ ಪ್ರಾಧ್ಯಾಪಕ, ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಡಾ ಸರ್ವಪಲ್ಲಿ ಗೋಪಾಲ್ ಬರೆದಿದ್ದಾರೆ. (ನೋಡಿ: RADHAKRISHNAN – A Biography. Oxford University Press, ೧೯೮೯(ಪು. ೧೦).

೪. ರಾಧಾಕೃಷ್ಣನ್ ಅವರ ಹುಟ್ಟಿನ ಬಗ್ಗೆ ಗೋಪಾಲ್ ಬರೆದಿರುವುದು ನಿಜವೇ ಆಗಿದ್ದರೂ ಅದಕ್ಕೆ ರಾಧಾಕೃಷ್ಣನ್ ಹೊಣೆಗಾರರಲ್ಲ. ಆ ಕಾರಣಕ್ಕಾಗಿ ತಾಯಿಯನ್ನು ಆಕೆಯ ದೀರ್ಘ ಜೀವನದುದ್ದಕ್ಕೂ ಅವರು ದೂರವೇ ಇಟ್ಟಿದ್ದರೆಂದು ಗೋಪಾಲ್ ಬರೆಯುತ್ತಾರೆ:
‘Most of the major details about the birth of Sarvepalli Radhakrishnan are uncertain. The official version is that he was born on 5 September 1888 at Tirutani, a very small temple town to the north-west of Madras city, the second son of a poor Brahmin couple, Sarvepalli Veeraswami and his wife Sitamma. However, Radhakrishnan himself was inclined to believe that the date of his birth was in fact 20 September 1887. More important is the doubt whether Veeraswami was his father. Parental responsibility lay, according to village rumour, with an itinerant Vaishnavite official. Sitamma’s brother, who served in the local administration, was thought to have arranged the rendezvous to oblige a superior officer. Credence is lent to the story by the difficulty in believing that Radhakrishnan and his four brothers and sister belonged to the same genetic pool. Intellectual endowment and physical appearance both suggested that Radhakrishnan belonged to different stock. Radhakrishnan himself accepted this version and, critical of his mother’s conduct, always, throughout her long life, kept her at a distance. But he was attached to the man who passed for his father(ಪು ೧೦).

ಅಂಥ ನಿಷ್ಠುರ ನೈತಿಕ ಕ್ರೋಧ ಪ್ರದರ್ಶಿಸಿದ ರಾಧಾಕೃಷ್ಣನ್ಅವರ ಬಗ್ಗೆ ಗೋಪಾಲ್ ಅವರ ಬರವಣಿಗೆಯಿಂದ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ:

‘…Radhakrishnan began, too, to show an interest in other women… He would not accept, even to himself, that his loyalty to her(ಅವರ ಹೆಂಡತಿ) was tarnished by his extra-marital adventures…Marriage as he saw it, did not require a husband’s monogamous attitude. She was a devoted wife by any standards'(ಪು ೧೪). ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಪಕ್ಕದ ಮನೆಯವನ ಹೆಂಡತಿಯೊಂದಿಗೆ ಪ್ರಾರಂಭವಾಗಿ, ಮುಂದೆ ಹಲವು ಹೆಂಗಸರೊಂದಿಗೆ ಸರಮಾಲೆಯಾಗಿ ಬೆಳೆದ ಸಂಬಂಧ ವ್ಯವಹಾರಗಳ ಬಗ್ಗೆ ಗೋಪಾಲ್ ಬರೆದಿದ್ದಾರೆ: ‘…he showed his mistresses consideration…but he never gave them even the semblance of love…all the women whom he accepted in his life were of superficial mind, some enjoyed dubious reputations and many were dominating and hysterical’ (ಪು. ೫೦-೫೧). ಮತ್ತೊಂದು ಕಡೆ ಗೋಪಾಲ್, ‘…But what casts a shadow is the contrast between the way he conducted his private life and what he preached in public’ ಎಂದು ಬರೆಯುತ್ತ ಕಲ್ಕತ್ತಾದಲ್ಲಿ ೧೯೪೨ರ ಡಿಸೆಂಬರಿನಲ್ಲಿ, ಅವರ ಒಬ್ಬ ‘ಮಿಸ್ಟ್ರೆಸ್’ ಮುಂದಿನ ಸಾಲಿನಲ್ಲಿಯೇ ಕುಳಿತಿರುವ ಸಭೆಯಲ್ಲಿ ಏಕಪತ್ನಿ ನಿಷ್ಠೆಯ ವೈವಾಹಿಕ ಜೀವನ ಶ್ರೇಷ್ಠವೆಂದು ಪ್ರತಿಪಾದಿಸಿ ರಾಧಾಕೃಷ್ಣನ್ ಭಾಷಣ ಮಾಡಿದ್ದನ್ನು ಉದಾಹರಣೆಯಾಗಿ ನೀಡುತ್ತಾರೆ (ಪು.೩೮೦). ಹೇಳುವುದೊಂದು ಮಾಡುವುದಿನ್ನೊಂದು ಈ ಆತ್ಮವಂಚಕ ಬುದ್ಧಿ ಯಾಕೆ, ಎಂದು ರಾಧಾಕೃಷ್ಣನ್ ಅವರನ್ನು ಕೇಳಿದರೆ ಅವರ ಉತ್ತರ ಏನಿದ್ದೀತು, ಎಂಬ ಬಗ್ಗೆ ಕೂಡ ಗೋಪಾಲ್ ಬರೆಯುತ್ತಾರೆ: ‘Radhakrishnan’s answer to the charge of hypocracy would have been that it was his duty to lay down the highest standards even if he himself failed to reach them’(ಪು ೩೮೦).

ರಾಧಾಕೃಷ್ಣನ್ ತಮ್ಮ ಐವರು ಹೆಣ್ಣುಮಕ್ಕಳ ಮದುವೆಯನ್ನೂ ಹನ್ನೊಂದರಿಂದ ಹದಿನಾರು ವರ್ಷಗಳ ಒಳಗೇ ಅವರ ಒಪ್ಪಿಗೆ ಕೇಳದೆ ಮಾಡಿದ್ದಲ್ಲದೆ ಮದುವೆ ದಿನಕ್ಕಿಂತ ಮೊದಲು ವರನಾಗುವವನನ್ನು ತಾವು ನೋಡದೆ ಇದ್ದ ಉದಾಹರಣೆಯೂ ಇದೆ ಎಂದು ಕೂಡ ಗೋಪಾಲ್ ಹೇಳಿ, ‘But his attitude also indicates that, whatever his utterances, his instinctive outlook was that women were made for men’ಎಂದಿದ್ದಾರೆ(ಪು. ೪೯). ಇಂಥವರನ್ನು ಅಧ್ಯಾಪಕ ವರ್ಗ ಆದರ್ಶಪ್ರಾಯರೆಂದು ಆರಾಧಿಸಬೇಕೆ?

೫. ಅಧ್ಯಾಪಕರ ಪರಮ ಆದರ್ಶ ಆ ವೃತ್ತಿಗೆ ಸಂಬಂಧಿಸಿರದ ರಾಷ್ಟ್ರಪತಿಯಂಥ ರಾಜಕೀಯ ಹುದ್ದೆ ಪಡೆಯುವುದರಲ್ಲಿದೆ ಎನ್ನಬಹುದೆ? ಅದೇ ಪರಮ ಆದರ್ಶ ಎಂದಾದಲ್ಲಿ ಡಾ ಝಕೀರ್ ಹುಸೇನ್ ಕೂಡ ಪ್ರಾಧ್ಯಾಪಕ, ಕುಲಪತಿ, ಉಪರಾಷ್ಟ್ರಪತಿ, ರಾಷ್ಟ್ರಪತಿ ಆಗಿದ್ದರಲ್ಲವೆ? ಭಾರತದ ಈಗಿನ ಪ್ರಧಾನಿ ಡಾ ಮನಮೋಹನ ಸಿಂಗ್ ಅವರೂ ಅಧ್ಯಾಪಕರಾಗಿದ್ದವರೇ ಅಲ್ಲವೆ?

ಅಧ್ಯಾಪಕವರ್ಗ ಎಲ್ಲ ವರ್ಗಗಳಿಗಿಂತ ಹೆಚ್ಚು ಪ್ರಜ್ಞಾವಂತ ವರ್ಗ. ಪ್ರಜ್ಞಾವಂತರಾದವರು ಉನ್ನತೋನ್ನತ ರಾಜಕೀಯ ಹುದ್ದೆಗಳಲ್ಲಿ ಇರುವಂತಾದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲುವು. ಹಾಗಾದಲ್ಲಿ ಎಲ್ಲ ವರ್ಗದವರೂ ಸಂತೋಷ ಪಡಬೇಕು; ಅಧ್ಯಾಪಕವರ್ಗ ಅದು ತಮಗೆ ಮಾತ್ರವೇ ಗೌರವ ಎಂದು ಸಂಭ್ರಮ ತೋರಬೇಕಾದ್ದಿಲ್ಲ. ಅಂಥ ಹುದ್ದೆಗಳಿಗೆ ಬಂದವರು, ಬರುವವರು ಪ್ರಜ್ಞಾವಂತರು, ಶ್ರೇಷ್ಠ ವಿದ್ವಾಂಸರು ಆಗಿದ್ದರೆ ಮಾತ್ರ ಸಾಲದು, ಶುಭ್ರಶೀಲವಂತರೂ ಆಗಿರಬೇಕೆಂದು ಅಧ್ಯಾಪಕವರ್ಗ ಬಯಸಬೇಕಲ್ಲವೆ?

ಅಧ್ಯಾಪಕರೇ ಆಗಿದ್ದ ಕುವೆಂಪು ಹೇಳುವ ಅಸೀಮ ಜ್ಞಾನಲೋಕದ ಅಂದರೆ ಅನಿಕೇತನ ಪ್ರಜ್ಞೆಯ ಯಾತ್ರಿಕನಾಗಿರಬೇಕಾದ ಹಾಗೂ ಅರಿವು ಇರವು ಬಿಡಿ ಬಿಡಿಯಾಗಿರದೆ ಇಡಿಯಾಗಿರಬೇಕಾದ ಪೂರ್ಣದೃಷ್ಟಿಯ ಬೆನ್ನುಹತ್ತಿ ಸಾಗುತ್ತಲೇ ಇರಬೇಕಾದ ಅನಂತಯಾತ್ರೀ ಆದರ್ಶವನ್ನು ಅಧ್ಯಾಪಕವರ್ಗದವರು, ಪರಿಕಲ್ಪನೆ, ಕಲ್ಪನೆಗಳಲ್ಲಿಯಾದರೂ ಕಲ್ಪಿಸಿಕೊಳ್ಳಲಾಗದಂಥ ಕುಬ್ಜರಾಗಬೇಕೆ?

೬. ರಾಧಾಕೃಷ್ಣನ್ ೧೯೪೯ರಿಂದ ೧೯೬೭ರವರೆಗೆ ಹದಿನೆಂಟು ವರ್ಷಗಳ ಕಾಲ ರಾಜಕೀಯದ ಆಡಳಿತ ವ್ಯವಸ್ಥೆಯ ಭಾಗವಾಗಿ ಭಾರತದ ರಾಯಭಾರಿ, ಉಪರಾಷ್ಟ್ರಪತಿ, ರಾಷ್ಟ್ರಪತಿ -ಹೀಗೆ ಉನ್ನತೋನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವುದರ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದರು. ಅದು ಅವರ ತತ್ತ್ವಶಾಸ್ತ್ರದ ವಿದ್ವತ್ತು ಮತ್ತು ತತ್ತ್ವಜ್ಞಾನ ಪರಿಪಕ್ವವಾಗಿದ್ದ ಕಾಲಘಟ್ಟವಾಗಿತ್ತು. ಅಂಥ ಕಾಲದಲ್ಲಿ ಅವರ ಪ್ರಥಮ ಪ್ರೇಮ ಅವುಗಳ ಬಗ್ಗೆ ಇರದೆ ವ್ಯವಸ್ಥೆಯ ಭಾಗವಾದ ಅಧಿಕಾರದ ಬಗೆಗಿನ ವ್ಯಾಮೋಹವಾಗಿಬಿಟ್ಟಿತ್ತು. ಅಷ್ಟೂ ವರ್ಷಗಳ ಕಾಲ ಅವರ ವೃತ್ತಿನಿಷ್ಠೆ, ಜ್ಞಾನನಿಷ್ಠೆ ಎಲ್ಲಿದ್ದವು?

೭. ಉಜ್ವಲ ದೇಶಭಕ್ತಿ, ರಾಜಕೀಯದಲ್ಲಿ ಉತ್ಕಟ ಆಸಕ್ತಿ, ದೇಶದ ಆಗುಹೋಗುಗಳಲ್ಲಿ ಅಪಾರ ಕಾಳಜಿ ಇವು ಕಾರಣವಾಗಿ ರಾಧಾಕೃಷ್ಣನ್ ರಾಜಕೀಯದಲ್ಲಿ ಸೇವೆ ಸಲ್ಲಿಸಲು ಮುಂದಾದವರೆಂದು ಹೇಳಬಹುದೆ? ಸ್ವಾತಂತ್ರ್ಯಪೂರ್ವದಲ್ಲಿ ದೇಶ ಪರಕೀಯರ ಆಡಳಿತದಲ್ಲಿದ್ದಾಗ ಅವರಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಹೋರಾಟ ಮಾಡಬೇಕೆಂಬ ಜಾಗೃತಿ, ಪ್ರೇರಣೆ ಉಂಟಾಗಲಿಲ್ಲ ಏಕೆ? ರಾಧಾಕೃಷ್ಣನ್ ಅವರೊಳಗಿದ್ದ ದೇಶಭಕ್ತ ಆಗ ಎಲ್ಲಿದ್ದ? ಖಾದಿಯನ್ನಾದರೂ ಧರಿಸುವ ಮೂಲಕ ದೇಶಭಕ್ತಿಯನ್ನು ಸಾಂಕೇತಿಕವಾಗಿ ಸೂಚಿಸುವುದನ್ನಾದರೂ ಮಾಡಿದ್ದರೆ? ಗಾಂಧೀಜಿ ಕುರಿತ ಲೇಖನವೊಂದನ್ನು ರಾಧಾಕೃಷ್ಣನ್ ಹುಸಿ ಹೆಸರಿನಲ್ಲಿ ಪ್ರಕಟಿಸಿದ್ದರು(ಪು. ೬೭). ಗಾಂಧೀಜಿಯವರ ವಿಚಾರಗಳ ತತ್ತ್ವಶಾಸ್ತ್ರೀಯ ಅಧ್ಯಯನ ಕುರಿತ Gandhi and the Indian Problem ಪುಸ್ತಕ ಪ್ರಕಟಿಸಲೆಂದು ಆಗಿನ ಮದ್ರಾಸ್ ಸರಕಾರದ ಅನುಮತಿಗೆ ಬರೆದಾಗ ಹಸ್ತಪ್ರತಿ ಒಪ್ಪಿಸಲು ಸರಕಾರ ಕೇಳಿದ್ದರಿಂದ ಧೈರ್ಯಗುಂದಿ ಆ ಪ್ರಕಟಣೆಯ ಯೋಜನೆಯನ್ನೇ ಕೈಬಿಟ್ಟಿದ್ದರು(ಪು.೬೯). ಆದರೆ ಗಾಂಧೀಜಿಯ ಆತ್ಮಚರಿತ್ರೆ My Experiments with Truth ಹೆಸರಿನಂತೆಯೇ ರಾಧಾಕೃಷ್ಣನ್ ಅವರ ಆತ್ಮಚರಿತ್ರಾತ್ಮಕ ಲೇಖನದ ಹೆಸರೂ My Search for Truth ಎಂದಿರುವುದು ಗಮನಾರ್ಹ! ರಾಧಾಕೃಷ್ಣನ್ ಅವರ ಸತ್ಯನಿಷ್ಠೆ, ಧೈರ್ಯದ ಸ್ವರೂಪ ಹೀಗಿದ್ದವು.

೮. ೭೯-೮೦ ವರ್ಷದ ‘ತತ್ತ್ವಜ್ಞಾನಿ’ ಕೈ ಮರಗಟ್ಟಿ, ಮಾತು ಅಸ್ತವ್ಯಸ್ತವಾಗಿ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗುತ್ತಿರುವಾಗಲೂ ರಾಷ್ಟ್ರಪತಿಯಾಗಿ ಎರಡನೇ ಅವಧಿಗೆ ಮುಂದುವರಿಯುವ ಆಸೆ ಬಿಡದಿದ್ದುದು ಏನನ್ನು ಹೇಳುತ್ತದೆ? ಆ ಕಾಲಕ್ಕಾಗಲೇ ಚತುರ ರಾಜಕಾರಣಿಯಾಗಿ ಬೆಳೆದಿದ್ದ ಇಂದಿರಾಗಾಂಧಿ, ಪ್ರಧಾನಿಯಾಗಲು ತಮ್ಮನ್ನು ಹುರಿದುಂಬಿಸಿ ನೆರವಾಗಿದ್ದ ರಾಧಾಕೃಷ್ಣನ್ ಅವರನ್ನು ಆಸೆಹುಟ್ಟಿಸುತ್ತಲೇ ನಿವಾರಿಸಿಕೊಂಡರು (ಪು. ೩೪೫-೪೭). ‘ಭಾರತರತ್ನ’ ರಾಧಾಕೃಷ್ಣನ್ ಅವರ ‘ಕೆರಿಯರಿಸ್ಟ್’ ಬದುಕಿನ ಕಾಲ ಮುಗಿದದ್ದು ಹೀಗೆ. ಆ ಸಂದರ್ಭದ ಅವರ ನಡವಳಿಕೆಯಲ್ಲಿಯೂ, ಇಂದಿರಾ ಗಾಂಧಿ ಪ್ರಧಾನಿಯಾದಾಗ ‘now one could at least be sure of seeing a pretty face every morning in the news papers’ ಎಂದ ಅವರ ಮಾತಿನಲ್ಲಿಯೂ ತತ್ತ್ವಜ್ಞಾನಿಯ ಘನತೆ, ಔನ್ನತ್ಯ ಕಾಣಿಸಲಿಲ್ಲ. ತನ್ನ ಬಗ್ಗೆ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಹೇಳಿದ ಆ ಮಾತು ಸ್ವತಃ ಇಂದಿರಾಗಾಂಧಿಯವರಿಗೇ ಇಷ್ಟವಾಗಿರಲಿಲ್ಲ ಎನ್ನಲಾಗಿದೆ(ಪು. ೩೪೭). ಪುಸ್ತಕದ ಮೊದಲ ಮಾತಿನಲ್ಲಿ ಗ್ರಂಥಕರ್ತ ಡಾ. ಸರ್ವಪಲ್ಲಿ ಗೋಪಾಲ್ ಹೇಳಿರುವ,
‘This is a son’s book. The relations between my father and me were closer and more continuous than is usual, in this age between parents and children…such close association enabled me to be witness to a great deal in the later years that has been recounted here. But I have tried not to be swayed by personal affection and have shirked nothing’ (Preface, p.vii)ಎಂಬ ಮಾತು ಗಮನಾರ್ಹವಾಗಿದೆ.

ಮೂಢ ನಂಬಿಕೆಯ ಆಚರಣೆ, ಸಾಂಪ್ರದಾಯಿಕ ಉತ್ಸವದ ರೀತಿಯಲ್ಲಿ ಅಧ್ಯಾಪಕರ ದಿನವನ್ನು ಸೆಪ್ಟೆಂಬರ್ ೫ರಂದು ಆಚರಿಸುವುದನ್ನು ಈಗಿರುವಂತೆಯೇ ಮುಂದುವರೆಸಿಕೊಂಡು ಹೋಗುವುದು ಸರಿಯೆ, ಔಚಿತ್ಯಪೂರ್ಣವೆ ಎಂಬ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.

—-
* ೨೦೦೯ರಿಂದ ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘವು ಸೆಪ್ಟೆಂಬರ್ ೫ರ ಬದಲು ಯುನೆಸ್ಕೋ ಘೋಷಿಸಿರುವಂತೆ ಅಕ್ಟೋಬರ್ ೫ರಂದು ‘ವಿಶ್ವ ಶಿಕ್ಷಕರ ದಿನ’ವನ್ನು ಆಚರಿಸುತ್ತಿದೆ.

‍ಲೇಖಕರು avadhi

September 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: