-ಬಿ ಎಂ ಬಷೀರ್

ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ
ಬ್ಯಾರಿಯಂತೆ ಅಪ್ಪ
ಹುಟ್ಟಿದ
–
ಗಿಡದಲ್ಲಿ ತೂಗುವ ಮಾವು
ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ
ಹೂವು ಎಲ್ಲವನ್ನು
ಸರಕಿನಂತೆ ನೋಡಿದ
–
ವ್ಯಾಪಾರವೆನ್ನುವುದು ಅವನಿಗೆ
ಜೂಜಿನಂತೆ ಅಂಟಿತು
ಬದುಕನ್ನೇ ಒತ್ತೆ ಇಟ್ಟು
ಆಡಿದ
–
ಹಸಿವನ್ನು ಹೂಡಿ
ದಿನಸಿ ಅಂಗಡಿ ತೆರೆದ
ಗೆದ್ದ
ಗೆಲುವನ್ನು ಜವಳಿ ಅಂಗಡಿಗೆ
ಮಾರಿ ಸೋತ…
ಸಾಲಕ್ಕೆ ಹಳೆಯ
ಹೆಂಚನ್ನೇ ಮಾರಿದ
ಸೂರುವ ಸೂರನ್ನು
ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು
ತಂದ ಸಿಗಡಿಯ ರುಚಿ ಹಿಡಿದು
ಕಡಲ ತಡಿಗೆ ಹೋದ
ಮೀನಿನ ವ್ಯಾಪಾರಕ್ಕಿಳಿದ
–
ದುಂದುಗಾರ ಅಪ್ಪ
ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
ಅಮ್ಮನ ಮೌನದ ತಿಜೋರಿಯನ್ನೇ
ದೋಚಿದ
–
ಜೂಜಿನ ನಿಯಮವ ಮರೆತು
ನಂಬಬಾರದವರನ್ನೆಲ್ಲ ನಂಬಿದ
ಸೋಲಿನ ರುಚಿಯನ್ನು ಹಿಡಿದ
ಸೋಲಿಗಾಗಿಯೇ ಆಡ ತೊಡಗಿದ…
–
ಕೊನೆಗೆ ಎಲ್ಲ ಬಿಟ್ಟು
ಗುಜರಿ ಅಂಗಡಿ ಇಟ್ಟ
ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ
ಮುರಿದ ಬಕೀಟುಗಳ ರಾಶಿಯ
ನಡುವೆ ಆ
ರಾಮ ಕುರ್ಚಿಗೆ ಒರಗಿದ
ಅವನ ಮೌನದ ತಿಜೋರಿ ತುಂಬಾ
ಸಾಲ ಪತ್ರಗಳು
ಅಂಗಡಿಯ ಬಾಗಿಲಲ್ಲಿ
ಕಾಲ
ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ
–
ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ
ಗುಜರಿ ಆಯುವ ಹುಡುಗ!
ನಿಮಗೆ ಇವೂ ಇಷ್ಟವಾಗಬಹುದು…





ವಾಹ್….!
ಸುಂದರ ಸಾಲುಗಳು….!
ಬಷೀರ್…ನಾನು.. ನಿಮ್ಮ ಅಭಿಮಾನಿಯಾಗಿಬಿಟ್ಟೆ…
ನಿಮ್ಮ ಸಾಲುಗಳ ಅರ್ಥ…
ನೇರವಂತಿಕೆ ಬಹಳ ಇಷ್ಟವಾಯಿತು….
ಅಭಿನಂದನೆಗಳು…
ಅದ್ಭುತ ಸಾಲುಗಳು…
ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ.
ಆಳದ ಅನುಭಾವದಿಂದ ಹೊಮ್ಮಿದ ಕಾವ್ಯದಂತೆ ಗೋಚಿರಿಸುತ್ತದೆ!
ಅಭಿನಂದನೆಗಳು ಬಷೀರ್
ಪ್ರೀತಿಯಿಂದ,
ಚಂದಿನ
So touching. A pictue of stupidity, ego, miserable life. These few lines are telling too many things. Wish many more such works will come out of your pen.