ಟಿ ಕೆ ತ್ಯಾಗರಾಜ್
ಎಷ್ಟೋ ವರ್ಷಗಳ ನಂತರ ನೋಡಲು ಅಥವಾ ಮಾತನಾಡಲು ಸಿಗುವ , ಹಳೇ ಸ್ನೇಹಿತರು, ಪರೋಕ್ಷ ಪ್ರೇರೇಪಣೆ ನೀಡಿದಂಥವರು ಎಂಥ ಖುಷಿ ನೀಡುತ್ತಾರೆ ಗೊತ್ತಾ? ನನಗೆ ಮೊನ್ನೆ ಹೀಗೇ ಆಯಿತು. ಕವಿ ಶ್ರೀಧರ ಆರಾಧ್ಯರು ಸುಮಾರು ಇಪ್ಪತ್ತೈದು ವರ್ಷಗಳ ನಂತರ ಫೋನ್ ನಲ್ಲಿ ಸಿಕ್ಕಿದ್ದರು. ನಾನು ಕೊಡಗಿನಲ್ಲಿ ಸ್ಥಾಪಕ ಅಧ್ಯಕ್ಷನಾಗಿದ್ದ ಲೇಖಕ ಕಲಾವಿದರ ಬಳಗಕ್ಕೆ ಹೊಸ ಹುಮ್ಮಸ್ಸು ತುಂಬಿದವರಲ್ಲಿ ಇವರೂ ಒಬ್ಬರು. ಸದಾ ಗಂಭೀರವಾಗಿರುವ, ಸಾಹಿತ್ಯವನ್ನು ತುಂಬ ಗಂಭೀರವಾಗಿ ಪರಿಗಣಿಸಿದ ಆರಾಧ್ಯರು ಕೊಡಗಿನ ಮಾದಾಪುರ ಚೆನ್ನಮ್ಮ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರೂ ಹೌದು. ನನಗೆ ಬೆಂಗಳೂರಿನ ಆಕಾಶವಾಣಿಯ ನ್ಯೂಸ್ ರೂಂನಲ್ಲಿ ಆಗಿಂದಾಗ್ಗೆ ಸಿಗುವ ಗೆಳೆಯ ರಾಮಮೂರ್ತಿ ಅವರ ಪ್ರೀತಿ, ಸಹಾಯದಿಂದಾಗಿ ಆರಾಧ್ಯರ ಜತೆ ಮಾತನಾಡುವುದು ಸಾಧ್ಯವಾಯಿತು. ಕೊಡಗಿನಲ್ಲಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಎಸ್.ಜಿ.ಸಿದ್ದರಾಮಯ್ಯ, ಆರಾಧ್ಯರಂಥ ಬರಹಗಾರರಿಂದ ನಾವೆಲ್ಲ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ, ಇನ್ನಷ್ಟು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವುದು ಸಾಧ್ಯವಾಗಿತ್ತು. ಆರಾಧ್ಯ ಅವರ ಜತೆ ಮಾತನಾಡುತ್ತಾ ಎಲ್ಲವನ್ನೂ ನೆನಪಿಸಿಕೊಂಡೆ.
ಯಾವುದೇ ಸದ್ದು ಗದ್ದಲವಿಲ್ಲದೆ, ತಮ್ಮಷ್ಟಕ್ಕೆ ತಾವೇ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಆರಾಧ್ಯರಂಥವರು ನನಗೆ ಯಾವತ್ತೂ ಇಷ್ಟದ ವ್ಯಕ್ತಿಗಳು. ಅವರು ಬೆಂಗಳೂರಿಗೆ ಬರುವುದನ್ನು ನಾನು ಕಾಯುತ್ತಿದ್ದೇನೆ. ಅಂದ ಹಾಗೆ ಅವರು ಕವಿ, ಕತೆಗಾರ ಅಬ್ದುಲ್ ರಶೀದ್ ಅವರ ಗುರುಗಳು.ನನಗಾದ ಖುಷಿ ಹಂಚಿಕೊಳ್ಳಲು ಇಲ್ಲಿ ಪ್ರಸ್ತಾಪಿಸಿದ್ದೇನೆ ಅಷ್ತೇ.]]>






0 Comments