ಸಾಯಲಿ ಬಿಡಿ
ನಾಗೇಶ ತಳವಾರ
ನನ್ನ ಲೇಖನಿಯ ಗಂಟಲೊಳಗೆ
ಪದಗಳು ಸಿಲುಕಿಕೊಂಡು ನರಳುತ್ತಿವೆ
ಹೊರಬರಲು ಹೆದರುತ್ತಿವೆ
ಭ್ರಷ್ಟಾಚಾರ ಅತ್ಯಾಚಾರಕ್ಕೆ
ನಲುಗಿ ಹೋಗಿವೆ
ಹುಟ್ಟುತ್ತಲೇ ಕತ್ತು ಹಿಚುಕಿ
ಕೊಲ್ಲುವವರ ಭಯಕ್ಕೆ
ಹೊರಬರಲು ಹೆದರುತ್ತಿವೆ
ಕತ್ತಲನು ನುಗ್ಗಿ ಹೋಗುವಷ್ಟು
ಪ್ರಕರತೆಯ ಶಕ್ತಿ ನನ್ನ ಪದಗಳಿಗಿದೆ
ಆದ್ರೆ,
ರಕ್ತಸಿಕ್ತ ಕೈಗಳಿಗೆ ಹೆದರಿ
ಹೊರಬರುತ್ತಿಲ್ಲ

ನೊಂದ ಜೀವಗಳಿಗೆ ಸಾಂತ್ವಾನ ಹೇಳುವ
ನನ್ನ ಪದಗಳಿಗೆ
ಸಾಂತ್ವಾನ ಹೇಳುವವರು ಬೇಕಾಗಿದ್ದಾರೆ…
ವಿವೇಕಾನಂದ ಗಾಂಧಿ ಮಾತುಗಳು
ನಾಟದ ಹೃದಯಕ್ಕೆ
ನನ್ನ ಪದಗಳು ಕಿಚ್ಚು ಹಚ್ಚುತ್ತವೆ ಎನ್ನುವ
ಯಾವ ನಂಬಿಕೆಯೂ ಇಲ್ಲ
ಅದರ ಭ್ರಮೆಯಲ್ಲಿ ಬದುಕುವುದೂ ಇಲ್ಲ
ಹೊರಬಂದು ಕಂಡವರ ಕೈಗೆ ಸಿಕ್ಕು
ಬೆತ್ತಲೆಯಾಗುವುದಕ್ಕಿಂತ
ಗಂಟಲೊಳಗೆ ಉಳಿದು
ಸಾಯಲಿ ಬಿಡಿ
ಅಳುವವರು ಯಾರಿಲ್ಲಿ…?






sariyAda padagaLu: praKarate, sAntvana.
channagide..