ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ವೆಂಕಟೇಶ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’

ಚಿಕ್ಕ ಬಳ್ಳಾಪೂರ ಜಿಲ್ಲೆಯವರಾದ ಎನ್ ವೆಂಕಟೇಶ ದೇಶದಲ್ಲಿ ಸಂವಿಧಾನ ಜಾರಿಯಾದ ವರ್ಷವೇ ಜನಿಸಿದವರು. ಕರ್ನಾಟಕದಲ್ಲಿ 70ರ ದಶಕದಿಂದ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆರಂಭಿಕ ನಾಯಕರಲ್ಲಿ ಇವರೂ ಒಬ್ಬರು.

ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದ ಸಾಮಾಜಿಕ ಹೋರಾಟದಲ್ಲಿ ಇವರದ್ದೂ ಮುಖ್ಯಪಾತ್ರವಿದೆ. ದೇಶದ ಯಾವುದೇ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯವಾದರೂ ಅದರ ವಿರುದ್ದ ಕಾಲಕಾಲಕ್ಕೆ ನಡೆದ ಹೋರಾಟಗಳನ್ನು ರೂಪಿಸಿದ್ದಾರೆ ಮತ್ತು ಪಾಲ್ಗೊಂಡಿದ್ದಾರೆ. ದಲಿತರ ಆರ್ಥಿಕ ಅಭಿವೃದ್ಧಿಗೆ ಸ್ಪಂಧಿಸುವ ಹೋರಾಟಗಳಲ್ಲೂ ಪಾಲ್ಗೊಂಡಿದ್ದಾರೆ.

80 ಮತ್ತು 90 ರ ದಶಕದಲ್ಲಿ ನಡೆದ ಭೂ ಹೋರಾಟಗಳಾದ ಗೌರಿಬಿದನೂರು ತಾಲೂಕಿನ ನಾಗಸಂದ್ರ ಭೂ ಹೋರಾಟ ಮತ್ತು ಜೀತಮುಕ್ತ ಹೋರಾಟದಲ್ಲಿ ಹಾಸನ ಜಿಲ್ಲೆ ಅರಸೀಕೆರ ತಾಲೂಕಿನ ಬಿದರೆ ಕಾವಲು ಹೋರಾಟದಲ್ಲಿ, ಚಿಕ್ಕಮಗಳೂರಿನ ಚಂದಗೋಡು, ಭದ್ರಾವತಿಯ ಸಿದ್ಧಿಪುರ ಭೂ ಹೋರಾಟಗಳಲ್ಲೂ ಇವರ ಮುಖ್ಯ ಪಾತ್ರವಿದೆ. ಹೀಗೆ ನೂರಾರು ಹೋರಾಟಗಳಲ್ಲಿ ಇವರ ಹೆಜ್ಜೆ ಗುರುತುಗಳಿವೆ..

ಭೂಪಾಲ್ ಘೋಷಣೆ ಬೆಂಗಳೂರು ಘೋಷಣೆ ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಪಡಿಸಿದ್ದರಲ್ಲಿ; ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ಉಂಟಾದ ಫ್ಯಾಸಿಸ್ಟ್ ಉಪಟಳವನ್ನು ಕುಂದಿಸುವುದಕ್ಕಾಗಿ ನಡೆದ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ವರದಿ ಜಾರಿಯಾಗಬೇಕೆಂದು ನಡೆದ ಹೋರಾಟದಲ್ಲೂ ಭಾಗವಹಿಸಿದ್ದರು. ಹೀಗೆ ಅನೇಕ ಹೋರಾಟಗಳಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿಟ್ಟು ದುಡಿದಿರುವ ವೆಂಕಟೇಶ್ ಅವರು ಅಂಬೇಡ್ಕರ್ ರ ಆಶಯಗಳನ್ನು ಕಾರ್ಯಕರ್ತರ ಬಳಿ ತೆಗೆದುಕೊಂಡು ಹೋಗಲು ಹಲವು ಶಿಬಿರಗಳನ್ನು ನಡೆಸಿದ್ದಾರೆ.

ಬೌದ್ಧ ಧಮ್ಮದ ಅವಶ್ಯಕತೆಯನ್ನು ದಲಿತರೂ ಸೇರಿದಂತ ತಳ ಸಮುದಾಯಗಳು ಅರಿಯಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ದಲಿತರ ಬದುಕು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಉನ್ನತಿಗೆ ಕೊಂಡೊಯ್ಯಲು ಇನ್ನೂ ಶ್ರಮಿಸುತ್ತಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಕಿಶನ್ ಪಾಟ್ನಾಯಕ್ ಮತ್ತು ಮೇಧಾ ಪಾಟ್ಕರ್ ರವರ ನೇತೃತ್ವದ ಸಮಾಜವಾದ ಜನಪರಿಷತ್ ನಡೆಸಿದ ಹೋರಾಟಗಳಲ್ಲಿ ಅಂತರಾಷ್ಟ್ರೀಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತ ನರ್ಮದಾ ಬಚಾವೋ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಈ ಎಲ್ಲಾ ಹೋರಾಟಗಳಲ್ಲಿ ಅವರ ಜೊತೆ ಇದ್ದ ಎಲ್ಲಾ ಸ್ನೇಹಿತರನ್ನು ನೆನೆಯಲು ಹೆಮ್ಮೆ ಪಡುತ್ತಾರೆ. ಸಮಾಜ, ಸಮುದಾಯದ ಹಿತಕ್ಕಾಗಿ ಅವಿಶ್ರಾಂತವಾಗಿ ದುಡಿದ ಮತ್ತು ಈಗಲೂ ದುಡಿಯುತ್ತಿರುವ ಇವರ ಬದುಕನ್ನು ಗೌರವಿಸಿ ಅವರನ್ನು 2023 ನೇ ಸಾಲಿಗೆ ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿಗೆ ಆಯ್ದುಕೊಳ್ಳಲಾಗಿದೆ.

ಈ ಪ್ರಶಸ್ತಿಯನ್ನು ಕವಿ ಬಿ. ಶ್ರೀನಿವಾಸ ತಮ್ಮ ತಂದೆಯ ಹೆಸರಿನಲ್ಲಿ ಪ್ರಾಯೋಚಿಸಿದ್ದಾರೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು 2023 ಮೇ 27 ಮತ್ತು 28 ರಂದು ವಿಜಯಪುರದಲ್ಲಿ ನಡೆವ ಮೇ ಸಾಹಿತ್ಯ ಮೇಳದಲ್ಲಿ ಪ್ರದಾನ ಮಾಡಲಾಗುವುದು.

ಈ ಪ್ರಶಸ್ತಿ ಪಡೆದ ವೆಂಕಟೇಶ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಿ ಫ್ಯಾಸಿಸ್ಟ್ ಮನಸ್ಥಿತಿಯ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಮಣಿಸಬೇಕೆಂಬುವುದು ಅವರ ಪ್ರಮುಖ ಆಶಯ.

ದೇಶದ ಸಮಗ್ರತೆ ಕಾಯಲು ಇಂಥ ಸದಾಶಯ ಹೊಂದಿರುವ ಎನ್. ವೆಂಕಟೇಶ ಅವರನ್ನು ಮೇ ಸಾಹಿತ್ಯ ಮೇಳದ ಬಳಗ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

‍ಲೇಖಕರು avadhi

11 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading