ಇವರು ಚಿತ್ರಾ ಕರ್ಕೇರಾ ದೋಳ್ಪಾಡಿ. ಬೆಳದಿಂಗಳಿಗೂ ಇವರಿಗೂ ಬಿಡಲಾಗದ ನಂಟು. ಹಾಗಾಗಿಯೇ ‘ಬೆಳದಿಂಗಳೇ ನೀ ಕಲೆಗಾರ..’ ಎಂಬ ಟ್ಯಾಗ್ ಲೈನ್ ನಲ್ಲಿ ‘ಶರಧಿ’ ಎಂಬ ಬ್ಲಾಗ್ ಹೊಂದಿದ್ದಾರೆ. ಭಾವದಲೆಗಳ ಪಯಣ ಆರಂಭಿಸಿದ್ದಾರೆ. ಇವರು ತಮ್ಮ ಪರಿಚಯವನ್ನು ಮಾಡಿಕೊಳ್ಳುವುದು ಈ ರೀತಿ. ತಸ್ಲೀಮಾ ನಸ್ರೀನ್ ಅವರ ಇಂದಿನ ಮನಸ್ಥಿತಿಯನ್ನು ಸರಿಯಾಗಿ ಬಣ್ಣಿಸುವ ಅವರ ಕವನವನ್ನು ಚಿತ್ರಾ ಇಲ್ಲಿ ಅನುವಾದಿಸಿದ್ದಾರೆ.
‘ನನ್ ಬಗ್ಗೆ ಹೇಳಕ್ಕೇನೂ ಇಲ್ಲ..ನಾನ್ ಥೇಟ್ ನಿಮ್ ಥರಾನೇ. ಕೂತಾಗ-ನಿಂತಾಗ ಎಲ್ಲೋ ಒಂದೆಡೆ ಮನದಲ್ಲಿ ಉದಿಸಿದ ಭಾವದಲೆಗಳ ಪುಟ್ಟ ಪಯಣ ಈ ‘ಶರಧಿಯಲಿ.. ನನ್ ಊರು ಕರಾವಳಿ ಮಡಿಲು ಪುತ್ತೂರು, ಸಧ್ಯಕ್ಕೆ ಬೆಂಗಳೂರ್ ನನ್ನೂರು’.
ತಸ್ಲೀಮಾ ನಸ್ರೀನ್ ದೆಹಲಿಯಲ್ಲಿ ‘ಗೃಹಬಂಧನ’ದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೀಗ ಗೃಹ ಬಂಧನದಲ್ಲಿದ್ದುಕೊಂಡು ಆಕೆಯ ನೋವು ‘ ಬಲವಂತವಾಗಿ ಕೂಡಿಟ್ಟ ಮನೆ’ ಎಂಬ ಕವನದ ಮೂಲಕ ಹೊರಬಂದಿದೆ. ಅದರ ಕೆಲವು ಸಾಲುಗಳು ಇಲ್ಲಿವೆ..
ನಾನೊಬ್ಬ ಎಂತಹ ಅಪರಾಧಿ ಮತ್ತು ಮನುಷ್ಯತ್ವದ ವಿರೋಧಿ
ನಾನೊಬ್ಬ ದೇಶಭ್ರಷ್ಟ ಮೋಸಗಾತಿ
ನನ್ನದೇ ಎಂದು ಹೇಳಿಕೊಳ್ಳುವ ದೇಶ ಕೂಡ ನನಗಿಲ್ಲ..
..ನಾನು ಸತ್ಯ ಹೇಳಿದ್ದಕ್ಕಾಗಿ ಇಂದು ರಾಜದ್ರೋಹಿ
ನೀವು ಸುಳ್ಳು ಹೇಳುವವರ ಭುಜಕ್ಕೆ ಭುಜ ಕೊಟ್ಟು ನಡೆಯಿರಿ
ಆದರೆ ನಾನು ಮಾತ್ರ ರಾಜದ್ರೋಹಿಯಾದ ಮನುಷ್ಯಳು
ನಾನು ಕಿಟಕಿಗಳನ್ನು ಮುಚ್ಚಿದ ಒಂದು ಮನೆಯಲ್ಲಿ ವಾಸವಾಗಿದ್ದೇನೆ
ಇಚ್ಛಿಸಿದರೂ ಆ ಕಿಟಕಿಗಳನ್ನು ನಾನು ತೆಗೆಯಲಾಗುವುದಿಲ್ಲ
…ನಾನು ಇಷ್ಟವಿಲ್ಲದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದೇನೆ
ಏಕೆಂದರೆ ನನ್ನನ್ನು ಬಲವಂತಾಗಿ ಇರಿಸಲಾಗಿದೆ
ನೋವು, ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುವಂತೆ ಒತ್ತಡ ಹೇರಲಾಗಿದೆ
ಈ ಪ್ರಜಾಪ್ರಭುತ್ವದಿಂದ(ಭಾರತ)
ಈ ಕೋಣೆಯಲ್ಲಿ ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವದ ಮೇಲಾಟ
ಈ ಕೋಣೆಯಲ್ಲಿ ಭರವಸೆಯ ಬೆಳಕಿಲ್ಲ, ಭಯ ಮಾತ್ರ
ಜಾತ್ಯತೀತ ಹೆಸರಲ್ಲಿ ಪ್ರತಿ ಕ್ಷಣವೂ ಆ ಕೋಣೆಯಲ್ಲಿ ನನ್ನ ಕೊಲೆಯಾಗುತ್ತಿದೆ
ನನ್ನ ಪ್ರೀತಿಯ ಭಾರತವೇ ನನ್ನ ಬಂಧಿಸಿಬಿಟ್ಟಿದೆ
ಇಲ್ಲಿ ಅತ್ಯಂತ ಕಾರ್ಯನಿರತ ಪ್ರಜೆಗಳಿದ್ದಾರೆ, ನನಗೊಂದು ಅನುಮಾನ
ಇವರಿಗೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮಟ್ಟಿಗಾದರೂ
ಒಂದೆರಡು ನಿಮಿಷ ಕಾಲಾವಕಾಶ ಇದೆಯೇ?..
..ಹೆಚ್ಚೆಂದರೆ ಒಂದು ದಿನ ಪ್ರಜಾಪ್ರಭುತ್ವದ ಧ್ವಜದೊಂದಿಗೆ
ನನ್ನ ದೇಹವನ್ನು ಸುತ್ತಿ, ನನ್ನ ಪ್ರಿಯ ಭಾರತದಲ್ಲಿ,
ಯಾರಾದರೂ ಒಬ್ಬರು ನನ್ನನ್ನು ಗೋರಿಗೆ ಹಾಕುತ್ತಾರೆ, ಹೆಚ್ಚಿನ ಪಕ್ಷ
ಒಬ್ಬ ಅಧಿಕಾರಿ ಆ ಕೆಲಸ ಮಾಡಬಹುದು ಎಂಬ ಶಂಕೆ ನನ್ನದು..




0 Comments