
ಡಿ ಎಸ್ ರಾಮಸ್ವಾಮಿ
ಅಗೆದರೆ ತಾನೆ ಅವಶೇಷ ದಕ್ಕುವುದು
ಹಳೆಯ ಚಿತ್ರಗಳೆಲ್ಲ ಕಣ್ಮುಂದೆ ನಿಲ್ಲುವುದು
ಕ್ಲಿಕ್ಕಿಸಿದ ಸಂದರ್ಭಗಳ ಲೆಕ್ಕ ಸಿಕ್ಕುವುದು
ಇದ್ದಲ್ಲೇ ಸ್ಥಿರವಾದ ಸಂಗತಿಗಳ ಬಿಚ್ಚುವುದು.
ಆದರೇನು ಮಾಡುವುದು
ತನ್ನನ್ನು ತಾನೇ ಚಿತ್ರಿಸುವವಕಾಶ ಸುಲಭ-
ಕ್ಕೊಲಿಯದು ಸೆಲ್ಫಿ ಇಲ್ಲದ ಕ್ಯಾಮರಾಗಳಲ್ಲಿ
ಪುರಾತನ ಕಾಲದ ಕತ್ತಲ ಸಹವಾಸ
ಗೊತ್ತೇ ಇಲ್ಲದ ಆಧುನಿಕತೆಯ ಕೃತಕತೆಗಳಲ್ಲಿ.
ತೆಗೆದದ್ದನ್ನೆಲ್ಲ ಚಿತ್ರ ಪಟವಾಗಿಸುವ ಮೊದಲು
ಗುಡ್ ಒನ್ಸ್ ಗಳನ್ನಷ್ಟೇ ಆಯುವ ಕುಶಲ ಕಲೆ
ಒಲಿಯುವುದಕ್ಕೆ ನಿರಂತರದ ಏಕ ನಿಷ್ಠೆಯ ತಪಸ್ಸು
ಸಿದ್ಧಿ ಸಾಧನೆಗೆ ಚಿತ್ರಗಳೇ ಯಾವತ್ತೂ ಸಾಕ್ಷಿಗಳು
ಚಿತ್ರ ಕ್ಲಿಕ್ಕಿಸುವ ಕ್ಯಾಮರಾಕ್ಕಿರುವ ತಾಕತ್ತು
ಬಳಸುವವರಿಗೆ ಗೊತ್ತಿದ್ದರಷ್ಟೇ ದಾಖಲೆ
ನೆರಳು ಬೆಳಕು ಸಮಯ ಸಂದರ್ಭ
ಅರಿವಿದ್ದರಷ್ಟೇ ಅರಳುವುದು ಸಾಹಿತ್ಯ ಚಿತ್ರ ಕಲೆ





ಪ್ರೀತಿಯ ರಾಮಸ್ವಾಮಿ ಸರ್ ನಿಮ್ಮ ಕವಿತೆ ಓದಿದ ಕೂಡಲೇ ಅಡಿಗರ ” ಆಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡಿತು ಗೆರೆಮಿರಿವ ಚಿನ್ನದದಿರು ” ಸಾಲುಗಳು ನೆನಪಾದವು .ಹಾಗೆಯೇ ಕೆ .ಎಸ್.ನ.ರ ಕುಂಕುಮಭೂಮಿ ಕವಿತೆಯ ಸಾಲುಗಳು ನೆನಪಾದವು.ಇದು ಬರೇ ನೆನಪಾಗುವ ಸಂಗತಿ ಮಾತ್ರ ಅಲ್ಲ. ಕಾವ್ಯ ಪರಂಪರೆ ಯೊಂದಿಗೆ ಅದರ ವಾರಸುಧಾರನಾದ ಸಂವೇದನಾಶೀಲ ಕವಿಯೊಬ್ಬನು ನಡೆಸುವ ಅನುಸಂಧಾನ .ಅಡಿಗರ ಮಾತಲ್ಲೇ ಉಲಿಯುವುದಾದರೆ ..ಈ ನಿಮ್ಮ ಕವಿತೆ ಕವಿ ಮಾಡಬಹುದಾದ ಅಸಲು ಕಸುಬು. ಪರಂಪರೆಯನ್ನು ಶೋಧಿಸಿ ಅಪರಂಜಿ ಚಿನ್ನವನ್ನು ಸೋಸುವ ಅಸಲು ಕಸುಬಿನ ..ಅಚ್ಚುಕಟ್ಟುತನ ಈ ಕವಿತೆಯಲ್ಲಿದೆ. ಇತ್ತುಗಳ ಧ್ವಜವ ಎತ್ತಿಕಟ್ಟದೆ, ಬೇರುಸತ್ತ ಮರದ ಮರ್ಮರ ಲಾಲಿಯವ ಹಾಡದೆ ,ಇಹದ ಜೊತೆಗಿನ ಸೆಲ್ಪಿ ಸಂಬಂಧವನ್ನು ,ಸಂಭ್ರಮ ವನ್ನು …ಅನುಭವಿಸುವ ಜರೂರತ್ತಿನ …ಹಾಕಿಕತ್ತನ್ನು ಮಂಡಿಸುವ ಒಂದಳ್ಳೆ ಕವಿತೆ ನಿಮ್ಮ ದು . ಅಭಿನಂದನೆ ನಿಮಗೆ. (.ಡಾ.ಟಿ.ಯಲ್ಲಪ್ಪ.)
ಧನ್ಯವಾದ ಸರ್. ಈ ನಡುವೆ ಕವಿತೆ ಬರೆಯುವುದಿರಲಿ ಓದುವುದಕ್ಕೂ ದಕ್ಕದ ಬಿಡುವು.
ಚಂದದ ಸಾಲುಗಳು
ಗುಡ್ ಒನ್