ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವು ನಾಡಿನ ಏಳಿಗೆಯಲ್ಲಿ ಹಿರಿಯಪಾತ್ರವನ್ನು ವಹಿಸಲಿದೆ ಎಂಬ ಹಿನ್ನೆಲೆಯಲ್ಲಿ ಬನವಾಸಿ ಬಳಗವು ನುಡಿಯರಿಮೆಯ ಕ್ಷೇತ್ರದಲ್ಲಿ ದುಡಿಯುವವರಿಗೆ ಸರಿಯಾದ ದಾರಿತೋರಬಲ್ಲ ಹಿರಿಯರ ಮುಂದಾಳ್ತನದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲು ಮುಂದಾಗಿದೆ.
ದೇಶ ವಿದೇಶಗಳಲ್ಲಿ ತಮ್ಮ ಅರಿಮೆಯಿಂದ ವಿಖ್ಯಾತರಾಗಿರುವ, ಕನ್ನಡನಾಡಿನ ಹಿರಿಯ ನುರಿತ ನುಡಿಯರಿಗರಾದ ಡಾ||. ಡಿ. ಎನ್. ಶಂಕರಬಟ್ಟರ ಮುಂದಾಳ್ತನದಲ್ಲಿ ನುಡಿಯರಿಮೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ಆಗಸ್ಟ್ ತಿಂಗಳ ಮೊದಲವಾರದಲ್ಲಿ ಶುರುವಾಗಲಿದ್ದು, ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ನಾಲ್ಕು ಶಿಬಿರಗಳು ನಡೆಯಲಿವೆ. ಪ್ರತೀ ಶಿಬಿರದಲ್ಲೂ ಮೂರು ದಿನಗಳ ತರಬೇತಿ ಇರುತ್ತದೆ. ಇದರಲ್ಲಿ ನುಡಿಯರಿಮೆಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ, ನುಡಿಯರಿಮೆಯ ಅಧ್ಯಯನ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದವರನ್ನು ಸಂದರ್ಶಿಸಿ ತರಬೇತಿ ಶಿಬಿರಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ನುಡಿಯರಿಮೆಯ ಕ್ಷೇತ್ರದಲ್ಲಿ, ಡಾ|| ಡಿ ಎನ್ ಶಂಕರಬಟ್ ಅವರ ಮುಂದಾಳ್ತನದಲ್ಲಿ ಸಂಶೋಧನೆಗಳನ್ನು ಮಾಡ ಬಯಸುವವರು ತಮ್ಮ ವಿವರಗಳನ್ನು ನಮಗೆ ಕಳಿಸಬೇಕಾಗಿ ಕೋರಿಕೆ. ಈ ಬಾರಿಯ ತರಬೇತಿ ಶಿಬಿರವು ಬೆಂಗಳೂರಿನಿಂದಾಚೆ ನಡೆಯಲಿದ್ದು ಬನವಾಸಿ ಬಳಗವೇ ಉಳಿದುಕೊಳ್ಳುವ, ಊಟ ತಿಂಡಿಯ ಏರ್ಪಾಟು ಮಾಡಲಿದೆ.
ಇನ್ನುಳಿದ ವಿವರಗಳನ್ನು ಪಡೆದುಕೊಳ್ಳಲು, ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ: priyank@banavasibalaga.org
http://www.ellarakannada.org/tarabEti_shibira_2011_12.html








0 Comments