ಅಭಿಮಾನ ಎನ್ನುವ ಪದಕ್ಕೆ ಎಂದಿಗೂ ಬೆಲೆ ಕಟ್ಟಲಾಗದು, ಅಭಿಮಾನಿಗಳೇ ದೇವರು ಎಂದು ನಟ ಸಾರ್ವಭೌಮ ಡಾ. ರಾಜ್ ಕುಮಾರ್ ರವರು ಆಗಲೇ ಹೇಳಿದ್ದರು, ಅಂತಹ ಒಬ್ಬ ಸಂಗೀತ ಅಭಿಮಾನಿಯೊಬ್ಬನ ಜೀವನದ ಕಥಾನಕವನ್ನು ಹೊಂದಿದ ಚಿತ್ರ ‘ಹಳ್ಳಿ ಸೊಗಡು’. ಈಗಾಗಲೇ 100 ಚಿತ್ರಗಳ ಗಡಿ ತಲುಪುವ ಹಂತದಲ್ಲಿರುವ ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ ರವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2 ನೇ ಚಿತ್ರವಾದ ಹಳ್ಳಿ ಸೊಗಡು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮಹೂರ್ತ ನಡೆಯಿತು. ಚಿತ್ರದ ಮಹೂರ್ತ ದೃಶ್ಯಕ್ಕೆ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್ ರವರು ಕ್ಲಾಪ್ ಮಾಡಿದರೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಕ ಉಮೇಶ್ ಬಣಕಾರ್ ಕ್ಯಾಮರಾ ಚಾಲನೆ ಮಾಡಿದರು.
ಮಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತಾನಾಡಿದ ಡಾ. ದೊಡ್ಡರಂಗೇಗೌಡ ನನ್ನ ಒಂದು ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಸತೀಶ್ ಕುಮಾರ್ ಮೆಹ್ತಾ, ಮಹಂತೇಶ್ ಹೆಚ್.ಎನ್. ದತ್ತಾತ್ರೇಯ ಸೇರಿ ನಾಲ್ಕು ಜನ ಗೆಳೆಯರು ಈ ಚಿತ್ರದ ಬಗ್ಗೆ ಹೇಳಿದರು. ನಾಲ್ಕು ದಶಕಗಳ ಕಾಲ ನಾನು ಬರೆದಂತಹ ಹಾಡುಗಳನ್ನು ಅಭಿಮಾನಿಯೊಬ್ಬ ಒಂದು ಆರ್ಕೆಸ್ಟ್ರಾ ತಂಡ ಕಟ್ಟಿಕೊಂಡು ಹಾಡುತ್ತಾ ತನ್ನ ಬದುಕನ್ನು ಸುಂದರ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಈತನ ಜೊತೆ ಗೆಳತಿಯು ಬೆಂಬಲವಾಗಿ ನಿಲ್ಲುತ್ತಾಳೆ, ಒಮ್ಮೆ ಕಾಯಿಲೆಗೆ ತುತ್ತಾದ ನಾಯಕನನ್ನು ಮಾತಾನಾಡಿಸಲು ಸಾಹಿತಿ ಡಾ. ದೊಡ್ಡರಂಗೇಗೌಡರೇ ಬಂದಾಗ ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೇ ಮರೆಯಲಿ ಎಂಬ ಹಾಡನ್ನು ಅವರ ಬಾಯಿಂದ ಕೇಳಲು ಇಷ್ಟ ಪಡುತ್ತಾನೆ. ಆ ಹಾಡಿನಿಂದ ಆತ ಮರು ಜನ್ಮ ಪಡೆಯುತ್ತಾನೆ. ಈ ಕಾನ್ಸೆಪ್ಟ್ ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ಹೇಳಿ ನನ್ನ ಪಾತ್ರವನ್ನು ನಾನೇ ಮಾಡಬೇಕೆಂದು ಕೇಳಿದರು. ಇದು ಸಂಪೂರ್ಣ ಗ್ರಾಮೀಣ ಸೊಗಡಿನ ಚಿತ್ರ 10 ಹಳ್ಳಿಗಳಲ್ಲಿ ಶೂಟಿಂಗ್ ಮಾಡಿ, ಒಂದು ಹಳ್ಳಿಯಂತ ತೊರಿಸುವಲ್ಲಿ ಪುಟ್ಟಣ್ಣ ನಿಪುಣರು, ಇಲ್ಲಿಯೂ ಅಂತಹ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿ ನನ್ನ 27 ಜನಪ್ರಿಯ ಚಿತ್ರಗೀತೆಗಳ ಚರಣವನ್ನು ಮಾತ್ರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
0 ಪ್ರತಿಕ್ರಿಯೆಗಳು