ಕವಿಕುಮಾರ ಸಂಭವಂ! ಪೂರ್ಣಚಂದ್ರಾವತಾರ..

-ಬಿ ಆರ್ ಸತ್ಯನಾರಾಯಣ

’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳೆಲ್ಲ ರಸಾತ್ಮಕವಾಗಿ ಮೂಡಿವೆ. ಮೊದಲಿಗೆ ತೀವ್ರವಾಗಿ ನನ್ನ ಗಮನ ಸೆಳೆದ ಕವಿತೆ ’ಗರ್ಭಗುಡಿ’. ತನ್ನ ಸತಿ ಗರ್ಭಿಣಿ ಎಂದು ತಿಳಿದಾಗ ಕವಿಯ ಮನಸ್ಸಿನಲ್ಲಾದ ಸಂತೋಷ ಭಾವ ಕವನ ರೂಪದಲ್ಲಿ ಸಾಕ್ಷಾತ್ಕಾರಗೊಂಡಿದೆ. ಈ ಕವಿತೆಯ ಬಗ್ಗೆ ಹಿರಿಯರಾದ ಎಸ್.ವಿ.ಪರಮೇಶ್ವರಭಟ್ಟರು ತನ್ನ ಸತಿ ಗರ್ಭಿಣಿಯಾದಾಗ ಗರ್ಭದಲ್ಲಿ ಅರ್ಭಕನಿರುವುದನ್ನು ಅರಿತವರು ತನ್ನ ಸತಿಯನ್ನು ’ಗರ್ಭಗುಡಿ’ಯೆಂದೇ ಪರಿಗಣಿಸುತ್ತಾರೆ. ’ತೇಜಸ್ವಿ ಪೂರ್ಣಚಂದ್ರ ಶರೀರೆ ಶಿವಕೃತಿ ಕಲಾರಂಗಮೆನಗೆ ನೀನ್ ಓ ನೀರೆ!’ ತಮ್ಮ ಸತಿಯನ್ನು ಯಾವ ದಿವ್ಯೌನ್ನತ್ಯದಲ್ಲಿ ಕಾಣುತ್ತಿದ್ದಾರೆ ಎನ್ನುವುದನ್ನು ನಾವು ಇಲ್ಲಿ ಗಮನಿಸಬಹುದು’ ಎಂದು ಬರೆದಿದ್ದಾರೆ. ’ಪ್ರಿಯ ಸತಿಗೆ’ ಎಂಬ ಕವಿತೆಯಲ್ಲಿ ಕುವೆಂಪು ’ಹೇಮಾ’ ಎಂಬುದನ್ನು ’ಹೇ ಮಾ ಸತಿಯೆ’ ಎಂದು ಬರೆದಿರುವುದರಲ್ಲಿಯೂ, ಸತಿಯನ್ನು ’ದೇವಿ, ಪ್ರತಿಭೆಗೆ ನೀನೆ ಭಾವವಿದ್ಯುಚ್ಛಕ್ತಿ; ಕಲೆಗೆ ವಿದ್ಯಾಶಕ್ತಿ; ಪ್ರಾಣಕೆ ಪ್ರೇಮಶಕ್ತಿ!’ ಎಂದು ಸಂಬೋಧಿಸಿರುವುದರಲ್ಲಿಯೂ ಈ ಔನ್ನತ್ಯವನ್ನು ಕಾಣಬಹುದಾಗಿದೆ.

ತಮ್ಮ ಸತಿ ಶಾರದಾದೇವಿಯವರನ್ನು ದೇವಿಯ ರೂಪದಲ್ಲಿ ಕಂಡವರು ಶ್ರೀ ರಾಮಕೃಷ್ಣ ಪರಮಹಂಸರು. ಅವರ ಗೋತ್ರಸಂಜಾತರಾದ (ಶ್ರೀರಾಮಕೃಷ್ಣ ಭಗವದ್‌ಗೋತ್ರಸಂಜಾತನಂ – ಶ್ರೀರಾಮಯಾಣದರ್ಶನಂ) ಕುವೆಂಪು ಅವರಿಗೆ ಅವರ ಶ್ರೀಮತಿಯೂ ಅಷ್ಟೆ, ಕವಿಯ ಶಿವಕೃತಿಗೆ ಕಲಾರಂಗವಾಗಿ ಕಾಣುತ್ತಾರೆ!

ಬಳೆಯುತಿರೆ ದಿವ್ಯಾರ್ಭಕಂ ಗರ್ಭಗುಡಿಯಲ್ಲಿ
ನಿನ್ನ ಮೈ, ಗರ್ಭಿಣಿಯೆ, ದೇವಾಲಯಂ; ಪೂಜ್ಯೆ
ನೀನೆನಗೆ. ಓ ಲಕ್ಷ್ಮಿ, ಓ ಸೃಷ್ಟಿಸಾಮ್ರಾಜ್ಯೆ,
ನಿನ್ನ ಕರ್ಮದ ಮಹಿಮೆ ನಿನಗರಿಯದಿದೆ: ಬಳ್ಳಿ

ಹೂ ಹಡೆವುದಲ್ತೆ? ಸಾಮಾನ್ಯ ಪಾಮರ ದೃಷ್ಟಿ ಕಾಣದದರಲಿ ಕೃತಿರಹಸ್ಯದ ಪವಾಡಮಂ;ಬ್ರಹ್ಮಶಿಲ್ಪಿಯ ಪರಮ ಕಲೆಯ ಕೈವಾಡಮಂಕಂಡು ರೋಮಾಂಚ ರಸವಶನು ಕವಿ! ತವ ಸೃಷ್ಟಿ

ಕವಿಕೃತಿಗೆ ಕೀಳಲ್ಲ. ಪೇಳ್ವವಂಗರಿಯದಿರೆ
ಕೇಳ್ವ ರಸಿಕಂಗರಿಯದಿಹುದೆ ವರಕೃತಿ ಮಹಿಮೆ?
ತನ್ನ ತಾನರಿಯದು ಮಹತ್ತು, ಕೈಮುಗಿಯದಿರೆ
ಜಗತ್ತು: ರಾಮಾನುಚರನಾಂಜನೇಯಂಗುಪಮೆ!

ಪೂರ್ಣಾಂಗಿ, ತೇಜಸ್ವಿ ಪೂರ್ಣಚಂದ್ರ ಶರೀರೆ,ಶಿವಕೃತಿ ಕಲಾರಂಗಮೆನಗೆ ನೀನ್, ಓ ನೀರೆ!

ದಿವ್ಯಶಿಶುವನ್ನು ತನ್ನುದರದಲ್ಲಿ ಧರಿಸಿ ನಿಂತಿರುವ ಗರ್ಭಿಣಿ ದೇವಾಲಯದಂತೆಯೇ ಕವಿಗೆ ಕಂಡು ಪೂಜನೀಯಳಾಗಿದ್ದಾಳೆ. ಆಕೆ ಲಕ್ಷ್ಮಿ. ಸೃಷ್ಟಿಯ ಸಾಮ್ರಾಜ್ಯೆ! ಆದರೆ ಅದರ ಮಹತ್ವ ಆಕೆಗೆ ಅರಿವಿಲ್ಲ; ಗರ್ಭವತಿಯಾಗುವುದು, ಮಗುವಿಗೆ ಜನ್ಮ ನೀಡುವುದು ಬಳ್ಳಿ ಹೂವನ್ನು ಬಿಡುವಷ್ಟೇ ಸಹಜಕ್ರಿಯೆಯಂತೆ ಆಕೆ ಭಾವಿಸುತ್ತಾಳೆ. ಬೇರೆಯವರು ಕೈ ಎತ್ತಿ ಮುಗಿಯುವವರೆಗೂ ಮಹತ್ತಿಗೂ ತನ್ನ ಮಹತ್ವ ಗೊತ್ತಿರುವುದಿಲ್ಲವಂತೆ! ಶಿಶುಜನನವಾಗುವುದು, ಹೂವು ಬಳ್ಳಿಯಲ್ಲಿ ಅರಳುವುದು ಕೃತಿರಹಸ್ಯದ ಪವಾಡವಿದ್ದಂತೆ. ಆ ಕೃತಿ ರಹಸ್ಯದ ಪವಾಡ ಪಾಮರದೃಷ್ಟಿಗೆ ಕಾಣುತ್ತದೆಯೇ? ಕಾಣುವುದಿಲ್ಲ. ಆದರೆ ಕವಿ! ಬ್ರಹ್ಮಶಿಲ್ಪಿಯ ಪರಮ ಪವಿತ್ರವಾದ ಕಲೆಯ ಕೈವಾಡವನ್ನು ಕಂಡು, ದರ್ಶನಗೊಂಡು ರೋಮಾಂಚನಾಗುತ್ತಾನೆ, ರಸವಶನಾಗುತ್ತಾನೆ.
ನರರೂಪದಲ್ಲಿ ಮಾತ್ರವಲ್ಲ; ಕೃತಿರೂಪದಲ್ಲೂ ಭಗವಂತನ ಅವತಾರವಾಗುತ್ತದೆ ಎಂಬ ದರ್ಶನದ ಕವಿ ಕುವೆಂಪು. ಶಿಶುಜನನ ಸೃಷ್ಟಿಯ ಬೆರಗು. ಅದು ಕವಿಕೃತಿಗೆಂದೂ ಕೀಳಲ್ಲ. ಆದರೆ ಅಂತಹ ಅದ್ಭುತವಾದ ಮಹತ್ವ ಅದರ ಕರ್ತೃವಿಗೇ ಕಾಣುವುದಿಲ್ಲ! ಆದರೆ ರಸಿಕನಾದ ಕವಿಗೆ, ಸಹೃದಯನಿಗೆ ಅದು ಕಾಣುತ್ತದೆ. ಯಾವುದು ಯಾವುದಕ್ಕೆ ಹೋಲಿಕೆ. ರಾಮನನ್ನು ಅನುಸರಿಸಿದವರೆಲ್ಲಾ ಅಂಜನೇಯನಿಗೆ ಉಪಮೆಯೇ?
ಕವನದ ಕೊನೆಯ ಎರಡು ಸಾಲುಗಳಂತು ದರ್ಶನದಿಂದ ಆವಿರ್ಭವಿಸಿದಂತವು. ಸಾಮಾನ್ಯವಾಗಿ ಹೆಂಡತಿಯನ್ನು ಅರ್ಧಾಂಗಿ ಎಂದು ಕರೆಯುತ್ತಾರೆ. ಇಲ್ಲಿ ಕವಿ ’ಪೂರ್ಣಾಂಗಿ’ ಎಂಬ ಕವಿಯೆ ಸಂಬೋಧನೆ ವಿಶೇಷವಾದುದು. ತಮ್ಮ ಪೂರ್ಣಾಂಗಿ, ಮಂಗಳಕೃತಿಗೆ ಕಲಾರಂಗವೆಂದು ಭಾವಿಸುತ್ತಾರೆ. ’ತೇಜಸ್ವಿ ಪೂರ್ಣಚಂದ್ರ ಶರೀರೆ’ ಎಂಬ ಮಾತು ಗರ್ಭವತಿಯಾದ್ದರಿಂದ ನಿನ್ನ ಶರೀರ ಪೂರ್ಣಚಂದ್ರ ಸಮವಾದ ತೇಜಸ್ಸಿನಿಂದ ಕೂಡಿದೆ ಎಂಬುದನ್ನು ಧ್ವನಿಸುತ್ತದೆ. ಆದರೆ ದರ್ಶನದ ಅಂತರತಮನ್ನು ಅರಿತವರಾರು? ಕವಿಗೆ ತನ್ನ ಪೂರ್ಣಾಂಗಿಯ ಉದರದಲ್ಲಿರುವ ಶಿಶು ಗಂಡು ಎಂಬುದು ದರ್ಶನವಾಗಿತ್ತೋ ಏನೋ!? ಕವಿತೆ ಪ್ರಾರಂಭದಲ್ಲಿಯೇ ’ದಿವ್ಯಾರ್ಭಕಂ’ ಎಂಬ ಮಾತು ಬಂದಿದೆ. ಅರ್ಭಕ ಎಂಬುದಕ್ಕೆ ಸಣ್ಣದು; ಚಿಕ್ಕದು, ಮೊಲೆಗೂಸು, ಎಳೆಯ ಕೂಸು ಎಂಬ ಅರ್ಥಗಳ ಜೊತೆಗೆ ಪುಲ್ಲಿಂಗ ಭಾವವನ್ನು ಸ್ಫುರಿಸುವ ಪುಟ್ಟ ಬಾಲಕ, ಸಣ್ಣ ಹುಡುಗ ಮೊದಲಾದ ಅರ್ಥಗಳೂ ಇವೆ. ಮುಂದೆ ಹುಟ್ಟಲಿರುವ ಕೂಸಿಗೆ ’ಪೂರ್ಣಚಂದ್ರ ತೇಜಸ್ವಿ’ ಎಂಬ ಹೆಸರನ್ನು ಮೊದಲೇ ಸೂಚಿಸಿರುವಂತೆ ಕಾಣುತ್ತದೆ! ಮುಂದೆ ಮಗು ಹುಟ್ಟಿದಾಗ ’ಕುಮಾರ ಸಂಭವ’ ಕವಿತೆಯಲ್ಲಿ ’ಪ್ರೇಮಾಂಗಿನಿಯೇ ನನ್ನ ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ: ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ!’ ಎಂಬ ಮಾತು ಬರುತ್ತದೆ.
ಈ ಕವಿತೆಯ ಶಿಲ್ಪದ ಬಗ್ಗೆ ಒಂದೆರಡು ಮಾತು ಹೇಳಬೇಕೆನ್ನಿಸುತ್ತದೆ. ನಾಲ್ಕು ನಾಲ್ಕು ಸಾಲುಗಳಂತೆ ಮೊದಲ ಮೂರು ಪದ್ಯಗಳು ಹಾಗೂ ಕೊನೆಯಲ್ಲಿ ಎರಡು ಸಾಲುಗಳು ಬಂದಿರುತ್ತವೆ. ಮೊದಲ ಮೂರೂ ಪದ್ಯಗಳ ಒಟ್ಟು ದರ್ಶನ ಕೊನೆಯ ಎರಡು ಸಾಲಿನಲ್ಲಿ ಕೆನೆಗಟ್ಟಿದಂತಿದೆ. ಮೊದಲ ಮೂರು ಪದ್ಯಗಳನ್ನು ಬೇರೆ ಬೇರೆಯಾಗಿ ಓದಲು ಸಾಧ್ಯವೇ ಇಲ್ಲ! ಮೊದಲ ಪದ್ಯದ ಕೊನೆಯ ಸಾಲಿನ ಕೊನೆಯ ಪದ ’ಬಳ್ಳಿ’ ಎಂಬುದು ಅರ್ಥವಾಗಬೇಕಾದರೆ ಎರಡನೆಯ ಪದ್ಯದ ಮೊದಲ ಸಾಲಿನ ’ಹೂ ಹಡೆವುದಲ್ತೆ?’ ಎಂಬುದನ್ನು ಓದಿಕೊಳ್ಳಲೇ ಬೇಕು. ಹಾಗೆಯೇ ಎರಡನೆಯ ಪದ್ಯದ ಕೊನೆಯ ಸಾಲಿನ ’ತವ ಸೃಷ್ಟಿ’ ಎಂಬುದು ಮೂರನೆಯ ಪದ್ಯದ ಮೊದಲ ಸಾಲಿನಲ್ಲಿ ’ಕವಿಕೃತಿಗೆ ಕೀಳಲ್ಲ’ ಎಂದು ಮುಂದುವರೆಯುತ್ತದೆ. (ಈ ರೀತಿಯ ಪದ್ಯದಿಂದ ಪದ್ಯಕ್ಕೆ ಮುಂದುವರೆಯುವ ಪದ್ಧತಿ ಪಂಪನ ಕಾವ್ಯದಲ್ಲೂ ಇದೆ. ಪಂಪನಲ್ಲಿ ಕಂದ ಪದ್ಯದಿಂದ ಮತ್ತೊಂದು ಕಂದ ಪದ್ಯಕ್ಕೆ, ಕೆಲವೊಮ್ಮೆ ಪದ್ಯದಿಂದ ಗದ್ಯಕ್ಕೆ(ವಚನಕ್ಕೆ), ಗದ್ಯದಿಂದ ಪದ್ಯಕ್ಕೆ, ವೃತ್ತದಿಂದ ವೃತ್ತಕ್ಕೆ ಈ ರೀತಿಯ ಮುಂದುವರಿಕೆಯನ್ನು ಕಾಣಬಹುದು.)
ಜೇನಾಗುವ ಸಂಕಲನದ ಇನ್ನೊಂದು ಕವಿತೆ ’ಬಿನ್ನಯ್ಸಿದಳು ತಾಯಪ್ಪಳಿಂತು’ ಎಂಬುದು. ತನ್ನೊಡಲಿನಲ್ಲಿರುವ ಕಂದನ ಬಗ್ಗೆ ಕನಸು ಕಾಣುವ ತಾಯಿಯ ಚಿತ್ರ. ತನ್ನ ಮಗ ಹೇಗಿರಬೇಕು? ಏನಾಗಬೇಕು? ಎಂದು ಸಂಕಲ್ಪಿಸುವ ಚಿತ್ರ. ಗಮನಿಸಬೇಕು. ಈ ಕವಿತೆಯುದ್ದಕ್ಕೂ ಕವಿ ಮಗುವನ್ನು ಪುಲ್ಲಿಂಗವಾಚಿಯಾಗಿಯೇ ಸಂಬೋಧಿಸಿದ್ದಾರೆ. ’ಕಳುಹು ಆವೇಶದ ಪುತ್ರನನು’ ಎಂದು ನೇರವಾಗಿಯೇ ಪ್ರಾರ್ಥಿಸಿರುವ ಸಾಲುಗಳುಂಟು. ಈ ಕವಿತೆಯ ವಿಶೇಷವೆಂದರೆ, ಇಂದು ಈ ತುದಿಯಲ್ಲಿ ನಿಂತು ನೋಡುವಾಗ ಕುವೆಂಪು ದಂಪತಿಗಳ ಸಂಕಲ್ಪ ಮತ್ತು ತೇಜಸ್ವಿ ಬದುಕಿದ ರೀತಿಯ ನಡುವೆ ಸೂಕ್ಷ್ಮತೆರನಾದ ಸಂಬಂಧವಿರುವುದು! ಈ ಪದ್ಯಕ್ಕೆ ಯಾವುದೇ ವಿವರಣೆಯ ಅಗತ್ಯವೇ ಇಲ್ಲ. ಅಷ್ಟೊಂದು ಸರಳವಾದ ಪದಗಳಲ್ಲಿ ಸಂಕಲ್ಪಗೊಂಡ ಪ್ರಾರ್ಥನೆ ಇದಾಗಿದೆ. ಅದನ್ನು ಇಡಿಯಾಗಿ ಇಲ್ಲಿ ಉಲ್ಲೇಖಿಸಬಯಸುತ್ತೇನೆ.
ಕಳುಹಿಸು ಯೋಗ್ಯನನು,

ಹೇ ಗುರುವೇ,
ಕಳುಹಿಸಿ ಭಾಗ್ಯನನು,
ಶ್ರೀ ಗುರುವೇ.

ಕಳುಹಿಸು ಮಂಗಳ ಚೆಲುವನನು,
ಲೋಕವನೊಲಿವನನು;
ಬಾಳಿನ ಬವರವ ಗೆಲುವನನು,

ನಿನ್ನೊಳೆ ನಿಲುವನನು.-

ಕಳುಹು ಆವೇಶದ ಪುತ್ರನನು,
ದೇಶದ ಮಿತ್ರನನು;
ಕಳುಹು ಪವಿತ್ರ ಚರಿತ್ರನನು,
ಗೌರವ ಪಾತ್ರನನು.-

ಕಳುಹು ಕಲಾರಸ ಭಕ್ತನನು
ಕಾವ್ಯಾಸಕ್ತನನು;
ಕನ್ನಡ ಸೇವಾ ಶಕ್ತನನು

ನಿನ್ನಡಿ ಯುಕ್ತನನು.-

ಕಳುಹು ನಿರಂಕುಶ ಮುಕ್ತನನು,
ಮೌಢ್ಯ ವಿರಕ್ತನನು;
ಕಳುಹು ಮನೋ ಸ್ವಾತಂತ್ರ್ಯನನು,

ಶಿವ ಪರ ತಂತ್ರನನು.-

ಕಳುಹಿಸು ನಿತ್ಯ ನವೀನನು,
ಸತ್ಯಾಧೀನನನು;

ಮಹಿಮೆಗೆ ಮಾತ್ರವೆ ದೀನನನು,
ಕವಿ ಸಮಗಾನನನು.-

ಕೃಪೆ ಅನಂತಕೆ ಪಾತ್ರನನು,
ಪ್ರಿಯ ರುಚಿ ಗಾತ್ರನನು;
ಕಳುಹು ಸದಿಚ್ಛಾ ಸೂತ್ರನನು,
ಚೇತನ ನೇತ್ರನನು!

ಕುವೆಂಪು ದಂಪತಿಗಳ ಸಂಕಲ್ಪದಂತೆ, ಪ್ರಾರ್ಥನೆಯಂತೆ, ಆಶಯದಂತೆಯೇ ’ಕುಮಾರ ಸಂಭವ’ ಆಗುತ್ತದೆ. ಅದೇ ಹೆಸರಿನ ಕವಿತೆಯಲ್ಲಿ ಕುವೆಂಪು ಪುತ್ರೋದಯದ ಸಂತೋಷವನ್ನು ಉತ್ಕಟವಾಗಿ ಬಿಡಿಸಿಟ್ಟಿದ್ದಾರೆ. ಐದೈದು ಮಾತ್ರೆಗಳ ನಾಲ್ಕು ನಾಲ್ಕು ಗಣಗಳ ಪಂಕ್ತಿಗಳು ಕವಿತೆಗೆ ವಿಶಿಷ್ಟವಾದ ಆವೇಗವನ್ನು ತಂದುಕೊಟ್ಟಿವೆ. ಕವಿಯ ಸಂತೋಷ, ಉದ್ವೇಗ ಪ್ರತಿ ಪದದಲ್ಲೂ, ಪಂಕ್ತಿಯಲ್ಲೂ ಮಡುಗಟ್ಟಿವೆ!

ಕೇಳ್ದೊಡನೆ ಚಿಮ್ಮಿತಾನಂದದೋಕಳಿಬುಗ್ಗೆ
ತುಂಬಿದೆದೆ ಬಾನಲ್ಲಿ ಮಳೆಯ ಬಿಲ್ಲನು ಕಟ್ಟಿ!
ನಂದನ ವನದ ಕಲ್ಪತರು ಶಿಖರವನು ಮುಟ್ಟಿ
ಕವಿಯ ಕಲ್ಪನೆ, ಇಂದ್ರನಮರಾವತಿಗೆ ಲಗ್ಗೆ
ನುಗ್ಗಿತೆನೆ, ನೆಗೆಯುತೈರಾವತದ ಬೆನ್ಗೇರಿ,
ದೇವಗಂಗೆಯ ಮೀಯುತಮೃತದ ಮಡುವನೀಂಟಿ,
ದಿಕ್ಪಾಲ ಪುರಗಳಂ ಚರಿಸುತೆಲ್ಲೆಯ ದಾಂಟಿ,
ಮೈಮರೆತುದೆನ್ನ ಗುರುದೇವನಂಘ್ರಿಯ ಸಾರಿ
ನಮಿಸುತೆ ಕೃತಜ್ಞತಾ ಭಕ್ತಿಯಲಿ!

ಎಂದು ಭೋರ್ಗರೆದು ಒಮ್ಮೆಲೆ ತನ್ನ ಗುರುದೇವನಲ್ಲಿ ಕವಿಯ ಮನಸ್ಸು ನಿಂತು-

-ಗುರು, ನಿನ್ನ
ಕೃಪೆ ನನ್ನ ಸತಿಸುತರ ಮೇಣೆನ್ನ ಮೇಲಿರಲಿ
ಸರ್ವದಾ. ಶ್ರದ್ಧೆ ಬಳುಕದೆ ನಿತ್ಯವಾಗಿರಲಿ
ನಿನ್ನ ಮಹಿಮೆಯೊಳೆಮಗೆ.

ಎಂದು ಗುರುದೇವನಲ್ಲಿ ಆಶಿರ್ವಾದವನ್ನು ಬಯಸಿ, ಪೂರ್ಣಚಂದ್ರಸಮನಾದ ತೇಜಸ್ಸನ್ನುಳ್ಳ ಪುತ್ರನನ್ನು ದಯಪಾಲಿಸಿದ ತನ್ನ ಶ್ರೀಮತಿಯನ್ನು

ಪ್ರೇಮಾಂಗಿನಿಯೇ

ಎಂದು ಸಂಬೋಧಿಸಿ,

ನನ್ನ
ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ:
ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ!

ಎಂದು ಮಗುವಿಗೆ ಆಶೀರ್ವಾದವನ್ನು ಸಂಕಲ್ಪಿಸಿ ನಿಲುಗಡೆಗೆ ಬರುತ್ತದೆ ಕವಿಯ ಮನಸ್ಸು.
ಮುಂದೆ ’ಸ್ವಾಗತ ನಿನಗೆಲೆ ಕಂದಯ್ಯ’ ಎಂಬ ಕವನದಲ್ಲಿ ’ಜನ್ಮಾಂತರದ ಬಂಧುವು ಕಲ್ಪಾಂತರದ ಬಂಧವೂ, ಶೃಂಗಾರ ಸಾಗರ ಸಾಕ್ಷಾತ್ಕಾರವೂ’ ಆದ ಮಗನಿಗೆ,

ಸುಂದರ ಪೃಥ್ವಿಗೆ ಸ್ವಾಗತವಯ್ಯ,
ಪುಣ್ಯಭಾರತಕ್ಕೆ ಸ್ವಾಗತವಯ್ಯ,
ನನ್ನ ಕನ್ನಡಕೆ ಸ್ವಾಗತವಯ್ಯ,

ಎಂದು ಸ್ವಾಗತಗೀತೆ ಹಾಡುತ್ತಾರೆ.

ಭೋಗಿಯೊ, ಯೋಗಿಯೊ? ಮುಕ್ತನೊ, ಬದ್ಧನೊ?
ರಾಮನೊ? ಕೃಷ್ಣನೊ? ಕ್ರಿಸ್ತನೊ? ಬುದ್ಧನೊ?
ಯಾರೂ ಬೇರೆಯ ಕವಿಯೋ ಸಿದ್ಧನೊ?
ಯಾರನು ಕಳುಹಿಸಿದನೋ ಕಾಣೆ!
ಯಾರಾದರು ಆಗದಕೇನಂತೆ?
ನಮ್ಮೊಲುಮೆಯ ಕುಡಿ ನಮಗೆಮ್ಮಂತೆ:
ಕಂದಾ, ನೀನೆಮಗಿಂಪಿನ ಸಂತೆ;
ಸಲಹುತ್ತೊಲಿವೆವೋ, ಶಿವನಾಣೆ!

ಎಂದು ಮಗನನ್ನು ಸಲಹುವ ಸಂಕಲ್ಪ ಮಾಡುತ್ತಾರೆ. ಕೊನೆಯಲ್ಲಿ

ಮೂಡಲಿ ನಿನ್ನಿಂದೊಳ್ಪಿಗೆ ಕೋಡು;
ತಿಳಿಯಲಿ, ಹೊಳೆಯಲಿ, ನಮ್ಮೀ ನಾಡು;
ತೊಲಗಲಿ ಕತ್ತಲೆ, ಬತ್ತಲೆ, ಕೇಡು;
ಮಂಗಳನಾಗಯ್ ಲೋಕಕ್ಕೆ!

ಎಂದು ಮಗುವಿಗೊಂದು ಗುರಿಯನ್ನು ಸಂಕಲ್ಪಿಸಿ,

ನಮ್ಮೆದೆ ಬಾನಿನ ಚಂದಯ್ಯ
ಸ್ವಾಗತ ನಿನಗೆಲೆ ಕಂದಯ್ಯ!

ಎಂದು ಹಾಡುತ್ತಾರೆ.

’ಕವಿಕುಮಾರಸಂಭವ’ವಾದ ಮೇಲೆ ನಾಮಕರಣವೂ ’ನಾಮಕರಣೋತ್ಸವ’ ಎಂಬ ಕವಿತೆಯೊಂದಿಗೆ ನೆರವೇರಿತು.

’ಚಕ್ರಾಧಿಪತ್ಯಗಳನಾಳ್ವವರಿಗೇನಿಹುದೆ
ಕವಿಯ ಸಂತೋಷದೊಳಗೊಂದು ಬಿಂದು?’

ಎಂಬ ಸಾಲುಗಳು ಕುಮಾರಸಂಭವ ಹಾಗೂ ಕುಮಾರನಿಗೆ ನಾಮಕರಣ ನಡೆಯುತ್ತಿರುವುದರಿಂದ ಸಂತುಷ್ಟಗೊಂಡಿರುವ ಕವಿಗೆ ಚಕ್ರವರ್ತಿಗಳ ಸುಖ ತನ್ನ ಸಾಗರದಷ್ಟು ಸುಖದ ಮುಂದೆ ಒಂದು ಹನಿ ಎಂಬಂತೆ ಭಾಸವಾಗುತ್ತಿದೆ. ಮುಂದುವರೆದು,

ವಿದ್ಯೆ ಕೀರ್ತಿಗಳೊಂದುಗೂಡಿದಂದದೊಳಿಂದು
ಲೋಕಕೈತಂದಿಹನು ಪೂರ್ಣ-ಇಂದು!

ಎನ್ನುತ್ತಾರೆ. ಕವಿಗೆ ವಿದ್ಯೆ ಇದೆ. ಆದರೆ ಕೀರ್ತಿ! ಅದೂ ಇತ್ತು. ಆದರೆ ಅದನ್ನು ’ಕೀರ್ತಿ ಶನಿ ತೊಲಗಾಚೆ’ ಎಂದು ದೂರಮಾಡಿಬಿಟ್ಟಿದ್ದಾರೆ! ವಿದ್ಯೆ ಕೀರ್ತಿ ಎರಡು ಸಮ್ಮಿಳಿತಗೊಂಡಂತಹ ರೂಪದಲ್ಲಿ ಪೂರ್ಣ-ಇಂದು (ಪೂರ್ಣಚಂದ್ರ) ಬಂದುಬಿಟ್ಟಿದ್ದಾನೆ. ಆತ ಬಂದುದು ಸಂದವರ ಪುಣ್ಯವೋ? ಬಂದವರ ಪುಣ್ಯವೋ? ಅನ್ನಿಸಿಬಿಟ್ಟಿದೆ ಕವಿಗೆ! ಯಾವ ತಂದೆ-ತಾಯಿಯರಿಗೇ ಆಗಲಿ ಮಕ್ಕಳ ಮುಖಾಂತರ ಬರುವ ಕೀರ್ತಿ ಅಚ್ಚುಮೆಚ್ಚು!
ನಂತರದ ಅನೇಕ ಕವಿತೆಗಳಲ್ಲಿ ತಮ್ಮ ಕಂದ, ಬಾಲಕ ತೇಜಸ್ವಿಯ ಆಟಪಾಠಗಳನ್ನು, ಅವುಗಳಿಂದ ಕವಿಗಾಗುತ್ತಿದ್ದ ಸಂತೋಷವನ್ನು, ಅದರಿಂದ ಅವರು ಅನುಭವಿಸುತ್ತಿದ್ದ ದಿವ್ಯಾನಂದವನ್ನು ಕುವೆಂಪು ಕಟ್ಟಿಕೊಟ್ಟಿದ್ದಾರೆ. ’ತನಯನಿಗೆ’ ಎಂಬ ಕವಿತೆಯಲ್ಲಿ ತೇಜಸ್ವಿಗೆ ಸೂರ್ಯೋದಯದ ಚೆಲುವನ್ನು ಕವಿ ಪರಿಚಯ ಮಾಡಿಕೊಡುವುದು ಹೀಗೆ.

ಮೂಡಿ ಬಂದಾ ಉದಯರವಿ ನೂಡು ಕಂದಾ!
ಬಿಸಿಲ ನೆವದಲಿ ಶಿವನ ಕೃಪೆಯ ತಂದ!
ಹಬ್ಬುತಿದೆ ಜಗಕೆಲ್ಲ ಹೊಂಬೆಳಕಿನಾನಂದ:
ಏನು ಚಂದಾ ಲೋಕವಿದು ಏನು ಚಂದ!

ಮುಂದುವರೆದು ಸೂರ್ಯೋದಯದ ವರ್ಣವೈಭವವನ್ನು, ಸೂರ್ಯೋದಯದ ನಂತರ ಚೈತನ್ಯಮಯವಾಗುವ ಜಗತ್ತನ್ನೂ, ಹಕ್ಕಿಗಳ ಹಾಡನ್ನೂ ಮಗುವಿಗೆ ಕೇಳು ಕಂದಾ ಎಂದು ಹೇಳುವ ಬಗೆ ಹೀಗಿದೆ.

ಓಕುಳಿಯನಾಡುತಿದೆ ಕೆನೆಮುಗಿಲ ಲೋಕದಲಿ
ನಿನ್ನ ಕೆನ್ನೆಯ ಕೆಂಪು: ಕಾಣು, ಕಂದಾ!
ಜೋಗುಳವನುಲಿಯುತಿದೆ ಹಕ್ಕಿಗಳ ಹಾಡಿನಲಿ
ನಿನ್ನ ಸವಿಗೊರಲಿಂಪು: ಕೇಳು, ಕಂದಾ!

ಕವಿಗೆ ಇಷ್ಟೆಲ್ಲಾ ಆನಂದವನ್ನುಣ್ಣಿಸುತ್ತಿರುವ ಕಂದನಿಗೆ ಕೊನೆಗೆ ಕವಿಯಿಂದ ಬಂದ ಶುಭ ಹಾರೈಕೆ ಏನು ಗೊತ್ತೇ?

ವಿಶ್ವವೆಲ್ಲಾ ಸೇರಿ ವಿಶ್ವಾಸದಲಿ ಕೋರಿ
ಪಡೆದಂದವೀಯೊಡಲ ಚಂದ, ಕಂದಾ.
ವಿಶ್ವಾತ್ಮವನೆ ಸಾರಿ, ವಿಶ್ವದೊಲವನೆ ತೋರಿ,
ವಿಶ್ವದಾನಂದವಾಗೆನ್ನ ಕಂದಾ!

ತನ್ನ ಕಂದ ವಿಶ್ವದ ಆನಂದವಾಗಬೇಕು ಎನ್ನುವ ಹಾರೈಕೆ-ಆಶೀರ್ವಾದಕ್ಕಿಂತ ಹೆಚ್ಚಿನದೇನು ಬೇಕು?
’ತನುಜಾತನಹುದಾತ್ಮಜಾತನುಂ’ ಎಂಬುದೊಂದು ಕವಿತೆಯಿದೆ. ದಂಪತಿಗಳ ಶರೀರದಿಂದ ಹುಟ್ಟಿದ ಮಗು ಎನ್ನುವುದಕ್ಕಿಂತ ಅವರಿಬ್ಬರ ಆತ್ಮದಿಂದ ಹುಟ್ಟಿದ ಮಗು ಎಂಬುದನ್ನು ಅದ್ಭುತವಾಗಿ ಕವಿ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ
ಬರಿಯ ತನುಜಾತನಲ್ಲಹುದಾತ್ಮಜಾತನುಂ.
ಮೆಯ್ಯ ಭೋಗಕೆ ಮನದ ಯೋಗದ ಮುಡಿಪನಿತ್ತು
ನಮ್ಮಾಶೆ ಬಿಜಯಗೈಸಿದೆ ನಿನ್ನನೀ ಜಗಕೆ
ಪೆತ್ತು. ತನುವಿನ ಭೀಮತೆಗೆ ಮನದ ಭೂಮತೆಯೆ
ಕಾರಣಂ. ಕಾಯ ಕಾಂತಿಗೆ ತಾಯಿ ತಂದೆಯರ
ಮೆಯ್ಯ ತೇಜಂ ಮಾತ್ರಮಲ್ತಾತ್ಮದೋಜಮುಂ
ಕಾರಣಂ.

ಇದೊಂದು ಅದ್ಭುತವಾದ ಹಾಗೂ ಭವ್ಯವಾದ ಪರಿಕಲ್ಪನೆ. ತಾಯಿ-ತಂದೆ ಮತ್ತು ಮಗುವಿನ ಸಂಬಂಧವನ್ನು ಆಧ್ಯಾತ್ಮಿಕವಾಗಿ ಕವಿ ಕಂಡಿರುವ ಹಾಗೂ ಅದನ್ನು ಸರಳವಾಗಿ ಸಹೃದಯರಿಗೆ ಮನಗಾಣಿಸಿರುವ ಪರಿ ಅನನ್ಯವಾಗಿದೆ. ಗಂಡು ಹೆಣ್ಣಿನ ಪರಸ್ಪರ ಆಕರ್ಷಣೆ, ಭೋಗ ಇವುಗಳ ಜೊತೆಗೆ ಮನದ ಯೋಗದ ಮುಡಿಪನ್ನು ಕಟ್ಟುವುದರ ಹಂಬಲದ ಮೂರ್ತರೂಪವೇ ಮಗು! ಶರೀರದ ಸೌಂದರ್ಯಕ್ಕೆ ಮನಸ್ಸಿನ ಭೂಮತೆಯೇ ಕಾರಣ! ಮಗುವಿನ ಶರೀರದ ತೇಜಸ್ಸಿಗೆ, ತಾಯಿ ತಂದೆಯರ ಶರೀರದ ತೇಜಸ್ಸು ಮಾತ್ರ ಕಾರಣವಲ್ಲ; ಆತ್ಮದ ತೇಜಸ್ಸೂ ಕಾರಣ! ಕವಿತೆಯಲ್ಲಿ, ಕವಿಗೆ ತನ್ನ ಮಗನು ತನುಜಾತನು ಅನ್ನುವುದಕ್ಕಿಂತ ಆತ್ಮಜಾತನು ಎಂಬುದರಲ್ಲೇ ಹೆಚ್ಚು ಒಲುಮೆ. ಅದಕ್ಕೆ ಕವಿ ಕಂಡುಕೊಂಡ ಕಾರಣಗಳು ಸಕಾರಣಗಳೇ ಆಗಿವೆ.

ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೋದಯಸ್ತಾದಿಗಳ
ಜಾಜ್ವಲ್ಯ ಸೌಂದರ‍್ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ’ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯದಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ: ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ,
ತೇಜಸ್ವಿ: ತನುಜಾತನಹುದಾತ್ಮಜಾತನುಂ!

ಕವಿ ತನಗೆ ಲಭಿಸಿದ ದರ್ಶನದಿಂದ, ತಾನು ಪಡೆದಿದ್ದು ಕೇವಲ ಮಗುವಲ್ಲ; ಒಂದು ವ್ಯಕ್ತಿತ್ವವನ್ನೇ ಪಡೆದಿದ್ದೇನೆ ಎಂಬ ಭಾವ ಸ್ಫುರಿಸಿದೆ. ಎಲ್ಲಾ ತಾಯಿ ತಂದೆಯರಿಗೆ ತಮ್ಮ ತಮ್ಮ ಮಗುವನ್ನು ಕಂಡಾಗ, ಅದರ ಆಟಪಾಠಗಳನ್ನು ನೋಡಿದಾಗ ಯಾವುದೋ ಒಂದು ಕ್ಷಣದಲ್ಲಿ ಅಲೌಖಿಕವಾದ ಆನಂದ ಲಭ್ಯವಾಗುತ್ತದೆ. ಆದರೆ ಅದು ಆ ಕ್ಷಣಕ್ಕೆ ಕಾಣುತ್ತದೆ; ಮರೆಯಾಗುತ್ತದೆ! ದರ್ಶನಕಾರನಾದ ಕವಿ ಮಾತ್ರ ಅಂತಹ ಅನುಭವವನ್ನು ಕಲಾರೂಪದಲ್ಲಿ ಅಭಿವ್ಯಕ್ತಿಗೊಳಿಸಬಲ್ಲ.
’ಅಮೃತಕಾಗಿ’ ಎನ್ನುವ ಕವಿತೆಯಲ್ಲಿ ಅಳುತ್ತಿರುವ ಮಗು

ಹಸಿವಾಗುತಿದೆ ಅಮ್ಮಾ,
ಹಾಲನೂಡಮ್ಮಾ:

ಎಂದು ಕೇಳುತ್ತಿರುವಂತೆ ಕವಿಗೆ ಭಾಸವಾಗುತ್ತದೆ.

ನಿನಗರಿದೆ ನನ್ನ ನೆಲೆ?
ನಿನಗರಿದೆ ನನ್ನ ಬೆಲೆ?
ಶಿಶುವಾನು ಶಿವನ ಕಳೆ;
ಕವಿ ಕಲೆಯ ಕೀರ್ತಿ ಬೆಳೆ;
ಒಲುಮೆ ಹಣ್ಣಾಗಿ,
ಅಮೃತದ ಕುಮಾರನಾಂ
ಜನಿಸಿಹೆನಮೃತಕಾಗಿ!

ಎಂದು ಕೇಳುತ್ತಿರುವಂತೆ ಕವಿಗೆ ಮನಸ್ಸಿಗೆ ಗೋಚರಿಸುತ್ತದೆ! ಮಗು ತೇಜಸ್ವಿಯನ್ನು ಕವಿ ’ಕುಣಿಯುತ ಬಾ, ಕಂದಯ್ಯ’ ಎಂದು ಆಟವಾಡಿಸುವಾಗ, ವಿಶೇಷವಾಗಿ ನವಿಲು, ಜಿಂಕೆಮರಿ, ಹಕ್ಕಿ, ಹಕ್ಕಿಗಳ ಹಾಡು ಮೊದಲಾದವನ್ನು ಮಗುವನ್ನಾಡಿಸುತ್ತಲೇ ಮಗುವಿಗೆ ಪರಿಚಯ ಮಾಡಿಸುವ ತಂದೆಯಾಗಿ ಕುವೆಂಪು ಕಾಣುತ್ತಾರೆ.
’ಕಂದನ ಮೈ’ ಕವಿತೆಯಲ್ಲೂ ಮಗುವಿನಿಂದುಂಟಾದ ದಿವ್ಯಾನಂದವನ್ನು ಕಟ್ಟಿ ಕೊಟ್ಟಿದ್ದಾರೆ.

ದೇವರ ಹರಕೆಯ ಬಾನಿಂ ಭೂಮಿಗೆ
ನೀಡಿದ ಕೈ ಈ ಕಂದನ ಮೈ!
ಈ ಮುದ್ದೀ ಸೊಗಸೀ ಪೆಂಪಿಂಪಂ
ಮಾಡಬಲ್ಲುದೇನನ್ಯರ ಕೈ?

ದೇವರ ಹರಕೆಗೆ ಕೈ ಬಂದು, ಆಕಾಶದಿಂದ ಭುಮಿಗೆ ಚಾಚಿರುವಂತೆ ಮಗು ತೇಜಸ್ವಿ ಕವಿಗೆ ಕಂಡಿದೆ. ಅದರ ಒಂದು ಸ್ಪರ್ಷ ಬೇರೆಯಾರಿಂದಲೂ ಸಿಗದಂತಹ ಅನುಭವವನ್ನು ನೀಡುತ್ತದೆ. ಮುಂದೆ ಮಗು ತೇಜಸ್ವಿಯ ವರ್ಣನೆ ಬರುತ್ತದೆ.

ನೋಡಾ, ತುಂಬು ಸರೋವರವೀ ಕಣ್:
ಆಕಾಶದ ಶಿವನಂ ಪ್ರತಿಫಲಿಸಿ
ಅತ್ತಿಂದಿತ್ತಲ್ ಇತ್ತಿಂದತ್ತಲ್
ಚಲಿಸುತ್ತಿವೆ ಸಾಗರಗಳ ಸಂಚಲಿಸಿ!
ಅಣ್ಣನ ಕಾಲಿದು ಪುಣ್ಯದ ಕಾಲು:
ಮೇರುಪರ್ವತವನೇರಿದ ಕಾಲು;
ದೇವಗಂಗೆಯೊಳೀಜಿದ ಕಾಲು;
ಹೊನ್ನಿನ ಹುಡಿಯಲಿ, ಹಾಲ್‌ಕೆನೆ ಕೆಸರಲಿ
ಸಿಂಗರಗೊಂಡಿವೆ ಈ ಕಾಲು!

ಕನ್ನಡಿ ಹಿಡಿದಿದೆ ಬ್ರಹ್ಮಾಂಡಕೆ ಈ
ಕಂದನ ಮುಖದರ್ಪಣ ಕಾಣಾ!
ಸೂರ್ಯ ಚಂದ್ರರಲೆಯುತ್ತಿಹರಲ್ಲಿ;
ಉರಿದಿವೆ ತಾರಾ ಕೋಟಿಗಳಲ್ಲಿ;
ಹೊಳೆ ತೊರೆ ಹರಿದಿವೆ; ಮುನ್ನೀರ್ ಮೊರೆದಿವೆ;
ಪರ್ವತ, ಕಾನನ, ಖಗಮೃಗ ಮೆರೆದಿವೆ;
ಸೃಷ್ಟಿಯೊಳೇನೇನಿಹುದೋ ಎಲ್ಲಾ
ಈ ಮುಖದೊಳೆ ಕವಿ ಕಾಣಲು ಬಲ್ಲ:
ನಿನಗೂ ಕಾಣುವ ಕಣ್ಣಿದ್ದರೆ ಕಾಣಾ,
ಬರೆದುದನೋದುವ ಬಲ್‌ಜಾಣಾ!

‍ಲೇಖಕರು avadhi

September 8, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sarala

    ತಂದೆ-ತಾಯಿಗಳ ಪ್ರಥಮ ಸಂತಾನದ ಕನಸುಗಳು, ಮಗುವಿನ ಬಗ್ಗೆ ಅವರ ಅನಿಸಿಕೆಗಳು, ಅದರ ಔನತ್ಯದ ಆಶಯಗಳನ್ನು ಇಷ್ಟು ಸುಂದರವಾಗಿ ಬರೆಯಲಿಕ್ಕೆ ಕುವೆಂಪು ಒಬ್ಬರಿಗೆ ಮಾತ್ರ ಸಾಧ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: