ಮೂಲ ಕವಿತೆ : ಬಾನು
ಶ್ರೀಲಂಕಾದ ತಮಿಳು ಮಹಿಳಾ ಕವಿ
ಕನ್ನಡಕ್ಕೆ ಆರನಕಟ್ಟೆ ರಂಗನಾಥ
ಎಮ್ಮೆಯ ತೊಗಲ ತೂತಾಕಿ
ನುಗ್ಗಿದ ಮಳೆ ಹನಿಯಂತೆ
ನನ್ನ ಮಾತುಗಳು
ನಿನ್ನ ಗಂಡಸ್ತನವ ಗಿಬುರುವಾಗ
ನೀನು ನಿದ್ದೆಗೆಟ್ಟು ಏಳಿಸಿದ
ಹೊಗೆ ಮಂಡಲ ಹೇಳುತ್ತಿದೆ
ಕವಣೆಕಲ್ಲಿನಂತೆ ರಾಚುತ್ತಿರುವ
ನಿನ್ನ ಒಂದೊಂದು ಮಾತುಗಳು
ಸೋತು ಬೀಳುವುದನು.!
ಬಾನು ನೀಲಿಯೆಂದು
ಕಡಲ ನೀರು ಉಪ್ಪೆಂದು
ತುಟಿ ಮುತ್ತು ಜೇನೆಂದು
ಬೆವರು ಬಸಿಯೆನ್ನುತ್ತಲೆ
ವೀರ್ಯಾಣು ತಂಪೆಂದು ಸಾರುವೆ
ಅಂತೆಯೇ ಗಂಡಸ್ತನಕ್ಕೆ ಮಾತ್ರ
ಸಕಲವು ಸೇರಿದೆ ಅಂದೆ !
ಒಳ್ಳೆಯದಾಯ್ತು ಬಿಡು
ನಿನ್ನ ಭೋಧನೆಗಳಿಗೆ ಬಹಳ ಧನ್ಯವಾದಗಳು!
ನೀನು ಗಂಡಸ್ತನದ ಪೀಠದಿಂದ
ಇಳಿದು ಬರಲೊಪ್ಪದ ಪ್ರತಿಕ್ಷಣವು
ಮೈಥುನದ ಉತ್ತುಂಗದಿಂದ ಬಳಲಿ
ಸೋತು ಸುಣ್ಣವಾಗಿರುವ ಪುರುಷಾಂಗಕ್ಕೆ
ಇದು ಒಪ್ಪಿತವೇ ಹೇಳು !
ಓಡ್ಕಾ ತುಂಬಿದ ನಿನ್ನ ಗಾಜಿನ ಲೋಟಗಳಲ್ಲಿ
ನಿಂಬೆಯ ಓಳುಗಳಾಗಿ
ಕನಸುಗಳೊಡನೆ ಬದುಕು ಕರಗಿತೇಕೆ ?
ಈ ನನ್ನ ಪ್ರಶ್ನೆಗೆ ನಿನ್ನಲ್ಲಿಯು ಉತ್ತರವಿಲ್ಲ !
ನಿನ್ನ ಜನ್ಮದಾತನ ವೀರ್ಯಾಣುವಿನಲ್ಲೂ ಉತ್ತರವಿಲ್ಲ !!.
ಮಸೆಗಲ್ಲಿನಲ್ಲಿ ಗುದ್ದಿ ರುಬ್ಬುವ
ಕಾಯಿಚೂರಿನಂತೆ
ಗಂಡಸ್ತನವು ನುಚ್ಚು ನೂರಾಗುವಾಗ
ಓಡ್ಕಾ ಬಿಯರ್ನಲ್ಲಿ ಕರಗಿದ
ಆ ಗಳಿಗೆಯಲ್ಲೇನಾದರು
ನನಗಾದ ಉತ್ತರವಿರಬಹುದೇ !
ಅದು ಮಾತ್ರವಲ್ಲದೆ
ರಕ್ತವು ಬೆವರು ಚೆಲ್ಲಾಡುವಂತೆ
ನಿನ್ನ ಗಂಡುಸ್ತನವ ಕೊಯ್ದೆಸೆವ
ತ್ರಾಣವಿದೆಯೇ ನಿನಗೆ ?
ಹಾಗಾದರೆ ಬಾರಯ್ಯ ಬಾ ಮಾತಿಗಿಳಿಯೋಣ
ಬಿಡುಗಡೆಯ ಬೆಸುಗೆಯಲ್ಲಿ.
0 ಪ್ರತಿಕ್ರಿಯೆಗಳು