ಚಿಟ್ಟಾಣಿಯವರೊ೦ದಿಗೆ ಡಾ.ವಿಠ್ಠಲ ಭಂಡಾರಿ

ಕುಣಿಯುವ ನವಿಲಿಗೆ ಪದ್ಮಶ್ರೀ ಗೆಜ್ಜೆ

- ಡಾ.ವಿಠ್ಠಲ ಭಂಡಾರಿ

ಕುಮಾರವ್ಯಾಸ ಹಾಡಿದನೆಂದರೆ

ಕಲಿಯುಗ ದ್ವಾಪರವಾಗುವುದು ಇದು ಕುವೆಂಪು ಗದುಗಿನ ಭಾರತ ಓದಿ ಬರೆದ ಕವಿತೆ. ಹಾಗೆಯೇ ಚಿಟ್ಟಾಣಿಯವರು ಕುಣಿದರೆಂದರೆ ದ್ವಾಪರ, ತ್ರೇತಾಯುಗ ಇತ್ಯಾದಿ ಎಲ್ಲಾ ಯುಗಗಳು 4 ಕಂಬದ ರಂಗಸ್ಥಳದ ಮೇಲೆ ಸೃಷ್ಟಿಗೊಳ್ಳುವುದರಲ್ಲಿ ಅನುಮಾನವಿಲ್ಲ. ನಿಂತ ಸ್ಥಳವನ್ನೇ ಬಣ್ಣ ಬೆಡಗಿನ ಲೋಕವಾಗಿ ಮರುಸೃಷ್ಟಿಗೊಳಿಸಬಲ್ಲ ಶಕ್ತಿ ಇರುವುದು ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕುಣಿತಕ್ಕೆ. ಒಂದರ್ಥದಲ್ಲಿ ಯಕ್ಷಗಾನ ರಂಗದ ಮಂತ್ರವಾದಿ ಇವರು. ನೀಲಗಗನದೊಳು ನವಿಲು ಕುಣಿಯುತಿದೆ ನೋಡು ಎಂದು ನವಿಲು ಕುಣಿತಕ್ಕೆ ಪ್ರಾರಂಭಿಸಿದರೆ ಶೃಂಗಾರ ರಸ ಸಾಕಾರಗೊಳ್ಳುತ್ತದೆ. ನೋಡಿರಿ ಧರ್ಮಜ ಪಲುಗುಣಾದಿಗಳೇ ಎಂದು ಗದಾಯುದ್ಧದಲ್ಲಿ ಭೀಮ ಬಿದ್ದ ಖುಶಿಗೆ ಕೌರವ ಪಡುವ ಸಂಭ್ರಮದ ಕುಣಿತ ರನ್ನನ ಇಡೀ ಕಾವ್ಯವನ್ನೇ ಮತ್ತೊಮ್ಮೆ ನೆನಪಿಸುತ್ತದೆ. ಕೌರವನ ಪಾತ್ರವಂತೂ ರನ್ನನ ಕಾವ್ಯದ ಒಂದು ಸಾರ್ಥಕ ಮರು ಸೃಷ್ಟಿಯೇ ಆಗಿದೆ. ಪದ್ಮಶ್ರೀ ಗೌರವಕ್ಕಾಗಿ ಇವರನ್ನು ಆಯ್ಕೆ ಮಾಡಿಕೊಂಡಿರುವ ಆಯ್ಕೆ ಸಮಿತಿಯನ್ನು ಖಂಡಿತವಾಗಿಯೂ ಅಭಿನಂದಿಸಲೇ ಬೇಕು. ಇತ್ತೀಚಿಗಂತೂ ಸಕರ್ಾರ ನೀಡುವ ಪ್ರಶಸ್ತಿ-ಪುರಸ್ಕಾರಗಳೆಲ್ಲವೂ ಅಪಮೌಲ್ಯಗೊಳ್ಳುತ್ತಿರುವಾಗ ಚಿಟ್ಟಾಣಿಯವರಿಗೆ ಪ್ರಶಸ್ತಿ ನೀಡಿದ್ದು ಇಂಥ ಪ್ರಶಸ್ತಿಗಳ ಮೇಲೆ ಒಂದು ಚೂರು ಭರವಸೆ ಹುಟ್ಟಿಸಿತು. ಸಾಮಾನ್ಯವಾಗಿ ಪ್ರಶಸ್ತಿ ಬಂದಾಗ ಏನಾದರೂ ಒಂದು ಕೊಂಕು, ಅಪಸ್ವರ, (ಸರಿ ಆದ ಆಯ್ಕೆ ಇದ್ದಾಗಲೂ) ಇದ್ದೇ ಇರುತ್ತದೆ. ಆದರೆ, ಚಿಟ್ಟಾಣಿಯವರಿಗೆ ಈ ಪ್ರಶಸ್ತಿ ಬಂದಾಗ ಯಾವುದೇ ಅಪಸ್ವರ ಬರದಿರುವುದು ಚಿಟ್ಟಾಣಿಯವರ ಜನಪ್ರಿಯತೆಗೆ ಸಾಕ್ಷಿ. ಚಿಟ್ಟಾಣಿಯವರು ಶಾಸ್ತ್ರಬದ್ಧವಾಗಿ ಕಲಿತವರಲ್ಲ. ಯಕ್ಷಗಾನವನ್ನು ನೋಡಿ, ಕೇಳಿ, ಅನುಕರಿಸಿ ಕಲಿತ ಒಬ್ಬ ಅಪ್ಪಟ ಜಾನಪದ ಕಲಾವಿದ. ಹಾಗಾಗಿ ಈ ಹಿಂದೆ ಅವರಿಗೆ ನೀಡಿದ ‘ಜಾನಪದ ಶ್ರೀ’ ಪ್ರಶಸ್ತಿ ಕೂಡ ಯೋಗ್ಯವಾದದ್ದೇ ಆಗಿತ್ತು. ಹುಟ್ಟಿದ್ದು ಗ್ರಾಮೀಣ ಕುಗ್ರಾಮದಲ್ಲಿ, ಕಲಿತದ್ದು ಎರಡನೇ ಈಯತ್ತೆ, ಬೆಳೆದದ್ದು ಬಡತನದಲ್ಲಿ. ಕುಟುಂಬದ ಹಿರಿಯರ್ಯಾರೂ ನಟರಲ್ಲ. .. . . ಇವೆಲ್ಲವೂ ವ್ಯಕ್ತಿಯ ಬೆಳವಣಿಗೆಯ ತೊಡಕುಗಳೇ. ಪ್ರತಿಭೆ, ಸಾಮಥ್ರ್ಯ ಇದ್ದೂ ವ್ಯಕ್ತಿಯೊಬ್ಬನಲ್ಲಿ ಕೀಳರಿಮೆ ಹುಟ್ಟಿಸುವ ಸಂಗತಿಗಳಿವು. ಆದರೆ ಚಿಟ್ಟಾಣಿಯವರು ಇದನ್ನೆಲ್ಲಾ ತನ್ನ ಸಾಧನೆಯ ಮೆಟ್ಟಿಲನ್ನಾಗಿಸಿಕೊಂಡರು. ಕಲೆಯ ಕುರಿತ ತಮ್ಮ ಬದ್ಧತೆ, ಪರಿಶ್ರಮದಿಂದ ಬೆಳೆದ ಎತ್ತರ ಮಾತ್ರ ಬೆರಗು ಹುಟ್ಟಿಸುವಂಥದು. ಆಶ್ಚರ್ಯವೆಂದರೆ, ಅವರಿಗಿರುವ ನ್ಯೂನತೆಗಳನ್ನೆಲ್ಲ ಅವರು ತನ್ನ ಬೆಳವಣಿಗೆಯ ಅಸ್ತ್ರವನ್ನಾಗಿಸಿಕೊಂಡರು. ಉದಾಹರಣೆಗೆ ಅನಕ್ಷರತೆ ಮತ್ತು ಮಾತಿನ ತೊಡಕನ್ನೇ ನೋಡಿ. ತೆಂಕಿನ ಆರ್ಭಟದಲ್ಲಿ ಮಾತೇ ಯಕ್ಷಗಾನದ ಪ್ರಮುಖ ಅಂಗ ಎಂಬಂತೆ ಬಿಂಬಿತವಾದ ಕಾಲದಲ್ಲಿ ಚಿಟ್ಟಾಣಿಯವರಿಗೆ ‘ಮಾತು’ ಒಂದು ಸಮಸ್ಯೆ ಎಂದು ಪ್ರಚಾರ ಮಾಡಲಾಯಿತು. ಪ್ರಚಾರ ನಡೆದಷ್ಟು ಅಲ್ಲದಿದ್ದರೂ ನನಗೆ ಮಾತಿನ ತೊಡಕಿತ್ತು. ರಂಗದ ಮೇಲೆ ಹೋಗಿ ಏನು ತೋಚುತ್ತದೋ ಅದನ್ನೆಲ್ಲ ಹೇಳಿ ಬರುತ್ತಿದ್ದೆ. ಎಂದು ಅವರೇ ಹೇಳಿಕೊಂಡಿದ್ದಾರೆ. ಅಧ್ಯಯನ ಮಾಡೋಣವೆಂದರೆ, ಕಲಿತದ್ದೇ ಕಡಿಮೆ. ನಮ್ಮದೆಲ್ಲಾ ನೋಡಿ- ಕೇಳಿ ಕಲಿತದ್ದು. ಓದಿಲ್ದೆ ಏನೋ ನಡೆಯಿತು. ಆದರೆ ಹೊಸ ಕಲಾವಿದರು ಹೆಚ್ಚೆಚ್ಚು ಅಧ್ಯಯನ ಮಾಡಬೇಕು. ಎನ್ನುತ್ತಾರೆ. ಹೀಗೆ ಅವರಿಗೆ ಮಾತನಾಡಬೇಕೆನ್ನಿಸಿದೆ. ಅಧ್ಯಯನ ಮಾಡಬೇಕೆನ್ನಿಸಿದೆ ಅವರಿಗೆ: ಇವೆರಡೂ ತನ್ನ ನ್ಯೂನತೆಯೆಂದು ‘ಪದ್ಮಶ್ರೀ’ ಬಂದ ಮೇಲೂ ವಿನಯದಿಂದ ಒಪ್ಪಿಕೊಳ್ಳುವ ಚಿಟ್ಟಾಣಿಯವರು ಶಾಸ್ತ್ರೀಯ ಕಲಿಕೆ, ಅಕಾಡೆಮಿಕ್ ಅಧ್ಯಯನಗಳು ನಾಚುವಂತೆ ಭಾವಾಭಿನಯ, ವೈವಿಧ್ಯಮಯ ಕುಣಿತಕ್ಕೆ ಹೊರಳಿಕೊಂಡರು. ಅಭಿನಯ, ಕುಣಿತಗಳಲ್ಲೂ ಹೊಸಹೊಸ ಪಟ್ಟುಗಳನ್ನು ಅನ್ವೇಷಿಸಿದರು; ಸಾಕಾರಗೊಳಿಸಿದರು. ನೂರು ಮಾತು ಹೇಳಬಹುದಾದ್ದನ್ನು ಒಂದು ಕ್ಷಣದ ಮುಖಾಭಿನಯ, ಹಸ್ತಾಭಿನಯ, ಭಾವಾಭಿನಯ ಮಾಡಿತೋರಿಸಬಲ್ಲದು ಎಂಬುದನ್ನು ಅವರ ಹಲವು ಪಾತ್ರಗಳು ಸಿದ್ಧಪಡಿಸಿವೆ. ಕೌರವ ರಂಗ ಪ್ರವೇಶಿಸುವುದಾಗಲೀ, ಕಂಸ ಕನಸಿನಿಂದ ಎದ್ದೇಳುವುದಾಗಲೀ ಪಾಂಡವರಲ್ಲಿ ಯುದ್ಧಕ್ಕೆ ಒಬ್ಬರನ್ನು ಆಯ್ದುಕೊಳ್ಳುವುದಾಗಲೀ, ಭೀಮ ಬಿದ್ದಾಗ ಸಂಭ್ರಮ ಪಡುವುದಾಗಲೀ, ಕಾತರ್ಿವೀರ್ಯನ ಜಲಕ್ರೀಡೆಯಾಗಲಿ, ದುಷ್ಟ ಬುದ್ಧಿಯ ಕ್ರೌರ್ಯವಾಗಲೀ . . ಇಂಥ ಹಲವು ಸಂದರ್ಭಗಳಲ್ಲಿ ಚಿಟ್ಟಾಣಿಯವರ ಮಾತು ಕಡಿಮೆಯೆಂದು ಕಣ್ಣು ಮುಚ್ಚಿ ಯಕ್ಷಗಾನ ನೋಡುವವರು ಮಾತ್ರ ಹೇಳಲು ಸಾಧ್ಯ. ಹಾಗೆಯೇ ಪರಂಪರೆಯ ಜೊತೆಗಿನ ಅವರ ದ್ವಂದ್ವಾತ್ಮಕ ಸಂಬಂಧ ಕೂಡ ಗಮನೀಯ. ತನ್ನ ಬಾಲ್ಯದಲ್ಲಿ ಶಿವರಾಮ ಹೆಗಡೆ, ದೇವರು ಹೆಗಡೆ. ಮೂಡ್ಕಣಿ ನಾರಾಯಣ ಹೆಗಡೆ . . .ಮುಂತಾದವರ ದಟ್ಟ ಪ್ರಭಾವಕ್ಕೆ ಒಳಗಾದೆನೆಂದು ಹೇಳುತ್ತಾರೆ. ಏಕಲವ್ಯನಂತೆ (ಜಾತಿಯಿಂದಲ್ಲ) ಬೆಳೆದ ಚಿಟ್ಟಾಣಿಯವರು ಇವರಿಗೆಲ್ಲಾ ಗುರು ಸ್ಥಾನದ ಗೌರವ ಕೊಡುತ್ತಾರೆ. ಒಬ್ಬ ಪ್ರತಿಭಾವಂತ ಸಮರ್ಥ ಕಲಾವಿದ ಮಾತ್ರವೇ ಪರಂಪರೆಯ ಕೆಡುಕು-ಒಳಿತುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಒಳಿತನ್ನು ಸೃಜನಾತ್ಮಕವಾಗಿ (ತನ್ನ ತನವನ್ನು ಬಿಡದೇ) ಅನುಕರಿಸುತ್ತಾರೆ. ಮಾತ್ರವಲ್ಲ ಈ ಪರಂಪರೆಗೆ ಹೊಸದನ್ನು ಸೇರಿಸುತ್ತಾ ಇನ್ನಷ್ಟು ಹೆಚ್ಚು ವೈವಿಧ್ಯ ಪೂರ್ಣವನ್ನಾಗಿಯೂ ಶ್ರಿಮಂತವನ್ನಾಗಿಯೂ ಮಾಡುತ್ತಾರೆ. ಆವರೆಗಿನ ಪರಂಪರೆಯನ್ನು ಯಥಾವತ್ತಾಗಿ ಅನುಕರಿಸುತ್ತಾ ಹೊಸ ಬದಲಾವಣೆಗೆ ತೆರೆದುಕೊಳ್ಳದ ಕಲಾವಿದನೊಬ್ಬ ಸಂಪ್ರದಾಯವಾದಿಯಂತೆ ಕಲೆಯ ಹಿನ್ನಡೆಗೆ ಕಾರಣನಾಗುತ್ತಾನೆ. ಅವನಿಂದ ಕಲೆಯ ಬೆಳವಣಿಗೆ ಸಾಧ್ಯವಿಲ್ಲ. ಆದರೆ ಇವರು ಇದಕ್ಕೆ ವ್ಯತಿರಿಕ್ತವಾಗಿ ಪರಂಪರೆಯ ಅಂಶಗಳನ್ನು ಹೀರಿಕೊಳ್ಳುತ್ತಲೇ ಈ ಪರಂಪರೆಗೆ ಹೊಸದನ್ನು ಸೇರಿಸಿದರು. ಪರಂಪರೆಯ ಮುನ್ನಡೆಗೆ ಕಾರಣರಾದರು. ಹಿಂದಿನ ಚೇತನಗಳು ಕ್ರಮಿಸಿದ ಮಾರ್ಗದಲ್ಲಿ ಮುನ್ನಡೆಯುತ್ತಲೇ ಸ್ವತಃ ಒಂದು ಮಾರ್ಗವನ್ನು ಸೃಷ್ಟಿಸಿದರು. ಹಾಗಾಗಿಯೇ ಅನೇಕ ಹೊಸ ಕಲಾವಿದರಿಗೆ ಚಿಟ್ಟಾಣಿಯವರ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಒಂದು ಪ್ರಯಾಸದ ಕೆಲಸವೇ ಆಗಿದೆ. ಚಿಟ್ಟಾಣಿಯವರ ಗ್ರೇಟ್ ನೆಸ್ ಇರುವುದೇ ಇಲ್ಲಿ. ಆದರೆ ನನಗೆ ತೀರಾ ಖುಷಿ ಕೊಟ್ಟಿದ್ದು ಅವರ ಮುಗ್ಧ ಸರಳ ಸ್ವಭಾವ. ‘ಪದ್ಮಶ್ರೀ’ ಬಂದಾಗ ನಮ್ಮ ಕಾಲೇಜಿನಲ್ಲಿ (ಎಂ.ಜಿ.ಸಿ. ಮಹಾವಿದ್ಯಾಲಯ, ಸಿದ್ದಾಪುರ) ಅವರಿಗೊಂದು ಸನ್ಮಾನ ಇಟ್ಟುಕೊಂಡಿದ್ದರು. ಅವರನ್ನು ಕರೆದು ಬಂದಂತೆಯೂ ಆಯಿತು, ಒಮ್ಮೆ ಭೇಟಿಯಾದಂತೆಯೂ ಆಯಿತು ಎಂದು ಹೊರಟೆ. ನನ್ನೊಂದಿಗೆ ಯಮುನಾ ಗಾಂವ್ಕರ ಮತ್ತು ನನ್ನ ವಿಭಾಗದ ಅಧ್ಯಾಪಕರಾದ ಆರ್. ಜಿ. ನಾಯ್ಕ, ಪ್ರಶಾಂತ ಹೆಗಡೆ ಕೂಡ ಇದ್ದರು. ಚಿಟ್ಟಾಣಿಯವರ ಮನೆಗೆ ಎಂದಾಗ ಇವರೆಲ್ಲ ಹೊರಟಿದ್ದರು. ಚಿಟ್ಟಾಣಿಯವರು ಹಲವು ವರ್ಷಗಳಿಂದ ಹೊಸಾಕುಳಿ ಜಾತ್ರೆ, ಕವಲಕ್ಕಿ, ಅರೇಅಂಗಡಿ, ಸಂತೆಗುಳಿ ಹೀಗೆ ಎಲ್ಲೇ ಆಟವಾದರೂ ನಾವು ಹಾಜರಿರುತ್ತಿದ್ದೆವು. ಜಾತ್ರೆಯಲ್ಲಿ ಚಿಟ್ಟಾಣಿಯವರ ಆಟ ಇಲ್ಲದಿದ್ದರೆ ಜಾತ್ರೆ ಪೂರ್ಣಗೊಳ್ಳುತ್ತಿರಲಿಲ್ಲ. ಹೊಸಾಕುಳಿ ಜಾತ್ರೆಲೆಲ್ಲಾ ಎಂಥಾ ಆಟ. ಒಂದು ಕಡೆ ನಮ್ಮ ಮೇಳ, ಅಲ್ಲೇ ಪಕ್ಕದಲ್ಲಿ ಕೆರೆಮನೆ ಮೇಳ. ಜಾತ್ರೆ ಮುಗಿಯುವುದರೊಳಗೆ ಎರಡೆರಡು ಆಟ ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ. ನನ್ನ ತಂದೆಯವರಿಗೆ ಇವರದು ತೀರಾ ಪರಿಚಯ. ಸಾಲ್ಕೋಡಿನ ಸತ್ಯ ನಾಯ್ಕರ ಅಂಗಡಿಯಲ್ಲಿ ಚಿಟ್ಟಾಣಿಯವರು ಭಾಗವತಿಕೆ ಮಾಡುತ್ತಿದ್ದರು ನಾನು ಮತ್ತು ಗಪ್ಪು ಭಟ್ಟರು ಅರ್ಥಹೇಳುತ್ತಿದ್ದೆವು – ಈ ತಾಳಮದ್ದಲೆ ದೀಪದ ಎಣ್ಣೆ ತೀರುವವರೆಗೆ ಮುಂದುವರಿಯುತ್ತಿತ್ತು – ಎಂಬುದನ್ನು ತಂದೆಯವರು ಹಲವು ಸಂದರ್ಭಗಳಲ್ಲಿ ನೆನಪಿಸುತ್ತಿದ್ದರು. ಬೆಳಗಾವಿಯಲ್ಲಿ ನಡೆದ ‘ಗದಾಯುದ್ಧ’ ಯಕ್ಷಗಾನದಲ್ಲಿ ಚಿಟ್ಟಾಣಿಯವರ ಕೌರವನೆದುರು ತಂದೆಯವರು ಸಂಜಯನ ಪಾತ್ರ ಮಾಡಿದ್ದನ್ನು ಮೊನ್ನೆ ಸುಬ್ರಹ್ಮಣ್ಯ ಚಿಟ್ಟಾಣಿಯವರು ನೆನಪಿಸಿಕೊಂಡರು. ಹಲವು ಸಂದರ್ಭಗಳಲ್ಲಿ ತಾಳಮದ್ದಲೆ ಕಾರ್ಯಕ್ರಮದಲ್ಲಿ ಇವರ ಭೇಟಿ ಆಗುತ್ತಿತ್ತು. ಇದರೊಂದಿಗೆ ನಮ್ಮೂರಿನ ಹೆಬ್ಬಾನಕಾನ ನಾರಾಯಣ ಹೆಗಡೆಯವರು ಚಿಟ್ಟಾಣಿಯವರ ಮಹಾ ಅಭಿಮಾನಿ. ಅವರು ತಂದೆಯವರ ಸ್ನೇಹಿತರು. ಚಿಟ್ಟಾಣಿಯವರ ಏಳು-ಬೀಳುಗಳ ಕುರಿತು ವಾರಕ್ಕೆರಡು ಸಲ ನಮ್ಮ ಮನೆಗೆ ಬಂದು ಅವರು ಚಚರ್ಿಸುತ್ತಿದ್ದರು. ಹಾಗಾಗಿ ನಮಗೆಲ್ಲಾ ಚಿಟ್ಟಾಣಿಯವರ ಕುರಿತು ತುಂಬಾ ಪರಿಚಯ ಬಾಲ್ಯದಿಂದ. ಅವರು ಸಿಕ್ಕಾಗೆಲ್ಲಾ ನಾನು ಆರ್.ವಿ. ಭಂಡಾರಿಯವರ ಮಗ ಎಂದೇ ಪರಿಚಯ ಮಾಡಿಕೊಳ್ಳುತ್ತಿದ್ದೆ. ಬಾಯ್ತುಂಬ ನಗೆಯಾಡಿ, ಆತ್ಮೀಯವಾಗಿ ಮಾತನಾಡುತ್ತಿದ್ದರು. ಮೊನ್ನೆ ಅವರ ಮನೆಗೆ ಹೋದಾಗಲೂ ಇದೇ ನಗು, ಆತ್ಮೀಯತೆ, ಕಿಂಚಿತ್ತೂ ಊನವಾಗಿರಲಿಲ್ಲ. ಪದ್ಮಶ್ರೀ ಇವರನ್ನು ಒಂಚೂರೂ ಬದಲಾಯಿಸಲೇ ಇಲ್ಲವಲ್ಲ ಅಂದುಕೊಂಡೆ. ಅವರೊಂದು ಹೊಸ ಮನೆ ಕಟ್ಟಿಸುತ್ತಿದ್ದಾರೆ. ಅದರ ಹತ್ತಿರವೇ ಮುಖ್ಯ ರಸ್ತೆಯ ಪಕ್ಕದಲ್ಲಿ ಒಂದು ಸಣ್ಣ ‘ಮಾಳ’ ಇದೆ. ಮನೆಯಲ್ಲಿದ್ದಾಗ ಅದರಲ್ಲಿ ದಿನಾ 4 ಗಂಟೆಯಿಂದ 6-7 ಗಂಟೆಯವರೆಗೆ ಕೂತಿರುವುದಾಗಿ ಹೇಳಿದರು. ಇದರ ಅರಿವಿಲ್ಲದ ನಾವು ಅಲ್ಲೇ ಹೋಗಿ ಚಿಟ್ಟಾಣಿಯವರ ಮನೆ ಯಾವುದೆಂದು ಕೇಳುತ್ತಿದ್ದಂತೆ ‘ಓ, ನಾನು ಇಲ್ಲೇ ಇದ್ದೇನೆ, ಬನ್ನಿ’ ಎಂದು ಈಗ ವಾಸಿಸುತ್ತಿರುವ ಹಳೆಮನೆಗೆ ಕರೆದೊಯ್ದರು. ಬೇಟ್ರಿ ಹಿಡಿದು ಕಪಾಟಿನಲ್ಲಿ ರಾಶಿ ಬಿದ್ದಿರುವ ಹಲವು ನೆನಪಿನ ಕಾಣಿಕೆ, ಸನ್ಮಾನ ಪತ್ರಗಳನ್ನು ಖುಷಿಯಿಂದ ತೋರಿಸಿದರು. ಇದು ಜಾನಪದ ಶ್ರೀ, ಇದು ರಾಜ್ಯೋತ್ಸವ, ಇದು ರಾಜಕುಮಾರ ತೊಡಿಸಿದ ಕಿರೀಟ, . . .ಹೀಗೆ ಹಲವನ್ನು ಪರಿಚಯಿಸಿದರು. ಎಲ್ಲವನ್ನೂ ಅವರು ತೋರಿಸುತ್ತಾ ಹೋದರೆ ಬೆಳಗಾಗಬಹುದಿತ್ತು. ಅಷ್ಟೊತ್ತಿಗೆ ಚಹಾ ಕುಡಿಯಲು ಕರೆ ಬಂತು; ಮನೆಯ ಒಳಗೇ ಕರೆದೊಯ್ದರು. ಅಲ್ಲಿಂದಲೇ ಮಾತುಕತೆ ಪ್ರಾರಂಭ. 3 ತಾಸು ಸುಮಾರು ಎಡೆಬಿಡದೇ ಮಾತಾಡಿದ್ದೇವೆ. ‘ತಾನೊಬ್ಬ ಉನ್ನತ ಕಲಾವಿದ, ನಾಡಿನ ಪ್ರತಿಷ್ಟಿತ ಪ್ರಶಸ್ತಿ ಪಡೆದ ಕಲಾವಿದ’ ಎನ್ನುವ ಅಹಂ ಇಲ್ಲದೆ ಮೊದಲ ಬಾರಿಗೆ ಉತ್ತರ ಕನ್ನಡಕ್ಕೆ ಅದರಲ್ಲೂ ಯಕ್ಷಗಾನಕ್ಕೆ (ಎಲ್ಲಾ ಮಹತ್ವದ ಪ್ರಶಸ್ತಿ ದ.ಕ. ದ ಪಾಲು. ದ,ಕ ಆಚೆಗೆ ಯಕ್ಷಗಾನಕ್ಕೆ ಪ್ರಶಸ್ತಿ ಬಂತೆಂದರೆ ಸಾಮಾನ್ಯ ಪ್ರತಿಭೆ ಇದ್ದರೆ ಸಾಲದು) ಪದ್ಮಶ್ರೀ ಪ್ರಶಸ್ತಿ ದೊರಕಿಸಿ ಕೊಟ್ಟ ಚಿಟ್ಟಾಣಿಯವರು ನಮ್ಮಂತಹ ಸಣ್ಣವರೊಂದಿಗೆ ಕೂಡ ಹರಟಿದ್ದು, ಮತ್ತೆ ರಸ್ತೆಯವರೆಗೆ ಬಂದು ಬೀಳ್ಕೊಟ್ಟಿದ್ದು ಮರೆಯಲಾಗದ ಸಂದರ್ಭ. ಶಂಭು ಹೆಗಡೆ ಮತ್ತು ಚಿಟ್ಟಾಣಿ ಅಭಿಮಾನಿಗಳು ಅವರಿಬ್ಬರನ್ನು ಪ್ರತಿಸ್ಪಧರ್ಿಗಳೆಂದೇ ಹಲವು ವರ್ಷಗಳ ಕಾಲ ಪ್ರತಿಬಿಂಬಿಸಿದ್ದರು. ಇದು ಎಂಥ ಅಪಾಯಕ್ಕೆ ಹೋಯಿತೆಂದರೆ ಪರಸ್ಪರರನ್ನು ತೇಜೋವಧೆ ಮಾಡುವವರೆಗೆ. ಅದಕ್ಕಿಂತ ಹೆಚ್ಚಾಗಿ ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದಂತೆ ಮಾಡಿತು. ಆ ದ್ವೇಷ ಅಭಿಮಾನಿಗಳದ್ದೇ ಹೊರತೂ ಇವರಿಬ್ಬರ ನಡುವಿನ ದ್ವೇಷ ಆಗಿರಲಿಲ್ಲ. ಆದರು ನನಗೆ ಈ ಕುರಿತು ಸಣ್ಣ ಅನುಮಾನವನ್ನು ಇವರಲ್ಲಿ ಕೇಳಿದೆ. ನಮ್ಮಿಬ್ಬರಲ್ಲಿಯೂ ದ್ವೇಷವಿರಲಿಲ್ಲ. ಪರಸ್ಪರ ಗೌರವಿಸುತ್ತಿದ್ದೆವು. ನನಗೆ ಶಂಭು ಹೆಗಡೆಯವರೊಂದಿಗೆ ಒಂದೇ ರಂಗಸ್ಥಳದಲ್ಲಿ ಪಾತ್ರ ಮಾಡಲು ಆಸಕ್ತಿ ಇತ್ತು. ಆದರೆ ನಾರಾಯಣ ಭಟ್ಟರು ಮೇಳ ಮಾಡಿದಾಗ ಅವರು ಕಲಿಯಲು ದೆಹಲಿಗೆ ಹೋಗಿದ್ದರು. ನಂತರ ನಾನೇ ಒಂದೆರಡು ಬಾರಿ ಅವರಲ್ಲಿ ಕೇಳಿದ್ದೆ. ಅಭಿಮಾನಿಗಳು ಇಷ್ಟ ಪಡುತ್ತಿದ್ದಾರೆ. ಮಾಡೋಣವೇ? ಎಂದೆ. ಆಗ ಅವರು ಕಾಲ ಕೂಡಿಬರಲಿ ಎಂದಿದ್ದರು. ಆಮೇಲೆ ಕುಮಟಾದಲ್ಲಿ ಸಂಘಟಕರು ಕೇಳಿದ್ದರು. ಆಗಲೂ ಅವರು ತಿರಸ್ಕರಿಸಿದ್ದರು. ನಾನು ಯಾವಾಗಲೂ ಸಿದ್ಧನಿದ್ದೆ. ಆದರೆ ಅವರು ಯಾಕೆ ಒಪ್ಪಿಕೊಳ್ಳಲಿಲ್ಲವೋ ಗೊತ್ತಿಲ್ಲ. ಕೊನೆಗೂ ಕಾಲ ಕೂಡಿ ಬರಲಿಲ್ಲ. ಎಂದರು. ಪ್ರಶಸ್ತಿ ಬಂದಾಗ ಸಹಜವಾಗಿಯೇ ತಾನು ಶ್ರೇಷ್ಟ ಎಂಬ ಭಾವನೆ ಇರುತ್ತದೆ. ಆದರೆ ಅವರ ಜೋಡಿ ಪಾತ್ರಧಾರಿಗಳ ಬಗ್ಗೆ ಕೇಳಿದಾಗ ಅವರು ಜಲವಳ್ಳಿ ವೆಂಕಟೇಶ ಅವರನ್ನು ಹೊಗಳಿದ್ದು ಕೇಳಿ ದಂಗಾದೆ. ಇಬ್ಬರದೂ ಒಂದೇ ರೀತಿಯ ಬೆಳವಣಿಗೆ. ಜಲವಳ್ಳಿ ದಕ್ಷಿಣದ ಕಡೆಗೆ ಹೋಗಿ ಮಾತಿನಲ್ಲಿ ಚುರುಕಾದರು: ಕುಣಿತ ಕೈಬಿಟ್ಟರು: ಆದರೆ ಅವರ ಲಯ ಮತ್ತು ಗತ್ತಿಗೆ ಕುಣಿತ ಬೇಕೆಂದು ಅನ್ನಿಸುವುದಿಲ್ಲ. ಚಿಟ್ಟಾಣಿಯವರು ಬಡಗಿನಲ್ಲುಳಿದರು. ಲಯ, ಕುಣಿತ ಚುರುಕಾಯಿತು. ಆದರೆ ಇವರಿಬ್ಬರ ಜೋಡಿ ಪಾತ್ರ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಮನೆಮಾತು. ಅವ ಎಂಥಾ ಕಲಾವಿದ, ಅದ್ಭುತ. ಅವನು ರಂಗದಲ್ಲಿರುವವರೆಗೆ ನಾವು ಏನೂ ಮಾಡುವಂತಿರಲಿಲ್ಲ. ಅವನೇ. ಅವನು ಒಳಗೆ ಹೋದ ಮೇಲೆ ನಮ್ಮದೇನಿದ್ದರು ಎಂದು ತನ್ನ ಸರಿಕ ಕಲಾವಿದರನ್ನು ಮನ್ನಿಸುವ, ಗುರುತಿಸುವ, ಹೊಗಳುವ ಅವರ ಗುಣಕ್ಕೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದು ಚಿಟ್ಟಾಣಿಯವರಿಗೆ ಮಾತ್ರ ಸಾಧ್ಯ.

ಚಿಟ್ಟಾಣಿಯವರ ಸ೦ದರ್ಶನ

ಯಕ್ಷಗಾನ ಕಿರೀಟಕ್ಕೆ ಇನ್ನೊಂದು ಗರಿ ಮೂಡಿತು -ಚಿಟ್ಟಾಣಿ

ಪದ್ಮಶ್ರಿ ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ಯಕ್ಷ ನಟ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮನೆಗೆ ಹೋದಾಗ ಅವರ ಬದುಕು ಮತ್ತು ಕಲಾ ಜೀವನದ ಬಗ್ಗೆ ಒಂದರ್ಧ ಗಂಟೆ ಹರಟಲಾಯಿತು. ಇದರ ಆಯ್ದ ಭಾಗವನ್ನು ಇಲ್ಲಿ ಬರೆದಿದ್ದೇನೆ. ರತ್ನಾಕರ ಜಿ ನಾಯ್ಕ, ಪ್ರಶಾಂತ ಹೆಗಡೆ, ಯಮುನಾ ನನ್ನ ಜೊತೆಗಿದ್ದರು.-ವಿಠ್ಠಲ ಭಂಡಾರಿ) ನಾನು : ನಮ್ಮ ನಡುವಿನ ಪ್ರೀತಿಯ ಕಲಾವಿದರು ನೀವು. ನಿರಹಂಕಾರ, ಸಜ್ಜನಿಕೆ, ಪ್ರಯೋಗಶಿಲತೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಪ್ರೀತಿಸುವ ಮನಸ್ಸು, ಕಲೆಯ ಕುರಿತಾದ ಬದ್ಧತೆ – ಇತ್ಯಾದಿಗಳಿಂದಾಗಿ ತಾವು ಈಗಾಗಲೆ ಜನ ಮಾನಸದಲ್ಲಿ ನೆಲೆನಿಂತಿದ್ದೀರಿ. ಈಗ ‘ಪದ್ಮಶ್ರೀ’ ಪ್ರಶಸ್ತಿ ನಿಮ್ಮನ್ನರಸಿ ಬಂದಿರುವುದಕ್ಕೆ ತಮಗೆ ಅಭಿನಂದನೆಗಳು. ಪ್ರಶಸ್ತಿ ಬಂದಾಗ ನಿಮಗೆ ಏನೆನ್ನಿಸಿತು ? ಚಿ.ರಾ.ಹೆ : ನಾನು ಬಹಳ ಖುಶಿ ಪಟ್ಟಿದ್ದೇನೆ. ಯಾಕೆಂದರೆ ಈ ಪ್ರಸಸ್ತಿ ಯಕ್ಷಗಾನಕ್ಕೇ ಸಿಕ್ತಲ್ಲಾ. ನಮ್ಮ ಯಕ್ಷಗಾನ ಏನೆಂಬುದು ದೇಶಕ್ಕೆ ಗೊತ್ತಾಯ್ತಲ್ಲಾ,ಅದಕ್ಕೇ ಖುಶಿಯಾಯ್ತು. ಇದು ನನಗೆ ಬಂದ ಪ್ರಶಸ್ತಿ ಮಾತ್ರ ಅಲ್ಲ. ಯಕ್ಷಗಾನದ ಕಿರೀಟಕ್ಕೆ ಇನ್ನೊಂದು ಗರಿ ಮೂಡಿತು ಎಂದುಕೊಂಡಿದ್ದೇನೆ. ಯಕ್ಷಗಾನ ಕ್ಷೇತ್ರದಲ್ಲಿ ನಾನು ಈವರೆಗೆ ನಡೆಸಿದ ದುಡಿತಕ್ಕೆ ದೇವರು ಈ ರೀತಿಯಲ್ಲಿ ಪ್ರತಿಫಲ ಕೊಟ್ಟ. ಸಾವಿರಸಾವಿರ ಪ್ರೇಕ್ಷಕರ ಮನದಲ್ಲಿ ಇರಬೇಕೆಂಬ ಆಸೆ ಇತ್ತು. ಆ ಆಸೆ ಕೂಡ ಈಡೇರಿದೆ. ನಾನು : ತಮ್ಮ ಕುಟುಂಬದ ಹಿನ್ನೆಲೆ ಹೇಗಿತ್ತು ? ಯಕ್ಷಗಾನ ಕಲಿಕೆಗೆ ಪೂರಕ ವಾತಾವರಣ ಇತ್ತೆ? ಚಿ.ರಾ.ಹೆ : ಮನೆಯಲ್ಲಿ ತಿರಾ ಬಡತನ. ವ್ಯವಸಾಯ ಮಾಡ್ತಾ ಇದ್ರು. ನಾನು ಹೆಚ್ಚು ಕಲೀಲಿಲ್ಲ. ಎರಡನೆ ತರಗತಿ. ನನ್ನ ಅಕ್ಕ ಪಾಟಿ ಮೇಲೆ ಬರೆದು ಕೊಡ್ತಿದ್ಳು. ನಾನು ಅದನ್ನೇ ಬರೆದು ಮಾಸ್ತರರಿಗೆ ತೋರಿಸ್ತಿದ್ದೆ. ಹಾಗಾಗಿ ಅಕ್ಷರ ಕಲಿಲಿಲ್ಲ. ರಾತ್ರಿ ಆಟ ನೋಡ್ತಿದ್ದೆ. ಮರುದಿನ ಮನೆ ಹಿಂದಿನ ಗುಡ್ಡ ಹತ್ತಿ ಗೇರು ಮರದ ಅಡಿಯಲ್ಲಿ ನಾನು ಕುಣಿಯುತ್ತಿದ್ದೆ. ನನಗೆ ಮೊದಲಿನಿಂದ ಭಜನೆಯ ತಾಳ ಗೊತ್ತಿತ್ತು. ಹಾಗಾಗಿ ಬಾಯಲ್ಲಿ ತಾಳ ಹೇಳ್ತಾ ಕುಣಿತಿದ್ದೆ. ನಂತರ ಶಿವರಾಮ ಹೆಗಡೆಯವರ ಪ್ರಭಾವ ಹೆಚ್ಚಾಯಿತು. ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮೂರುರು ದೇವರು ಹೆಗಡೆ. . . .ಮುಂತಾದವರ ಪ್ರಭಾವ ನನ್ನ ಏಳ್ಗೆಗೆ ಕಾರಣ ಆಯ್ತು. ನಾನು ಒಬ್ಬ ಕಲಾವಿದ ಆಗ್ಬೇಕು ಎಂಬ ಛಲ ಬಂತು. ಆ ಸಮಯಕ್ಕೆ ಬಾಳೆಗದ್ದೆ ರಾಮಕೃಷ್ಣ ಭಟ್ಟರು ಗುರುಗಳಾಗಿ ಸಿಕ್ಕಿದ್ರು. ನಾನು ಅವರಲ್ಲಿ ಒಂದುವರೆ ಟ್ರಾಯಲ್ಲಿಗೆ ಮಾತ್ರ ಹೋಗಿದ್ದು. ನೋಡಿ, ಕೇಳಿ ಕಲ್ತಿದ್ದೇ ಹೆಚ್ಚು. ನಾನು : ಮೊದಲ ವೇಷ ಯಾವ್ದು? ಚಿ.ರಾ.ಹೆ : ಪಾರಿಜಾತ ಪರಿಣಯದಲ್ಲಿ ಅಗ್ನಿ. ಮೂರೆ ಪದ್ಯ. ಆಮೇಲೆ ಗುಂಡಬಾಳದಲ್ಲಿ ಆಂಜನೇಯ. ನಾನು : ಮಂಜ ಭಾಗ್ವತರು ನಿಮ್ಗೆ ಕಲಾದರನ ಪಾತ್ರ ಕೊಟ್ಟ ಬಗ್ಗೆ ಕೇಳಿದ್ದೆ ? ಚಿ.ರಾ.ಹೆ : ಹೌದು. ಆಗ ನಾನು ದೇವರಹೆಗಡೆಯವರ ಮನೆಲಿದ್ದೆ. ಅವರು ನನಗೆ ಪದ್ಯ ಇದ್ದ ಪಾತ್ರ ಕೊಡ್ತಿರಲಿಲ್ಲ. ದ್ವೇಷ ಅಲ್ಲ. ಆಟ ಹಾಳಾಗಬಾದರ್ು ಅಂತ. ಆದರೆ ಕೊಳಗಿಬೀಸ್ ಮೇಳದಲ್ಲಿ ‘ಭೋಜ ಕಾಳಿದಾಸ’ ಪ್ರಸಂಗದಲ್ಲಿ 5 ಪದ್ಯ ಇರುವ ಕಲಾದರನ ಪಾತ್ರ ಮಾಡುವವರಿರಲಿಲ್ಲ. ಮಂಜ ಭಾಗ್ವತ್ರು ಈ ಹೊಸಾಕುಳಿ ಮಾಣಿ ಮಾಡಲಿ ಎಂದು ನನ್ನ ತೋರಿಸಿದರು. ಆಗ ದೇವರ ಹೆಗ್ಡೆರು ಆಗ್ತಿಲ್ಲೆ .. .. ಮಂಜ ಆಗ್ತಿಲ್ಲೆ. ಒಳ್ಳೆ ಶೃಂಗಾರದ ಪದ್ಯ ಅದು. ಪ್ರಸಂಗ ಹಾಳಾಗೋಗ್ತು ಅಂದರು. ಆದ್ರೆ ಪಟ್ಟು ಬಿಡದ ಮಂಜ ಭಾಗ್ವತರು ನನ್ನಿಂದ ಸರಿಯಾಗೇ ಮಾಡಿಸುವ ಜವಾಬ್ದಾರಿ ಹೊತ್ತರು. ನಾನು ಚೆನ್ನಾಗಿಯೇ ಮಾಡ್ದೆ. ಇದನ್ನು ನೋಡಿದ ತುಡುಗುಣಿ ಮಾಬ್ಲೇಶ್ವರ ಭಟ್ಟರು ಇನ್ನು ಮುಂದೆ ಕಲಾಧರನ ಪಾತ್ರವನ್ನು ಹೊಸಾಕುಳಿ ಮಾಣಿಗೆ ಕೊಡಬೇಕೆಂದು ತಾಕೀತು ಮಾಡಿದರು. ಊರ ಹೆಗ್ಡೆರು, ಗೌಡ್ರ ಮಾತನ್ನು ಯಾರೂ ವಿರೋಧಿಸ್ತಿರಲಿಲ್ಲ. ಯಾಕೆಂದ್ರೆ ಅವರಿಲ್ಲದಿದ್ರೆ ಊರಲ್ಲಿ ಆಟನೇ ಆಗ್ತಿರಲಿಲ್ಲ. ಆಗ ಒಂದೊಂದೂರಲ್ಲಿ 8-9 ಆಟ ದಿನಬಿಟ್ಟು ದಿನ ಆಗೋದು. ನಾನು : ಕುಣಿಯಲು ಪ್ರಾರಂಭ ಮಾಡಿದ ಕಾಲ ಹೇಗಿತ್ತು? ಚಿ.ರಾ.ಹೆ : ಯಾರೂ ಸರಿಯಾಗಿ ಮಾತಾಡಿಸ್ತಿರಲಿಲ್ಲ. ನಮ್ಮ ಸಾಮಾನನ್ನು ನಾವೇ ತಲೆಮೇಲೆ ಹೊತ್ಗೊಂಡು 9-10 ಮೈಲು ನಡೆಬೇಕು. ಕುಣಿಯಲು ಹೋದದ್ದು ಗೊತ್ತಾದ್ರೆ ಅಪ್ಪ ಬೈತಿದ್ದ. ಹಾಗಾಗಿ ರಾತ್ರಿ ಎಲ್ಲಾ ಕುಣಿದು ಬೆಳಿಗ್ಗೆ ಒಂದು ದಕರ್ಿನ ಕಲ್ಲಿ ತಲೆಮೇಲೆ ಹೊತ್ಗೊಂಡು ಮನೆಗೆ ಬರಬೇಕಾಗಿತ್ತು. ಅಪ್ಪ ತೀರಿಕೊಂಡ ನಂತರ ಸಂಸಾರದ ಜವಾಬ್ದಾರಿ ನನ್ನ ತಲೆಮೇಲೆ ಬಂತು. ಸುಮಾರು 14 ವರ್ಷ ಹೊಸಾಕುಳಿ, ಹರಿಕೆರೆ, ಸಾಲ್ಕೊಡು. . . ಗಳಲ್ಲಿ ಅಡಿಕೆ ಮರಕ್ಕೆ ಮದ್ದು ಹೊಡೆಯೋದು,ಕೊಟ್ಟಕೊನೆ ಮಾಡೋದು ಮಾಡ್ತಿದ್ದೆ. ಆದರೂ ಯಕ್ಷಗಾನದ ಆಕರ್ಷಣೆ ಕಡಿಮೆ ಆಗಲಿಲ್ಲ. ನಾನು : ತಮ್ಮ ಮೊದಲ ಸಂಪಾದನೆ ಎಷ್ಟಿತ್ತು ಅಂಥ ನೆನಪಿದೆಯಾ? ಇತ್ತೀಚೆಗೆ ? ಚಿ.ರಾ.ಹೆ : ಮೊದಲು ಎಂಟಾಣೆ ಇತ್ತು. ದೇವರಹೆಗ್ಡೆರು ಎರಡು ರೂಪಾಯಿ ಕೊಡ್ತಿದ್ದರು. ನಾರಾಯಣ ಭಟ್ಟರಯ 50 ರೂಪಾಯಿ ಕೊಟ್ಟರು. ನಂತರ 75 ರೂ, 200, 300. ಕೊನೆಗೆ ನನ್ನಷ್ಟು ಯಾರೂ ತೆಗೆದು ಕೊಳ್ತಿರಲಿಲ್ಲ. ಈಗೆಲ್ಲಾ 7-8 ಸಾವಿರ ಕೊಡೊದೂ ಇದೆ. ನಾನು : ಪ್ರತಿ ದಿನ ರಂಗದ ಮೇಲೆ ಹೋದಾಗ ಏನೆನ್ನಿಸ್ತದೆ? ಚಿ.ರಾ.ಹೆ : ನನ್ನ ಎಲ್ಲಾ ನೋವು ಜಂಜಾಟಗಳನ್ನು ಮರೆತೇನೆ. ಹಣ ಕೊಟ್ಟು ಬಂದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗದಂತೆ ಪಾತ್ರ ಮಾಡೋದು ನನ್ನ ಕರ್ತವ್ಯ ಅಂದ್ಕೋತೆನೆ. ಒಬ್ಬನೇಒಬ್ಬ ನನ್ನ ಅಭಿಮಾನಿ ಎದುರಿಗೆ ಇದ್ದರೂ ನಾನು ಅವನಿಗೆ ಮೋಸ ಆಗದಂತೆ ನಿಷ್ಠೆಯಿಂದ ನಟಿಸ್ತೇನೆ. ಚಿಟ್ಟಾಣಿಯವರಿಗೆ ವಯಸ್ಸಾಯ್ತು. ಮೊದಲಿನ ಹಾಗೆ ಮಾಡ್ತಿಲ್ಲ ಅಂತ ಬೇಸರ ಪಡ್ತಾರೊ ಅಂತ ಭಯ; ಪ್ರತಿ ಸಲವೂ ಭಯ ಆಗ್ತದೆ. ಜೀವನದ ಕೊನೆವರೆಗೂ ನನ್ನ ಕೈಲಾದಷ್ಟು ಕೊಡ್ಬೇಕು ಅಂಥ ಅಂದ್ಕೊಂಡಿದ್ದೆ. ಕೊಟ್ಟ ತೃಪ್ತಿ ಇದೆ. ನಾನು : ನಿಮ್ಮ ಮಾತಿನಲ್ಲಿ ಸ್ವಲ್ಪ ತೊಡಕಿದೆ ಎಂಬ ಮಾತಿದೆ. ಅದನ್ನು ಮೀರುವುದಕ್ಕಾಗಿ ಕುಣಿತ, ಭಾವಾಭಿನಯಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತದೆ.? ಚಿ.ರಾ.ಹೆ : ಖಂಡಿತವಾಗಿಯೂ ಹೌದು. ಮೊದಲು ನನಗೆ ಈ ತೊಡಕಿತ್ತು. ರಂಗದ ಮೇಲೆ ಹೋದಾಗ ಏನು ತೋಚುತ್ತದೋ ಅದನ್ನು ಹೇಳುತ್ತಿದ್ದೆ. ಆನಂತರ ಯೋಚಿಸಿ ಹೇಳುವುದನ್ನು ರೂಢಿಸಿಕೊಂಡೆ. ಅಭಿನಯ , ಕುಣಿತದಲ್ಲಿ ಹೆಚ್ಚೆಚ್ಚು ಸಾಧನೆಗೆ ತೊಡಗಿದೆ. ಪ್ರತಿ ಪಾತ್ರವನ್ನು ಹೊಸದಾಗಿಯೆ ಕಟ್ಟಲು ಪ್ರಾರಂಭಿಸಿದೆ. ಪಾತ್ರ ಗುಣಕ್ಕೆ ಅನುಗುಣವಾಗಿ ಅಭಿನಯದಲ್ಲಿ ಭಿನ್ನತೆ ಬೇಕು. ಉದಾಹರಣೆಗೆ ಕೃಷ್ಣನ ಶೃಂಗಾರಾಭಿನಯದಲ್ಲಿ . ಭಸ್ಮಾಸುರನ ಶೃಂಗಾರಾಭಿನಯದಲ್ಲಿ ವ್ಯತ್ಯಾಸ ಇದೆ. ಎರಡೂ ಒಂದೇ ಅಲ್ಲ. ಹಾಗೆ ಯಕ್ಷಗಾನದಲ್ಲಿ ಬರೀ ಮಾತೆ ಮುಖ್ಯವಲ್ಲ. ಹರಿದಾಸರು ಇಲ್ಲಿ ಪ್ರವೇಶಿಸಿದ ಮೆಲೆ ಮಾತೇ ಮುಖ್ಯವಾಯಿತು. ನಾನು : ನಿಮಗೆ ತೀರಾ ಖುಶಿ ಕೊಟ್ಟ ಜೋಡಿ ಪಾತ್ರಧಾರಿಗಳು ಯಾರು ? ಚಿ.ರಾ.ಹೆ : ಕೆರೆಮನೆ ಶಿವರಾಮ ಹೆಗಡೆಯವರು. ಆನಂತರ ಜಲವಳ್ಳಿ ವೆಂಕಟೇಶ್. ಆತ ಅದ್ಭುತ. ಅವನ ಈಶ್ವರ ನನ್ನ ಭಸ್ಮಾಸುರ; ನನ್ನ ಈಶ್ವರ ಅವನ ಯಮ; ಅವನ ರಕ್ತಜಂಗಾಸುರ ನನ್ನ ರುದ್ರಕೋಪ; ಅವನ ಭೀಮ ನನ್ನ ಕೌರವ. ಕೆಲವು ಪಾತ್ರಗಳು ಅವನದೇ. ಅವನು ಈಶ್ವರನಾಗಿ ಇರುವವರೆಗೆ ರಂಗ ಅವನದೇ. ನಂತರ ಮೋಹಿನಿಯೊಂದಿಗೆ ಚಿಟ್ಟಾಣಿ ಬೆಳಗಬೇಕು. ನಾನು : ಅವರ ಮತ್ತು ನಿಮ್ಮ ಹಿನ್ನೆಲೆ ಒಂದೇ ರೀತಿ ಇತ್ತು. ಸ್ವಯಂ ಕಲಿಕೆಯಿಂದ ನೀವಿಬ್ಬರು ಮೇಲೆ ಬಂದವರು. ಚಿ.ರಾ.ಹೆ : ಹೌದು. ಅವನೂ ಹೆಚ್ಚು ಅಕ್ಷರ ಕಲಿಯಲಿಲ್ಲ. ರಂಗದ ಮೇಲೋ.. .. .. ಮೂರು ಸುತ್ತು ಒಂದು ಗತ್ತು. ಆ ಲಯ ಎಂಥದ್ದು ಅದು. ಆದರೆ ಜಂಪೆಗೂ ಅದೇ ಗತ್ತು. ತ್ರಿವುಡೆಗೂ ಅದೇ ಗತ್ತು. ಆದರೆ ಲಯ ಆಚೀಚೆ ಆಗೋದಿಲ್ಲ. ಮೊದ್ಲು ಅವನು ಕುಣಿತಿದ್ದ. ಹೆಣ್ಣವೇಷ ಮಾಡ್ತಿದ್ದ. ಯಾವಾಗ ತೆಂಕಿಗೆ ಹೋದ್ನೊ. ಕುಣಿತ ಗೋವಿಂದ. (ಏಕ ವಚನದ ಆತ್ಮೀಯತೆ ಖುಶಿಕೊಡುವಂತಿತ್ತು) ನಾನು : ಹೊಸ ಪ್ರಸಂಗಗಳಿಗೆ ಹೇಗೆ ಒಗ್ಗಿಕೊಂಡಿರಿ? ಚಿ.ರಾ.ಹೆ : ಅನಿವಾರ್ಯ ಆಯ್ತು. ನನಗೆ ಅದು ಎಂದೂ ಮಾನಸಿಕ ಖುಶಿ ಕೊಟ್ಟಿಲ್ಲ. ಯಕ್ಷಗಾನದ ಒಟ್ಟಾರೆ ಬೆಳವಣಿಗೆಗೆ ಅದು ಪೂರಕವಲ್ಲ. ಅದು ಒಬ್ಬ ನಟನನ್ನು ಬೆಳೆಸುವುದಿಲ್ಲ. ಜನ ನೋಡಿ ಚಪ್ಪಾಳೆ ಹೊಡೆಯಬಹುದು ಅಷ್ಟೆ. ಆದರೆ ನನಗೆ ತೃಪ್ತಿ ಇಲ್ಲ. ಆದರೆ ಮೇಳದ ಯಜಮಾನರ ದೃಷ್ಟಿಯಿಂದ, ಕಲಾವಿದರ ಬದುಕಿ ದೃಷ್ಟಿಯಿಂದ ಹಲವು ಬಾರಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು : ಮೇಳ ಕಟ್ಟಿ ಯಜಮಾನರಾಗಿದ್ರಿ ? ಚಿ.ರಾ.ಹೆ : ಲಾಸ್ ಆಯ್ತು. ಐದು ವರ್ಷ ನಡೆಸಿದೆ. ನಟನೆಯ ಕಡೆ, ಮೇಳದ ಕಡೆ ಏಕಕಾಲದಲ್ಲಿ ಗಮನ ಹರಿಸಲು ಸಾಧ್ಯ ಆಗಲಿಲ್ಲ. ಕೆಲವು ಕಲಾವಿದರನ್ನು ಸಂಬಾಳಿಸುವುದು ಕಷ್ಟವಾಯಿತು. ಮಹಾಬಲ ಹೆಗಡೆಯವರಂತ ಒಳ್ಳೆಯ ಕಲಾವಿದರು ನಮ್ಮ ಮೇಳದಲ್ಲಿದ್ದರು. ಹಲವು ಸಂದರ್ಭದಲ್ಲಿ ಅವರು ಹೇಳಿದಂತೆ ಆಗಬೇಕು ಎನ್ನುವವರು ಅವರು. ನಡೆಸಿದಷ್ಟು ದಿನ ಚೆನ್ನಾಗಿಯೇ ನಡೆಸಿದೆ. ಮೇಳ ನಿಲ್ಲಿಸಲು ಪ್ರೇಕ್ಷಕರ ಕೊರತೆಯಾಗಲಿ, ಅಸಹಕಾರವಾಗಲಿ ಕಾರಣ ಆಗಿರಲಿಲ್ಲ. ನನಗೆ ವ್ಯವಹಾರ ಬರ್ತಿರಲಿಲ್ಲ. ನಾನು ; ನೀವು ಸಿಸರ್ಿಯಲ್ಲಿ, ಕುಮಟಾದಲ್ಲಿ ಯಕ್ಷಗಾನದ ಸ್ಪಧರ್ೆಗೆ ಇಳಿದದ್ದು ನಮಗೆಲ್ಲಾ ಸರಿಕಂಡಿರಲಿಲ್ಲ. ನೀವು ನಿಣರ್ಾಯಕ ಸ್ಥಾನದಲ್ಲಿದ್ದವರು…….ಯಕ್ಷಗಾನದಲ್ಲಿ ನಿಮ್ಮ ಸ್ಥಾನ ಪಿಕ್ಸ ಆಗಿದೆ ಎಂದು ಸಂಘಟಕರಿಗೆ ಅನಿಸಲೇ ಇಲ್ವಾ? ಚಿ.ರಾ.ಹೆ : ಬಂದು ಕರೆದಾಗ ಇಲ್ಲಾ ಅಂತ ಹೇಳಲು ಆಗುವುದಿಲ್ಲ. ನನ್ನನ್ನ ಕರೆಯಬೇಕೊ ಬೇಡ್ವೊ ಎಂದು ಸಂಘಟಕರು ತೀಮರ್ಾನಿಸಬೇಕಾಗಿತ್ತು. ನಾನು : ಯುವ ಕಲಾವಿದರ ಬಗ್ಗೆ ಏನೆನ್ನಿಸ್ತಿದೆ? ಚಿ.ರಾ.ಹೆ : ಯಕ್ಷಗಾನಕ್ಕಂತೂ ಅಳಿವಿಲ್ಲ. ಅದು ಮುಂದರಿಯುತ್ತದೆ. ಹೇಗೆ ತಯಾರಾಗ್ಬೇಕು ಅಂತ ಯೋಚಿಸಬೇಕು. ಹೊಸ ಕಲಾವಿದರು ಅಧ್ಯಯನ ಮಾಡ್ಬೇಕು. ನಮ್ಮದು ಹೇಗೋ ಆಯ್ತು. ನೋಡಿ ಕೇಳಿ, ಕಲ್ತಿದ್ದಾಯ್ತು. ಆಂಗಿಕಾಭಿನಯ, ಭಾವಾಭಿನಯಕ್ಕೆ ಸಂಬಂಧ ಇರಬೇಕು. ಪಾತ್ರದಲ್ಲಿ ಪೂರ್ಣ ತಲ್ಲೀನ ಆಗ್ಬೇಕು. ಹೊಸ ಪ್ರಸಂಗಗಳು ಅವರ ಬೆಳವಣಿಗೆಗೆ ಅಡ್ಡಿ ಆಗಿದೆ. ಅದನ್ನು ಮೀರಿಬೆಳೆಯಬೇಕು. ಇದಕ್ಕೆ ಕಲೆಯ ಮೇಲೆ ಪ್ರೀತಿ,ನಿಷ್ಠೆ ಬೆಳೆಸಿಕೊಳ್ಳ ಬೇಕು. ಹೀಗೆ ಮಾತುಕತೆ ಮುಂದುವರಿಯುತ್ತಲೇ ಇತ್ತು. ತನ್ನ ಬೆಳವಣಿಗೆಯಲ್ಲಿ ಹೆಂಡತಿ ಸುಶೀಲಾರ ಪಾತ್ರ ಮಹತ್ವದ್ದೆಂದು ಅಭಿಮಾನದಿಂದ ಹೇಳಿದರು. ಅವರೂ ಮಾತಿಗೆ ಬಂದು ನಿಂತರು. ಗಂಡನ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು ಮಾತ್ರವಲ್ಲ ತಾನು ಚಿಟ್ಟಾಣಿಯವರನ್ನು ಮೊದಲು ನೋಡಿದ ದಿನಗಳನ್ನು,ಅವರ ಪಾತ್ರನೋಡಿ ಮೆಚ್ಚಿದ ದಿನಗಳನ್ನು ನೆನಪಿಸಿಕೊಂಡು ಹೇಳಿದಾಗ ಚಿಟ್ಟಾಣಿಯವರೂ ಸೇರಿ ನಾವೆಲ್ಲಾ ಹೊಟ್ಟೆ ತುಂಬ ನಕ್ಕೆವು. ಮುಕ್ತಾಯದ ಹಂತದಲ್ಲಿರುವ ಹೊಸ ಮನೆ ತೋರಿಸಿದರು. ಈ ವರೆಗೆ ಬಂದ ಪ್ರಶಸ್ತಿ, ನೆನಪಿನ ಕಾಣಿಕೆಗಳನ್ನೆಲ್ಲಾ ತೋರಿಸಿದರು. ನಾಲ್ಕಾರು ಫೋಟೊ ಕ್ಲಿಕ್ಕಿಸಿಕೊಂಡು ಮತ್ತೊಮ್ಮೆ ಶುಭಾಶಯ ಹೇಳಿ ಮನೆಯ ಕಡೆ ಹೊರಟಾಗ ಚಿಟ್ಟಾಣಿಯವರ ‘ನೀಲ ಗಗನದೊಳು ನವಿಲು ಕುಣಿಯುತಿದೆ ನೋಡು’ ಪದ್ಯದ ನವಿಲ ಕುಣಿತ ಕಣ್ಮುಂದೆ ಬರುತ್ತಿತ್ತು]]>

‍ಲೇಖಕರು G

February 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. prakash hegde

    ಚಿಟ್ಟಾಣಿ ಅಜ್ಜ ಹಿಮಾಲಯದಂತಿದ್ದರೂ..
    ಅವರ ಸರಳತೆ ಎಂಥವರನ್ನೂ ಮಂತ್ರ ಮುಗ್ಧರನ್ನಾಗಿ ಮಾಡಿಬಿಡುತ್ತದೆ…
    ಅವಧಿಗೆ ಧನ್ಯವಾದಗಳು…

    ಪ್ರತಿಕ್ರಿಯೆ
  2. Sharadhi

    Good interview. Thanks for that. I recently met him during my Ind visit. His dedication to art is an inspiration for me in my field. However, ಏಕಲವ್ಯನಂತೆ (ಜಾತಿಯಿಂದಲ್ಲ) ಬೆಳೆದ ಚಿಟ್ಟಾಣಿಯವರು , why this phrase “ಜಾತಿಯಿಂದಲ್ಲ”?. This was absolutely unnecessary. We respect Jalavalli, Chittani et al., purely because of their art, not caste.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: