ಗಂಗೆಯ ತಟದಲ್ಲಿ

ಗೀತಾ ಹೆಗ್ಡೆ ಕಲ್ಮನೆ
ಚಿತ್ತಾರ ಬಿಡಿಸಿದೆ
ದೀಪದ ಕೆನ್ನಾಲಿಗೆ
ದಿಗಂತದ ಸೂರ್ಯನೆಡೆಗೆ!
ಗಂಗೆಯ ತಟದಲ್ಲಿ
ಉರಿವ ಬೆಂಕಿಯ ಜ್ವಾಲೆ
ಇದು ದೀಪಾವಳಿಯ ಸಂಭ್ರಮವೊ
ಅಥವಾ
ದೂರದಲ್ಲಿ ಕಾಣುವ
ಆತ್ಮ ಬಿಟ್ಟ ದೇಹದ
ಚಿತೆಯ ಜ್ವಾಲೆಯೊ
ಒಂದೂ ಅರಿಯೆ.
ಏಕೆಂದರೆ ಕಾಶಿ ಬಲು ದೂರ
ಕಣ್ಣಾರೆ ಕಾಣದ ಹೊರತು
ಬರಿ ಅವರಿವರ ಮಾತು
ಹೇಳುವರು ಹೆಣ ಸುಡಲು
ಗಂಗೆಯೇ ಬೇಕಂತೆ
ದೇಹ ಮಲಿನ
ಆಗುವುದು
ಗಂಗೆಯ ಒಡಲೂ ಮಲಿನ
ಆದರೆ ಇರುವವರಿಗೆ
ಅಲ್ಲಿ ಸುಟ್ಟರೆ ಸಮಾಧಾನ.
ಎಲ್ಲದಕ್ಕೂ
ಯೋಗ ಬರಬೇಕು
ಕಾಣಲು ಗಂಗೆಯ ತಟ.
“ಇರುವುದೆಲ್ಲವ ಬಿಟ್ಟು
ಇರದುದೆಡೆಗೇ ಜೀವನ”
ಕವಿ ವಾಣಿಯು ಮನ ಕಲಕಿದಾಗ
ನಾನಾಗುವೆ ಇನ್ನೊಬ್ಬ ಕವಿ.
ಬಡಿದೆಬ್ಬಿಸುವ ಜಲತರಂಗ
ಗರಿ ಬಿಚ್ಚಿ ತೆಲುತ್ತ ಮುಳುಗುತ್ತ
ಸಾಗುವುದು ಬಾಳ ದೋಣಿ
ದಿಗಂತದಲ್ಲಿ ಸೂರ್ಯ
ಮುಳುಗೇಳುವ ತೆರದಿ
ಈ ಬಾಳೂ ಕಾಣುವುದು
ಅವನದೇ ದಾರಿ
ಯಾರಿರಲಿ ಇಲ್ಲದಿರಲಿ
ಆಗುವುದು ಹಗಲು ರಾತ್ರಿ
ಜಗದೊಡೆಯನ ನಿಯಮಕೆ
ಎಲ್ಲರೂ ಬದ್ದ
ತಲೆ ಬಾಗಲೇ ಬೇಕು.
ಬರುವ ದೀವಳಿಗೆಯ ಹಬ್ಬ
ಜಗವನ್ನೇ ಬೆಳಗಿಸಲಿ
ಬನ್ನಿ ಒಟ್ಟಾಗಿ ಬೆಳಗುವ
ಮುಕ್ತ ಮನಸಿನ
ಕೋಟಿ ಕೋಟಿ ಹಣತೆ
ಉರಿದುರಿದು ಅಡಗಲಿ
ದ್ವೇಷ ಅಸೂಯೆಯ ಕಿಡಿ
ಒಂದಾಗಿ ಬಾಳುವ
ತನುವಿನೆಣ್ಣೆಯನೆರೆದು.
ಮತ್ತದೆ ನೆನಪು
“ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ ಬೆಳಕು”





0 Comments
Trackbacks/Pingbacks