(ಇದುವರೆಗೆ…)
ಪ್ರಜ್ಞಾ ಮತ್ತೀಹಳ್ಳಿ
ಒಹೋ ದೋಣಿ ವಿಹಾರ ವ್ಯವಸ್ಥೆ ಇರಬೇಕು. ಹಾಗಂತ ಹೊಳೆದಿದ್ದೇ ಖುಶಿಯಾಯಿತು. ಟಿಕೆಟು ಕೊಳ್ಳೋಣ ಅಂತ ಆಚೀಚೆ ಕಣ್ಣಾಡಿಸಿದೆ. ಒಂದು ಕಡೆ ಕೌಂಟರ್ ಕಾಣಿಸಿತು. ಹೋಗಿ ನೋಡಿದರೆ ಅದು paid toilet. ಅವರ ಹತ್ತಿರ ದೋಣಿ ಕೂಪನ್ ಕೇಳಿದೆ ಹಾಗೇನೂ ಇಲ್ಲ ಅವರೇ ಇಸಿದುಕೊಳ್ಳುತ್ತಾರೆ ಅಂದರು. ಬೇರೆ ಬೇರೆ ದಿಕ್ಕಿಗೆ ಮುಖ ಮಾಡಿದ 2-3 ದೋಣಿಗಳು ನಿಂತಿದ್ದವು. ಜನರು ಓಡೋಡಿ ಹತ್ತಿಕೊಳ್ಳುತ್ತಿದ್ದರು. ಎಲ್ಲವೂ ಒಂದೇ ನದಿಯನ್ನು ಸುತ್ತು ಹಾಕಿಸುವ ವಿಹಾರದ ದೋಣಿಗಳು ತಾನೇ ಚಂದ ಕಂಡಿದ್ದನ್ನು ಹತ್ತೋಣ ಅಂತ ತೀಮರ್ಾನಿಸಿದೆ. ನೋಡಲು ಆಕರ್ಷಕ ಅನ್ನಿಸಿದ ದೋಣಿಯೊಂದು ನನ್ನನ್ನು ಸೆಳೆಯಿತು. ದೋಣಿಯ ಮೇಲಿನ ದೊಡ್ಡ ಹಾಯಿ ಪಟಪಟ ಗಾಳಿಗೆ ಹಾರುತ್ತಿತ್ತು. ತಿಳಿಗಪ್ಪಿನ ಹೂಗ್ಲಿ ನದಿ ಮಾರಿಗೊಂದೊಂದು ಸ್ನಾನ ಘಟ್ಟಗಳು ಮೀನು ಹಿಡಿಯಲು ಏಕಾಗ್ರತೆಯಿಂದ ಗಾಳ ಇಳಿಬಿಟ್ಟು ಕೂತು ನಿಶ್ಚಲ ವಿಗ್ರಹದಂತೆ ಕಾಣುವ ಗಂಡಸರು ತೊಡೆವರೆಗೆ ಸೀರೆ ಏರಿಸಿ ಬಗ್ಗಿ ಬಟ್ಟೆ ಒಗೆಯುತ್ತ ನದಿಗೂ ಕೆಲಸ ಕಲಿಸುವಷ್ಟು ಚಲನಶೀಲ ಹೆಂಗಳೆಯರು ಅವರೆಲ್ಲರನ್ನು ಬಿರು ಬಿಸಿಲಿನ ಕಿರಿಕಿರಿಯಿಂದ ತಪ್ಪಿಸುವ ಸಂಕಲ್ಪದಿಂದ ನೆರಳಿನ ಕೊಡೆ ಹಿಡಿದ ಅರಳಿ ಮರಗಳು ಅರೆ! ಅರ್ಧ ಘಂಟೆಯಾದರೂ ದೋಣಿ ಹೋಗುತ್ತಲೇ ಇತ್ತು ಬೇರೆ ದೋಣಿಗಳು ಎಲ್ಲೆಲ್ಲಿ ಹೋದವೋ ಏನೋ ಕಾಣುತ್ತಲೂ ಇರಲಿಲ್ಲ ಈಗ ವಾಪಸು ತಿರುಗುತ್ತಾನೆ ಅಂತ ಕಾಯುತ್ತಲೇ ಇದ್ದೆ. ಇಲ್ಲ. ಯಾವುದೋ ಹಳ್ಳಿಯಂತಹ ಸ್ನಾನಘಟ್ಟ ಬಂತು ಎಲ್ಲರೂ ದುಡುದುಡು ಇಳಿಯತೊಡಗಿದರು. ಅಲ್ಲೇ ಬಹಳ ಹೊತ್ತಿನಿಂದ ಕಾಯುತ್ತಿದ್ದಂತೆ ಕಾಣುವ ಜನ ಒಡೋಡಿ ಬಂದು ಕುರಿ ಕೋಳಿ ಮೂಟೆ ಸೈಕಲ್ ಇತ್ಯಾದಿ ಹೇರಿ ಹತ್ತತೊಡಗಿದರು. ಏನೋ ಎಡವಟ್ಟಾಗಿದೆ ಅನ್ನಿಸಿತು. ಇಳಿಯುತ್ತಿರುವವರಲ್ಲಿ ಕೊನೆಯಲ್ಲಿದ್ದ ಕಾಲೇಜು ಹುಡುಗಿಯೊಬ್ಬಳನ್ನು ಇದು ದೋಣಿ ವಿಹಾರವಲ್ಲವೇ ತಿರುಗಿ ಹೋಗುವುದಿಲ್ಲವೇ ಯಾಕೆ ಇಳಿಯುತ್ತೀರಿ ಎಂದು ಕೇಳಿದೆ. ಅವಳು ನನ್ನನ್ನು ಸಖೇದಾಶ್ಚರ್ಯದಿಂದ ನೋಡಿದಳು ಅದು ವಿಹಾರದ ದೋಣಿ ಅಲ್ಲವೇ ಅಲ್ಲ. Inland Water Service, ಅಂದರೆ ನಮ್ಮಲ್ಲಿ ಸಿಟಿ ಬಸ್ ಇದ್ದ ಹಾಗೆ ಕೊಲ್ಕತ್ತೆಯ ಸುತ್ತಲಿನ ಹಳ್ಳಿಗಳಿಗೆ ರಸ್ತೆ ಮಾರ್ಗದಲ್ಲಾದರೆ ದೂರವಾಗುತ್ತದೆ ಎಂದು ದೋಣಿ ಬಳಸುತ್ತಾರೆ. ನಾವೀಗ ಯಾವುದೋ ಗಂಜಿ ಘಾಟೊ ಎನೋ ಹೆಸರಿನ ಹಳ್ಳಿಗೆ ಬಂದಿದ್ದೆವು. ನನ್ನ ಪುಣ್ಯಕ್ಕೆ ತಿರುಗಿ ಬೇಲೂರು ಮಠಕ್ಕೆ ದೋಣಿ ಹೋಗುತ್ತಿತ್ತು. ಹಾಗಾದರೆ ನಾವು ಹತ್ತುವಾವಾಗ ಅಲ್ಲಿದ್ದ ಬೇರೆ ದೋಣಿಗಳು ಎಲ್ಲಿ ಹೋದವು ಅಂತ ಕೇಳಿದೆ. ಅವು ಬೇರೆ ಬೇರೆ ಹಳ್ಳಿಗೆ ಹೋದವಂತೆ . ಆ ಹಳ್ಳಿಗಳ ಹೆಸರು ಹೇಳಿದಳು ಅದರ ಪೈಕಿ ದಕ್ಷಿಣೇಶ್ವರ ಅಂತ ಕೇಳಿದ್ದೇ ನನ್ನ ಕಿವಿ ಚುರುಕಾಯಿತು ಈಗ ತಿರುಗಿ ಹೋಗಿ ದಕ್ಷಿಣೇಶ್ವರಕ್ಕೆ ಹೋಗುವ ದೋಣಿ ಹತ್ತಿದರಾಯಿತು ಅಂತ ಕೂತೆ ಆ ದೋಣಿಗಳಲ್ಲಿ ಇಳಿಯುವಾಗ ದುಡ್ಡು ದೊಡುವ ಪದ್ದತಿ ಇರುವ ನಿಮಿತ್ತ ನನ್ನನ್ನು ಯಾರೂ ತಡವಿರಲಿಲ್ಲ. ಅಂತೂ ತಿರುಗಿ ಬಂದು ದಕ್ಷಿಣೇಶ್ವರಕ್ಕೆ ಹೋಗುವ ದೋಣಿ ಯಾವುದೆಂದು ಸರಿಯಾಗಿ ಕೇಳಿಕೊಂಡು ಹತ್ತಿದೆ. ಈ ಸಲ ದೋಣಿ ವಿರುದ್ದ ದಿಕ್ಕಿಗೆ ಹೊರಟಿತು ಪ್ರಸಿದ್ದ ಹೌರಾ ಸೇತುವೆಯ ಕೆಳಗಿನಿಂದ ಹಾದು ಹೋಗುವಾಗಲಂತು ಸಕತ್ ಥ್ರಿಲ್ ಆಗಿತ್ತು. ಇದ್ದಕಿದ್ದ ಹಾಗೆ ಹೊಟ್ಟೆಯೊಳಗೆ ಸಣ್ಣಗೆ ನೋವು ಶುರುವಾಯಿತು. ಬೆಳಿಬೆಳಿಗ್ಗೆ ಕರಿದ ಪದಾರ್ಥ ಅದರಲ್ಲೂ ಬಟಾಟೆ ಪಲ್ಯ ತಿಂದಿದ್ದ ಕಾರಣಕ್ಕೆ ಇರಬಹುದು ಅನ್ನಿಸಿತು ನಿಮಿಷಗಳು ಕಳೆದ ಹಾಗೆ ತೊಂದರೆ ಹೆಚ್ಚುತ್ತಲೇ ಹೋಯಿತು. ಸುತ್ತಲೂ ಅಪಾರ ಜಲರಾಶಿ ಒಮ್ಮೆ ದೋಣಿ ಹೊರಟರೆ ಗಮ್ಯ ತಲುಪುವ ತನಕ ನೆಲ ಸಿಗುವುದೂ ಇಲ್ಲ. ಥಟ್ಟನೆ ಇಳಿಯುವ ನೆಲ ಬಂತು. ಎಲ್ಲರೂ ದೇವಾಲಯ ಎಲ್ಲಿ ಅಂತ ವಿಚಾರಿಸತೊಡಗಿದರು ನಾನು ಶೌಚಾಲಯ ಎಲ್ಲಿದೆ ಅಂತ ಕೇಳತೊಡಗಿದೆ. ದೇವರಿಂದ ದೂರವಿಡಬೇಕು ಅಂತ ಸಾಕಷ್ಟು ದೂರದಲ್ಲಿ ಇಟ್ಟಿದ್ದರು. ಹೆಜ್ಜೆ ಹೆಜ್ಜೆಗೆ ಭಿಕ್ಷುಕರ ಕಾಟ. ಸಣ್ಣ ಸಣ್ಣ ಮಕ್ಕಳನ್ನು ಡುಬುಲ್ ಡುಬುಲ್ ಕಾಲ ಮೇಲೆ ಬೀಳಿಸಿ ಹೆಂಗಸರು ಬೇಡುತ್ತಿದ್ದರು ನನ್ನ ಸಂಕಟ ಅವರಿಗೆಲ್ಲಿ ತಿಳಿಯಬೇಕು
ಕಾಳಿಮಾತೆಯ ಗರ್ಭಗುಡಿಯ ಬಾಗಿಲಲ್ಲಿ ಮೆಟ್ಟಿಲು ಗುಂಟ ಉದ್ದವಾದ ಕ್ಯೂ. ಪ್ರತಿಯೊಬ್ಬರ ಕೈಯಲ್ಲಿ ಬಿಳಿ ಬಿಳಿ ತಾವರ ಮೊಗ್ಗು ಬಹುಶ: ಕಾಳಿಮಾತೆಗೆ ಬಹಳ ಪ್ರಿಯವಾದ ಹೂವಿರಬೇಕು. ಕೆಂಪನೆಯ ಉರುಟು ಕುಂಕುಮವಿಟ್ಟುಕೊಂಡ ಕಾಟನ್ ಸೇರೆಯ ನೀಳಕಾಯದೆ ಬಿಳಿಬಿಳಿ ಬೆಂಗಾಲಿ ನಾರಿಯರು ಕಮಲದ ಮೊಗ್ಗು ಕೊಟ್ಟು ದೊಡ್ಡ ದೊಡ್ಡ ಕಣ್ಣುಗಳೇ ಪ್ರಧಾನವಾಗಿ ಕಾಣುವ ಹಿರಿದ ಕೆನ್ನಾಲಿಗಯೆ ದೇವಿಯ ಮೂತರ್ಿಗೆ ಭಕ್ತಿಯಿಂದ ನಮಿಸುವುದ ನೋಡುವುದೇ ಚೆಂದ. ದೇಗುಲದ ಹೊರಗೆ ದೊಡ್ಡ ಆವರಣದಲ್ಲಿ ಆಹಾರ ಮಳಿಗೆಗಳ ಜಾತ್ರೆಯೇ ನೆರೆದಿತ್ತು. ಪಾನಿಪುರಿ ಶೇವ್ ಪುರಿ ಸಮೋಸಾ ಐಸಕ್ರೀಂ ಹಣ್ಣಿನ ಚೂರು ತರಕಾರಿ ಚೂರು ಹಾಕಿ ಸಾಲಡ್ ಮಾಡಿ ಕೊಡುವ ಹೀಗೆ ಐವತ್ತಕ್ಕೂ ಹೆಚ್ಚಿನ ಅಂಗಡಿಗಳು ಪ್ರತಿ ಅಂಗಡಿಯಲ್ಲೂ ಜನವಿದ್ದರು. ಎದುರಿನ ಬೀದಿಯಲ್ಲಿ ಸಾಲಾಗಿ ಅಂಗಡಿಗಳು. ಬಳೆ ಸರ ಕಾಳಿ ಮಾತೆಯ ಮುಖದ ಶಿಲ್ಪ ತೆಂಗಿನ ನಾರಿನ ಕುಂಭ ಹೀಗೇ ಏನೇನೋ. ಎಲ್ಲ ಕಡೆ ಎದ್ದು ಕಾಣುತ್ತಿದ್ದುದು ಕೆಂಪು ಚೌಕಳಿಯ ತೆಳ್ಳನೆಯ ಟವೆಲು.
ಬೆಳಗ್ಗಿನಿಂದ ಸ್ನಾನಘಟ್ಟದಲ್ಲಿ ನೋಡಿ ನೋಡಿ ಅದೇನೋ ಆಕರ್ಶಣೆ ಹುಟ್ಟಿತ್ತಾದ ಕಾರಣ ಒಂದು ಕೆಂಪು ಚೌಕಳಿಯ ಟವೆಲು ನನ್ನ ಬ್ಯಾಗು ಸೇರಿತು. ತಿರುಗಿ ಬರುವಾಗ ನಾನು ಬಸ್ಸು ಹತ್ತಿಕೊಂಡೆ. ಝೂ ನೋಡೋಣ ಅಂತ ಹೋದೆ. ಬಾಗಿಲಿನ ಕಾವಲಿನವರು ಓಡಾಡಲು ಕನಿಷ್ಟ 3-4 ತಾಸು ಬೇಕು ಈಗ ಮುಚ್ಚುವ ಸಮಯವಾಗುತ್ತ ಬಂತು ನಾಳೆ ಬನ್ನಿ ಎಂದರು. ಹತ್ತಿರ ನೋಡುವಂಥಹುದು ಮತ್ತೇನಿದೆ ಅಂತ ಕೇಳಿದೆ. ತಾರಾಲಯ ನೋಡಿ ಎಂದರು. ನಡೆಯುತ್ತ ಹೋಗಬಹುದೇ ಅಂತ ಕೇಳಿದರೆ ಹೌದು ಎಂದರು. ಊದ್ದಕ್ಕೆ ಒಂದೇ ರಸ್ತೆ ಹಿಡಿದು ಹೊರಟೆ ಬಲಕ್ಕೆ ಬೇಲಿಯಾಚೆಗೆ ಸುಂದರ ಉದ್ಯಾನವಿತ್ತು ಎಷ್ಟು ನಡೆದರೂ ರಸ್ತೆ ಮುಗಿಯದೇನೋ ಅನ್ನಿಸಿ ಎದಿರು ಕಂಡವನೊಬ್ಬನನ್ನು ಕೇಳಿದೆ ತಾನು ತೋರಿಸುತ್ತೇನೆ ಅಂತ ಜೊತೆಗೆ ನಡೆಯಲು ಶುರು ಮಾಡಿದ. ಬಲಪಕ್ಕದ ತೋಟ ವಿಕ್ಟೋರಿಯಾ ಗಾರ್ಡನ ಅದರಲ್ಲಿ ಬ್ರಿಟೀಶ ಮ್ಯೂಸಿಯಂ ಇದೆ ಸಂಜೆ ಐದಕ್ಕೆ ಬಂದಾಗಿದೆ. ತಾನು ಮಿಲಿಟರಿಯವ ಉತ್ತರಪ್ರದೇಶದವ ಎಂದ. ತಾರಾಲಯ ತಲುಪಿದೊಡನೆ ಥ್ಯಾಂಕ್ಯೂ ಎಂದೆ. ತಾನೂ ಶೋ ನೋಡುತ್ತೇನೆ ಎಂದ. ಒಮ್ಮೆಲೆ ಗಲಿಬಿಲಿಗೆ ಬಿದ್ದೆ. ಏನು ಹೇಳಬೇಕೋ ತೋಚಲಿಲ್ಲ. ಒಂದು ಬಗೆಯ ಗೊಂದಲದಲ್ಲಿಯೇ ಎರಡು ಟಿಕೆಟು ಖರೀದಿಸಿದೆ. ಹಿಂದೆಂದೂ ಪರಿಚಯವೇ ಇರದ ಗಂಡಸಿನ ಜೊತೆ ಅಗತ್ಯಕ್ಕಿಂತ ಹೆಚ್ಚು ವ್ಯವಹರಿಸಿ ರೂಢಿ ಇರಲಿಲ್ಲವಾದ ಕಾರಣ ತೀವ್ರ ಮುಜುಗರಕ್ಕೆ ಸಿಕ್ಕಿಬಿದ್ದಿದ್ದೆ. ಆತ ಕೊಲ್ಕತ್ತೆಯ ಬಗ್ಗೆ ಏನೇನೋ ತನ್ನ ಅನುಭವಗಳನ್ನು ಹೇಳುತ್ತಿದ್ದ. ಮಧ್ಯ ಮಧ್ಯ ದೂರದ ರಾಜ್ಯದಿಂದ ನಾನೊಬ್ಬಳೇ ಬಂದು ಒಬ್ಬಂಟಿಯಾಗಿ ತಿರುಗಾಡುವುದರ ಬಗ್ಗೆ ತನ್ನದೇ ಆದ ವಿಸ್ಮಯದ ಕುತೂಹಲ ತೋರಿಸುತ್ತಿದ್ದ. ಆತ ಹಾಗೆ ಮಾಡಿದಾಗಲೆಲ್ಲ ನನ್ನೊಳಗೆ ಒಂದೊಂದು ಬೊಗಸೆ ಭಯ ಸೇರಿಕೊಳ್ಳತೊಡಗಿತು. ನಾನು ಅವನಿಗಿಂತ ಹೆಚ್ಚಿನ ವಿದ್ಯೆ ಪದವಿ ಮತ್ತು ಉಪನ್ಯಾಸಕ ವ್ರತ್ತಿಯ ಗುರುಸ್ಥಾನ ಇವನ್ನೆಲ್ಲ ಮುಂದಿಟ್ಟುಕೊಂಡು ನಮ್ಮಿಬ್ಬರ ನಡುವೆ ಅಂತರ ಸ್ರಷ್ಟಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಬಗ್ಗೆ ಅವನಿಗೆ ಗೌರವ ಹುಟ್ಟಿದರೆ ನಾನು ಸೇಫ ಅಂತ ಅಂದುಕೊಂಡಿದ್ದೆ.
ದೊಡ್ಡ ಗುಮ್ಮಟದಂತಹ ಗೋಳಾಕಾರದ ಭವನದ ಒಳಗೆ ಸುತ್ತಲೂ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಇರುವ ದೊಡ್ಡ ತಾರಾಲಯವದು. ಮೇಲ್ಛಾವಣಿಯ ಗೋಡೆಯ ಮೇಲೆ ಬೆಳಕಿನ ಬಿಂಬಗಳನ್ನು ಮೂಡಿಸಿ ಸೂರ್ಯ ನಕ್ಷತ್ರ ಗ್ರಹಗಳ ಕತೆ ಹೇಳುತ್ತ ಹೋಗುತ್ತಾರೆ ವಿವರಣೆ ನೀಡಲು ಹಿಂದಿ ಅಥವಾ ಇಂಗ್ಲೀಷಿನಲ್ಲಿ ಪ್ರಭುತ್ವ ಉಳ್ಳ ಉಪಾದ್ಯಾಯಿನಿಯರು ಬಂದಿರುತ್ತಾರೆ. ನಡುನಡುವೆ ಹಿನ್ನೆಲೆ ಸಂಗೀತ ಇರುತ್ತದೆ. ಹಾಗಾಗಿ ಬಹಳ ಪರಿಣಾಮಕಾರಿಯಾದ ಶೋ ಕೊಡುತ್ತಾರೆ. ನಾನು ಹಿಂದೆ ಮುಂಬೈ ಹಾಗೂ ಬೆಂಗಳೂರಿನ ಪ್ಲಾನೆಟೊರಿಯಂ ನೋಡಿದ್ದೆ ಅಲ್ಲಿ ರೆಕಾಡರ್ೆಡ್ ಮಾತಿನ ಶೋ ಇರುತ್ತದೆ ಹಾಗಾಗಿ ಹೊಸತನವಿರುವುದಿಲ್ಲ. ಶೋ ಮುಗಿಯುವಷ್ಟರಲ್ಲಿ ಚೆನ್ನಾಗಿ ಕತ್ತಲಾಗಿತ್ತು. ನನಗೆ ನನ್ನ ಗೆಸ್ಟ್ ಹೌಸಿನ ಹೆಸರು ನೆನಪಿತ್ತು ಆದರೆ ರಸ್ತೆಯ ಹೆಸರು ಮರೆತುಹೋಗಿತ್ತು ಬ್ಯಾಗಿನಲ್ಲಿ ಇರುವ ದಾಖಲೆಗಳಲ್ಲಿ ಸಾಹಿತ್ಯ ಅಕಾಡೆಮಿಯ ವಿಳಾಸವಿತ್ತು ಅಷ್ಟೆ. ಟ್ಯಾಕ್ಸಿಯವರಿಗೆ ಚೌಧರಿ ಗೆಷ್ಟ ಹೌಸ ಎಂದೊಡನೆ ಯಾವ ರಸ್ತೆ ಅಂತ ಕೇಳುತ್ತಿದ್ದರು ನಿಧಾನವಾಗಿ ಜನ ಕರಗುತ್ತ ತಾರಾಲಯ ನಿರ್ಜನವಾಗತೊಡಗಿತ್ತು. ಪಕ್ಕದಲ್ಲಿ ನಿಂತಿರುವ ಸೈನಿಕ ಬಂಧುವಿನ ಕಡೆ ತಿರುಗಲೂ ಭಯವಾಗತೊಡಗಿತು. ಇದ್ದಕಿದ್ದ ಹಾಗೆ ಅವನಿಂದ ತಪ್ಪಿಸಿಕೊಂಡರೆ ಸಾಕು ಎಂಬ ಭಾವ ಮೊಳೆತದ್ದೇ ಎದುರು ಬಂದ ಟ್ಯಾಕ್ಸಿಗೆ ಕೈ ಮಾಡಿ ಹತ್ತಿಬಿಟ್ಟೆ. ಪಾಪ ಅವನು ಏನೇನೋ ಬಡಬಡಿಸುತ್ತಿದ್ದ ಅವನಿಗೆ ಥ್ಯಾಂಕ್ಸ ಟಾಟಾ ಎಲ್ಲ ಒಂದುಸಿರಲ್ಲಿ ಹೇಳಿ ಹೊರಟು ಬಿಟ್ಟೆ ನಮ್ಮ ಗೆಷ್ಟ ಹೌಸಿನ ಎದುರಿಗಿದ್ದ ನೆಹರು ಬಾಲ ಕೇಂದ್ರದ ಹೆಸರು ಹೇಳಿದೊಡನೆ ಡ್ರೈವರ್ ಎರಡೇ ನಿಮಿಷ ಚಲಿಸಿ ನಿಲ್ಲಿಸಿ ಬಿಟ್ಟ. ಹೊರಗೆ ಇಣುಕಿದರೆ ನನ್ನ ತಂಗುಮನೆ ಅರೆ ನಾನು ಅಷ್ಟು ಹತ್ತಿರವಿದ್ದೆನಾ ಅಂತ ಅಚ್ಚರಿಯಾಯಿತು. ಅಪರಿಚಿತ ಊರಿನ ಕತ್ತಲು ಮತ್ತು ಒಂಟಿತನ ಹೇಗೆ ಕಂಗೆಡಿಸಿತಲ್ಲಾ ಅಂದುಕೊಳ್ಳುತ್ತ ಒಳಬಂದೆ. ವಂಗ ನಾಡಿನಲ್ಲಿ ಒಂದು ದಿನ ಮುಗಿದಿತ್ತು.
ಮರುದಿನ ಇಡೀ ಬೆಂಗಾಲ ಮುಷ್ಕರ ನಡೆಸಲಿತ್ತು. ಹಾಗಾಗಿ ಸಂಜೆ ತನಕ ಹೊರಗೆ ಹೋಗುವಂತಿರಲಿಲ್ಲ ಬೆಳಿಗ್ಗೆ ಎದ್ದು ನಡೆಯುತ್ತಲೇ ತಿರುಗಾಡಲು ಹೊರಟೆ ಹಿಂದಿನ ಬೀದಿಯಲ್ಲಿ ನನ್ನ ಕಾಲುಗಳು ನಿಂತುಬಿಟ್ಟವು ಅದು ಅಲ್ಲಿನ ಪ್ರಸಿದ್ಧ ನಾಟಕ ಮಂದಿರ ರವೀಂದ್ರ ಭಾರತಿ. ನಮ್ಮ ರಂಗ ಶಂಕರದ ಹಾಗೆ ಯಾವಾಗಲೂ ನಾಟಕ ನಡೆಯುವ ಜಾಗ ನಮ್ಮ ಹಸೆ ಚಿತ್ರಕಲೆಯ ಹಾಗೆ ಕಾಣುವ ಬೆಂಗಾಲಿ ಬರಹದ ಬೋಡರ್ು ನೋಡಿ ಖುಶಿಯಾಯಿತು. ಅಲ್ಲಿಂದ ಮುಂದೆ ಬಂದೊಡನೆ ವಿಕ್ಟೋರಿಯಾ ಗಾರ್ಡನ್ ಇತ್ತು. ಆದರೆ ಬಂದಾಗಿತ್ತು ಎದುರಿನ ಹಚ್ಚ ಹಸುರಿನ ಆಟದ ಬಯಲಿನಲ್ಲಿ ಕುದುರೆಗಳು ಮೇಯುತ್ತಿದ್ದವು . ನೇರ ಬಂದೊಡನೆ ಮುಂದಿನ ಬೀದಿಯಲ್ಲಿ ತಾರಾಲಯ ಕಣ್ಣಿಗೆ ಬಿತ್ತು. ಹಗಲು ಬೆಳಕಿನಲ್ಲಿ ಸಭ್ಯ ಹುಡುಗನ ಹಾಗೆ ಕಾಣುತ್ತಿತ್ತು. ರಾತ್ರಿ ನಾನು ಗಡಗಡ ನಡುಗಿದ್ದ ರಸ್ತೆಯಲ್ಲಿ ಈಗ ಆರಾಮಾಗಿ ಹೊರಟಿದ್ದೆ. ಮುಷ್ಕರದ ಕಾರಣ ಜನರು ವಿರಳವಾಗಿ ಇದ್ದರು ಪೋಲಿಸರು ಹೆಚ್ಚಿಗೆ ಕಾಣುತ್ತಿದ್ದರು ಹೋಟೆಲಿಗೆ ಬಂದೆ ಅಲ್ಲೇ ಇದ್ದ ಹಾಲಿನಲ್ಲಿ ಊಟದ ವ್ಯವಸ್ಥೆ ಇತ್ತು ಆ ದಿನ ಸಾರ್ವಜನಕರಿಗೆ ಮುಚ್ಚಿದ್ದರು ಕವಿಗಳಿಗೆ ಮಾತ್ರ ಬೇರೆ ವ್ಯವಸ್ಥೆ ಮಾಡಿದ್ದರು. ಬೆಳಿಗ್ಗೆ ತಿಂಡಿ ಮದ್ಯಾನ್ಹ ಊಟ ಎರಡಕ್ಕೂ ಅದೇ ಆಹಾರವೇ ಇತ್ತು. ಬ್ರೆಡ್ಡು ಬೇಯಿಸಿದ ಮೊಟ್ಟೆ ಬೆಣ್ಣೆ ಬಾಳೆಹಣ್ಣು ಹೊರಗೆ ಏನೂ ಸಿಗದ ಕಾರಣ ಅದೇ ಮ್ರಷ್ಟಾನ್ನ!





ಕೋಲ್ಕತ್ತಾವನ್ನು ಹಿಡಿದಿಡುವ ಒಂದು ಒಳ್ಳೆಯ ಪ್ರಯತ್ನ. ಅಂದ ಹಾಗೆ ವಿಕ್ಟೋರಿಯಾ ಮೆಮೋರಿಯಲ್ ನ ಮುಂದೆ ಇರುವುದು ರವೀಂದ್ರ ಭಾರತಿಯಲ್ಲ ರವೀಂದ್ರ ಸದನ್. ಅದು ಬರೀ ನಾಟಕಕ್ಕೆ ಅಂತ ಮೀಸಲೇನಿಲ್ಲ. ಸಭೆ ಸಮಾರಂಭ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರವಿರುವಂತೆ ಕೋಲ್ಕತ್ತಾದ ರವೀಂದ್ರ ಸದನ್ ಒಂದು ಕಲಾಕ್ಷೇತ್ರ. 🙂