ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆ ಬರೆಯಲಾಗದ ಕಾಲದಲ್ಲಿ..

ಜೀವನ ಪ್ರಕಾಶನ, ಚಿಕ್ಕಬಳ್ಳಾಪುರ ವತಿಯಿಂದ ನಡೆಸಿದ

ರಾಜ್ಯ ಮಟ್ಟದ ಯುಗಾದಿ ಕಾವ್ಯ ಸ್ಪರ್ಧೆಯ

ತೀರ್ಪುಗಾರರ ಮಾತು 

pencil umbrella

 

 

 

 

ಜಿ ಎನ್ ಮೋಹನ್

—————————— —————————— —————-
ಕವಿತೆಗಿದು ಕಾಲವಲ್ಲ ಎಂದು ಈಗಾಗಲೇ ಎಷ್ಟೋ ಮಂದಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಫೇಸ್ ಬುಕ್ ಕವಿತೆಗಳ ಬಗ್ಗೆ ಆಕ್ರೋಶಗೊಂಡು ಯಮುನಾ ನದಿಯಂತೆ ಕಾವ್ಯ ಗಂಗೆಯನ್ನೂ ಸ್ವಚ್ಚ ಮಾಡಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಕವಿತೆ ಎನ್ನುವುದು ರಾಜ್ಯ ಸರ್ಕಾರಕ್ಕೆ ಅರಗಿಸಿಕೊಳ್ಳಲಾಗದ ಕಾರ್ಪೋರೇಶನ್ ಕಸದಂತೆ ಎಂದು ಕೆಲವರು ಆಗಲೇ ಮೂಗು ಮುಚ್ಚಿ ನಡೆದಿದ್ದಾರೆ. ಕವಿತೆ ಸತ್ತು ಹೋಗಿದೆ ಎಂದು ಇನ್ನಷ್ಟು ಮಂದಿ ದರ್ಬೆ ಹುಡುಕುತ್ತಿದ್ದಾರೆ.

ಈ ಮಧ್ಯೆಯೇ ನನಗೆ ರಾಜಹಂಸ, ಜೀವನ ಪ್ರಕಾಶನಕ್ಕಾಗಿ ಕವಿತೆ ಓದಿ ಕೊಡಿ ಎಂದು ಕಳಿಸಿದ ೧೯ ಕವಿತೆಗಳನ್ನು ಓದಿ ನಾನು ಮೇಲಿನವರಲಿ ಒಬ್ಬನಾಗದಿರಲು ನಿರ್ಧರಿಸಿದೆ. ಆಟದ ಮಧ್ಯೆಯೇ ವಾಕ್ ಔಟ್ ಮಾಡಿದವನಂತೆ ನಾನು ಈ ಮೇಲ್ಬಳಗದಿಂದ ಹಿಂದೆ ಸರಿದಿದ್ದೇನೆ. ಹಾಗಾದರೆ, ಈ ೧೯ ಕವಿತೆ ಮಾತ್ರದಿಂದ ಕವಿತೆ ಎನ್ನುವುದು ಬೆಳಗುತ್ತಿದೆ ಎಂದು ಬಿಡಲು ಸಾಧ್ಯವೇ..? ಪ್ರಶ್ನೆ ಸರಿಯಾಗಿಯೇ ಇದೆ. ಆದರೆ ಸಧ್ಯ ಬೇಸಿಗೆ ರಜೆಯಲ್ಲಿರುವ ನಾನು rainbow pencilsಟೆಲಿವಿಷನ್ ಸೆಟ್ ನಿಂದ ಆಚೆ ಒಂದಿಷ್ಟು ಕಣ್ಣಾಡಿಸುವ ಒಂದು ಅಮೋಘ ವರವನ್ನು ಪಡೆದಿದ್ದೇನೆ. ಹಾಗಾಗಿ ‘ಅವಧಿ’ ಅಂತರ್ಜಾಲ ತಾಣಕ್ಕೆ ಕವಿತೆಯನ್ನು ಹುಡುಕುವವನು ನಾನೇ. ಅಲ್ಲಿಗೆ ಬರುತ್ತಿರುವ ಕವಿತೆಗಳೂ ಹಾಗೂ ಯಾವ ತಾಣ, ಪತ್ರಿಕೆಗಳನ್ನೂ ನೆಚ್ಚದೆ ತಮ್ಮ ಪಾಡಿಗೆ ತಾವು ಫೇಸ್ ಬುಕ್ ನಲ್ಲಿ, ಇಲ್ಲಾ ನೇರವಾಗಿ ಪುಸ್ತಕ ಮಾಡಿ ನಮ್ಮ ಮುಂದೆ ಇಡುತ್ತಿರುವವರು, ಇಷ್ಟೇ ಅಲ್ಲದೆ ನಾನು, ನೀವು ಹೆಸರೂ ಕೇಳದ ಊರುಗಳಲ್ಲಿದ್ದು ಕವಿತೆಗೆ ಒಡ್ಡಿಕೊಂಡವರು ಅದೆಷ್ಟೋ..!

ಈಗ ಮತ್ತೆ ನನ್ನ ಮಾತಿಗೆ ಇನ್ನೂ ಸಾಕಷ್ಟು ಸಾಕ್ಷ್ಯ ಒದಗಿಸಿದ್ದು ರಾಜಹಂಸ ಅವರು ಕಳಿಸಿದ ಜೀವನ ಪ್ರಕಾಶನದ ಕವಿತೆಗಳು. ೧೯ ಕವಿತೆ ಮಾತ್ರ ನನ್ನ ಕೈ ಸೇರಿದೆ. ಈ ಕವಿತೆಗಳನ್ನು ಓದಿದ ಮೇಲೆ ಅವರು ನನಗೆ ಕಳಿಸದ ಕವಿತೆಗಳನ್ನೂ ಒಂದೇ ಗುಕ್ಕಿಗೆ ಓದಿ ಮುಗಿಸಿ ಬಿಡುವ ಆಸೆಯಿದೆ. ಒಂದೆರಡು ಕವಿತೆಯನ್ನು ಮಾತ್ರ ಆಯ್ದು ಕೊಡುವುದಾದರೂ ಅವರು ಕಳಿಸಿದ ಎಲ್ಲಾ ಕವಿತೆಗಳು ಕೊಟ್ಟ ಬೆರಗು ನನ್ನೊಳಗೆ ಇನ್ನೂ ಉಳಿದಿದೆ.

ಇಲ್ಲಿ ನಾಲ್ಕು ಕವಿತೆಗಳು ಬೇಡವೆಂದರೂ ನನ್ನನ್ನು ಜಗ್ಗಿ ನಿಲ್ಲಿಸುತ್ತಿದೆ. ಕವಿತೆ ಎನ್ನುವುದು ಏನು? ಅದು ಕವಿತೆಯ ಚಿತ್ತಾರ ಮಾತ್ರವೇ? ಅದು ಹೊರಡಿಸುವ ದನಿಯೇ? ಅದು ತರುವ ಬದಲಾವಣೆಯೇ? ಈ ಮಾತನ್ನು ಕವಿತೆ ಎನ್ನುವುದು ಕಣ್ಣು ಬಿಟ್ಟ ದಿನದಿಂದಲೂ ಸಾಣೆ ಕಲ್ಲಿಗೆ ಹಾಕಿ ತಿಕ್ಕುತ್ತಲೇ ಬಂದಿದ್ದೇವೆ. ಮಾತು ಎಂದುಕೊಂಡದ್ದೂ ಸಹಾ ಕವಿತೆಯಂತೆ ಎದೆ ತಾಕಿದ್ದೂ ಇದೆ. ಕವಿತೆ ಎನ್ನುವುದು ನಮ್ಮೊಳಗೆ ಎಬ್ಬಿಸಿದ ಅಲೆಯ ಜೊತೆಗೆ ಒಂದು ವ್ಯಾಕರಣ ಹುಟ್ಟು ಹಾಕುತ್ತಲ್ಲಾ ಅದೂ ಮುಖ್ಯ ನನಗೆ. ಇಲ್ಲಿರುವ ೧೯ ಕವಿತೆಗಳನ್ನು ನಾನು ಮೆಚ್ಚಿದ್ದರೂ ನಾಲ್ಕು ಕವಿತೆಯನ್ನು ಮಾತ್ರ ಮುಂದು ಮಾಡಿರುವುದಕ್ಕೆ ಕಾರಣ ಈ ಕವಿತೆಗಳು ಹೊಸ ರೀತಿ ಮಾತನಾಡುತ್ತಿವೆ ಎನ್ನುವುದು. ಈ ಕವಿತೆಗಳು ಎಲ್ಲರೂ ಬಳಸುವ ಹೆದ್ದಾರಿಯನ್ನು ಬಿಟ್ಟು ಹೊಸ ಕಾಲುದಾರಿಗಳನ್ನು ಕಂಡು ಕೊಂಡಿವೆ ಎನ್ನುವುದು. ಹಾಗಾಗಿ ಈ ಕವಿತೆಗಳಿಗೆ ನಾನು ಶರಣು.

ಅದಿರಲಿ ಇದು ಕವಿತೆ ಬರೆಯುವ ಕಾಲವೇ..?
ಮನುಷ್ಯರನ್ನೇ ತಂದೂರಿ ಮಾಡಿ ತಿನ್ನುತ್ತಿರುವವರ ಕಾಲದಲ್ಲಿ ಕವಿತೆ ಬರೆಯಬಹುದೇ?

ಬ್ರೆಕ್ಟ್ ಹೇಳುತ್ತಾನೆ –

ಕಗ್ಗತ್ತಲ ಕಾಲದಲ್ಲಿ

ಹಾಡುವುದು ಉಂಟೆ?

ಹೌದು, ಹಾಡುವುದೂ ಉಂಟು

ಕಗ್ಗತ್ತಲ ಕಾಲವನ್ನು ಕುರಿತು

ಹಾಗೆ ಕಗ್ಗತ್ತಲ ಕಾಲದಲ್ಲಿ, ತಮ್ಮದೇ ರೀತಿಯಲ್ಲಿ ಕಗ್ಗತ್ತಲಿನ ಬಗ್ಗೆ ಬರೆಯುತ್ತಿರುವ ಎಲ್ಲರಿಗೂ ಕವಿತೆ ಮಣಿಯಲಿ.

‍ಲೇಖಕರು admin

28 March, 2016

3 Comments

  1. Sangeeta Kalmane

    ಕವಿತೆಯ ಕುರಿತ ವ್ಯಾಖ್ಯಾನ ಓದಿ ತುಂಬಾ ಸಂತೋಷವಾಯಿತು.

    ನನ್ನ ಅನುಭವದ ಪ್ರಕಾರ ಕವಿತೆ ಬರೆಯುವುದು ಕಥೆ ಬರೆದಷ್ಟು ಸುಲಭವಲ್ಲ. ಕೇವಲ ಒಂದೆರಡು ಸಾಲುಗಳಲ್ಲಿ ಅಥ೯ಗಭಿ೯ತವಾಗಿ ಮನ ಮುಟ್ಟುವಂತೆ ಬರೆಯುವುದು ಕಬ್ಬಿಣದ ಕಡಲೆಯೇ ಸರಿ. “ಎ…‌ಈ ಕವಿತೆ ಗಿವಿತೆ ನಮಗೆಲ್ಲ ಅಥ೯ ಆಗೋದಿಲ್ಲ ” ಅನ್ನುವ ಮಂದಿನೆ ಜಾಸ್ತಿ. ಇಂತಹ ಮಾತುಗಳು ಬರೆಯುವ ಕೈ ಕಟ್ಟಿ ಹಾಕುತ್ತದೆ.

  2. Rajahamsa bidar

    “ಕವಿತೆ ಎನ್ನುವುದು ಏನು? ಅದು ಕವಿತೆಯ ಚಿತ್ತಾರ ಮಾತ್ರವೇ? ಅದು ಹೊರಡಿಸುವ ದನಿಯೇ? ಅದು ತರುವ ಬದಲಾವಣೆಯೇ? ಈ ಮಾತನ್ನು ಕವಿತೆ ಎನ್ನುವುದು ಕಣ್ಣು ಬಿಟ್ಟ ದಿನದಿಂದಲೂ ಸಾಣೆ ಕಲ್ಲಿಗೆ ಹಾಕಿ ತಿಕ್ಕುತ್ತಲೇ ಬಂದಿದ್ದೇವೆ. ಮಾತು ಎಂದುಕೊಂಡದ್ದೂ ಸಹಾ ಕವಿತೆಯಂತೆ ಎದೆ ತಾಕಿದ್ದೂ ಇದೆ. ಕವಿತೆ ಎನ್ನುವುದು ನಮ್ಮೊಳಗೆ ಎಬ್ಬಿಸಿದ ಅಲೆಯ ಜೊತೆಗೆ ಒಂದು ವ್ಯಾಕರಣ ಹುಟ್ಟು ಹಾಕುತ್ತಲ್ಲಾ ಅದೂ ಮುಖ್ಯ.”

    ಇವು ನನಗೆ ಬಹಳವೇ ಕಾಡಿದ ಸಾಲುಗಳು..!

  3. Shama, Nandibetta

    ಅದಿರಲಿ ಇದು ಕವಿತೆ ಬರೆಯುವ ಕಾಲವೇ..?
    ಮನುಷ್ಯರನ್ನೇ ತಂದೂರಿ ಮಾಡಿ ತಿನ್ನುತ್ತಿರುವವರ ಕಾಲದಲ್ಲಿ ಕವಿತೆ ಬರೆಯಬಹುದೇ?

    yes sir… ಎಲ್ಲ ಕಾಲವೂ ಕವಿತೆಯ ಕಾಲವೇ. ತಂದೂರಿ ಮಾಡಿ ತಿನ್ನುವ ಕಾಲವೂ ಕೂಡ. ಕವಿತೆಯಿಲ್ಲದ ಕಾಲವಿದ್ದರೆ ಜಗತ್ತು ನಿಲ್ಲುತ್ತದೇನೋ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading