‘ಗುರುವಿಗೇಕೆ ಒಂದು ನಮನ ಸಲ್ಲಿಸಬಾರದು?’ ಎಂಬ ಪ್ರಶ್ನೆಯೊಂದಿಗೆ ನಮ್ಮೆದುರು ನಿಂತವರು ಕೆ ಅಕ್ಷತಾ. ಕವಯತ್ರಿ, ಅಹರ್ನಿಶಿ ಪ್ರಕಾಶನದ ಕೇಂದ್ರ ಬಿಂದು. ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಸಂಕಲನದ ಮೂಲಕ ಪರಿಚಿತರಾದ ಇವರ ಕಾವ್ಯ ಲೋಕಕ್ಕೆ ಇನ್ನಷ್ಟು ಆಳವಾದ ವಿಸ್ತರಣೆಯನ್ನು ನೀಡಿದವರು ಮತ್ತೊಬ್ಬ ಕವಿ ವೆಂಕಟ್ರಮಣ ಗೌಡ. ಅಕ್ಷತಾ ನೀಡಿದ ಒತ್ತಾಸೆಯಿಂದಾಗಿ ‘ಅವಧಿ’ ಪಾಲಿಗೆ ಗುರು ದಿನ ಒಂದು ನೆನಪಿನಲ್ಲಿಡಬೇಕಾದ ದಿನವಾಗಿ ಬದಲಾಗಿವೆ. ಅಕ್ಷತಾ ಗೆ ವಂದನೆ ಹೇಳುತ್ತಾ ಗುರುಗಳು ಗುರುವಿಗೆ ನಮನ ಸಲ್ಲಿಸಿದ್ದನ್ನು ನಿಮ್ಮ ಮುಂದಿಡುತ್ತಿದ್ದೇವೆ.
-ಅವಧಿ ಬಳಗ
ಇಂದು ಬದುಕು ಕಲಿಸಿದವರ ದಿನ. ಗುರುವಿನ ದೃಷ್ಟಿಯಲ್ಲಿ ಅವರಿಗಿಷ್ಟವಾದ ಗುರುವಿನ ಬಗೆಗೆ ಬೆದಕುವ ಪ್ರಯತ್ನವಿದು. ತಮಗೆ ಸ್ಪೂರ್ತಿ, ಶಕ್ತಿ, ಪ್ರೇರಣೆಯಾದ ಗುರುವಿನ ಬಗೆಗೆ ಬರೆದಿರುವ ಈ ಆರು ಜನ ಅಧ್ಯಾಪಕರು, ಅವರ ಮೇಷ್ಟ್ರುಗಳಂತೆ ವಿಶಿಷ್ಟರೂ, ವಿದ್ಯಾರ್ಥಿಗಳಿಗೆ ಪ್ರೀತಿ, ಪ್ರೇರಣೆ ನೀಡುತ್ತಿರುವವರೂ ಆಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಯುವ ರಾಜಕಾರಣಿಯೊಬ್ಬರು ನನಗೆ ಮ್ಯಾಥ್ಸ್ ಕಲಿಸಿದವರೇ ಶೈಲಾ ಮೇಡಂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಒಂದಷ್ಟು ಜನ ಶೈಲಾರ ಬಳಿ ಹೇಳಿದಾಗ ಅದರಿಂದ ಯಾವುದೇ ರೀತಿಯಲ್ಲೂ ಹಿಗ್ಗದ ಶೈಲಾ ಮೇಡಂ ನಿರ್ಲಿಪ್ತ ಸ್ವರದಲ್ಲಿ ನನ್ನ ವಿದ್ಯಾರ್ಥಿಗಳಿಗೆ ನಾನು ಮ್ಯಾಥಮ್ಯಾಟಿಕ್ಸ್ ಜೊತೆ ಪ್ರಾಮಾಣಿಕತೆಯ ಪಾಠವನ್ನು ಹೇಳಿಕೊಟ್ಟಿದ್ದೆ ಎಂದು ಹೇಳಿ ಸುಮ್ಮನಾದರು. ಇದೊಂದು ಚಿಕ್ಕ ಘಟನೆ ಸಾಕು ಶೈಲಾ ಟೀಚರ್ ಎಂಥವರೆಂದು ಹೇಳಲು.
ಮೇಷ್ಟ್ರು ಎಂಬ ಶಬ್ದ ಕಿವಿಯ ಮೇಲೆ ಬಿದ್ದ ಕೂಡಲೇ ನನ್ನ ಕಣ್ಣೆದುರಿಗೆ ಸುಳಿವ ಹಲವರಲ್ಲಿ ಎಂ.ಸಿ.ಪ್ರಕಾಶ್ ಮೇಷ್ಟ್ರು ಖಂಡಿತವಾಗಿ ಒಬ್ಬರು ಎನ್ನುತ್ತಾರೆ ಎಂ.ಎಸ್. ಆಶಾದೇವಿ. ಹಲವು ವರ್ಷಗಳ ಕಾಲ ಮಯೂರ ಪತ್ರಿಕೆಯಲ್ಲಿ ಅನುವಾದಿತ ಕವಿತೆಗಳ ಬಗ್ಗೆ ಕಾವ್ಯಬಿಂದು ಅಂಕಣದಲ್ಲಿ ಅರ್ಥಪೂರ್ಣವಾದ ವ್ಯಾಖ್ಯಾನ ನೀಡುತ್ತಿದ್ದ ಪ್ರಕಾಶ್ ಆ ಮೂಲಕ ಕಾವ್ಯಾಸಕ್ತರೆಲ್ಲರಿಗೂ ಕವಿತೆಯ ಓದನ್ನು ಕಲಿಸಿದವರು.
ನೀನಾಸಂ ಶಿಬಿರ ನಡೆಯುವಾಗ ಓಹ್ ಮೇಡಂ, ಮೇಡಂ ಎಂಬ ಒಕ್ಕೂರಲ ಧ್ವನಿ ಕೇಳಿ ಬಂದತ್ತ ತಿರುಗಿದರೆ ಅಲ್ಲಿ ತಮ್ಮ ಎಂದಿನ ಚೈತನ್ಯ ಶಾಲಿ ನಗುವಿನೊಂದಿಗೆ ಪೂರ್ಣಿಮಾ ಮೇಡಂ ಯಾವ ಭಿನ್ನಭಾವವೂ ಇಲ್ಲದೆ ಎಲ್ಲರೊಂದಿಗೆ ಬೆರೆತು ಕುಶಲೋಪರಿ ನಡೆಸುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಸಾಗರದ ಎಲ್.ಬಿ. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿರುವ ಪೂರ್ಣಿಮಾರ ಪಾಠದಷ್ಟೆ ಅವರ ಚೈತನ್ಯಶಾಲಿ ವ್ಯಕ್ತಿತ್ವ ಕೂಡ ಪ್ರಾರಂಭದ ಬ್ಯಾಚ್ನಿಂದ ಹಿಡಿದು ಇಂದಿನ ವಿದ್ಯಾರ್ಥಿಗಳವರೆಗೂ ಎಲ್ಲರನ್ನು ಪ್ರಭಾವಿತಗೊಳಿಸುತ್ತಿದೆ.
ಬದುಕು, ಸಾಹಿತ್ಯ, ವೃತ್ತಿ ಜೀವನ ಎಲ್ಲದರಲ್ಲೂ ಶ್ರದ್ದೆ ಮತ್ತು ಶಿಸ್ತಿಗೆ ವಿಶೇಷ ಮಹತ್ವ ನೀಡುವ ಸುಮಿತ್ರಾ ಮೇಡಂ ವಿದ್ಯಾರ್ಥಿಗಳಲ್ಲೂ ಶ್ರದ್ದೆ ಮತ್ತು ಶಿಸ್ತಿನ ಜೊತೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿರುವವರು.
ತನ್ನ ವಿದ್ಯಾರ್ಥಿ ಜೀವನದಲ್ಲಿ ಕನ್ನಡದ ಹಲವು ಶ್ರೇಷ್ಟ ಗುರುಗಳ ಪಾಠ ಕೇಳುವ ಪುಣ್ಯ ಪಡೆದ ಆಶಾದೇವಿ ಮೇಡಂ ಅದೇ ಗುರುಪರಂಪರೆಯ ಮುಂದುವರಿಕೆಯಂತೆ ಗೋಚರವಾಗುತ್ತಾರೆ. ಅಪಾರವಾದ ಓದು, ಖಾಚಿತ್ಯ ಪೂರ್ಣ ದೃಷ್ಟಿಕೋನ, ಸಾಹಿತ್ಯದ ಬಗೆಗೆ ಎಣೆಯಿಲ್ಲದ ಪ್ರೀತಿ ಇವು ಆಶಾದೇವಿಯವರಿಗೆ ತರಗತಿ ಒಳಗೆ ಮತ್ತು ಹೊರಗೆ ನಿರಂತರವಾಗಿ ವಿದ್ಯಾರ್ಥಿಗಳನ್ನು ಸೃಷ್ಟಿಸಿಕೊಡುತ್ತಿದೆ. ಮೇಡಂ ಶಿಷ್ಯರಿಗೆ ಎಷ್ಟು ಪ್ರೀತಿ ಪಾತ್ರರು ಎನ್ನುವುದಕ್ಕೆ ಎರಡು ವರ್ಷದ ಹಿಂದೆ ಬೆಂಗಳೂರಿಗೆ ವರ್ಗಾವಣೆಗೊಂಡು ಬರುವಾಗ ನ್ಯಾಮತಿಯ ವಿದ್ಯಾರ್ಥಿಗಳ ಒದ್ದೆಯಾದ ಕಣ್ಣಂಚು, ಗದ್ಗದವಾದ ಧ್ವನಿಯೇ ಸಾಕ್ಷಿ.
ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಸೂಕ್ಷ್ಮ ಜೀವಿ ಶಾಸ್ತ್ರವನ್ನು ಭೋದಿಸುವ ಡಾ.ಸಿ.ರವೀಂದ್ರನಾಥ್ ಜೊತೆಗೆ ಸೂಕ್ಷ್ಮವಾಗಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುತ್ತಿರುವವರು. ತರಗತಿಯಲ್ಲಿ ಸೂಕ್ಷ್ಮ ಜೀವಿ ಶಾಸ್ತ್ರವನ್ನು ಜೆನ್ ಕಥೆಯನ್ನು, ಹಾಯ್ಕು ಕಾವ್ಯವನ್ನು ವಿಶಿಷ್ಟವಾಗಿ ಸಂಯೋಜಿಸಿ ಪಾಠ ಮಾಡುವ ರವೀಂದ್ರನಾಥ್ ಆದ್ದರಿಂದಲೇ ವಿದ್ಯಾರ್ಥಿ ಸಮೂಹದ ನೆಚ್ಚಿನ ಸರ್.
-ಕೆ ಅಕ್ಷತಾ
GOOD THOUGHT Akshata
GOOD JOB Avadhi…
ella/ra barahagaLu chennAgive.
nalme,
Chetana
ಸಂಸ್ಕೃತವಾಕ್ಯವೆಂದು ನೀವು ಈ ತಲೆಬರಹ ಕೊಟ್ಟದ್ದಾದ್ರೆ ಅದು “ಗುರವೇ ನಮಃ” ಆಗಬೇಕು. ಅಥವಾ ಕನ್ನಡದಲ್ಲಿ “ಏನ್ ಗುರುವೇ, ಚಿಂದಿ ಉಡಾಯ್ಸಿಂಗಾ?” ಸ್ಟೈಲ್ ಆದರೆ ಹಾಗೆಯೇ ಇರಬಹುದೋ ಏನೊ.