ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದು, ಬರಹ ಎಕ್ಸೆಟ್ರಾ! – ಸ೦ಯುಕ್ತಾ ಬರೀತಾರೆ

ಓದು, ಬರಹ ಎಕ್ಸೆಟ್ರಾ!

– ಸ೦ಯುಕ್ತಾ ಪುಲಿಗಲ್

ಇತ್ತೀಚಿಗೆ ಕ್ಲಾಸೀ ಸಿಂಬಲ್ ಆಗುತ್ತಿರುವ ನಮ್ಮ ’ಎಜುಕೇಷನ್ ಸಿಸ್ಟಮ್’, ಅದರ ಮೂಲೋದ್ದೇಶವನ್ನು ಸಂಪೂರ್ಣ ಕಳೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಓದು ಬರಹ ಇವುಗಳೆಲ್ಲವೂ ನಡೆಯುವುದು ಪರೀಕ್ಷೆಯಲ್ಲಿ ಟಾಪ್ ಅಂಕ ಗಳಿಸಲು, ಅಮೆರಿಕ ಪ್ರವಾಸ ಮಾಡಲು, ಸಮಾಜದಲ್ಲಿ ಕಾಲರ್ ತಿರುಚಲು ಮೀಸಲಾಗಿ ಹೋಗಿದೆ. ನನ್ನಣ್ಣನ ಮಗಳಿಗೆ ಈಗ ಎರಡು ವರ್ಷ ವಯಸ್ಸು. ಈಗಲೇ ಅವಳ ತಂದೆ ತಾಯಿಗೆ ಅವಳ ವಿದ್ಯಾಭ್ಯಾಸದ ಚಿಂತೆ! ಯಾವ ’ಬೆಸ್ಟ್’ ಶಾಲೆಗೆ ಇವಳನ್ನು ಸೇರಿಸಿದರೆ ಉತ್ತಮ ಎಂದು ಅವರಿಗೆ ರಾತ್ರಿ ನಿದ್ದೆಯಿಲ್ಲವಂತೆ! ನಾವೆಲ್ಲಾ ಎರಡು ವರ್ಷದಲ್ಲಿ ಏನು ಮಾಡುತ್ತಿದ್ದೆವು ಎಂದು ಅಮ್ಮನನ್ನು ಕೇಳಿದರೆ ನಾಚಿಕೆಯಾದೀತು! ಈಗಂತೂ ಪುಟ್ಟ ಮಕ್ಕಳ ಪಜೀತಿ ಹೇಳತೀರದು. ದಿನ ಪೂರ್ತಿ ಶಾಲೆ, ಶಾಲೆಯ ನಂತರ ಟ್ಯೂಶನ್, ನಂತರ ರಿವಿಶನ್, ನಂತರ ಹೋಮ್ ವರ್ಕು, ಆಮೇಲೆ ಟೆಸ್ಟು, ಎಕ್ಸಾಮು, ಮಾರ್ಕ್ಸು, ಟಾಪ್ ಸ್ಕೋರು! ಇನ್ನೆಲ್ಲಿ, ಬೇರೆ ಸದಭಿರುಚಿಗಳಿಗೆ ಸಮಯ! ಯಾಕೆ ಹೇಳಿದೆ ಅಂದರೆ, ಈ ಸ್ಪರ್ಧಾತ್ಮಕ ಬೆಳವಣಿಗೆಗಳಲ್ಲಿ, ನಾವು ಎಲ್ಲರನ್ನೂ ಹಿಮ್ಮೆಟ್ಟಿ ಮುಂದೆ ಬರುವುದರ ಭರಾಟೆಯಲ್ಲಿ, ನಮ್ಮಲ್ಲಿ ಮುಖ್ಯವಾಗಿ ಬೆಳೆಯಬೇಕಾದಂತಹ ಓದಿನ ಬಗೆಗಿನ ಪ್ರೀತಿಯನ್ನು, ಅಪ್ಯಾಯತೆಯನ್ನು ಮರೆಯುತ್ತಿದ್ದೇವೆ. ಇನ್ನು ನಿಜ ಜೀವನವರಿಯಲು, ವೈಚಾರಿಕ ಪ್ರಜ್ಞೆ ಬೆಳೆಯಲು ಹೇಗೆ ಸಾಧ್ಯವಾದೀತು! “ಅಯ್ಯೋ, ಅವಳು ಕಥೆ ಕಾದಂಬರಿ ಓದ್ತಾಳಂತೆ, ಅದೇನೋ ಕೆಲಸಕ್ಕೆ ಬಾರದ ಸಾಹಿತ್ಯ ಅಂತೆ, ಯಾರಿಗೆ ಬೇಕು, ನೀನು ಅವಳ ಜೊತೆ ಸೇರಿ ಹಾಳಾಗಬೇಡ” ಎಂದು ಅಡ್ವೈಸ್ ಮಾಡುವ ತಂದೆ ತಾಯಂದಿರು ಇಂದು ಹೆಚ್ಚು. ಇದು ಅವರ ತಪ್ಪಲ್ಲ, ಅವರಲ್ಲಿ ವಿದ್ಯಾಭ್ಯಾಸದ ಬಗೆಗಿನ ತಪ್ಪು ಕಲ್ಪನೆಯ ಬೀಜ ಬಿತ್ತುತ್ತಿರುವ ಸಮಾಜದ ಆತಂಕಕಾರೀ ಬೆಳವಣಿಗೆಗಳೇ ಕಾರಣ! ಕಳೆದ ವಾರ ನಡೆದ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞರು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಂ. ಆರ್. ನಾಗರಾಜು ರವರ ಮಾತು: “ಮನುಷ್ಯ ಉಸಿರಾಡಲು ಕೆಲಸ ಮಾಡುವುದು ಅವನ ಶ್ವಾಸಕೋಶವಲ್ಲ ಮಿದುಳು, ಮತ್ತು ಈ ಮಿದುಳು ಉಸಿರಾಡಲು ಬೇಕಾಗಿರುವುದು ಸರಿಯಾದ ಜ್ಞಾನ. ಈ ಜ್ಞಾನ ಸಿಗುವುದು ಪುಸ್ತಕಗಳಿಂದ” ಎಂದು. ಅವರ ಮತ್ತೊಂದು ಆಣಿಮುತ್ತಿನಂತಹ ಮಾತು: “ಪ್ರಾಣವಿಲ್ಲದೇ ಜೀವಂತವಾಗಿರುವ ಒಂದೇ ವಸ್ತು ಪುಸ್ತಕ” ಎಂದು. ಈ ಮಾತು ಎಷ್ಟು ನಿಜ ಎಂಬುದನ್ನು ಅರಿಯಲು ನಾವು ಪುಸ್ತಕದ ಬಗ್ಗೆ ಮೋಹ ಬೆಳೆಸಿಕೊಳ್ಳಬೇಕು. ಪುಸ್ತಕ ನಮ್ಮ ಪ್ರೇಮಿಯಾಗಬೇಕು. ಪುಸ್ತಕ ಪ್ರೀತಿ ಎನ್ನುವುದು ಒಂದು ಗೀಳು, ಹುಚ್ಚು! ಮಕ್ಕಳಿಗೆ ಲಾಲಿಪಾಪು, ಬಣ್ಣಬಣ್ಣದ ಬಲೂನು ಕಂಡರೆ ಹೇಗೋ ಹಾಗೆ! ಇದೊಂದು ಶ್ಲಾಘನೀಯ ಚಟ ಎನ್ನಬಹುದು. ಈ ಚಟ ಎಷ್ಟು ನಮ್ಮನ್ನಾವರಿಸುತ್ತದೆ ಎನ್ನುವುದಕ್ಕೆ ಕೆಲವು ಉದಾಹರಣೆಗಳು. ನನಗೆ ಪರಿಚಯವಿರುವ ಒಬ್ಬ ವ್ಯಕ್ತಿ. ಆಕೆಗೆ ತುಂಬಾ ಓದುವ ಹುಚ್ಚು, ಸಣ್ಣವಳಿದ್ದಾಗ ಆಕೆಗೆ ಪುಸ್ತಕ ಕೊಳ್ಳಲು ಕೈಲಿ ಹಣವಿರುತ್ತಿರಲಿಲ್ಲ, ಆದರೆ ಮನೆಯಲ್ಲಿ ಕೇಳಿದರೆ “ಪುಸ್ತಕಕ್ಕೆಲ್ಲ ದುಡ್ಡು ಹಾಕ್ತೀಯಾ” ಅಂತ ಬೈಗುಳ! ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೂರೈವತ್ತು ರೂಗೆ ಹತ್ತು ಪುಸ್ತಕ ಎಂದು ಯಾರೋ ಹೇಳಿಬಿಟ್ಟರು. ತನ್ನಲ್ಲಿ ಅದುವರೆಗೂ ಒಟ್ಟುಗೂಡಿಸಿದ ಎಲ್ಲಾ ಮೊತ್ತ ಸೇರಿಸಿದರೂ ಸಾಲದು. ಕೊನೆಗೂ ಹಟದಿಂದ ಹೇಗೋ ಸರಿಹೊಂದಿಸಿ ಹೋಗಿ ಪುಸ್ತಕ ಕೊಳ್ಳುತ್ತಾಳೆ! ಸಣ್ಣ ನಗೆ ಬೀರಿ ಆಕೆ ಹೇಳುತ್ತಾಳೆ, ಕೆಲವೊಮ್ಮೆ ಪುಸ್ತಕ ಪಡೆಯಲು ಮಾಡಬಾರದ ನಖರಾ ಮಾಡಿ ಅವೆಲ್ಲವನ್ನೂ ಈಗ ಎಲ್ಲರ ಬಳಿ ಕನ್ಫ಼ೆಸ್ ಮಾಡಿಕೊಳ್ಳುತ್ತಿದ್ದೇನೆ ಎಂದು. ಮತ್ತೊಬ್ಬರು, ಎಂಟು ನೂರಕ್ಕೂ ಪುಸ್ತಕ ತಮ್ಮ ಮನೆಯ ಸ್ವಂತ ಗ್ರಂಥಾಲಯದಲ್ಲಿ ಸಂಗ್ರಹಿಸಿರುವುದಷ್ಟೇ ಅಲ್ಲದೆ, ಪ್ರತಿ ವಾರವೂ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಡುತ್ತಾರೆ. ಅವರ ಮುಖ್ಯ ಟೈಮ್ ಪಾಸ್ ಅಂದರೆ ಪುಸ್ತಕದಂಗಡಿ, ಗ್ರಂಥಾಲಯದಲ್ಲಿ ಕಾಲ ಕಳೆಯುವುದು! ಇನ್ನೊಬ್ಬ ಸ್ಟೂಡೆಂಟ್, ಎಷ್ಟು ಪುಸ್ತಕ ಓದುತ್ತಾಳೆ ಅಂದರೆ, ಹೆಚ್ಚೂ ಕಡಿಮೆ ದಿನಕ್ಕೆ ಒಂದು ಪುಸ್ತಕ ಓದಿ ಮುಗಿಸುವಷ್ಟು! ಮತ್ತೊಬ್ಬ ಹುಡುಗಿ, ಇತ್ತೀಚೆಗಷ್ಟೇ ನನ್ನಿಂದ ಎರಡು ಪುಸ್ತಕಗಳನ್ನೊಯ್ದು, ಆ ಸಂಜೆಯೇ ಮರಳಿಸಿದಳು. ಆಶ್ಚರ್ಯದಿಂದ ಆಕೆಯನ್ನು ಕೇಳಿದರೆ ಅವಳ ಉತ್ತರ, “ನಾನು ತುಂಬಾ ಓದುತ್ತೇನೆ, ಓದಬೇಡ ಸಾಕು ನಿಲ್ಲಿಸು ಎಂದು ನನ್ನ ತಂದೆ ತಾಯಿ ಬೈಯುತ್ತಾರೆ” ಎಂದು. ಇವೆಲ್ಲವನ್ನೂ ಕಂಡರೆ ಆಶ್ಚರ್ಯ, ಸಂತೋಷವಾಗದೇ ಇರದು. ಈ ಪುಸ್ತಕ ಪ್ರೇಮ ನಿಮ್ಮಲ್ಲಿ ಹೇಗೆ ಬೆಳೆಯಿತು ಎಂಬುದಕ್ಕೆ ಇವರೆಲ್ಲರದೂ ಒಂದೇ ಉತ್ತರ. ಗೆಸ್ ಮಾಡುವಿರಾ? “ಚಿಕ್ಕವರಾಗಿದ್ದಾಗ ನಮ್ಮ ಅಪ್ಪ (ಅಥವಾ ಅಮ್ಮ) ನಮಗೆ ಹೆಚ್ಚು ಹೆಚ್ಚು ಪುಸ್ತಕ ಕೊಡಿಸುತ್ತಿದ್ದರು. ಓದಿಸುತ್ತಿದ್ದರು, ಕಥೆ ಹೇಳುತ್ತಿದ್ದರು. ಬಟ್ಟೆ, ಆಟ ಸಾಮಾನುಗಳಿಗಿಂತ ಹೆಚ್ಚು ಪುಸ್ತಕ ಕೊಳ್ಳುವುದು ವಾಡಿಕೆಯಾಗಿತ್ತು” ಎಂದು. ನಿಜ! ಇದು ಚಿಕ್ಕಂದಿನಲ್ಲೇ ಬಿತ್ತಬೇಕಾದ ಬೀಜ. ಇದು ಹೆಮ್ಮರವಾಗಿ ಬೆಳೆದು ಇತರರಿಗೆ ತಂಪಾದ ನೆರಳು ಕೊಡಬೇಕಾದಲ್ಲಿ, ಹೆತ್ತವರ ಪಾತ್ರ ತುಂಬಾ ಇದೆ ಅಲ್ಲವೆ. ಆದ್ದರಿಂದ ಹಿರಿಯರೇ, ತಮ್ಮ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸಲು ನೆರವಾಗಿ, ಈ ಪುಸ್ತಕ ಓದುವ ಅಭಿರುಚಿಯನ್ನು, ಅದರ ಮತ್ತನ್ನು ಅವರಿಗೆ ಒಮ್ಮೆ ರುಚಿಸಿ, ಆಮೇಲೆ ಉಳಿದದ್ದು ಅವರೇ ನೋಡಿಕೊಳ್ಳುತ್ತಾರೆ. ಪ್ರೊ. ಎಂ. ಆರ್. ನಾಗರಾಜುರವರು ಹೇಳಿದಂತೆ ಈಗ ಪುಸ್ತಕ ಪ್ರೀತಿಗೆ, ಓದಿಗೆ ಬರಗಾಲ ಬಂದಿದೆ. ಎ ಡ್ರಾಟ್ ಫ಼ಾರ್ ರೀಡಿಂಗ್. ಅದನ್ನು ತಪ್ಪಿಸಿ ಮುಂದೆ ನಮ್ಮ ನಂತರದ ಪೀಳಿಗೆಗೆ ಉತ್ತಮ ದಿನಗಳನ್ನು ಸೃಷ್ಟಿಸುವುದು (ಅಥವಾ ಉಳಿಸುವುದು?) ನಮ್ಮ ಕರ್ತವ್ಯ ಅಲ್ಲವೇ!  ]]>

‍ಲೇಖಕರು G

10 August, 2012

6 Comments

  1. D.RAVI VARMA

    books are the best friends for all the time.
    ಒಬ್ಬ ತತ್ವಜ್ಞಾನಿ ಕೇಳುವಂತೆ ” ಟೆಲ್ ಮಿ ವ್ಹಿಚ್ books ಯು read ,i ವಿಲ್ ಟೆಲ್ ಯು ವಾಟ್ ಯು ಆರ್ ” ಪುಸ್ತಿಕೆಗಳು ನಮ್ಮ ಆಲೋಚನಾ ವಿಧಾನವನ್ನೇ ಬದಲಾಯಿಸುತ್ತವೆ. ಆದರೆ ದುರಂತವೆಂದರೆ ನಮ್ಮ ಮಕ್ಕಳಿಗೆ ಒಂದೆಡೆ ಸಮಯದ ಅಭಾವ, ಮತ್ತೊಂದಡೆ ಈ ಆಕರ್ಷಕ ಚನ್ನಲ್ಗಳ ಸೆಳೆತ . ಅವರನ್ನು ಈ ಸತ್ಯದಿಂದ ವಿಮುಖರನ್ನಗಿಸುತ್ತಿದೆಯೇನೋ, ಆದರೆ ನಾವೇ ನಮ್ಮ ಮಕ್ಕಳಿಗೆ ಈ ದಿಕ್ಕಿನೆಡೆ ಎಳೆದೊಯ್ಯಬೇಕಾದ ಅವರನ್ನು ಪುಸ್ತಕ ಮಳಿಗೆಗಳಿಗೆ, ಪುಸ್ತಕ ಮೇಳಗಳಿಗೆ ಕರೆದೊಯ್ದು ಅವರಲ್ಲಿ ಆಸಕ್ತಿ ಮೂಡಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಅಲ್ಲವೇ ….

  2. Swapna Ajay

    Rightly said Samyuktha! Article well written.
    I still remember the kind of library my grandpa used to have.
    It felt very inspiring to be surrounded by informative books.

  3. samyuktha puligal

    Thank you for the comments 🙂

  4. KS Parameshwar

    Nice Article…

  5. ಮುಗಿಯದ ಮೌನ- GKN

    ವ್ಯವಸ್ಥೆಗೆ ಕನ್ನಡಿಯಾಗಿದೆ,,,,,,, ಬಹಳ ಒಳ್ಳೆಯ ಬರಹ

  6. Kr siddagangamma

    Navella makkalige kalisuttiruvudadaru enu?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading