
ಪಂಡಿತಾರಾಧ್ಯ ಮೈಸೂರು
‘ಕಿರಗೂರಿನ ಗಯ್ಯಾಳಿಗಳು’ ಎಂಬ ಪದಪುಂಜದಲ್ಲಿರುವ ‘ಗಯ್ಯಾಳಿ’ ಪದದ ಸ್ತ್ರೀಲಿಂಗ ರೂಪದ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾಷೆ ನಿರ್ವಾತದಲ್ಲಿ ನಿರ್ಮಾಣವಾಗಿ ಬಳಕೆಯಾಗುವಂತಿದ್ದರೆ ಪ್ರತಿಯೊಂದು ಪದಕ್ಕೂ ಪ್ರತಿಯಾಗಿ ತಾರ್ಕಿಕವಾದ ಪ್ರತಿಪದಗಳ ಸೃಷ್ಟಿಯಾಗುತ್ತಿತ್ತು. ಆದರೆ ಭಾಷೆ ಒಂದು ನಿರ್ದಿಷ್ಟ ಸಾಂಸ್ಕೃತಿಕ ಪರಿಸರದ ಸೃಷ್ಟಿಯಾದುದರಿಂದ ಆ ಸಂಸ್ಕೃತಿಯ ಸ್ಥಿತಿಗತಿಗಳಿಗನುಗುಣವಾಗಿ ಅದರ ಭಾಷೆ ರೂಪುಗೊಂಡಿರುತ್ತದೆ.
ಪುರುಷ ಪ್ರಧಾನ ಸಮಾಜ ಹೆಣ್ಣಿನ ವರ್ತನೆಯನ್ನು ಗೆರೆ ಎಳೆದು ನಿರ್ಬಂಧಿಸಿರುವುದರಿಂದ ಅದಕ್ಕೆ ಅನುಗುಣವಾದ ಪದಗಳು ಮಾತ್ರ ಅದರ ಭಾಷೆಯಲ್ಲಿ ಬಳಕೆಯಲ್ಲಿರುತ್ತವೆ. ಈ ನಿರ್ಬಂಧದ ಚೌಕಟ್ಟನ್ನು ‘ಮೀರಿ’ವರ್ತಿಸುವ ಹೆಂಗಸರನ್ನು ಗಯ್ಯಾಳಿಗಳೆಂದು ಕರೆದು ನಿಯಂತ್ರಿಸುತ್ತದೆ.
ಅಂಥ ಸಮಾಜದಲ್ಲಿ ಪುರುಷರ ವರ್ತನೆಗಳಿಗೆ ನಿರ್ಬಂಧಗಳಿಲ್ಲದ್ದರಿಂದ ಅವರು ಅದನ್ನು ಮೀರಿ ‘ಗಯ್ಯಾಳ’ರಾಗಲು ಅವಕಾಶವಿಲ್ಲ.
ನಮ್ಮ ಭಾಷೆ ನಮ್ಮ ಬದುಕಿನ ಕನ್ನಡಿ.

Aditya J Bidanooru ಹಾಗೆಯೇ ಮುಖ್ಯವಾಗಿ ನಮ್ಮ ಸಂಸ್ಕೃತಿಯಲ್ಲಿ ವೇಶ್ಯೆ ( ಸೂಳೆ) ಅನ್ನೋ ಪದದ ಪುಲ್ಲಿಂಗ ರೂಪ ಇಲ್ಲ. ಪುರುಷನಿಗೆ ಶೀಲ ಪಾವಿತ್ರ್ಯದ ಪ್ರಶ್ನೆಯೇ ನಮ್ಮ ಸಂಸ್ಕೃತಿಯಲ್ಲಿ ಇರಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಏಕಪತ್ನಿವೃತಸ್ಥರಾದ ನಾವು ತೀರಾ ಇತ್ತೀಚೆಗೆ ಇಂಗ್ಲಿಷ್ನ gigolo ( ಗಿಗೋಲೋ) ವನ್ನು ಗಂಡುವೇಶ್ಯೆ ಅಂತ ಅನುವಾದಿಸಿಕೊಂಡಿದ್ದೇವೆ. ಏನು ವಿಪರ್ಯಾಸ ಅಲ್ವೆ?
ವಾಸ್ತವ ಬೇರೆಯೇ ಇರುವುದನ್ನು ಕಾಣದವರಂತೆ ನಡೆದುಕೊಳ್ಳುತ್ತಿದ್ದೇವೆ.

Sarva Mangala ನಿಜ. ಆದರೆ ಜನಪದರ ಭಾಷೆಯಲ್ಲಿ ಕೆಲವು ವಿಶಿಷ್ಟ ಪ್ರಯೋಗಗಳಿವೆ. ಉದಾಹರಣೆಗೆ ‘ಬಂಜೆ’ ಪುಲ್ಲಿಂಗ ವಾಚಕವಾಗಿ ‘ನಿರ್ಬಂಜ’ ಪದ ಜನಪದ ಕಥೆಗಳಲ್ಲಿ, ಕಥನ ಗೀತೆಗಳಲ್ಲಿ ಬಳಕೆಯಾಗಿರುವುದನ್ನು ನೋಡಬಹುದು. ತಕ್ಷಣಕ್ಕೆ ಇನ್ನೂ ಕೆಲವಾರು ಪದಗಳು ಹೊಳೆದರೂ -ಸಂಸ್ಕೃತದಲ್ಲಿ ಸೌಮ್ಯ ಎನ್ನಿಸಿಬಿಡುವ ಪದಗಳು ಅಚ್ಚಕನ್ನಡದಲ್ಲಿ ಬಳಸುವಾಗ ಮುಜುಗರ ಉಂಟುಮಾಡುವ ಕಾರಣ ಇಲ್ಲಿ ಉದಾಹರಿಸಲಾಗುತ್ತಿಲ್ಲ.



ಇತ್ತೀಚೆಗೆ ಈ ಚಿತ್ರ ನೋಡಿದೆ. ಈ ಚಿತ್ರಕ್ಕೆ “ಕಿರಗೂರಿನ ಗಯ್ಯಾಳಿಗಳು” ಬದಲಾಗಿ “ಕಿರಗೂರಿನ ದಿಟ್ಟ ಮಹಿಳೆಯರು” ಹೆಸರಿಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು ಅನಿಸಿತು. ಕಾರಣ ಒಬ್ಬ ಮಂತ್ರವಾದಿ, ಹೆಂಡದ ಅಂಗಡಿ, ಮೂಢ ನಂಬಿಕೆಯನ್ನು ಮೆಟ್ಟಿ ನಿಂತ ಮಹಿಳೆಯರು ಗಯ್ಯಾಳಿಗಳು ಹೇಗಾಗುತ್ತಾರೆ? ಅವರ ಧೈಯ೯, ಸಾಹಸಕ್ಕೆ ಮೆಚ್ಚಬೇಕು. ತಪ್ಪು ದಾರಿಯಲ್ಲಿ ನಡೆವ ಗಂಡನನ್ನು ತಿದ್ದಿ ತೀಡಿ ರಕ್ಷಣೆ ಮಾಡುವ ಮನಸ್ಥಿತಿ ಮೆಚ್ಚಬೇಕು. ಮಹಿಳೆಯರು ಒಬ್ಬರಿಗೊಬ್ಬರು ಕಷ್ಟ ಸುಃಖಕ್ಕೆ ಆಗುವ ನಡೆ ಎಲ್ಲರೂ ತಿಳಿಯಬೇಕಾದ ವಿಷಯ. ಇಂಥ ಧೈರ್ಯವಂತ ಮಹಿಳೆಯರು ಸಮಾಜದಲ್ಲಿ ಇರಲೇಬೇಕು. ಅರಿತು ಕಲಿಯಬೇಕಾದ ವಿಷಯ ಸಾಕಷ್ಷಿದೆ. ಆಗಾಗ ನೆನಪಾಗುವ ಚಿತ್ರವಿದು.
ತೇಜಸ್ವಿಯವರ ಕಥೆ ಓದುವಾಗ ಗಯ್ಯಾಳಿ ಕೆಟ್ಟ ಪದವೆನಿಸುವುದಿಲ್ಲ. ಸಹಜ ದಿಟ್ಟತನಕ್ಕೆ ಹಳ್ಳಿಗಾಡಿನ ಕಚ್ಚಾಪದವಾಗಿ ಹಿತವೆನಿಸುವುದಿಲ್ಲವೆ? ಅನ್ಯಾಯಕ್ಕೆ ಸಡ್ಡು ಹೊಡೆಯುವ ಹೆಣ್ಣು ಮಗಳಿಗೆ ಗಯ್ಯಾಳಿ, ಗಂಡುಬೀರಿ ಎಂಬ ಬೈಯ್ಗುಳ ರೂಪದ ಬಿರುದು ಕೊಡುವಾಗಲೂ ಕೊಡುವವರ ಮನಸಿನಲ್ಲಿರುವುದು ಒಂದು ರೀತಿಯಲ್ಲಿ ಸತ್ಯದ ಕುರಿತಾದ ಅಂಜಿಕೆಯೇ. ಎಲ್ಲವನ್ನು ಶಿಷ್ಟದಲ್ಲಿ ನೋಡಲು ಪ್ರಯತ್ನಿಸುವುದು ತರವೆ?
ಇನ್ನು ಕೆಲವು ಹೀನ ಮನಸ್ಥಿತಿಯನ್ನು ತೋರಿಸುವ ಆಡುಮಾತಿನ ಅಸಹ್ಯ ಹುಟ್ಟಿಸುವ ಬೈಗಳ ಪದಗಳಿವೆಯಲ್ಲ ಉದಾ: `ಹೀನಸುಳಿ ಬೋಳಿಸಿದರೂ..,’ , ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ..