ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಾಣಕ್ಯ ನೂತನ ನೋಡಿದ ‘ಅನೇಕ್‌’

ಚಾಣಕ್ಯ ನೂತನ

ದೇಶದ ಅತ್ಯುನ್ನತ ಸುದ್ದಿಸಂಸ್ಥೆಯ ವರದಿಗಾರ್ತಿಯೊಬ್ಬರನ್ನ ನನ್ನ ಹೆಸರು ಹೇಳಿ ಗೋವಾದಲ್ಲಿ ಪರಿಚಯ ಮಾಡಿಕೊಂಡೆ. ಬಹುಶಃ ಅವರು ಹೆಸರು ಕೇಳಿ ಯಾರೋ ‘Northi’ ಇರಬೇಕು ಅಂದ್ಕೊಂಡಿದ್ರೇನೋ. ಮಾತು ಮುಂದುವರಿಸುತ್ತಾ ʼನಾನು ಕನ್ನಡಿಗʼ ಎಂದು ಹೇಳಿದಾಗ. ಆಕೆ ‘ಓಹ್‌ ಮದ್ರಾಸಿ ಹೇ ಕ್ಯಾ?’ ಅಂತ ಮುಖ ಕಿವುಚಿಕೊಂಡರು.

ಆಕೆ ಮದ್ರಾಸಿ ಅಂತ ಹೇಳುವಾಗ ಮುಖದಲ್ಲಿ ಒಂದು ಕೊಂಕು ಎದ್ದು ಕಾಣ್ತಿತ್ತು. ನನ್ನ ಊರು, ನನ್ನ ನೆಲ, ನನ್ನ ಭಾಷೆ, ನನ್ನ ಸಂಸ್ಕೃತಿ ಎನ್ನುವ ಪ್ರೀತಿ, ಅಭಿಮಾನ ಪ್ರತಿಯೊಬ್ಬ ಭಾರತೀಯನಿಗೂ ಇದೆ. ಬಲವಂತವಾಗಿ ಇನ್ನೊಂದು ಭಾಷೆ, ಇನ್ನೊಂದು ಸಂಸ್ಕೃತಿಯನ್ನ ಇನ್ಯಾರೋ ಬಂದು ಹೇರಿದರೆ ಅಲ್ಲಿ ಸೃಷ್ಟಿಯಾಗುವುದು ದ್ವೇಷ ಮಾತ್ರ.

ಒಂದು ಎನ್ನುವ ಪರಿಕಲ್ಪನೆಯನ್ನು ಬದಿಗೊತ್ತಿ ಹಲವು ಎನ್ನುವ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ಭಾರತ ಸುಂದರವಾಗಿ ಕಾಣುತ್ತದೆ. ಆಯುಷ್ಮಾನ್‌ ಖುರಾನಾ ಅವರ ‘ಅನೇಕ್‌’ ಸಿನಿಮಾ ನೋಡಿದ ಮೇಲೆ ಈ ಚಿತ್ರದ ಬಗ್ಗೆ ನಾಲ್ಕು ಸಾಲು ಬರೆಯಲೇ ಬೇಕು ಅನ್ನಿಸಿತು.

ಈ ಹಿಂದೆ ಖುರಾನಾ ಅವರ ಆರ್ಟಿಕಲ್‌ 15 ನೋಡಿ ಇಂಥ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಯಾಕಾಗ್ತಿಲ್ಲ ಅಂತ ಬೇಸರ ಆಯ್ತು. ಬರೀ ಹುಳುಕುಗಳೇ ತುಂಬಿಕೊಂಡು ಬರ್ಬಾದ್‌ ಆಗಿರುವ ಬಾಲಿವುಡ್‌ನಲ್ಲಿ ಅನೇಕ್‌ನಂತಹ ಚಿತ್ರಗಳು ಅಲ್ಲೊಂದು ಇಲ್ಲೊಂದು ಬಿಡುಗಡೆಯಾಗಿ ಸದ್ದು ಮಾಡ್ದೆ ಹಾಗೇ ಹೋಗಿ ಬಿಡ್ತವೆ.ಪ್ರತಿಪಾದಿಸುತ್ತದೆ

ಭಾರತದಂತ ದೇಶದಲ್ಲಿ Diversity, democracy ಎನ್ನುವುದು ಎರಡು ದೊಡ್ಡ ಪರಿಕಲ್ಪನೆಗಳು. ಪ್ರಸ್ತುತ ಸನ್ನಿವೇಶವನ್ನ ನೋಡಿದ್ರೆ ‘Diverse democracy’ಅತ್ಯಗತ್ಯ ಅನ್ನಿಸದಿರದು. ಅನೇಕ್‌ ಸಿನಿಮಾದ ಕಥೆಯೂ ಸಹ ಇದನ್ನೇ ಪ್ರತಿಪಾದಿಸುತ್ತದೆ.

ಈಶಾನ್ಯ ರಾಜ್ಯದವರನ್ನ ಚಿಂಕಿ ಎಂದು ಕರೆಯುವವರಿಗೆ ನೆನಪಿರಲಿ 2012ರಲ್ಲಿ ಕೇಂದ್ರ ಗೃಹ ಸಚಿವಾಲಯವು ಚಿಂಕಿ ಎನ್ನುವ ಪದವನ್ನು ಗುರುತಿಸಿತು. ಆ ಪದವನ್ನು ಬಳಸುತ್ತಿದ್ದದ್ದು ಕ್ರಿಮಿನಲ್‌ ಅಪರಾಧ ಎಸಗುವ ಈಶಾನ್ಯ ರಾಜ್ಯದ ದಲಿತರು, ಬುಡಕಟ್ಟು ಸಮುದಾಯದವರನ್ನು ಗುರುತಿಸಲು.
ಇವರನ್ನು ಕ್ರಿಮಿನಲ್‌ ಮಾಡಿದ್ದು ಯಾರು? ಇವರು ಉದ್ರಿಕ್ತರಾಗಿದ್ದು ಯಾಕೆ? ಬೋಡೊ ಲ್ಯಾಂಡ್‌ ನಿವಾಸಿಗಳು ʼನಾವು ಭಾರತೀಯರೇ ಅಲ್ಲʼ ಅನ್ನುವುದು ಯಾಕೆ? ಈ ಎಲ್ಲ ಪ್ರಶ್ನೆಗಳ ಮೇಲೆ ಸಿನಿಮಾ ನಿಂತಿದೆ. ಸಾಧ್ಯವಾದರೆ ಎಲ್ಲರೂ ನೋಡಿ.

‍ಲೇಖಕರು Admin

6 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading