ಪ್ರಸಾದ್ ಬಾಗೂರು
**
‘ಕನ್ಸ್ cut ಆದ್ರೆ’ sidewing ತಂಡದಿಂದ ಇತ್ತೀಚೆಗೆ ಪ್ರಯೋಗಿಸಲ್ಪಟ್ಟ ಪ್ರಹಸನ. ತಂಡದ ರೂವಾರಿ ಶ್ರೀ ಶೈಲೇಶ್ ಅವರ ದಿಗ್ಧರ್ಶನ, ಹೊಸ ಚಿಗುರು ಹಳೇ ಬೇರಿನ ನಡುವಿನ ತಾತ್ವಿಕ ಹಾಗೂ ಸಿದ್ಧಾಂತಗಳ ನಡುವಿನ ತಾಕಲಾಟದ, ತುಮುಲದ, ಸಂಘರ್ಷದ ಸೂಕ್ಷ್ಮ ಕಥಾ ಹಂದರ. ತಿಳಿಹಾಸ್ಯ, ಯುವಪೀಳಿಗೆಯ ಭ್ರಮಾಲೋಕದ ಹಸಿ ಬಿಸಿ ಕನಸುಗಳು, ಅದನ್ನು ನನಸಾಗಿಸಲು ಅವರುಗಳ ಪಡುವ ಪರದಾಟಗಳು, ಭ್ರಮೆ ನಿರಸನವಾದಾಗ ಆಗುವ ಹತಾಶೆ, ನಿರಾಶೆ, ಸಿನಿಮಾ ಲೋಕದ ನಿತ್ಯ ಸತ್ಯ, ಕಟು ಸತ್ಯಗಳು ಇವೆಲ್ಲವನ್ನೂ ಬಲು ಮಾರ್ಮಿಕವಾಗಿ ತೆರೆಯ ಮೇಲೆ ತಂದಿದ್ದಾರೆ.
ಹಿರಿಯರ ಆಸೆಗಳ ಹೇರಿಕೆ ಕಿರಿಯರ ಮೇಲೆ, ಹಿರಿಯರು ಹೇಳಿದ್ದನ್ನೆಲ್ಲ ತಿರಸ್ಕರಿಸಲೇಬೇಕೆಂಬ ಕಿರಿಯರ ಹಠ ಸಂಸಾರದ ನೆಮ್ಮದಿಗೆ ಭಂಗ ತಂದಾಗ ಮನೆಯೊಡತಿ ಸಂಘರ್ಷಗಳ ವಿರುದ್ಧ ಸಿಡಿದೆದ್ದು ತನ್ನ ನಿಷ್ಟುರತೆಯಿಂದ ಪ್ರತಿಯೊಬ್ಬರ ಬಲಹೀನತೆಯನ್ನು ಅನಾವರಣಗೊಳಿಸಿ ಸಂಸಾರವನ್ನು ಸುಭದ್ರವಾಗುವಲ್ಲಿ ತನ್ನ ಧೀಮಂತಿಕೆಯನ್ನು ಪ್ರದರ್ಶಿಸುತ್ತಾಳೆ.
ನಾಟಕದ ಆರಂಭ ಮಂದಗತಿಯಲ್ಲೇ ಶುರು ಆದರೂ ನಾಟಕ ಮುಂದುವರೆದಂತೆ ತನ್ನ ಗಾಂಭೀರ್ಯವನ್ನು ಮೆರೆಸುತ್ತ ಹೋಗುತ್ತೆ. ಚುರುಕಾದ, ಕಟುವಾದ ಸಂಭಾಷಣೆಗಳು, ಅಲ್ಲಲ್ಲಿ ಮೂಡಿ ಬರುವ ತಿಳಿ ಹಾಸ್ಯಗಳು ಮನಕ್ಕೆ ಮುದ ಕೊಡುತ್ತಾ ಹೋಗುತ್ತೆ. ಕಂಗ್ಲೀಷ್ ಅಜ್ಜಿ, ಅನುವಾದಕಿ ಮೊಮ್ಮಗಳು, ಸಿನಿ ನಿರ್ದೇಶಕ ಇವರೆಲ್ಲ ನಾಟಕವನ್ನು ಕೊಂಡೊಯ್ಯುವುದರಲ್ಲಿ ಯಶಸ್ವಿ ಆಗಿರುತ್ತಾರೆ.
ತಂದೆಯ ಗಾಂಭೀರ್ಯ ಪಾತ್ರದಾರಿ ಗಮನ ಸೆಳೆಯುತ್ತಾರೆ. ನಾಟಕದ ಅಚ್ಚರಿ ಎಂದರೆ ತಾಯಿ ಪಾತ್ರದಾರಿ ಲತಾ ಅವರದ್ದು. ಸೌಮ್ಯದ, ಸಹನೆಯ ಪ್ರತಿಮೂರ್ತಿ ಆಗಿದ್ದ ಈ ಪಾತ್ರ ಸಂದರ್ಭ ಗಂಭೀರವಾಗುತ್ತಿದ್ದಂತೆ ಮಗನ ವಿರುದ್ಧವೇ ಸಿಡಿದೆದ್ದು ದುರ್ಗಿಯಂತೆ ರೋಷಾವೇಶದಿಂದ ಮಗನ ವರ್ತನೆಯನ್ನು ಉಗ್ರವಾಗಿ ಖಂಡಿಸಿ ಕುಟುಂಬದ ಯಜಮಾನನ ಗೌರವ ಹಾಗೂ ಅವನ ಭಾವನೆಗಳ ಒಳಾರ್ಥವನ್ನು ದಾರಿ ತಪ್ಪುತ್ತಿದ್ದ ಮಗನಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿ ಆಗುತ್ತಾಳೆ.
ಲತಾ ಹಾಗೂ ಮಗನ ಪಾತ್ರದಾರಿ ಇಬ್ಬರೂ ನಾಟಕದ ಮೆರಗನ್ನು ಹೆಚ್ಚಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತಾರೆ. ನಿರೀಕ್ಷೆಯಂತೆ ಶೈಲೇಶ್ ತಂಡದ ಮಾರ್ಮಿಕ ನಗೆ ಚಟಾಕಿಗಳ ಕೊರತೆ ಈ ಪ್ರದರ್ಶನದಲ್ಲಿ ಸ್ವಲ್ಪ ಮಟ್ಟಿಗೆ ಕಂಡು ಬಂದರೂ, ಒಟ್ಟಿನಲ್ಲಿ ಒಂದು ಸುಂದರ ಪ್ರಶಂಸನೀಯ ಪ್ರಯತ್ನ ತಂಡದ್ದು. ಅಭಿನಂದನೆಗಳು.
ಪ್ರಾರಂಭದಲ್ಲಿ ಪ್ರೇಕ್ಷಕನ ಕನ್ಸು ಕಟ್ ಆಗ್ತಿದೆಯೇನೋ ಅಂದುಕೊಳ್ಳೋ ಅಷ್ಟರಲ್ಲೇ ಶೈಲೇಶ್ ಅವರು ತಮ್ಮ ಜಾಣತನದಿಂದ ಸರಿಯಾದ ಹಳಿಗೆ ನಾಟಕವನ್ನು ಕೊಂಡೊಯ್ದು ಪ್ರೇಕ್ಷಕನ ಕನಸು cut ಆಗ್ದೆ ಇರೊ ಹಾಗೇ ನಾಟಕ ತೂಗಿಸಿದ್ದಾರೆ.ಇಡೀ ತಂಡಕ್ಕೆ ಅಭಿಂದನೆಗಳು
0 ಪ್ರತಿಕ್ರಿಯೆಗಳು