ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ

ಆತ್ಮೀಯ ಸ್ನೇಹಿತರೇ,

ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ. ವರದಿಗಾರಿಕೆಯ ವಿವಿಧ ಬಗೆಗಳು, ವರದಿಗಾರನಿಗೆ ಇರಬೇಕಾದ ಅರ್ಹತೆಗಳು, ವರದಿಗಾರಿಕೆಯಲ್ಲಿ ತಂತ್ರಜ್ಞಾನದ ಪ್ರಭಾವ, ವಾಣಿಜ್ಯೀಕರಣದ ಮಾಧ್ಯಮದಲ್ಲಿ ವರದಿಗಾರನಿಗಿರುವ ಸವಾಲುಗಳು ಇವೇ ಮತ್ತಿತರ ಅಂಶಗಳನ್ನು ಈ ಪುಸ್ತಕ ಒಳಗೊಂಡಿದೆ.

ಪತ್ರಿಕೋದ್ಯಮದ ನನ್ನ 33 ವರ್ಷಗಳ ಸುದೀರ್ಘ ಕಾಲದಲ್ಲಿ ನನಗಾದ ಕೆಲವು ಅನುಭವಗಳನ್ನು ದೃಷ್ಟಾಂತಗಳ ಸಮೇತ ವಿವರಿಸಿದ್ದೇನೆ. ಚುನಾವಣಾ ವರದಿಗಾರಿಕೆ, ವಿಧಾನಮಂಡಲ ಕಲಾಪ ವರದಿಗಾರಿಕೆ, ರಾಜಕೀಯ ವರದಿಗಾರಿಕೆ, ಗ್ರಾಮೀಣ ವರದಿಗಾರಿಕೆ, ಅಪರಾಧ ವರದಿಗಾರಿಕೆ, ನ್ಯಾಯಾಂಗ ವರದಿಗಾರಿಕೆ, ವಾಣಿಜ್ಯ ವರದಿಗಾರಿಕೆ, ಕ್ರೀಡಾ ವರದಿಗಾರಿಕೆ ಹೀಗೆ ವಿವಿಧ ಬಗೆಯ ವರದಿಗಾರಿಕೆಯನ್ನು ಸವಿವರವಾಗಿ ವಿವರಿಸಿದ್ದೇನೆ.

ಮುಖ್ಯವಾಗಿ ಮಾಧ್ಯಮದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅವರ ಶೈಕ್ಷಣಿಕ ಅಧ್ಯಯನಕ್ಕೆ ಪೂರಕವಾಗುವಂತೆ ಈ ಪುಸ್ತಕ ರಚಿಸಿದ್ದೇನೆ. ಯುವ ವರದಿಗಾರರಿಗೆ ವೃತ್ತಿಯಲ್ಲಿ ಹೇಗೆ ಮುಂದೆ ಸಾಗಬೇಕೆಂದು ವಿವರಿಸಿದ್ದೇನೆ.

ಪತ್ರಿಕೆ, ಬಾನುಲಿ (ರೇಡಿಯೋ), ಟಿವಿ, ನ್ಯೂಸ್ ಪೋರ್ಟಲ್ ವರದಿಗಾರಿಕೆ ಕುರಿತು ಈ ಪುಸ್ತಕದಲ್ಲಿ ಬರೆಯಲಾಗಿದೆ. ಸುದ್ದಿಯ ನೈಜತೆಯ ಪರಿಶೀಲನೆ (ವೆರಿಫಿಕೇಶನ್) ಅಗತ್ಯವನ್ನು ಒತ್ತಿ ಹೇಳಲಾಗಿದೆ.

ಆಧುನಿಕ ತಂತ್ರಜ್ಞಾನದ ಫಲವಾದ ಫೇಸ್ ಬುಕ್, ಟ್ವಿಟರ್, ವಾಟ್ಸಾಪ್ ಕೂಡ ಇವತ್ತು ಹೇಗೆ ಸುದ್ದಿಯ ಮೂಲವಾಗಿದೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಿದ್ದೇನೆ.

ವಿವಿಧ ಬಗೆಯ ವರದಿಗಾರಿಕೆ ಕುರಿತು ನಾಡಿನ ಕೆಲವು ಹೆಸರಾಂತ ಹಿರಿಯ ಪತ್ರಕರ್ತರ ಮಾರ್ಗದರ್ಶಿ ನುಡಿಗಳನ್ನು ಈ ಪುಸ್ತಕ ಒಳಗೊಂಡಿದೆ. ಇದು ಈ ಪುಸ್ತಕದ ವೈಶಿಷ್ಠ್ಯ. ಈ ಹಿರಿಯ ಪತ್ರಕರ್ತರು ನನ್ನ ಕೋರಿಕೆಯಂತೆ ಸಂಕ್ಷಿಪ್ತವಾಗಿ ತಮ್ಮ ಮಾರ್ಗದರ್ಶಿ ನುಡಿಗಳನ್ನು ಬರೆದು ಕೊಟ್ಟಿದ್ದಾರೆ. ಇದಕ್ಕಾಗಿ ಹಿರಿಯ ಪತ್ರಕರ್ತರಾದ ಮತ್ತಿಹಳ್ಳಿ ಮದನ ಮೋಹನ್, ಗೋಪಾಲಕೃಷ್ಣ ಹೆಗಡೆ, ಡಿ.ಉಮಾಪತಿ, ಪ್ರಶಾಂತ ನಾತು, ಡಿ.ಮಹದೇವಪ್ಪ, ಆರ್.ಪಿ.ಜಗದೀಶ್, ಎಂ. ಸಿದ್ದರಾಜು, ಶೇಷಣ್ಣ (ಎಸ್.ಕೆ.ಶೇಷಚಂದ್ರಿಕ), ಶ್ರೀಕಾಂತ ಹುಣಸವಾಡಿ, ಕೊಳ್ಳೇಗಾಲ ಮಹೇಶ್, ಕುಂದೂರು ಉಮೇಶ ಭಟ್ಟ ಅವರಿಗೆ ನಾನು ಋಣಿಯಾಗಿದ್ದೇನೆ.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ ಆಗಿರುವ ಕುಲಪತಿ ಡಾ. ಓಂಕಾರ ಕಾಕಡೆ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಹಿರಿಯ ಪತ್ರಕರ್ತ ಕನ್ನಡಪ್ರೆಸ್.ಕಾಮ್ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಬೆನ್ನುಡಿ ಬರೆದಿದ್ದಾರೆ. ಹಿರಿಯ ಕಲಾವಿದ ಸುಧಾಕರ ದರ್ಬೆ ಅಂದವಾದ ಕವರ್ ಪೇಜ್ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಇವರೆಲ್ಲರಿಗೂ ಕೃತಜ್ಞನಾಗಿದ್ದೇನೆ.

ಈ ಪುಸ್ತಕವನ್ನು ಮೈಸೂರಿನ ಅನನ್ಯ ಪುಸ್ತಕಗಳು ಪ್ರಕಾಶನ ಹೊರತಂದಿದೆ. ಈ ಪುಸ್ತಕದ ಬೆಲೆ 130 ರೂಪಾಯಿ. ಪುಟಗಳು 144. ದಯವಿಟ್ಟು ಪುಸ್ತಕ ಕೊಂಡು ಓದಿ. ಧನ್ಯವಾದಗಳು.

ಪುಸ್ತಕಗಳಿಗೆ Kudliguru@gmail.com

ಅಥವಾ ಪ್ರಕಾಶಕರ ದೂರವಾಣಿ ಸಂಖ್ಯೆ 0821-2476019 ಸಂಪರ್ಕಿಸಬಹುದು.

ʼಡಾ. ಓಂಕಾರ ಕಾಕಡೆʼ ಅವರ ಮುನ್ನುಡಿಯ ಆಯ್ದ ಭಾಗ-

ಈ ನಾಡಿನ ಪ್ರಮುಖ ದಿನಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಮೂರು ದಶಕಗಳ ಕಾಲ ಸುದೀರ್ಘ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಶ್ರೀ ಕೂಡ್ಲಿ ಗುರುರಾಜ ಅವರು ಅಚ್ಚು ಮೊಳೆ ಜೋಡಿಸುವ ಕಾಲದಿಂದ ಹಿಡಿದು ಇವತ್ತಿನ ಸೋಷಿಯಲ್ ಮೀಡಿಯಾ ಕಾಲದ ವರೆಗಿನ ಕಾಲ ಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಎಲ್ಲಾ ಪ್ರಯೋಗಗಳಿಗೆ ಒಗ್ಗಿಕೊಂಡವರು.

ತಮ್ಮ ವರದಿಗಾರಿಕೆಯ ಅನುಭವದ ಮೂಸೆಯಲ್ಲಿ ಮೂಡಿ ಬಂದ ಹಲವಾರು ದೃಷ್ಟಾಂತಗಳ ಮೂಲಕ ಸುದ್ದಿ ಬರಹ ಮತ್ತು ವರದಿಗಾರಿಕೆಯ ಹಲವು ಮಜಲುಗಳನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಒಂದರ್ಥದಲ್ಲಿ ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗಳನ್ನು ದಾಖಲಿಸುವ ಪ್ರಯತ್ನಗಳನ್ನೂ ಮಾಡಿದ್ದಾರೆ.

ಇಂತಹ ಕೃತಿಯನ್ನು ನೀಡಿರುವ ಶ್ರೀ ಕೂಡ್ಲಿ ಗುರುರಾಜ ಅವರು ಅಭಿನಂದನಾರ್ಹರು.

‍ಲೇಖಕರು Avadhi

19 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading