ಕುಪ್ಪಳ್ಳಿ, ವೆಂಕಟಪ್ಪ ಹಾಗೂ ಪುಟ್ಟಪ್ಪ ಮೂರೂ ನೆನಪುಗಳನ್ನು ಒಂದೇ ಕಡೆ ಹಿಡಿದಿಡಲಾಗಿದೆ. ತೇಜಸ್ವಿ ಕುಟುಂಬ ಕುವೆಂಪು ಅವರನ್ನೂ, ಅವರ ನೆನಪುಗಳನ್ನೂ ಇನ್ನಿಲ್ಲದಂತೆ ಕಾಪಾಡಿದೆ. ಅವರ ಪುಸ್ತಕಗಳು ಎಲ್ಲರಿಗೂ ದಕ್ಕುವಂತೆ ನೋಡಿಕೊಂಡಿದೆ. ಸುಂದರವಾಗಿ ಮುದ್ರಿಸಿ ಪ್ರತಿಯೊಬ್ಬರೂ ಕೊಳ್ಳುವಂತೆ ಮಾಡಿದೆ. ಬೇಂದ್ರೆ ಪುಸ್ತಕಗಳಿಗಾಗಿ ತಡಕಾಡಬೇಕಾದ ಪರಿಸ್ಥಿತಿ ಇರುವಾಗ ಕುವೆಂಪು ಕುಟುಂಬದ ಅಸ್ಥೆ ಗಮನಿಸುವಂತಿದೆ.
ಈ ಕಾಳಜಿ ಈಗ ವೆಬ್ ಲೋಕದಲ್ಲೂ ವ್ಯಕ್ತವಾಗಿದೆ. ಕುವೆಂಪು ಜೀವನ ಚರಿತ್ರೆ, ಅವರ ವಿಶ್ವ ಮಾನವ ಸಂದೇಶ, ಕೃತಿಗಳು, ನೆನಪು ಎಲ್ಲವೂ ಇಲ್ಲಿ ದಾಖಲಾಗಿದೆ. ಈ ವೆಬ್ ನ ಹಿರಿಮೆ ಎಂದರೆ ಕುವೆಂಪು ಅವರ ಬರಹಗಳ ಹಸ್ತಪ್ರತಿ ನೋಟವನ್ನೂ ನೀಡಿರುವುದು. ಕುವೆಂಪು ಫೋಟೋ ಗ್ಯಾಲರಿ ಯಂತೂ ಕಾಡುವಂತಿದೆ.
ಈ ವೆಬ್ ಇಂಗ್ಲಿಷ್ ಹಾಗೂ ಕನ್ನಡ ಎರಡರಲ್ಲೂ ಲಭ್ಯ. ಆದರೆ ಈ ವೆಬ್ ಒಂದು ದಾಖಲಾತಿ ಮಾತ್ರವೇ ಆಗಿ ಉಳಿದಿದೆ. ಬದಲಿಗೆ ಕುವೆಂಪು ಅವರ ಬಗೆಗೆ ನಡೆಯುವ ಚರ್ಚೆ, ನಡೆದ ಚರ್ಚೆ, ಕಾರ್ಯಕ್ರಮಗಳು, ಸಂಶೋಧನೆ ಈ ರೀತಿಯ ವಿವರಗಳನ್ನು ಸದಾ ನೀಡುತ್ತಿದ್ದರೆ ಇನ್ನಷ್ಟು ಜೀವಂತ ಎನಿಸುತ್ತದೆ. ಇಲ್ಲದಿದ್ದರೆ ಯಾಕೋ ಕುವೆಂಪು ಮ್ಯೂಸಿಯಮ್ ಎನಿಸಿಬಿಡುವ ಸಾಧ್ಯತೆ ಹೆಚ್ಚು.
ತೇಜಸ್ವಿಯ ಬಗೆಗೂ ಒಂದು ವೆಬ್ ಬರಬಾರದೇಕೆ? ಆದಷ್ಟೂ ಬೇಗ..
0 ಪ್ರತಿಕ್ರಿಯೆಗಳು