ಕಾಲ ಮರೆಯಾಗುವ ಮುನ್ನ ಒಂದು ಒಳ್ಳೆಯ ಪ್ರಯತ್ನ
ಕನ್ನಡ ಸಾಹಿತ್ಯ ಚರಿತ್ರೆಯ ಮನ್ವಂತರದ ಸಂಕ್ರಮಣಕಾಲವಿದು. ಬಹುಮುಖಿಯಾದ ಮತ್ತು ಬಹುಮುಖ್ಯವೂ ಆದ ಈ ಕಾಲದ ಸಾಹಿತ್ಯ ನಿರ್ಮಾತೃಗಳಿಗೆ ಚಳವಳಿಗಳ ಹಂಗಿಲ್ಲದ ಆದರೆ ಹಿಂದಿನೆಲ್ಲ ಚಳವಳಿಗಳ ಪ್ರಭಾವ ಮತ್ತು ಪರಿಕರಗಳನ್ನು ಮೀರಿದ ಹೊಸ ಅಯಾಮಗಳ ಭೂಮಿಕೆಯಿದೆ. ಸಾಹಿತ್ಯ ಚರಿತ್ರೆಯ ಅರಿವಿರುವ ಯಾರೂ ಆಧುನಿಕ ಮನೋಸ್ಥಿತಿಯಲ್ಲಿ ಪಡಿಮೂಡುತ್ತಿರುವ ತಾಜಾ ಸಂವೇದನೆಗಳನ್ನು ಗಮನಿಸದೇ ಇರಲಾರರು. ಕಾವ್ಯ, ನಾಟಕ, ಕಾದಂಬರಿಗಳಂತೆಯೇ ಕಥನ ಪರಂಪರೆಯೂ ಆಧುನಿಕರ ಕೊಡು ಕೊಳ್ಳುವಿಕೆಯಿಂದ ಮತ್ತಷ್ಟು ಶಕ್ತಿಯುತವಾಗಿ ಮತ್ತು ಶ್ರೀಮಂತವಾಗಿ ಹೊರಹೊಮ್ಮುತ್ತಿದೆ. ವಿಜಯ ಕರ್ನಾಟಕವೂ ಸೇರಿದಂತೆ ವಿವಿಧ ಪತ್ರಿಕೆಗಳು ನಡೆಸುವ ಕಥಾ ಸ್ಪರ್ಧೆಗಳ ಬಹುಮಾನಿತ ಕಥೆಗಳನ್ನು ಗಮನವಿಟ್ಟು ಓದಿದಾಗ ಕಥನ ಪರಂಪರೆಯು ಚಾಚಿಕೊಳ್ಳುತ್ತಿರುವ ಮತ್ತು ಒಳಗೊಳ್ಳುತ್ತಿರುವ ಬಗೆಗೆ ಸೋಜಿಗವೂ, ಆಶ್ಚರ್ಯವೂ ಮತ್ತು ಸಂಭ್ರಮಗಳೂ ಉಂಟಾಗುವುದರಲ್ಲಿ ಸಂಶಯವಿಲ್ಲ.
ಆದರೆ ಇಂಥ ಪ್ರಯೋಗಗಳನ್ನು ಸಾಕ್ಷೀಕರಿಸುವ ಪ್ರಯತ್ನಗಳು ನಡೆದಿವೆಯೇ ಎಂದು ಹುಡುಕಿದಾಗ ಮಾತ್ರ ನಿರಾಸೆಯಾಗುತ್ತದೆ. ಏಕೆಂದರೆ ಹೊಸ ಹೊಸ ಪ್ರಯೋಗಗಳನ್ನು ದಾಖಲಿಸುವ ಯತ್ನ ನಡೆಯದೇ ಇದ್ದಲ್ಲಿ ಕಾಲಾಂತರದಲ್ಲಿ ಅಂಥ ಪ್ರಯೋಗಗಳು ಅಗಿದ್ದಕ್ಕೆ ಪುರಾವೆಗಳೇ ಉಳಿಯುವುದಿಲ್ಲ. ಸಾಹಿತ್ಯ ಅಕಾಡೆಮಿ ನಿಯಮಿತವಾಗಿ ಸಾಹಿತ್ಯ ವಾರ್ಷಿಕಗಳನ್ನು ಪ್ರಕಟಿಸುತ್ತಿದೆಯಾದರೂ ಸಾಹಿತ್ಯ ಚಳವಳಿಗಳ ಗುಂಗಿನಿಂದ ಹೊರಬಂದ ಕಾಲದ ಒಟ್ಟೂ ಸಂವೇದನೆಗಳನ್ನು ಸಮರ್ಥವಾಗಿ ಒಂದೆಡೆ ಸೇರಿಸುವ ಪ್ರಯತ್ನ ಯಾರಿಂದಲೂ ನಡೆದೇ ಇಲ್ಲವೆಂಬುದನ್ನು ಗಮನಿಸಬೇಕು. ಇಂಥದೊಂದು ಪ್ರಯೋಗಕ್ಕೆ ಸಿ.ವಿ.ಜಿ. ಇಂಡಿಯಾ ಕೈ ಹಾಕಿದೆ. 1990ರ ನಂತರ ಬಂದ ಆಧುನಿಕ ಕನ್ನಡ ಕತೆಗಾರರ ಪ್ರಾತಿನಿಧಿಕ ಕಥಾ ಸಂಕಲನವೊಂದನ್ನು ಯಶಸ್ವಿಯಾಗಿ ತರುವಲ್ಲಿ ಸಂಪಾದಕ ಕಂನಾಡಿಗ ನಾರಾಯಣ ಯಶಸ್ವಿಯೂ ಆಗಿದ್ದಾರೆ.
ಯಾವುದು ಶ್ರೇಷ್ಠ ಕತೆ? ಎಂಬ ಪ್ರಶ್ನೆ ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಿದ ಸಂಪಾದಕನನ್ನು ಕಾಡದೇ ಇರದು. ಇಂದು ನಿನ್ನೆಯದಲ್ಲದ ಈ ಪುರಾತನ ಪ್ರಶ್ನೆಯೇ ಪ್ರತಿ ಸಂಕಲನದ ಪ್ರತಿ ಸಂಪಾದಕನ ವೈಯುಕ್ತಿಕ ನಿಲುವು ಮತ್ತು ಮಾನದಂಡಗಳ ಮೇಲೆ ಆ ಸಂಕಲನದ ಯಶಸ್ಸು/ವೈಫಲ್ಯ ನಿಂತಿರುತ್ತದೆ. ಅಕಾಡೆಮಿ ಶತಮಾನದ ಕಾವ್ಯ ಮತ್ತು ಸಣ್ಣಕತೆಗಳನ್ನು ಪ್ರಕಟಿಸಿದಾಗ ನಡೆದ ಸಂಗತಿಗಳನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು. ಆಶಯ, ಪರಿಣಾಮ, ಕಲಾತ್ಮಕತೆ, ತಂತ್ರಗಾರಿಕೆ, ಚಮತ್ಕಾರ ಇತ್ಯಾದಿ ಸ್ತರಗಳಲ್ಲಿ ಸಂಪಾದಕನೊಬ್ಬ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳಬಹುದಾದರೂ ಒಟ್ಟೂ ಓದುಗ ಸಮುದಾಯಕ್ಕೆ ಇಂಥ ಸಂಕಲನವೊಂದು ಮು/ಹುಟ್ಟಿಸುವ ನೈಜ ಪರಿಣಾಮಗಳು ಬಹು ಮುಖ್ಯ. ಸಂಪಾದಕನ ಕತ್ತರಿ ಮೊನಚಾಗಿರದಿದ್ದರೆ ಹುಲ್ಲಿಗಿಂತ ಕಳೆಯೇ ಅಧಿಕವಾಗಿ ಬಿಡುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಕಾಲಮಾನದ ತಕ್ಕಡಿಯಿಟ್ಟುಕೊಂಡು ಕೂತ ಮಾಪಕನನ್ನು ಗಲಿಬಿಲಿಗೊಳಿಸಿ ಸೊಪ್ಪು-ಸದೆಯನ್ನೂ ಔಷದೀಯವೆಂದು ನಂಬಿಸುವ ಹುನ್ನಾರವೊಂದು ಚರಿತ್ರೆಯುದ್ದಕ್ಕೂ ನಡೆದುಕೊಂಡೇ ಬಂದಿದೆ.
ಓದುಗನ ಅದೃಷ್ಟ. ಸ್ವತಃ ಕತೆಗಾರರೂ ಕಾದಂಬರಿಕಾರರೂ ಆಗಿರುವ ಈ ಸಂಕಲನದ ಸಂಪಾದಕ ಕಂನಾಡಿಗ ನಾರಾಯಣ ಮುಕ್ತ ಓದುಗನಾಗಿ ಇಲ್ಲಿನ ಕತೆಗಳನ್ನು ಆಯ್ಕೆ ಮಾಡಿರುವ ಕಾರಣಕ್ಕೆ ಯಾವ ಪೂರ್ವಾಗ್ರಹಗಳೂ ಇಲ್ಲದ ಕೇವಲ ಕಥನಗಾರಿಕೆಯನ್ನು, ವೈವಿಧ್ಯತೆಯನ್ನು, ನಿಜ ಬದುಕಿನ ಪಲುಕುಗಳನ್ನು ಸಮರ್ಥವಾಗಿ ಸಂಕಲನ ತೆರೆದಿಡುತ್ತದೆ. ಆ ಕಾರಣಕ್ಕೇ ದಲಿತ ಪ್ರಜ್ಞೆಯ ಸಮರ್ಥ ಸಂವೇದನೆಗಳಾದ ‘ಮೋಚಿಯ ಗಂಗೆ’, ‘ಸವಾರಿ’ ( ಮೊಗಳ್ಳಿ, ನುಗಡೋಣಿ) ಮೂಲಕ ಪ್ರಾರಂಭವಾಗಿ ‘ಮೀಯುವ ಆಟ’, ‘ದಿಂಡೀ'(ನಾಗವೇಣಿ, ಕಸ್ತೂರಿ ಬಾಯರಿ)ಗಳಂಥ ಸ್ವಾನುಭವದ ಪಾರಮ್ಯಗಳ ಮೂಲಕ ಹಾದು ‘ಅವ್ವ'(ಕಲಿಗಣನಾಥ ಗುಡದೂರು)ನ ಸಂಕಟಗಳನ್ನು ನಮ್ಮೆದೆಗೆ ವಗರ್ಾಯಿಸಿ ‘ನಮ್ಮ ವಾಜೀನ್ನೂ ಆಟಕ್ಕೆ ಸೇರಿಸಿಕೊಳ್ರೋ’ (ವಸುದೇಂದ್ರ)ನಲ್ಲಿ ಉತ್ತಮರ ನೀಚತನವನ್ನು ಸಾಬೀತುಪಡಿಸಿದರೆ ‘ಕತ್ತಲು’ (ಅಶೋಕ ಹೆಗಡೆ) ಸದ್ಯೋವರ್ತಮಾನದ ಮಧ್ಯಮ ವರ್ಗದ ಹತಾಶ ಸ್ಥಿತಿಯ ಸಮರ್ಥ ನಿರೂಪಣೆಯಾಗಿ ಕಳವಳಗೊಳಿಸುತ್ತದೆ. ಸಾವಿನ ಮನೆಯ ಹೊಸ್ತಿಲಿನಲ್ಲಿರುವವರ ಕಡೆಯ ಆಸೆಗಳನ್ನು ಕುರಿತ ‘ಕರೆ'(ಸಂದೀಪ ನಾಯಕ) ಮತ್ತು ‘ಮಾಂಜಿಯ ರವಾ ಫ್ರೈ'(ಬಿ.ಎಂ.ಹನೀಫ್) ನಮ್ಮನ್ನು ಮುಟ್ಟಿಸುವ ದಡಗಳೇ ಬೇರೆ.
‘ಕಾಲಿಟ್ಟಲ್ಲಿ ಕಾಲುದಾರಿ’ (ಸುಮಂಗಲಾ) ‘ಊರ ಒಳಗಣ ಬಯಲು’ (ವಿನಯಾ) ‘ಪುಟ್ಟಪಾದದ ಗುರುತು'(ಸುನಂದಾ ಕಡಮೆ) ‘ಗುಬ್ಬಿಹಳ್ಳದ ಸಾಕ್ಷಿಯಲ್ಲಿ’ (ಎಲ್.ಸಿ.ಸುಮಿತ್ರ) ಮಹಿಳಾ ಕತೆಗಾರರೆಂಬ ಹಣೆಪಟ್ಟಿ ನಿರಾಕರಿಸಿದ, ಸ್ವಸಾಮರ್ಥ್ಯದಲ್ಲಿ ಹೊಸತನದ ಜೊತೆಗೆ ವಾಸ್ತವವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಗಟ್ಟಿ ಪ್ರಯತ್ನಗಳು. ‘ದೆಜಾ ವೂ’ (ಗುರುಪ್ರಸಾದ ಕಾಗಿನೆಲೆ) ‘ಹಕೂನ ಮಟಾಟ’ (ವಸ್ತಾರೆ) ಅನ್ಯ ಭಾಷೆಯ ಆಮದಿತ ಶೀರ್ಷಿಕೆಗಳ ಮೂಲಕ ಅನ್ಯ ಸಂವೇದನೆಗಳನ್ನು ನಮ್ಮದನ್ನಾಗಿ ಮಾಡಿರುವ ಮತ್ತು ಸ್ಥಾಪಿತ ಮನಸ್ಥಿತಿಯನ್ನು ಮುರಿದು ಕಟ್ಟಿದ ಯಶಸ್ವೀ ಪ್ರಯತ್ನಗಳು. ‘ಡವಕೋಟ್’ (ನಾಗಮಂಗಲ ಕೃಷ್ಣಮೂರ್ತಿ) ‘ಜೀರೊ ಮತ್ತು ಒಂದು’ (ವಿಕ್ರಮ್ ಹತ್ವಾರ್)ನಿರ್ವಚಿಸಿರುವ ಕಥನಗಾರಿಕೆಯ ಕ್ರಮವೇ ಈ ಕತೆಗಾರರ ಮುಂದಿನ ಕತೆಗಳತ್ತ ಕುತೂಹಲ ಮತ್ತು ವಿಸ್ಮಯಗಳಿಂದ ಕಾಯುವಂತೆ ಮಾಡಿವೆ.
ಸಂಕಲನದಿಂದ ಕೈ ಬಿಡಬಹುದಾಗಿದ್ದ ಕೆಲವು ಕತೆಗಳಿದ್ದರೂ ಒಂದು ಕಾಲಮಾನದ ಯಾದಿಯೇ ಈ ಸಂಕಲನದ ಆಯ್ಕೆಯ ಮಾನದಂಡವಾಗಿರುವುದರಿಂದ ಅದು ಕ್ಷಮ್ಯ. ಸಂಕಲನದ ಬಹುತೇಕ ಕತೆಗಳು ವಿವಿಧ ಪತ್ರಿಕೆಗಳ ಕಥಾಸ್ಪರ್ಧೆಯ ಬಹುಮಾನಿತ ಕತೆಗಳು ಇಲ್ಲವೇ ವಿಶೇಷ ಸಂಚಿಕೆಯ ಪ್ರಕಟಿತ ಕತೆಗಳು. ಹೀಗಿದ್ದರೂ ಹೊಸತಲೆಮಾರಿನ ಭರವಸೆಯ ಕತೆಗಾರ ಡಾ.ಕಣಾದ ರಾಘವ, ಕಥನಗಾರಿಕೆಗೆ ಹೊಸದೇ ಆಯಾಮ ತಂದು ಕೊಟ್ಟ ಜಯಂತ ಕಾಯ್ಕಿಣಿ ಕತೆಗಳು ಇಲ್ಲದೇ ಇರುವುದು ಸಂಪಾದಕರು ಪ್ರವೇಶಿಕೆಯಲ್ಲಿ ಸೂಚಿಸಿರುವಂತೆ ಪ್ರಕಟವಾಗಲಿರುವ ಮತ್ತೆರಡು ಸಂಪುಟಗಳತ್ತ ಕುತೂಹಲದಿಂದ ಕಾಯುವಂತೆ ಮಾಡಿವೆ. ಒಳ್ಳೆಯ ಕಾಗದ, ಉತ್ತಮ ಬೈಂಡಿಗ್ ಮತ್ತು ತಪ್ಪಿಲ್ಲದ ಮುದ್ರಣಕ್ಕಾಗಿ ಪ್ರಕಾಶಕರನ್ನೂ ಅಭಿನಂಧಿಸಲೇ ಬೇಕು. ಪ್ರತಿ ಕತೆಗೂ ಚಿತ್ರವೊಂದನ್ನು ಪ್ರಕಟಿಸಿರುವುದೂ (ರಾಥೋಡ್) ಶ್ಲಾಘನೀಯ ಕೆಲಸ.
ಶೀರ್ಷಿಕೆ : ಕಾಲ ಕರಗುವ ಮುನ್ನ
ಸಂಪಾದಕ: ಕಂನಾಡಿಗ ನಾರಾಯಣ
ಪ್ರಕಾಶನ: ಸಿವಿಜಿ ಇಂಡಿಯಾ, ಬೆಂಗಳೂರು
ಪುಟಗಳು: 592
ಬೆಲೆ: ರೂಪಾಯಿ 400/-







0 Comments