ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಥಾಲೋಕ ಎಂಬ ಪರ್ವತಶ್ರೇಣಿ

ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ‘ಕಾದಂಬರಿಯೊಳಗಿನ ಕಲ್ಪಿತ ವಾಸ್ತವ ವಾಗಿಲಿಯಲ್ಲಿ ಸಂಭವಿಸುತ್ತಿರುವ ವರ್ತಮಾನದೊಂದಿಗೆ’ ಬೆರೆತು ನಿಜ ಬದುಕಿನ ನಿಜ ವ್ಯಕ್ತಿಗಳು ಕಾದಂಬರಿಯ ಪಾತ್ರಗಳಾಗಿ, ಕಾದಂಬರಿಯ ಕಲ್ಪಿತ ಪಾತ್ರಗಳು ನಿಜ ಬದುಕಿನಲ್ಲಿ ಕಾಣಿಸಿಕೊಂಡು, ಒಂದೊಂದು ಪ್ರಮುಖ ಪಾತ್ರವೂ ಹಲವು ಹೆಸರುಗಳನ್ನು ಹೊತ್ತು, ಹಲವು ಅವತಾರಗಳನ್ನು ತಳೆದು, ತೆಲುಗಿನ ಲೇಖಕನ ವೈಯಕ್ತಿಕ ಬದುಕು, ಅವನ ಹಸ್ತಪ್ರತಿಯನ್ನು ಓದುತ್ತಿರುವ ನಿರೂಪಕನ ಬದುಕು, ಈ ಕಾದಂಬರಿ ಬರೆಯುತ್ತಿರುವ ಕುಂವೀ ವ್ಯಕ್ತಿತ್ವ ಎಲ್ಲ ಬೆರೆತು, ಬದುಕಿನ ಅನ್ವೇಷಣೆ, ಸಾಹಿತ್ಯದ ಪರಿಶೀಲನೆ, ಕಾದಂಬರಿಕಾರನ ಬದುಕಿನ ವಿಶ್ಲೇಷಣೆ ಎಲ್ಲ ಹೆಣಿಗೆಗೊಂಡು ಅತ್ಯಂತ ಕೌಶಲದಿಂದ ರೂಪುತಳೆದಿರುವ ಈ ಕೃತಿ ಕುಂವೀ ಅವರ ಇದುವರೆಗಿನ ಬರವಣಿಗೆಯ ಎಲ್ಲ ಮುಖ್ಯ ಅಂಶಗಳನ್ನೂ ಧೋರಣೆಗಳನ್ನು ಒಳಗೊಂಡೂ ಭಿನ್ನವಾಗಿದೆ. ಕುಂವೀ ಕಥಾಲೋಕ ಒಂದು ಪರ್ವತಶ್ರೇಣಿ. ಈಗಾಗಲೇ ಆ ಕಥಾಪರ್ವತಗಳ ನಡುವೆ ಅಡ್ಡಾಡಿರುವ ಓದುಗರು ಕುಂವೀ ಕೃತಿಯಲ್ಲಿ ಏನನ್ನು ನಿರೀಕ್ಷಿಸುತ್ತಾರೋ ಅದೆಲ್ಲ ಈ ಹೊಸ ‘ಹೇಮರೆಡ್ಡಿ ಮಲ್ಲಮ್ಮ’ ಕೃತಿಯಲ್ಲೂ ಇದೆ: ಜಲಪಾತದ ಹಾಗೆ ಭೋರ್ಗರೆಯುವ ಭಾಷೆ ಇದೆ; ನಿಬಿಡ ವೃಕ್ಷರಾಶಿಗಳಂತೆ ಓದುಗರ ಮನಸ್ಸನ್ನೆಲ್ಲ ಆಕ್ರಮಿಸುವ ‘ಅಭಿಜಾತ ಆಕ್ರಮಣಶೀಲ ವ್ಯಕ್ತಿತ್ವ’ ದ ಪಾತ್ರಗಳಿವೆ; ಒಂದು ಸಂಗತಿಯನ್ನು ಹತ್ತು ಬಗೆಗಳಲ್ಲಿ ವಿವರಿಸಿ ಇಪ್ಪತ್ತು ಸಾಧ್ಯತೆಗಳನ್ನು ಹೊಳೆಯಿಸಿ ತಬ್ಬಿಬ್ಬು ಗೊಳಿಸುವ ವಾಕ್ಯಗಳ ಸಮೃದ್ಧಿ ಇದೆ; ಲೇಖಕರು ‘ಒಂದರೊಳಗಿನ್ನೊಂದು ಭಾಷೆಯನ್ನು ಬೆರೆಸಿ ಅಸ್ಖಲಿತ ರೀತಿಯಲ್ಲಿ ನಿಭರ್ೀತವಾಗಿ ಮಾತನಾಡುವ’ ಭಾಗಗಳಿವೆ; ಉತ್ಪ್ರೇಕ್ಷೆಯ ಮೂಲಕ ವಿಡಂಬನೆಯನ್ನು ಮಾಡುತ್ತಿರುವಾಗಲೇ ವಾಸ್ತವದ ಭೀಕರತೆಯನ್ನು ಕಾಣಿಸಿ ದಿಗ್ಭ್ರಮೆ ಮೂಡಿಸುವ ಕೌಶಲವಿದೆ. ಈ ಕಾದಂಬರಿಯೊಂದು ‘ದುಃಸ್ವಪ್ನಗಳ ಪರಿಶೆ’. ‘ಭೂಪಟಕ್ಕೂ ತನ್ನ ಅಸ್ತಿತ್ವದ ಸುಳಿವು ನೀಡದಿರುವ ವಾಗಿಲಿ’ಯಲ್ಲಿ ನಡೆಯುವ ಹೇಮರೆಡ್ಡಿ ಮಲ್ಲಮ್ಮ ನಾಟಕ ಮತ್ತು ಅದರ ಶತದಿನೋತ್ಸವ ಕಥೆಯ ಬೀಜ. ಅದು ಬೆಳೆದು ಮಹಾವೃಕ್ಷವಲ್ಲ, ಹಲವು ಕತೆಗಳ ತರುರಾಜಿಯಾಗಿ ವಿಸ್ತರಿಸಿಕೊಂಡಿದೆ. ಐತಿಹ್ಯಗಳಲ್ಲಿ ಬರುವ ಮಲ್ಲಮ್ಮ ‘ಜಮೀನ್ದಾರಿ ವ್ಯವಸ್ಥೆಯ ಅಹಂಕಾರವನ್ನು ನಾಶ ಮಾಡಿದ ಸಾಧ್ವಿ’. ನಾಟಕ ಕೃತಿಯೊಳಗಡೆ ಹೇಮರೆಡ್ಡಿ ಪಕ್ಕಾ ಜಮೀನ್ದಾರ, ಕಾಮುಕ. ತನ್ನ ನಾದಿನಿ ಮಲ್ಲಮ್ಮ ಶಿವಶರಣೆ, ತನ್ನ ಪಾತಿವ್ರತ್ಯದಿಂದ ಶಿವನ ಮೇಲಿನ ಭಕ್ತಿಯಿಂದ ಆತನನ್ನು ಮಹಾಸಂತನನ್ನಾಗಿಯೂ, ಅನುಭಾವ ಕವಿಯನ್ನಾಗಿಯೂ ಪರಿವತರ್ಿಸುತ್ತಾಳೆ. ವಾಗಿಲಿಗೆ ಬರುವ ನಾಟಕ ತಂಡ ಮತ್ತು ನಟಿ ಪದ್ಮಾವತಿಯರು ನೆಪವಾಗಿ ಇಡೀ ವಾಗಿಲಿಯ ದಣಿಗಳ, ಕೊಲೆಗಡುಕರ, ರಾಜಕೀಯದ, ಜನ ಸಾಮಾನ್ಯರ ಬದುಕು ತೆರೆದುಕೊಳ್ಳುತ್ತದೆ. ‘ವಾಗಿಲಿ ಎಂಬ ತ್ರಿಕೋನಾಕೃತಿಯ ಮೂರೂ ಮೂಲೆಯಲ್ಲಿ ಪ್ರೇಮ ಹಿಂಸೆ ತ್ಯಾಗ. ಅದರ ಒಳ ಆವರಣದಲ್ಲಿ ಮೃಗೀಯ ಗ್ರಾಮೀಣ ಬದುಕು.’ ‘ಇಲ್ಲಿ ರಣಬಿಸಿಲು ಬೆಳದಿಂಗಳೆಂದಾಗಲಿಲ್ಲ, ಸುಳಿವ ಸುಂಟರುಗಾಳಿ ತಂಗಾಳಿಯಾಗಲಿಲ್ಲ, ತಂಗಳು ಬಿಸಿಗೂಳಾಗಲಿಲ್ಲ, ವೃದ್ಧರು ಹರೆಯವನ್ನಾವಹಿಸಿಕೊಳ್ಳಲಾಗಲಿಲ್ಲ, ಕೆಟ್ಟವರು ಒಳ್ಳೆಯವರಾಗಲಿಲ್ಲ.’ ‘ತಮ್ಮ ಊರಿನ ಹೆಸರು ಗೊತ್ತಿರಬಹುದಾದ’ ಆದರೆ ‘ಈ ದೇಶದ ಹೆಸರು ತಿಳಿದಿಲ್ಲದ’ ಸದಾ ‘ಸಾಮಾಜಿಕ ಅವಗಢಗಳಿಗೆ ಗುರಿಯಾಗುತ್ತಲೇ ಇರುವ’ ‘ಶಿಕ್ಷಣವಂಚಿತ ಪ್ರಜಾನಿವಹ’ ವನ್ನು ಹೇಮರೆಡ್ಡಿ ಮಲ್ಲಮ್ಮ ಕಲಕಿದ ಪರಿಯನ್ನು ವಾಗಿಲಿಯ ಶಿಕ್ಷಕ ನಿರೂಪಕ, ತನ್ನ ಗೆಳೆಯ ತೆಲುಗಿನ ಕತೆಗಾರ ಬರೆದ ಮೊಟ್ಟಮೊದಲ ಕಾದಂಬರಿಯ ಮೂಲಕ ಕಡೆದಿಡುತ್ತಾನೆ. ಈ ತಂತ್ರ ಕಾದಂಬರಿಯಲ್ಲಿ ಅರ್ಥದ ಪದರಗಳನ್ನು ಒಂದಾದ ನಂತರ ಒಂದರಂತೆ ಸೃಷ್ಟಿಸುತ್ತ ಹೋಗುತ್ತದೆ. ‘ಕಾದಂಬರಿಯೊಳಗಿನ ಕಲ್ಪಿತ ವಾಸ್ತವ ವಾಗಿಲಿಯಲ್ಲಿ ಸಂಭವಿಸುತ್ತಿರುವ ವರ್ತಮಾನದೊಂದಿಗೆ’ ಬೆರೆತು ನಿಜ ಬದುಕಿನ ನಿಜ ವ್ಯಕ್ತಿಗಳು ಕಾದಂಬರಿಯ ಪಾತ್ರಗಳಾಗಿ, ಕಾದಂಬರಿಯ ಕಲ್ಪಿತ ಪಾತ್ರಗಳು ನಿಜ ಬದುಕಿನಲ್ಲಿ ಕಾಣಿಸಿಕೊಂಡು, ಒಂದೊಂದು ಪ್ರಮುಖ ಪಾತ್ರವೂ ಹಲವು ಹೆಸರುಗಳನ್ನು ಹೊತ್ತು, ಹಲವು ಅವತಾರಗಳನ್ನು ತಳೆದು, ತೆಲುಗಿನ ಲೇಖಕನ ವೈಯಕ್ತಿಕ ಬದುಕು, ಅವನ ಹಸ್ತಪ್ರತಿಯನ್ನು ಓದುತ್ತಿರುವ ನಿರೂಪಕನ ಬದುಕು, ಈ ಕಾದಂಬರಿ ಬರೆಯುತ್ತಿರುವ ಕುಂವೀ ವ್ಯಕ್ತಿತ್ವ ಎಲ್ಲ ಬೆರೆತು, ಬದುಕಿನ ಅನ್ವೇಷಣೆ, ಸಾಹಿತ್ಯದ ಪರಿಶೀಲನೆ, ಕಾದಂಬರಿಕಾರನ ಬದುಕಿನ ವಿಶ್ಲೇಷಣೆ ಎಲ್ಲ ಹೆಣಿಗೆಗೊಂಡು ಅತ್ಯಂತ ಕೌಶಲದಿಂದ ರೂಪುತಳೆದಿರುವ ಈ ಕೃತಿ ಕುಂವೀ ಅವರ ಇದುವರೆಗಿನ ಬರವಣಿಗೆಯ ಎಲ್ಲ ಮುಖ್ಯ ಅಂಶಗಳನ್ನೂ ಧೋರಣೆಗಳನ್ನು ಒಳಗೊಂಡೂ ಭಿನ್ನವಾಗಿದೆ.]]>

‍ಲೇಖಕರು G

4 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading