ನಾ ದಿವಾಕರ
ದೂರ ದಿಗಂತದಲ್ಲೊಂದು
ಪ್ರಣತಿ !
ಪ್ರಣತಿಯೋ ಉರಿವ
ಒಡಲೋ ಅಗ್ನಿ ಶಿಖೆಯೋ
ಕಂಗಳಿಗೆಟಕುವ ಸತ್ಯ
ಕೈಗೆಟುಕದಲ್ಲವೇ ;
ರವಿಯ ನಿದ್ರಾವಸ್ಥೆಯಲಿ
ಶಶಿಯ ಸರಸ ಸಲ್ಲಾಪ
ಜಲಗಾಮಿನಿಯೊಡನೆ
ಬೇಕಲ್ಲವೇ ಮಂದ
ಬೆಳಕು !
ಬಿಂಬ ಪ್ರತಿಬಿಂಬಗಳ
ಸುಪ್ತ ಭಾವಗಳಿಗೆ
ನಿಸರ್ಗವೇ ಮಡಿಲು ;
ಅದೇನು ಆಕ್ರೋಶದ
ಉರಿಯೊ ಮನ
ತಣಿಸುವ ಪರಿಯೋ ?
ತಂಪೆರೆವ ಹೊತ್ತಿನಲಿ
ಒಂಟಿಕಾಲಿನ ತಪಸ್ಸು
ಅಗ್ನಿಯ ಹಂಬಲವೋ
ಮಂದಸ್ಮಿತ ಗಂಗೆಯ
ಬಂಧನವೋ
ಹಿಂಬದಿಯ ಕೆಂಬೆಳಕಿನಲಿ
ಎಲ್ಲವೂ ನಿಗೂಢ !
ತೇಲುವ ದೋಣಿಗೆ
ಅಂಬಿಗನ ಹಂಗೇಕೆ
ಮುಳುಗುವ ತೆಪ್ಪಕೆ
ನೀರಿನ ಹಂಗೇಕೆ
ಕೆನ್ನಾಲಿಗೆಯ ಪಯಣ
ಭುವಿಯ ಅಣಕಿಸುವಂತಿದೆ ;
ಚಲನಶೀಲ
ಮನಸುಗಳು
ಬೆದರಿ ತೆಪ್ಪಗಾಗಿರಲು
ತೆಪ್ಪೋತ್ಸವವೇಕೆ ?
ಬಿಂಬ ಪ್ರತಿಬಿಂಬಗಳ
ನಡುವೆ ತಥ್ಯ ಮಿಥ್ಯದ
ನಡುವೆ ಮನಸು
ಹೊಯ್ದಾಡುತಿದೆ
ಸಾಂತ್ವನವ ಅರಸಿ ;
ಎತ್ತ ಸಾಗುವುದು
ಏನ ಕಾಣುವುದು
ಪ್ರಶ್ನೆಗಳೇ ಹರಿಗೋಲು
ಮುಂದಣ ಪಯಣಕೆ.
0 ಪ್ರತಿಕ್ರಿಯೆಗಳು