ಮೊನ್ನೆ ಧೋ.. ಎಂದು ಮಳೆ ಸುರಿಯಿತು. ಈ ಮಳೆಯ ಮಧ್ಯೆ ಬ್ಲಾಗ್ ಲೋಕದಲ್ಲಿ ಅಡ್ಡಾಡುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಜಿ ಎಸ್ ಬಿ ಅಗ್ನಿಹೋತ್ರಿ ಅವರ ಈ ಪೇಂಟಿಂಗ್.
ಮಳೆಯನ್ನು ಬಣ್ಣಗಳಲ್ಲಿ ಹಿಡಿದು ಕಟ್ಟಿ ಹಾಕಿದ ಕಲಾಕೃತಿ. ‘ಅವಧಿ’ಯಲ್ಲಿ ಈ ಕಲಾಕೃತಿಯನ್ನು ಪ್ರಕಟಿಸಿದ್ದೆವು.
ಈಗ ಅಗ್ನಿಹೋತ್ರಿ ಅವರು ಆ ಕಲಾಕೃತಿ ಹುಟ್ಟಿದ ಕಥೆ ಹೇಳಿದ್ದಾರೆ.
ಮೈಸೂರಿನ ಕುಕ್ಕರಹಳ್ಳಿ ಕೆರೆಯ ನೋಟ ಇದು. ಆದರೆ ಆ ಸಂದರ್ಭ ನೆನಪಿಸಿಕೊಳ್ಳುತ್ತೇನೆ. ಅದಕ್ಕೂ ಮೊದಲು ಸಂದರ್ಭ ನೆನಪಿಸಿಕೊಳ್ಳಲು ಕಾರಣ ಇದೆ. ಅವಧಿ ನನ್ನ ಈ ಕಲಾಕೃತಿಯನ್ನು ಪ್ರದರ್ಶಿಸಿದೆ. ಅವಧಿಗೊಂದು ಥ್ಯಾಂಕ್ಸ್.
ಮಳೆ ಬರುವ ಮುನ್ಸೂಚನೆ ಇದ್ದರೂ ಅಂದು ಧೈರ್ಯ ಮಾಡಿ ಹೊರಟಿದ್ದೆ. ಮಳೆ ಬಂದರೇನಂತೆ, ಅಲ್ಲೇ ಎಲ್ಲೋ ಮರದ ಕೆಳಗೆ ಕುಳಿತು ಪೇಂಟಿಂಗ್ ಮಾಡಿದರಾಯಿತು ಅಂದುಕೊಂಡಿತ್ತು ಮನಸ್ಸು. ಮೋಡ ಕವಿದ ವಾತಾವರಣ ಇದ್ದಾಗ ಸಾಮಾನ್ಯವಾಗಿ ಲ್ಯಾಂಡ್ ಸ್ಕೇಪ್ ಪೇಂಟಿಂಗ್ ಮಾಡಲಿಕ್ಕೆ ಅಸ್ಟು ಚೆನ್ನಾಗಿರಲ್ಲ. ಕಾರಣ ಬೆಳಕಿನ ಪ್ರಮಾಣ ಕಡಿಮೆ ಇರೋದ್ರಿಂದ ನೆರಳು ಗುರುತಿಸೋದು ಕಷ್ಟ. ಅದರಲ್ಲೂ ವಾಟರ್ ಕಲರ್ ಆಯ್ಕೆ ಇನ್ನೂ ರಿಸ್ಕ್. ಆದರೆ ಅಂದು ವಾಟರ್ ಕಲರ್ ನಲ್ಲೇ ಉತ್ತಮ ಕಲಾಕೃತಿಯೊಂದನ್ನು ರಚಿಸಿಕೊಂಡು ಬರಬೇಕೆಂದೇ ಹೊರಟಿದ್ದೆ. ಮೋಡದಲ್ಲಿ ನವಿಲು ಉಲ್ಲಸಿತವಾಗಿರುವಂತೆ ಇತ್ತು ನನ್ನ ಉತ್ಸಾಹ.
ಮರದ ಕೆಳಗೆ ಕುಳಿತು ಸ್ಕೆಚ್ ಮಾಡಿ, ಇನ್ನೇನು ಕಲರ್ ಮಿಕ್ಸ್ ಮಾಡುವ ಹೊತ್ತಿಗೆ ಮಳೆ ಹನಿಗಳ ಸಿಂಚನ ಶುರುವಾಗಿತ್ತು. ಮೋಡಗಳು ಜಾಸ್ತಿಯಾಗುತ್ತಿದ್ದ ಕಾರಣ ಬೆಳಕಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಅಂತೂ 20 ನಿಮಿಷಗಳಲ್ಲಿ ಪೇಂಟಿಂಗ್ ಕಂಪ್ಲೀಟ್ ಮಾಡಿ, ನನ್ನ ಸಿಂಗಲ್ ಸೀಟ್ ಲೂನಾ ಏರಿ ಕಲಾಮಂದಿರ ಸೇರಿಕೊಂಡೆ. ಕಲಾಮಂದಿರದ ಹತ್ತಿರ ಬರುವಷ್ಟರಲ್ಲಿ ಮಳೆ ಜೋರಾಗಿತ್ತು.
ಕಲಾಮಂದಿರ ಸೇರಿಕೊಂಡಾಗ ಟೈಮ್ ಸಂಜೆ 4-50. ಇಸ್ಟೊಂದು ಪಕ್ಕಾ ಟೈಮ್ ನೆನಪಿದೆಯಲ್ಲ, ಸುಮ್ನೆ ಬುರಾಲ್ (ಸುಳ್ಳು) ಬಿಡುತ್ತಿದ್ದಾನೆ ಅನಿಸಬಹುದು. ಇಲ್ಲ, ಯಾಕೆಂದರೆ ನನ್ನ ನೆನಪಿನಲ್ಲಿ ಈ ಪೇಂಟಿಂಗ್, ಆಕ್ಷಣಗಳು ಮಾಸಲು ಸಾಧ್ಯವೇ ಇಲ್ಲ. ನನ್ನ ಅಂದು ಟೈಮ್ ನೋಡ್ಲಿಕ್ಕೆ ವಾಚ್ ಆಗಲಿ, ಮೊಬೈಲ್ ಆಗಲಿ ಇರಲಿಲ್ಲ. ಮಳೆ ಬಂತಲ್ಲ ಎಂದು ಅಲ್ಲೇ ರಂಗಾಯಣದ ಬಾಗಿಲಲ್ಲಿ ನಿಂತಿದ್ದ ರಂಗಕರ್ಮಿ ಮೈಮ್ ರಮೇಶ್ ಅವರಲ್ಲಿ ಟೈಮ್ ಕೇಳಿದ್ದೆ. ಬಳಿಕ ನಾನು ಮತ್ತು ಮೈಮ್ ರಮೇಶ್ ಇಬ್ಬರೂ ರಂಗಾಯಣ ಬಯಲು ರಂಗಮಂದಿರದ ಎದುರು ಕಾರ್ನರ್ ನಲ್ಲಿರುವ ಟೀ ಅಂಗಡಿಯಲ್ಲಿ ಬಿಸ್ಕೆಟ್ ತಿಂದು ಕಾಫಿ ಕುದಿದಿದ್ವಿ.
ಮೈಮ್ ರಮೇಶ್ ಅವರು ಸಂಪರ್ಕದಲ್ಲಿ ಇಲ್ಲದೆ ಅದೆಸ್ಟೋ ದಿನಗಳಾದವು…
0 ಪ್ರತಿಕ್ರಿಯೆಗಳು